ಪಾಕ್ ಪರ ಘೋಷಣೆ: 3 ಬಂಧನ, ಕೆಫೆ ಸ್ಫೋಟದ ತನಿಖೆ NIAಗೆ: ಈ ದಿನದ ಮುಖ್ಯಾಂಶಗಳು-04-03-2024

ಕಾಂಗ್ರೆಸ್ ಅಭ್ಯರ್ಥಿ ನಾಸಿರ್ ಹುಸೇನ್ ಬೆಂಬಲಿಗರು ಪಾಕ್ ಪರ ಘೋಷಣೆ ಕೂಗಿದ್ದ ಪ್ರಕರಣದ ಸಂಬಂಧ ಮೂವರನ್ನು ವಿಧಾನಸೌಧ ಪೊಲೀಸರು ವಶಕ್ಕೆ ಪಡೆದಿದ್ದಾರೆ.
(ಸಂಗ್ರಹ ಚಿತ್ರ)
(ಸಂಗ್ರಹ ಚಿತ್ರ)Online desk

ಬೆಂಗಳೂರು: ರಾಜ್ಯಸಭಾ ಚುನಾವಣೆ ಫಲಿತಾಂಶ ಪ್ರಕಟಗೊಂಡ ನಂತರ ವಿಧಾನಸೌಧದಲ್ಲಿ ಕಾಂಗ್ರೆಸ್ ಅಭ್ಯರ್ಥಿ ನಾಸಿರ್ ಹುಸೇನ್ ಬೆಂಬಲಿಗರು ಪಾಕ್ ಪರ ಘೋಷಣೆ ಕೂಗಿದ್ದ ಪ್ರಕರಣದ ಸಂಬಂಧ ಮೂವರನ್ನು ವಿಧಾನಸೌಧ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇಲ್ತಾಜ್, ಮುನಾವರ್, ಮೊಹಮ್ಮದ್ ನಾಶಿಪುಡಿ ಬಂಧನಕ್ಕೊಳಗಾಗಿರುವ ವ್ಯಕ್ತಿಗಳಾಗಿದ್ದು, ವಿಧಾನಸೌಧ ಪೊಲೀಸರು ಅವರನ್ನು ಕೋರ್ಟ್ ಗೆ ಹಾಜರುಪಡಿಸಿದ್ದಾರೆ.

ಬಿಜೆಪಿ ಖಾಸಗಿ ಎಫ್‌ಎಸ್‌ಎಲ್ ವರದಿ ಬಿಡುಗಡೆ ಮಾಡಿದ್ದು, ಖಾಸಗಿ ಸಂಸ್ಥೆಯ ಎಫ್​​ಎಸ್​​ಎಲ್ ತಜ್ಞ ಫಣೀಂದ್ರ ನೀಡಿರುವ ವರದಿಯನ್ನು ಹಂಚಿಕೊಂಡಿದೆ. Clue4 Evidence Forensic Investigation pvt. Ltd ನ ವರದಿ ಇದಾಗಿದೆ. ಖಾಸಗಿ ಎಫ್​ಎಸ್​ಎಲ್ ವರದಿಯಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಿರುವುದು ಸಾಬೀತಾಗಿದೆ ಎಂದು ಬಿಜೆಪಿ ಗಂಭೀರ ಆರೋಪ ಮಾಡಿದ್ದು, ಸರ್ಕಾರದಿಂದ FSL ವರದಿ ಬಿಡುಗಡೆ ಮಾಡಲು ವಿಳಂಬವೇಕೆ ಎಂದು ಬಿಜೆಪಿ ಪ್ರಶ್ನಿಸಿದೆ. ಈ ವಿಚಾರವಾಗಿ ಬಿಜೆಪಿ ಶಾಸಕರ ನಿಯೋಗ ಡಿಜಿ&ಐಜಿಪಿ ಕಚೇರಿಗೆ ಭೇಟಿ ನೀಡಿದ್ದು, ಶೀಘ್ರವೇ FSL ವರದಿ ಬಿಡುಗಡೆ ಮಾಡುವಂತೆ ಮನವಿ ಮಾಡಿದ್ದಾರೆ. ಬಿಜೆಪಿ ಖಾಸಗಿ ಎಫ್ಎಸ್ಎಲ್ ವರದಿ ಬಿಡುಗಡೆ ಮಾಡಿರುವ ಬಗ್ಗೆ ಪ್ರತಿಕ್ರಿಯೆ ನೀಡಿರುವ ಗೃಹ ಸಚಿವ ಪರಮೇಶ್ವರ್, FSL ವರದಿಯನ್ನು ಮುಚ್ಚಿಡುವ ಪ್ರಶ್ನೆಯೇ ಇಲ್ಲ, ಖಾಸಗಿ ವರದಿ ಪರಿಗಣಿಸುವುದಿಲ್ಲ ವರದಿ ಬಂದ ಕೂಡಲೇ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದ್ದಾರೆ.

