Explained: ಕರ್ನಾಟಕ ಜಾತಿಗಣತಿ ವರದಿ: ಲಿಂಗಾಯತರು, ಒಕ್ಕಲಿಗರ ವಿರೋಧ ಯಾಕೆ?

ರಾಜ್ಯದಲ್ಲಿ ಅಂದಾಜು ಏಳು ಕೋಟಿ ಜನಸಂಖ್ಯೆಯಲ್ಲಿ ಶೇ. 17 ರಷ್ಟು ಇರುವುದಾಗಿ ಲಿಂಗಾಯತರು ಹೇಳಿಕೊಳ್ಳುತ್ತಾರೆ. ರಾಜ್ಯದಲ್ಲಿ ಅವರನ್ನು ಅತಿದೊಡ್ಡ ಸಮುದಾಯವನ್ನಾಗಿ ಮಾಡಲಾಗಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ರಾಜ್ಯದಲ್ಲಿ ಅಂದಾಜು ಏಳು ಕೋಟಿ ಜನಸಂಖ್ಯೆಯಲ್ಲಿ ಶೇ. 17 ರಷ್ಟು ಇರುವುದಾಗಿ ಲಿಂಗಾಯತರು ಹೇಳಿಕೊಳ್ಳುತ್ತಾರೆ. ರಾಜ್ಯದಲ್ಲಿ ಅವರನ್ನು ಅತಿದೊಡ್ಡ ಸಮುದಾಯವನ್ನಾಗಿ ಮಾಡಲಾಗಿದೆ. ಬೇರೆ ರೀತಿಯಲ್ಲಿ ಹೇಳುವುದಾದರೆ ತಮ್ಮ ಸಮುದಾಯದ ಜನರ ಸಂಖ್ಯೆ 1.2 ಕೋಟಿ ಎನ್ನುತ್ತಾರೆ. ಅದೇ ರೀತಿ ಒಕ್ಕಲಿಗರು ಒಟ್ಟಾರೇ ಜನಸಂಖ್ಯೆಯಲ್ಲಿ ಶೇ. 15 ರಷ್ಟು ಅಂದರೆ 1.05 ಕೋಟಿ ಇರುವುದಾಗಿ ಹೇಳುವ ಮೂಲಕ ರಾಜ್ಯದಲ್ಲಿ ಎರಡನೇ ಅತಿದೊಡ್ಡ ಸಮುದಾಯದ ಸ್ಥಾನ ಪಡೆದಿದ್ದಾರೆ. ಕರ್ನಾಟಕ ರಾಜಕೀಯದಲ್ಲಿ ಎರಡೂ ಸಮುದಾಯಗಳನ್ನು ಪ್ರಬಲವಾಗಿವೆ. ಅವರ ಪ್ರತಿನಿಧಿಗಳು ಬಹುತೇಕ ಎಲ್ಲಾ ಹಂತಗಳಲ್ಲಿ ನಿರ್ಧಾರ ತೆಗೆದುಕೊಳ್ಳುತ್ತಾರೆ.

ಆದರೆ ‘ಜಾತಿ ಗಣತಿ ವರದಿ’ ಎಂದು ಜನಪ್ರಿಯವಾಗಿರುವ ಇತ್ತೀಚಿನ ಸಾಮಾಜಿಕ-ಆರ್ಥಿಕ ಮತ್ತು ಶಿಕ್ಷಣ ಸಮೀಕ್ಷೆಯು ಈ ಎರಡೂ ಸಮುದಾಯಗಳ ಸ್ಥಾನಗಳನ್ನು ಕೆಳಗಿಳಿಸಿದೆ. ಈ ವರದಿಯನ್ನು ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ (ಕೆಎಸ್‌ಸಿಬಿಸಿ) ಅಧ್ಯಕ್ಷರಾಗಿದ್ದ ಕೆ.ಜಯಪ್ರಕಾಶ್ ಹೆಗ್ಡೆ ಅವರು ಫೆ.28ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಲ್ಲಿಸಿದ್ದರು.

