
ಕುಣಿಗಲ್ (ತುಮಕೂರು): ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಹುಲಿಯೂರುದುರ್ಗ ಹೋಬಳಿ ಹಂಗರನಹಳ್ಳಿ ಶ್ರೀ ವಿದ್ಯಾಚೌಡೇಶ್ವರಿ ಮಹಾ ಸಂಸ್ಥಾನ ಮಠದ ಬಾಲ ಮಂಜುನಾಥ ಸ್ವಾಮೀಜಿಯನ್ನು ಪೊಲೀಸರು ಗುರುವಾರ ಕಳೆದ ತಡರಾತ್ರಿ ಬಂಧಿಸಿದ್ದಾರೆ.
ತಮ್ಮನ್ನು ಬ್ಲ್ಯಾಕ್ ಮೇಲ್ ಮಾಡುತ್ತಿದ್ದಾರೆಂದು ಆರೋಪಿಸಿ ಸ್ವಾಮೀಜಿ ಕಡೆಯಿಂದಲೇ ಕೆಲವರ ವಿರುದ್ಧ ದೂರು ದಾಖಲಾಗಿತ್ತು. ಆದರೆ, ಅದೇ ಆರೋಪಿಗಳು ಸ್ವಾಮೀಜಿಯವರ ಬೇರೊಂದು ಹಗರಣವೊಂದನ್ನು ವಿಚಾರಣೆ ವೇಳೆ ಬಯಲು ಮಾಡಿದ್ದಾರೆ. ಹಾಗಾಗಿ, ಪೊಲೀಸರು ಸ್ವಾಮೀಜಿಯವರನ್ನು ಬಂಧಿಸಿದ್ದಾರೆಂದು ಹೇಳಲಾಗಿದೆ.
ಅಭಿಷೇಕ್ ಎಂಬುವವರು ನೀಡಿದ ಕೆಲವು ಮಾಹಿತಿಯ ಮೇರೆಗೆ, ಪ್ರಕರಣದ ತನಿಖೆ ಕೈಗೊಂಡಿರುವ ಪೊಲೀಸರು ಮಠಕ್ಕೆ ಭೇಟಿ ನೀಡಿ ನಿನ್ನೆ ಗುರುವಾರ ಸಂಜೆಯಿಂದ ಪರಿಶೀಲನೆ ನಡೆಸಿದ್ದರು. ಎಸ್.ಪಿ.ಅಶೋಕ್ ಕೆ.ವಿ.ಸೇರಿದಂತೆ ನಾನಾ ಅಧಿಕಾರಿಗಳು ತಡರಾತ್ರಿವರೆಗೂ ತನಿಖೆ ನಡೆಸಿದ್ದರು.
ದೇವಸ್ಥಾನದ ಟ್ರಸ್ಟಿ ನೀಡಿದ್ದ ದೂರಿನನ್ವಯ ಪೊಲೀಸರು ಅಭಿಷೇಕ್ ರನ್ನು ಕರೆಯಿಸಿ ವಿಚಾರಣೆ ನಡೆಸಿದಾಗ ಸ್ವಾಮೀಜಿಯವರು ಹಲವು ದಿನಗಳ ಹಿಂದೆ ಮಠದಲ್ಲಿ ಅಪ್ರಾಪ್ತೆಯೊಬ್ಬಳಿಗೆ ಲೈಂಗಿಕ ಕಿರುಕುಳ ಕೊಟ್ಟಿರುವುದಾಗಿ ಆರೋಪಿಸಿದ್ದ. ಈ ವಿಚಾರ ಪೋಕ್ಸೋ ಕಾಯ್ದೆಯಡಿ ಬರುವುದರಿಂದ ಮಠಕ್ಕೆ ಆಗಮಿಸಿದ ಪೊಲೀಸರು, ಗುರುವಾರ ಸಂಜೆಯಿಂದಲೇ ಮಠದಲ್ಲಿ ಪರಿಶೀಲನೆ ನಡೆಸಿದ್ದರು. ಆಗ ಸಿಕ್ಕ ಕೆಲವು ದಾಖಲೆಗಳನ್ನು ಆಧರಿಸಿ, ಸ್ವಾಮೀಜಿಯವರನ್ನು ಬಂಧಿಸಿದ್ದಾರೆ.
Advertisement