ಮಡಿಕೇರಿ: ಬಿಜೆಪಿ ಹೈಕಮಾಂಡ್ ಒಕ್ಕಲಿಗರ ಹಿತಾಸಕ್ತಿಯನ್ನು ಕಡೆಗಣಿಸಿ ಸಮುದಾಯವನ್ನು ನಿರ್ಲ್ಯಕ್ಷಿಸುತ್ತಿದೆ ಎಂದು ಒಕ್ಕಲಿಗ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕುಶಾಲನಗರದಲ್ಲಿ ಒಕ್ಕಲಿಗ ಸಮಾಜ ನಡೆಸಿದ ಸುದ್ದಿಗೋಷ್ಠಿಯಲ್ಲಿ ಕೇಂದ್ರದ ಮಾಜಿ ಸಚಿವ ಡಿ.ವಿ.ಸದಾನಂದಗೌಡ ಅವರಿಗೆ ಲೋಕಸಭೆ ಟಿಕೆಟ್ ನೀಡುವಂತೆ ಸಮಾಜದ ಮುಖಂಡರು ಹಾಗೂ ಸದಸ್ಯರು ಒತ್ತಾಯಿಸಿದ್ದಾರೆ.
ಅತ್ಯುತ್ತಮ ಸಂಸದರಲ್ಲಿ ಒಬ್ಬರಾಗಿದ್ದ ಮಾಜಿ ಸಂಸದ ಪ್ರತಾಪ್ ಸಿಂಹ ಅವರಿಗೆ ಬಿಜೆಪಿ ಪಕ್ಷ ಟಿಕೆಟ್ ನೀಡಿಲ್ಲ. ಬಿಜೆಪಿ ಹೈಕಮಾಂಡ್ ಒಕ್ಕಲಿಗ ಸಮುದಾಯವನ್ನು ನಿರ್ಲಕ್ಷಿಸುತ್ತಿದೆ ಮತ್ತು ಕಡೆಗಣಿಸುತ್ತಿದೆ ಎಂಬುದನ್ನು ಇತ್ತೀಚಿನ ಬೆಳವಣಿಗೆಗಳು ಸೂಚಿಸುತ್ತವೆ. ಸದಾನಂದಗೌಡರಿಗೆ ಬಿಜೆಪಿ ಕೊನೆ ಗಳಿಗೆಯಲ್ಲಿ ಟಿಕೆಟ್ ನಿರಾಕರಿಸಿದ್ದು, ಎಲ್ಲರ ಅಸಮಾಧಾನಕ್ಕೆ ಕಾರಣವಾಗಿದೆ ಎಂದು ಕೊಡಗು ಗೌಡ ಸಮಾಜ ಒಕ್ಕೂಟದ ಪ್ರಮುಖರಲ್ಲಿ ಒಬ್ಬರಾದ ಆನಂದ ಕರಂದ್ಲಾಜೆ ಅಭಿಪ್ರಾಯಪಟ್ಟಿದ್ದಾರೆ.
ಸದಾನಂದಗೌಡರಿಗೆ ಬಿಜೆಪಿ ಕೂಡಲೇ ಲೋಕಸಭೆ ಟಿಕೆಟ್ ಖಚಿತಪಡಿಸಬೇಕು ಎಂದು ಒತ್ತಾಯಿಸಿದರು. ಹೈಕಮಾಂಡ್ ಸದಾನಂದ ಗೌಡರಿಗೆ ಪಕ್ಷದಲ್ಲಿ ಸೂಕ್ತ ಪ್ರಾತಿನಿಧ್ಯ ನೀಡದಿದ್ದರೆ, ಕೊಡಗು ಗೌಡ ಸಮಾಜ ಚುನಾವಣೆಯಲ್ಲಿ ತಕ್ಕ ಉತ್ತರ ನೀಡಲಿದೆ ಎಂದು ಎಚ್ಚರಿಕೆ ನೀಡಿದರು.
ಸಂಘದ ವತಿಯಿಂದ ತುರ್ತು ಸಭೆ ಕರೆದು ಸಮುದಾಯದ ಹಿತಾಸಕ್ತಿ ಕಾಪಾಡದ ರಾಜಕೀಯ ಪಕ್ಷಕ್ಕೆ ಬೆಂಬಲ ನೀಡದಂತೆ ಒತ್ತಾಯಿಸಲಾಗುವುದು ಎಂದು ವಿವರಿಸಿದರು. ಕುಶಾಲನಗರ ಗೌಡ ಸಮಾಜದ ಅಧ್ಯಕ್ಷ ಸಿ.ಗಣಿ ಪ್ರಸಾದ್, ಪ್ರತಾಪಸಿಂಹ ಅವರನ್ನು ನಿರ್ಲಕ್ಷಿಸುತ್ತಿರುವ ಬಿಜೆಪಿಯನ್ನು ಖಂಡಿಸಿದರು.
ಪ್ರತಾಪ್ ಸಿಂಹ ಅವರು ಕ್ಷೇತ್ರದಾದ್ಯಂತ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಂಡಿದ್ದಾರೆ ಎಂದು ಅಭಿಪ್ರಾಯಪಟ್ಟ ಅವರು, 'ಸಿಂಹ ಅವರು ಕೊಡಗು-ಮೈಸೂರು ಭಾಗದಲ್ಲಿ ಸರ್ಕಾರಿ ಕಾರ್ಯಕ್ರಮಗಳನ್ನು ಅತ್ಯುನ್ನತ ಮಟ್ಟದಲ್ಲಿ ಅನುಷ್ಠಾನಗೊಳಿಸಿದ್ದಾರೆ. ಬಿಜೆಪಿ ಅವರನ್ನು ಕಡೆಗಣಿಸಿರುವುದು ತಪ್ಪು. ಸದಾನಂದಗೌಡರನ್ನು ಕಡೆಗಣಿಸಿರುವುದು ಸಮುದಾಯದವರಿಗೆ ನಿರಾಸೆಯಾಗಿದೆ ಎಂದರು.
Advertisement