ವರದಿಯು ಈ ಎರಡೂ ದೊಡ್ಡ ಸಮುದಾಯಗಳ ನಡುವೆ ಕೋಲಾಹಲವನ್ನು ಸೃಷ್ಟಿಸಿದೆ. ಸಮೀಕ್ಷೆಯು ಲಿಂಗಾಯತ ಜನಸಂಖ್ಯೆಯನ್ನು ಕೇವಲ 65 ಲಕ್ಷ (10.9%) ಮತ್ತು ಒಕ್ಕಲಿಗರನ್ನು 60 ಲಕ್ಷ (10%) ಇದ್ದಾರೆಂದು ಹೇಳಿದೆ ಎನ್ನಲಾಗಿದೆ. ಅಲ್ಲದೆ, ಕರ್ನಾಟಕದ ಒಟ್ಟು ಜನಸಂಖ್ಯೆಯನ್ನು 5.98 ಕೋಟಿಗೆ ಇಳಿಸವಾಗಿದೆ. 2011ರ ಜನಗಣತಿ ಪ್ರಕಾರ, ರಾಜ್ಯದ ಜನಸಂಖ್ಯೆ 6.1 ಕೋಟಿ ಆಗಿತ್ತು. ಸಮೀಕ್ಷೆಯಲ್ಲಿ ರಾಜ್ಯದಲ್ಲಿ 1,351 ವಿವಿಧ ಜಾತಿಗಳು ಕಂಡುಬಂದಿವೆ ಎಂದು ವರದಿ ಹೇಳಿದೆ ಎನ್ನಲಾಗಿದೆ.

ಸಾಂದರ್ಭಿಕ ಚಿತ್ರ
ರಾಜ್ಯ ಸರ್ಕಾರಕ್ಕೆ ಜಾತಿ ಗಣತಿ ವರದಿ ಸಲ್ಲಿಕೆ, ಕ್ಯಾಬಿನೆಟ್ ನಲ್ಲಿ ಚರ್ಚಿಸಿ ಮುಂದಿನ ನಿರ್ಧಾರ: ಸಿಎಂ ಸಿದ್ದರಾಮಯ್ಯ

ವರದಿಯ ಪ್ರಕಾರ, 5.98 ಕೋಟಿ ಜನರಲ್ಲಿ, 3.98 ಕೋಟಿಗೂ ಹೆಚ್ಚು ಜನರು ಅಹಿಂದ (ಅಲ್ಪಸಂಖ್ಯಾತರು, ಹಿಂದುಳಿದ ವರ್ಗಗಳು ಮತ್ತು ದಲಿತ) ಗುಂಪಿನವರಾಗಿದ್ದರೆ, 1.87 ಕೋಟಿ ಜನರು ಲಿಂಗಾಯತರು, ಒಕ್ಕಲಿಗರು, ಬ್ರಾಹ್ಮಣರು ಮತ್ತು ಇತರ ಜಾತಿಗಳ ಸಮುದಾಯದವರಾಗಿದ್ದಾರೆ. ಲಿಂಗಾಯತರು ಮತ್ತು ಒಕ್ಕಲಿಗರು ಜಾತಿ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿಲ್ಲದಿದ್ದರೆ, ಅವರು ಸಾಮಾಜಿಕ ಮತ್ತು ಕಲ್ಯಾಣ ಪ್ರಯೋಜನಗಳನ್ನು ಕಳೆದುಕೊಳ್ಳುತ್ತಾರೆ ಎಂಬ ಆತಂಕ ಆ ಸಮುದಾಯಗಳನ್ನು ಕಾಡುತ್ತಿದೆ.