(ಸಂಗ್ರಹ ಚಿತ್ರ)
ಕೆಫೆ ಸ್ಫೋಟ ಪ್ರಕರಣ ಅಗತ್ಯಬಿದ್ದರೆ NIA ತನಿಖೆ-ಸಿಎಂ; 3 ವರ್ಷದ ಮಗುವಿಗೆ ತಾಯಿಯಿಂದ ಚಿತ್ರ ಹಿಂಸೆ: ಈ ದಿನದ ಸುದ್ದಿ ಮುಖ್ಯಾಂಶಗಳು 03-03-2024

ಪ್ರೇಮವೈಫಲ್ಯದಿಂದ ಆಕ್ರೋಶಗೊಂಡ ದುಷ್ಕರ್ಮಿಯೋರ್ವ ಸರ್ಕಾರಿ ಕಾಲೇಜಿನ ಮೂವರು ಪಿಯುಸಿ ವಿದ್ಯಾರ್ಥಿನಿಯರಿಗೆ ಆಸಿಡ್ ಎರಚಿರುವ ಘಟನೆ ಮಂಗಳೂರಿನಲ್ಲಿ ವರದಿಯಾಗಿದೆ. ಆಸಿಡ್ ದಾಳಿಯಲ್ಲಿ ಅಲೀನಾ, ಅರ್ಚನಾ, ಅಮೃತ ಗಾಯಗೊಂಡಿರುವ ವಿದ್ಯಾರ್ಥಿನಿಯರಾಗಿದ್ದು, ಈ ದುಷ್ಕೃತ್ಯ ಎಸಗಿದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿ ಅಬಿನ್ನು ಎಂಬಾತನನ್ನು ತೀವ್ರ ವಿಚಾರಣೆಗೆ ಒಳಪಡಿಸಲಾಗಿದೆ. ಆಸಿಡ್ ದಾಳಿಯಿಂದ ಗಾಯಗೊಂಡ ವಿದ್ಯಾರ್ಥಿನಿಯರನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ವಿದ್ಯಾರ್ಥಿನಿಯರು ಕಾಲೇಜು ಆವರಣದಲ್ಲಿ ಪರೀಕ್ಷಾ ತಯಾರಿ ನಡೆಸುತ್ತಿದ್ದ ವೇಳೆ ಈ ದುರ್ಘಟನೆ ನಡೆದಿದೆ.

ಬೆಂಗಳೂರಿನ ವೈಟ್ ಫೀಲ್ಡ್ ನ ರಾಮೇಶ್ವರಂ ಕೆಫೆಯಲ್ಲಿ ನಡೆದ ಬಾಂಬ್ ಸ್ಫೋಟ ಪ್ರಕರಣವನ್ನು ರಾಷ್ಟ್ರೀಯ ತನಿಖಾ ದಳ(ಎನ್ ಐಎ) ಅಧಿಕಾರಿಗಳು ದಾಖಲಿಸಿಕೊಂಡು ತನಿಖೆಯನ್ನು ನಡೆಸಲಿದ್ದಾರೆ. ಬಾಂಬ್ ಸ್ಫೋಟ ಸಂಭವಿಸಿ ಮೂರು ದಿನ ಕಳೆದರೂ ಇದುವರೆಗೂ ಯಾವುದೇ ಮಹತ್ವದ ಸುಳಿವು ಪತ್ತೆಯಾಗಿಲ್ಲ. ಈ ಹಿನ್ನೆಲೆಯಲ್ಲಿ ಎನ್ ಐಎ ತನಿಖೆಗೆ ಒಪ್ಪಿಸಲಾಗಿದೆ. ಬಾಂಬ್ ಸ್ಫೋಟದ ಬಗ್ಗೆ ಕೇಂದ್ರ ಗೃಹ ಇಲಾಖೆಗೆ ಮಾಹಿತಿ ನೀಡಿ ಎಫ್‌ಐಆರ್ ದಾಖಲಿಸಿರುವ ಎನ್‌ಐಎ ಅಧಿಕಾರಿಗಳು ಇಂದಿನಿಂದ ಸ್ಫೋಟದ ಸಂಪೂರ್ಣ ತನಿಖೆ ಆರಂಭಿಸಲಿದ್ದಾರೆ.

