ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಬೆನ್ನಲ್ಲೇ ಇದೀಗ ಬೆಳಗಾವಿಯ ನಿಪ್ಪಾಣಿಯ ರಾಮ ಮಂದಿರವನ್ನು ಸ್ಫೋಟಿಸುವುದಾಗಿ ಬೆದರಿಕೆ ಪತ್ರ ಬಂದಿದೆ. 101 ವರ್ಷ ಪುರಾತನವಾದ ರಾಮಮಂದಿರವನ್ನು ಸ್ಫೋಟಿಸುವುದಾಗಿ ಪತ್ರದಲ್ಲಿ ಬರೆಯಲಾಗಿದೆ. ಅಲ್ಲಾಹೋ ಅಕ್ಬರ್ ಎಂದೇ ಆರಂಭವಾಗುವ ಈ ಪತ್ರದಲ್ಲಿ ತಾಕತ್ತಿದ್ದರೆ ತಡೆಯಿರಿ ಎಂಬ ಸವಾಲು ಕೂಡಾ ಹಾಕಲಾಗಿದೆ. ಫೆಬ್ರವರಿ 7 ಮತ್ತು ಫೆಬ್ರವರಿ 28ರಂದು ಎರಡು ಪತ್ರಗಳು ಬಂದಿದ್ದು, ಮುಂದಿನ ಮಾರ್ಚ್ 20, 21ರೊಳಗೆ ರಾಮ ಮಂದಿರವನ್ನು ದೊಡ್ಡ ಪ್ರಮಾಣದಲ್ಲಿ ಸ್ಫೋಟಿಸುವುದಾಗಿ ಎಂದು ಅನಾಮಧೇಯ ವ್ಯಕ್ತಿಗಳು ಪತ್ರ ಬರೆದಿದ್ದಾರೆ. ಈ ಬೆದರಿಕೆ ಪತ್ರ ಸಂಬಂಧ ದೇವಸ್ಥಾದ ಅರ್ಚಕ ಸುರೇಶ ಜೀವಾಜಿ ದೇಶಪಾಂಡೆ ಅವರು ನಿಪ್ಪಾಣಿ ನಗರ ಪೊಲೀಸರಿಗೆ ದೂರು ನೀಡಿದ್ದಾರೆ. ಬೆದರಿಕೆ ಕಾರಣ 13 ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದ್ದು ಪೊಲೀಸ್ ಕಾವಲು ನಿಯೋಜಿಸಲಾಗಿದೆ. ಜನ ಆತಂಕಪಡುವ ಅಗತ್ಯವಿಲ್ಲ ಎಂದು ಸಿಪಿಐ ಬಿ.ಎಸ್ ತಳವಾರ ಹೇಳಿದ್ದಾರೆ.
ಬೆಂಗಳೂರಿನ ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ NIA ಬಾಂಬರ್ನದು ಎಂದು ಹೇಳಲಾದ ನಾಲ್ಕು ಸ್ಪಷ್ಟ ಫೋಟೋಗಳನ್ನು ಬಿಡುಗಡೆ ಮಾಡಿದೆ. ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಇಟ್ಟ ದುಷ್ಕರ್ಮಿ ಬೆಂಗಳೂರಿನಿಂದ ನಾಪತ್ತೆಯಾಗಿ ರಾಜ್ಯದ ನಾನಾ ಭಾಗಗಳನ್ನು ಸುತ್ತಿದ್ದಾನೆ ಎಂದು ಹೇಳಲಾಗಿದ್ದು, ಅಂತಿಮವಾಗಿ ಎಲ್ಲಿಗೆ ಹೋಗಿದ್ದಾನೆ ಎಂದು ಪತ್ತೆಯಾಗುತ್ತಿಲ್ಲ. ಹೀಗಾಗಿ ಸಮುದ್ರದ ಮೂಲಕ ಪಲಾಯನ ಮಾಡುವ ಸಾಧ್ಯತೆ ಇರುವ ಕಾರಣ ಎನ್ಐಎ ಅಧಿಕಾರಿಗಳು ಬೋಟ್ ಗಳಲ್ಲಿ ಪರಿಶೀಲನೆ ನಡೆಸಿದರು. ಮತ್ತೊಂದೆಡೆ ರಾಮೇಶ್ವರಂ ಕೆಫೆ ಕೇವಲ ಒಂದು ವಾರದಲ್ಲೇ ಮತ್ತೆ ಪುನಾರಂಭ ಮಾಡಿದ್ದು, ಈ ಬಾರಿ ಸಕಲ ಭದ್ರತಾ ಸಿದ್ದತೆಗಳೊಂದಿಗೆ ಕೆಫೆ ರೀ ಓಪನ್ ಆಗಿದೆ. ಕೆಫೆಯ ಪ್ರವೇಶದ್ವಾರದಲ್ಲಿ 2 ಮೆಟಲ್ ಡಿಟೆಕ್ಟರ್ ಅಳವಡಿಕೆ ಮಾಡಲಾಗಿದ್ದು, ಭದ್ರತೆಗೆ ಇಬ್ಬರು ಸಿಬ್ಬಂದಿಗಳನ್ನೂ ಕೂಡ ನಿಯೋಜಿಸಲಾಗಿದೆ.