ಸಮೀಕ್ಷೆಯು ಪರಿಶಿಷ್ಟ ಜಾತಿಗಳನ್ನು ಮೊದಲ ಸ್ಥಾನದಲ್ಲಿ ಇರಿಸಿದೆ. ನಂತರ ಮುಸ್ಲಿಮರು ಇದ್ದಾರೆ. (ಚಾರ್ಟ್ ನೋಡಿ) ಪಟ್ಟಿಯಲ್ಲಿ ಲಿಂಗಾಯತರು ಮತ್ತು ಒಕ್ಕಲಿಗರು ಕ್ರಮವಾಗಿ ಮೂರು ಮತ್ತು ನಾಲ್ಕನೇ ಸ್ಥಾನದಲ್ಲಿದ್ದಾರೆ. ಪರಿಣಾಮವಾಗಿ, ಸಮಿತಿಯು ಎಸ್‌ಸಿಗಳ ಕೋಟಾವನ್ನು ಹೆಚ್ಚಿಸಲು ಶಿಫಾರಸು ಮಾಡಿದೆ ಎಂದು ತಿಳಿದುಬಂದಿದೆ. ‘ವೀರಶೈವರು ಮತ್ತು ಲಿಂಗಾಯತರು ಒಂದೇ’ ಎಂದು ವರದಿ ಒತ್ತಿಹೇಳಿದೆ ಎಂದು ಮೂಲಗಳು ತಿಳಿಸಿವೆ.

ಜಾತಿ ಸಮೀಕ್ಷೆ
ಜಾತಿ ಸಮೀಕ್ಷೆ EXPRESS

ವರದಿ ಸಲ್ಲಿಕೆಯಾಗಿ ಹಲವಾರು ದಿನಗಳ ಕಳೆದಿವೆ. ಆದರೂ, ರಾಜ್ಯ ಸರ್ಕಾರ ವರದಿಯನ್ನು ಇನ್ನೂ ಸಾರ್ವಜನಿಕವಾಗಿ ಬಹಿರಂಗಗೊಳಿಸಿಲ್ಲ. ಸಿದ್ದರಾಮಯ್ಯ ಹಿಂದುಳಿದ ವರ್ಗಗಳ ರಾಜಕಾರಣದಲ್ಲಿ ನಿಸ್ಸೀಮರು. ಅದಕ್ಕಾಗಿಯೇ ಅವರು ಜಾತಿ ಗಣತಿ ಸಮೀಕ್ಷೆಗೆ ಆದೇಶಿಸಿದ್ದರು. ಆದರೆ, ಲಿಂಗಾಯತರು ಮತ್ತು ಒಕ್ಕಲಿಗರು ಆಗಲೂ ವಿರೋಧಿಸಿದ್ದರು. ಈಗಲೂ ವಿರೋಧಿಸುತ್ತಿದ್ದಾರೆ.

ಪ್ರಬಲ ಜಾತಿಗಳು: ಲಿಂಗಾಯತರು ದಕ್ಷಿಣ ಭಾರತ ಮತ್ತು ಮಹಾರಾಷ್ಟ್ರದಲ್ಲಿ ವಿಶೇಷವಾಗಿ ಕರ್ನಾಟಕದಲ್ಲಿ ಬಸವಣ್ಣನ (12ನೇ ಶತಮಾನ) ಕಾಲದಿಂದ ಕಂಡುಬರುವ ಧಾರ್ಮಿಕ ಪಂಥದವರಾಗಿದ್ದಾರೆ. ಸಮುದಾಯವು ಉತ್ತರ ಕರ್ನಾಟಕ ಮತ್ತು ಮಧ್ಯ ಕರ್ನಾಟಕ ಪ್ರದೇಶದಲ್ಲಿ ವ್ಯಾಪ್ತಿಸಿದೆ. 2020ರಲ್ಲಿ ಬಿ.ಎಸ್ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮವನ್ನು ಸ್ಥಾಪಿಸಲಾಯಿತು. ಅವರ ಅಭಿವೃದ್ಧಿಗೆ ₹500 ಕೋಟಿ ಘೋಷಿಸಿದ್ದರು. ಇನ್ನು, ಮೂಲತಃ ಕೃಷಿಯನ್ನು ಅವಲಂಬಿಸಿರುವ ಒಕ್ಕಲಿಗರು ಹಳೆಯ ಮೈಸೂರು ಮತ್ತು ಮಲೆನಾಡು ಪ್ರದೇಶದಲ್ಲಿ ಹೆಚ್ಚಾಗಿ ಪ್ರಬಲರಾಗಿದ್ದಾರೆ.