(ಸಂಗ್ರಹ ಚಿತ್ರ)
ವೃಷಭಾವತಿ ಏತ ನೀರಾವರಿ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಿದ ಸಿಎಂ ಸಿದ್ದರಾಮಯ್ಯ

ವೃಷಭಾವತಿ ಏತ ನೀರಾವರಿ ಯೋಜನೆಗೆ ಇಂದು ಸಿಎಂ ಸಿದ್ದರಾಮಯ್ಯ ಚಾಲನೆ ನೀಡಿದರು. ನೆಲಮಂಗಲದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಮಾತನಾಡಿರುವ ಸಿಎಂ, ವೃಷಭಾವತಿ ಏತ ನೀರಾವರಿ ಯೋಜನೆಯ ಮೊದಲ ಹಂತದಲ್ಲಿ 70 ಕೆರೆಗಳಿಗೆ ನೀರು ತುಂಬಿಸಲಾಗುವುದು. ಇದರಿಂದ ನಾಲ್ಕು ಜಿಲ್ಲೆಗಳ ಅಂತರ್ಜಲ ಪ್ರಮಾಣ ವೃದ್ಧಿಯಾಗುತ್ತದೆ. ಜಮೀನುಗಳಿಗೆ ನೀರಿನ ಆಸರೆ ಹೆಚ್ಚಾಗಿ ಜನರ ಆರ್ಥಿಕ ಶಕ್ತಿಯೂ ಹೆಚ್ಚಾಗುತ್ತದೆ ಎಂದು ಸಿಎಂ ತಿಳಿಸಿದ್ದಾರೆ. ವೃಷಭಾವತಿ ಯೋಜನೆಯನ್ನು 2,240 ಕೋಟಿ ಖರ್ಚು ಮಾಡಿ ಜಾರಿ ಮಾಡುತ್ತಿದ್ದೇವೆ. ಇದರಿಂದ ಬೆಂಗಳೂರು ನಗರ, ಗ್ರಾಮಾಂತರ, ತುಮಕೂರು ಜಿಲ್ಲೆಗಳ ಜನರ ನೀರಿನ ಬವಣೆ ಶಾಶ್ವತವಾಗಿ ತೀರುತ್ತದೆ ಎಂದರು.

(ಸಂಗ್ರಹ ಚಿತ್ರ)
ಗದಗ: ಸಾಲ ಬಾಧೆ ತಾಳಲಾರದೆ ಒಂದೇ ಕುಟುಂಬದ ಮೂವರು ಆತ್ಮಹತ್ಯೆ

ಟ್ರ್ಯಾಕ್ಟರ್ ಸಾಲಕ್ಕೆ ಸಂಬಂಧಿಸಿದಂತೆ ಉಂಟಾದ ವಿವಾದದ ಹಿನ್ನೆಲೆಯಲ್ಲಿ ಇಬ್ಬರು ಮಹಿಳೆಯರು ಸೇರಿ ಒಂದೇ ಕುಟುಂಬದ ಮೂವರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಗದಗ ಜಿಲ್ಲೆಯಲ್ಲಿ ನಡೆದಿದೆ. ಪೊಲೀಸ್ ಅಧಿಕಾರಿಗಳ ಪ್ರಕಾರ ಟ್ರ್ಯಾಕ್ಟರ್ ಸಾಲ ಮರುಪಾವತಿ ವಿಚಾರವಾಗಿ ತಾಯಿ ರೇಣುಕಾ ಹಾಗೂ ಮಗ ಮಂಜುನಾಥ್ ನಡುವೆ ಜಗಳವಾಗಿತ್ತು. ಬ್ಯಾಂಕ್‌ನಿಂದ 4 ಲಕ್ಷ ಸಾಲ ಪಡೆದು ಕುಟುಂಬ ಟ್ರ್ಯಾಕ್ಟರ್ ಖರೀದಿಸಿತ್ತು. ರೇಣುಕಾ ತೇಲಿ ಮನೆಯಿಂದ ಹೊರಬಂದು ರೈಲಿನ ಮುಂದೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆಕೆಯನ್ನು ಹಿಂಬಾಲಿಸಿದ ಆಕೆಯ ಮಗ ಮಂಜುನಾಥ್ ಕೂಡ ಆಕೆಯನ್ನು ತಡೆಯಲು ಯತ್ನಿಸಿದಾಗ ರೈಲಿನಡಿಗೆ ಬಿದ್ದು ಸಾವನ್ನಪ್ಪಿದ್ದಾರೆ. ಸಾವಿನ ವಿಷಯ ತಿಳಿದು ರೇಣುಕಾ ಅವರ ಸಹೋದರಿ ಸಾಕವ್ವ ತೇಲಿ ತಮ್ಮ ನಿವಾಸದಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com