ರಾಜ್ಯದಲ್ಲಿ 27,067 ಉದ್ಯೋಗಗಳನ್ನು ಸೃಷ್ಟಿಸುವ 17,835 ಕೋಟಿ ಮೊತ್ತದ ಯೋಜನೆಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಉನ್ನತ ಮಟ್ಟದ ಅನುಮೋದನಾ ಸಮಿತಿ ಸಭೆಯಲ್ಲಿ ಅನುಮೋದನೆ ನೀಡಲಾಯಿತು. ಸಭೆಯ ಬಳಿಕ ಮಾಹಿತಿ ನೀಡಿದ ಸಿದ್ದರಾಮಯ್ಯ, 8,220 ಕೋಟಿ ಮೊತ್ತದ ಆರು ಹೊಸ ಯೋಜನೆಗಳು ಮತ್ತು 9,615 ಕೋಟಿ ಮೊತ್ತದ ಹೆಚ್ಚುವರಿ ಬಂಡವಾಳ ಹೂಡಿಕೆಯ ಎಂಟು ಯೋಜನೆಗಳಿಗೆ ಒಪ್ಪಿಗೆ ನೀಡಲಾಗಿದೆ ಎಂದರು. ವಿಸ್ಟ್ರಾನ್ ಇನ್ಫೋಕಾಂ ಮ್ಯಾನುಫ್ಯಾಕ್ಚರಿಂಗ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಕೋಲಾರ ಜಿಲ್ಲೆಯ ನರಸಾಪುರ ಕೈಗಾರಿಕಾ ಪ್ರದೇಶದಲ್ಲಿ 2,095 ಕೋಟಿ ವೆಚ್ಚದಲ್ಲಿ ಸ್ಮಾರ್ಟ್ಪೋನ್ ತಯಾರಿಕಾ ಘಟಕ ಆರಂಭಿಸಲಿದೆ. ಇದರಿಂದ 21,723 ಜನರಿಗೆ ಉದ್ಯೋಗಗಳು ಲಭ್ಯವಾಗಲಿವೆ ಎಂದು ಹೇಳಿದರು.
ಅನಾರೋಗ್ಯದಿಂದ ಬಳಲುತ್ತಿದ್ದ ಕಾಂಗ್ರೆಸ್ ಹಿರಿಯ ಮುಖಂಡ ಮಾಜಿ ಶಾಸಕ ವಾಸು ನಿಧನರಾಗಿದ್ದಾರೆ. 72 ವರ್ಷ ವಯಸ್ಸಿನ ವಾಸು ಅವರು ಅನಾರೋಗ್ಯ ಕಾರಣ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಮೈಸೂರು ಮೇಯರ್ ಆಗಿದ್ದ ವಾಸು ಬಳಿಕ ಶಾಸಕರಾದರು. ವಿದ್ಯಾವಿಕಾಸ ಶಿಕ್ಷಣ ಸಂಸ್ಥೆ ಮಾಲೀಕರಾಗಿರುವ ಇವರು ಪ್ರಜಾನುಡಿ ಪತ್ರಿಕೆ ಮಾಲೀಕರಾಗಿದ್ದರು. ಮೈಸೂರು ನಗರದ ಚಾಮರಾಜ ಕ್ಷೇತ್ರದಲ್ಲಿ 2014ರಲ್ಲಿ ಶಾಸಕರಾಗಿದ್ದ ವಾಸು 2019ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ನಿಂದ ಸ್ಪರ್ಧಿಸಿ ಸೋತಿದ್ದರು. ಈ ಬಾರಿ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದರು.
ಧರ್ಮಸ್ಥಳ ಕ್ಷೇತ್ರದಲ್ಲಿ ಕಳೆದ 50 ವರ್ಷಗಳಿಂದ ಶ್ರೀ ಮಂಜುನಾಥನಿಗೆ ಸೇವೆ ಸಲ್ಲಿಸುತ್ತಿದ್ದ ಲತಾ ಎಂಬ ಹೆಸರಿನ ಆನೆ ಮೃತಪಟ್ಟಿದೆ. ಶಿವರಾತ್ರಿ ದಿನದಂದೇ ಶ್ರೀಕ್ಷೇತ್ರ ಧರ್ಮಸ್ಥಳದ ಆನೆ ಮೃತಪಟ್ಟಿದೆ. ಆನೆಗೆ 60 ವರ್ಷ ವಯಸ್ಸಾಗಿತ್ತು. ಅನಾರೋಗ್ಯದಿಂದ ಲತಾ ಮೃತಪಟ್ಟಿದ್ದು ಕಳೆದ 50 ವರ್ಷಗಳಿಂದ ಆನೆ ಶ್ರೀಕ್ಷೇತ್ರ ಧರ್ಮಸ್ಥಳದ ಸೇವೆಯಲ್ಲಿ ನಿರತವಾಗಿತ್ತು. ಧರ್ಮಸ್ಥಳದಲ್ಲಿ ಲತಾಳ ಅಂತ್ಯ ಸಂಸ್ಕಾರ ನಡೆಯಿತು.
Advertisement