ಸಾಂದರ್ಭಿಕ ಚಿತ್ರ
ನಾನ್ಯಾವ ಜಾತಿ? ಮಾಹಿತಿ ಪಡೆಯಲು ಯಾರೂ ನನ್ನ ಬಳಿ ಬಂದಿಲ್ಲ: ಸಿದ್ದಗಂಗಾ ಶ್ರೀ

ಒಕ್ಕಲಿಗ ಸಮುದಾಯದಲ್ಲಿ ಹೆಚ್ಚಿನವರು ಕೃಷಿಕರು. ಈ ಸಮುದಾಯ ಹಳೇ ಮೈಸೂರು ಪ್ರದೇಶದಲ್ಲಿ ರಾಜಕೀಯ ಮತ್ತು ಆರ್ಥಿಕ ಪ್ರಾಬಲ್ಯವನ್ನು ಹೊಂದಿದೆ. ಕೆಲವು ಇತಿಹಾಸಕಾರರ ಪ್ರಕಾರ, ರಾಷ್ಟ್ರಕೂಟರು ಮತ್ತು ಪಶ್ಚಿಮ ಗಂಗರು ಒಕ್ಕಲಿಗ ಮೂಲದವರು. ಒಕ್ಕಲಿಗರು ವಿಜಯನಗರ ಸಾಮ್ರಾಜ್ಯದಲ್ಲಿ ಆಡಳಿತಾತ್ಮಕ ಸ್ಥಾನಗಳನ್ನು ಹೊಂದಿದ್ದರು. ಕೆಳದಿ ನಾಯಕರ ಆರಂಭಿಕ ಆಡಳಿತಗಾರರೂ ಆಗಿದ್ದರು. ಮೈಸೂರು ಸಾಮ್ರಾಜ್ಯದಲ್ಲಿ ಸೈನ್ಯ ಮತ್ತು ಸೇನಾಪಡೆಗಳಲ್ಲಿ ಸೇವೆ ಸಲ್ಲಿಸಿದ್ದರು. ಒಕ್ಕಲಿಗ ಸಮುದಾಯದ ಹೆಚ್ಚಿನ ಉಪಪಂಗಡಗಳನ್ನು ಕೇಂದ್ರ ಸರ್ಕಾರವು ಮುಂದುವರಿದ ಜಾತಿಗಳೆಂದು ಗೊತ್ತುಪಡಿಸಿದ್ದರೆ, ಗ್ರಾಮೀಣ ಪ್ರದೇಶಗಳಲ್ಲಿನ ಕೆಲವು ಉಪಪಂಗಡಗಳನ್ನು ರಾಜ್ಯ ಸರ್ಕಾರವು ಇತರೆ ಹಿಂದುಳಿದ ವರ್ಗಗಳೆಂದು ಗೊತ್ತುಪಡಿಸಿದೆ.

ಜಾತಿ ಗಣತಿ ವರದಿಗೆ ವಿರೋಧ: ಜಾತಿ ಗಣತಿ ವರದಿಯನ್ನು ಒಕ್ಕಲಿಗ ಮತ್ತು ಲಿಂಗಾಯತ ಸಮುದಾಯದ ನಾಯಕರು ವಿರೋಧಿಸುತ್ತಿದ್ದಾರೆ. ವರದಿ ತಿರಸ್ಕರಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ರಾಜ್ಯ ಸರ್ಕಾರದ ಮೇಲೆ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಒತ್ತಡ ಹೇರುತ್ತಿದೆ. ಕಳೆದ ವರ್ಷ ಡಿಸೆಂಬರ್‌ನಲ್ಲಿ ದಾವಣಗೆರೆಯಲ್ಲಿ ನಡೆದ ಮಹಾಸಭಾದ 24ನೇ ಮಹಾಸಭೆಯಲ್ಲಿ ವರದಿಯನ್ನು ವಿರೋಧಿಸಲು ನಿರ್ಧರಿಸಿತ್ತು. ವರದಿ ಅಂಗೀಕರಿಸಿದರೆ ರಾಜ್ಯಾದ್ಯಂತ ಪ್ರತಿಭಟನೆ ನಡೆಸುವುದಾಗಿ ಬೆದರಿಕೆ ಹಾಕುತ್ತಿದ್ದಾರೆ. ಒಕ್ಕಲಿಗ ಸಮುದಾಯವೂ ವರದಿಗೆ ವಿರೋಧ ವ್ಯಕ್ತಪಡಿಸಿದೆ. ವರದಿಯನ್ನು ಸಚಿವ ಸಂಪುಟದ ಮುಂದೆ ಇಟ್ಟು ತಮ್ಮ ಸಚಿವರ ಅಭಿಪ್ರಾಯ ಪಡೆಯುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಕಾನೂನು ಮತ್ತು ತಜ್ಞರ ಅಭಿಪ್ರಾಯಗಳನ್ನು ಪಡೆಯುವುದಾಗಿಯೂ ಅವರು ಹೇಳಿದ್ದಾರೆ. ಆದರೆ, ವರದಿ ಇನ್ನೂ ಸಂಪುಟದ ಮುಂದೆ ಪ್ರಸ್ತಾಪವಾಗಿಲ್ಲ. ಲೋಕಸಭೆ ಚುನಾವಣೆ ಮುಗಿದ ಬಳಿಕ ಅದರ ಚರ್ಚೆಯಾಗುವ ಸಾಧ್ಯತೆಗಳಿವೆ.

ಒಕ್ಕಲಿಗರ ನಿಲುವೇನು? ಕೆಲ ತಿಂಗಳ ಹಿಂದೆಯಷ್ಟೇ ಒಕ್ಕಲಿಗ ಸಮುದಾಯದವರೇ ಆದ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಹಾಗೂ ಒಕ್ಕಲಿಗ ಸಮುದಾಯದ ಮುಖಂಡರು ವರದಿಯನ್ನು ಸ್ವೀಕರಿಸದಂತೆ ಮುಖ್ಯಮಂತ್ರಿಗೆ ಒತ್ತಾಯಿಸಿದ್ದರು. ಸಮೀಕ್ಷೆಯು ಸರಿಯಾದ ರೀತಿಯಲ್ಲಿ ನಡೆದಿದೆ. ಮನೆ-ಮನೆಗೆ ತಲುಪಿ ಸಮೀಕ್ಷೆ ಮಾಡಲಾಗಿಲ್ಲ. ಹೀಗಾಗಿ, ವರದಿಯನ್ನು ವೈಜ್ಞಾನಿಕವಾಗಿ ರಚಿಸಲಾಗಿಲ್ಲವೆಂದು ಅವರು ಪ್ರತಿಪಾದಿಸಿದ್ದರು. ಡಿ.ಕೆ ಶಿವಕುಮಾರ್, ಕೃಷಿ ಸಚಿವ ಎನ್ ಚೆಲುವರಾಯಸ್ವಾಮಿ ಮತ್ತು ಉನ್ನತ ಶಿಕ್ಷಣ ಸಚಿವ ಎಂ.ಸಿ ಸುಧಾಕರ್ ಅವರು ಜಾತಿಗಣತಿ ವಿರುದ್ಧ ಸಿದ್ದರಾಮಯ್ಯ ಅವರಿಗೆ ಮನವಿ ಪತ್ರ ಸಲ್ಲಿಸಿದ್ದಾರೆ. ಆ ಮನವಿಗೆ ಆದಿಚುಂಚನಗಿರಿ ಮಠದ ನಿರ್ಮಲಾನಂದ ನಾಥ ಸ್ವಾಮೀಜಿ ಸೇರಿದಂತೆ ಒಕ್ಕಲಿಗ ಮಠಗಳ ಸ್ವಾಮೀಜಿಗಳೂ ಸಹಿ ಹಾಕಿದ್ದಾರೆ.

ಕರ್ನಾಟಕ ಒಕ್ಕಲಿಗರ ಸಂಘ ಮತ್ತು ರಾಜ್ಯ ಒಕ್ಕಲಿಗರ ಮೀಸಲಾತಿ ಹೋರಾಟ ಸಮಿತಿಯು ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದು, ಹೆಗಡೆ ಆಯೋಗವು ರಾಜ್ಯದ ಜನಸಂಖ್ಯೆಯನ್ನು 5.9 ಕೋಟಿ ಎಂದು ಲೆಕ್ಕ ಹಾಕಿದೆ. ಆದರೆ, ಆಧಾರ್ ಅಂಕಿಅಂಶಗಳು 6.9 ಕೋಟಿಗೂ ಹೆಚ್ಚು ಜನಸಂಖ್ಯೆಯಿದೆ ಎಂದು ಹೇಳಿವೆ. ಸಮೀಕ್ಷೆ ನಡೆಸಿದವರು ಎಲ್ಲ ಮನೆಗಳಿಗೂ ಭೇಟಿ ನೀಡಿಲ್ಲ ಎಂದು ಆರೋಪಿಸಿದ್ದಾರೆ.ಈ ವರದಿಯು ಕಾಂತರಾಜು ವರದಿಯನ್ನು ಆಧರಿಸಿದೆ. ಕಾಂತರಾಜು ಅವರ ವರದಿಯನ್ನು 2014-15ರಲ್ಲಿ ಮಾಡಲಾಗಿದೆ. ಅಂದರೆ, ಆ ವರದಿಗೂ ಇಂದಿಗೂ 10 ವರ್ಷಗಳ ಅಂತರವಿದೆ. ಕಳೆದ ಹತ್ತು ವರ್ಷಗಳಲ್ಲಿ ತೀವ್ರ ಬದಲಾವಣೆಗಳಾಗಿದ್ದು, ಇದರ ಆಧಾರದ ಮೇಲೆ ವರದಿ ನೀಡುವುದು ಅವೈಜ್ಞಾನಿಕವಾಗಿದೆ ವೆಂದು ಹೇಳಿದೆ.

ಸಾಂದರ್ಭಿಕ ಚಿತ್ರ
ವಿರೋಧಿಗಳನ್ನು ಹಣಿಯಲು ಸಿದ್ದು ಜಾತಿ ಗಣತಿ ಅಸ್ತ್ರ! (ಸುದ್ದಿ ವಿಶ್ಲೇಷಣೆ)

ಲಿಂಗಾಯತರ ಪ್ರತಿಕ್ರಿಯೆ: 30 ಲಿಂಗಾಯತ ಶಾಸಕರು ಕೂಡ ವರದಿಯನ್ನು ತಿರಸ್ಕರಿಸುವಂತೆ ಒತ್ತಾಯಿಸಿ ಮುಖ್ಯಮಂತ್ರಿಗೆ ಪತ್ರ ಬರೆದಿದ್ದರು. ಆ ಪತ್ರಕ್ಕೆ ಎಂ.ಬಿ ಪಾಟೀಲ್, ಶಿವಾನಂದ ಪಾಟೀಲ್, ಈಶ್ವರ ಖಂಡ್ರೆ ಸೇರಿದಂತೆ ಸಚಿವರು ಸಹಿ ಹಾಕಿದ್ದರು. ವೀರಶೈವ ಮಹಾಸಭಾದ ಮುಖ್ಯಸ್ಥ, ಕಾಂಗ್ರೆಸ್ ಶಾಸಕ ಶಾಮನೂರು ಶಿವಶಂಕರಪ್ಪ ಕೂಡ ವರದಿಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಈ ವರದಿಯನ್ನು ತರಸ್ಕರಿಸಿ, ಮರು ಸಮೀಕ್ಷೆ ನಡೆಸುವಂತೆ ಲಿಂಗಾಯತ ಮಹಾಸಭಾ ಆಗ್ರಹಿಸಿದೆ. ಕಾಂತರಾಜು, ಹೆಗಡೆ ವರದಿ 10 ವರ್ಷಗಳ ಹಿಂದಿನ ಮಾಹಿತಿ ಆಧರಿಸಿವೆ ಎಂದು ಶಿವಶಂಕರಪ್ಪ ಹೇಳಿದ್ದಾರೆ. “ಲಿಂಗಾಯತರು 2 ಕೋಟಿಗೂ ಅಧಿಕ ಜನರಿದ್ದಾರೆ ಎಂದು ನಾವು ಅಂದಾಜಿಸಿದ್ದೇವೆ. ನಾವು ನಮ್ಮ ಮಹಾಸಭಾದಿಂದ ಸಮೀಕ್ಷೆ ನಡೆಸುತ್ತೇವೆ. ಒಕ್ಕಲಿಗರು ಮತ್ತು ಬ್ರಾಹ್ಮಣರ ಸಹಾಯದಿಂದ ನಾವು ವರದಿ ವಿರುದ್ಧ ಹೋರಾಡಲಿದ್ದೇವೆ. ಈ ವರದಿಯನ್ನು ನಾವು ಒಪ್ಪುವುದಿಲ್ಲ ಎಂದು ಅವರು ಹೇಳಿದ್ದಾರೆ. ಲಿಂಗಾಯತ ಸಮುದಾಯವು ಸಂಕಷ್ಟದಲ್ಲಿದೆ. ಜೆ.ಎಚ್ ಪಟೇಲ್ ಮತ್ತು ಎಸ್ ನಿಜಲಿಂಗಪ್ಪ ಮುಖ್ಯಮಂತ್ರಿಗಳಾಗಿದ್ದಾಗ ಸಮುದಾಯದ ಪರಿಸ್ಥಿತಿ ಉತ್ತಮವಾಗಿತ್ತು ಎಂದು ಅವರು ಹೇಳಿದ್ದಾರೆ. ಅಲ್ಲದೆ, ತಮ್ಮ ಸಮುದಾಯಕ್ಕೆ ಉಪಮುಖ್ಯಮಂತ್ರಿ ಹುದ್ದೆ ನೀಡಬೇಕೆಂದು ಅವರು ಒತ್ತಾಯಿಸುತ್ತಿದ್ದಾರೆ.

ವರದಿ ಹಿನ್ನೆಲೆ: 2013ರಿಂದ 2018ರ ಅವಧಿಯಲ್ಲಿ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರು ಸಮೀಕ್ಷೆಗೆ ಆದೇಶಿಸಿದ್ದರು. ಕೆಎಸ್‌ಸಿಬಿಸಿಯ ಆಗಿನ ಅಧ್ಯಕ್ಷರಾಗಿದ್ದ ಎಚ್ ಕಾಂತರಾಜು ಅವರು 2018ರಲ್ಲಿ ತಮ್ಮ ವರದಿಯನ್ನು ಸಿದ್ಧಪಡಿಸಿದ್ದರು. ಆದರೆ, ಅದನ್ನು ಅಂಗೀಕರಿಸಲಾಗಲಿಲ್ಲ. ಸಾರ್ವಜನಿಕರಿಗೆ ಸಮೀಕ್ಷೆಯಲ್ಲಿನ ಅಂಕಿಅಂಶಗಳ ಮಾಹಿತಿಯನ್ನು ನೀಡಲಾಗಿರಲಿಲ್ಲ. ಅಧ್ಯಕ್ಷರಾಗಿ ಕಾಂತರಾಜು ಅವರ ಅವಧಿ ಮುಗಿದಾಗ, ಜಯಪ್ರಕಾಶ್ ಹೆಗ್ಡೆ ಅವರನ್ನು ಅಧ್ಯಕ್ಷರನ್ನಾಗಿ ಬಿಜೆಪಿ ಸರ್ಕಾರ ನೇಮಿಸಿತು. ಹೆಗಡೆ ಅವರ ಅಧಿಕಾರವಧಿ ಮುಗಿಯುವ ಕಡೆಯ ದಿನ, ಫೆಬ್ರವರಿ 28 ರಂದು ರಾಜ್ಯ ಸರ್ಕಾರಕ್ಕೆ ವರದಿ ಸಲ್ಲಿಸಿದರು. ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿದ್ದ ಎಚ್‌ಡಿ ಕುಮಾರಸ್ವಾಮಿ ಅವರು ವರದಿ ಸ್ವೀಕರಿಸಲಿಲ್ಲ ಎಂಬುದು ಸಿದ್ದರಾಮಯ್ಯ ಆರೋಪ.

1947ರಿಂದ, ಕರ್ನಾಟಕ (ಮೈಸೂರು ರಾಜ್ಯ ಸೇರಿದಂತೆ) 22 ಮುಖ್ಯಮಂತ್ರಿಗಳನ್ನು ಕಂಡಿದೆ. ಅವರಲ್ಲಿ ಕೆಲವರು ಒಂದಕ್ಕಿಂತ ಹೆಚ್ಚು ಬಾರಿ ಮುಖ್ಯಮಂತ್ರಿ ಆಗಿದ್ದಾರೆ. ಅವರಲ್ಲಿ 8 ಲಿಂಗಾಯತರು ಮತ್ತು 7 ಒಕ್ಕಲಿಗ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಪ್ರಮುಖ ಲಿಂಗಾಯತ ನಾಯಕರಲ್ಲಿ ಒಬ್ಬರಾಗಿದ್ದ ಎಂ ವೀರೇಂದ್ರ ಪಾಟೀಲ್ ಅವರು ಮುಖ್ಯಮಂತ್ರಿಯಾಗಿದ್ದರು. ಆದರೆ, ಅವರನ್ನು ಕಾಂಗ್ರೆಸ್ ಹೈಕಮಾಂಡ್ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿತ್ತು. ಅದಾದ ಬಳಿಕ, ಲಿಂಗಾಯತ ಸಮುದಾಯವು ಕಾಂಗ್ರೆಸ್‌ನಿಂದ ದೂರ ಸರಿಯಿತು.

ಇತ್ತೀಚಿನ ಜನಗಣತಿ ವರದಿ ಜಾರಿಯಾದರೆ, ಒಕ್ಕಲಿಗ-ಲಿಂಗಾಯತ ಸಮುದಾಯಗಳ ಪ್ರಾಬಲ್ಯ ಕಡಿಮೆಯೆಂದು ಬಿಂಬಿತವಾಗುತ್ತದೆ. ಇದರಿಂದ, ಸಮುದಾಯದ ಸದಸ್ಯರು ರಾಜಕೀಯವಾಗಿಯೂ ತಮ್ಮ ಪ್ರಾತಿನಿಧ್ಯವನ್ನು ಕಳೆದುಕೊಳ್ಳಬೇಕಾಗುತ್ತದೆ ಎಂಬ ಭಯ ಎರಡೂ ಸಮುದಾಯಗಳಲ್ಲಿದೆ. ಪ್ರಸ್ತುತ ಕ್ಯಾಬಿನೆಟ್‌ನಲ್ಲಿ ಮಾತ್ರವಲ್ಲದೆ, ಹಲವು ಮಂಡಳಿಗಳು ಮತ್ತು ನಿಗಮಗಳಲ್ಲಿ ಈ ಎರಡು ಸಮುದಾಯಕ್ಕೆ ಸೇರಿದವರೆ ಅಧ್ಯಕ್ಷರಾಗಿದ್ದಾರೆ. ಮೊದಲ ಅವಧಿಗೆ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರು ಲಿಂಗಾಯತ ಪ್ರತ್ಯೇಕ ಧರ್ಮವೆಂದು ಪ್ರಸ್ತಾಪಿಸಿದ್ದರು. ಅಲ್ಲದೆ, ಪ್ರಸ್ತಾಪಕ್ಕೆ ಸಂಪುಟದ ಅನುಮೋದನೆಯನ್ನು ಪಡೆದಿದ್ದರು. ಆದರೆ ಇದನ್ನು ಸಮುದಾಯದೊಳಗಿನ ಅನೇಕರು ಮತ್ತು ವಿರೋಧ ಪಕ್ಷ ಬಿಜೆಪಿ ವ್ಯಾಪಕವಾಗಿ ವಿರೋಧಿಸಿತು. ಪರಿಣಾಮವಾಗಿ 2018ರ ಚುನಾವಣೆಯಲ್ಲಿ ಕಾಂಗ್ರೆಸ್‌ ನಷ್ಟ ಅನುಭವಿಸಿತು. ಸೋಲು ಕಂಡಿತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com