ಚಿಕ್ಕಬಳ್ಳಾಪುರ: ಆಂಧ್ರ ಪ್ರದೇಶ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಫೋಟೋ ಇರುವ ವಾಚ್ಗಳನ್ನು ಚಿಕ್ಕಬಳ್ಳಾಪುರ ಬಳಿ ವಶಕ್ಕೆ ಪಡೆಯಲಾಗಿದೆ. ಬಾಗೇಪಲ್ಲಿ ಟೋಲ್ ಪ್ಲಾಜಾ ಚೆಕ್ಪೋಸ್ಟ್ನಲ್ಲಿ ತಪಾಸಣಾ ವೇಳೆಯಲ್ಲಿ ಕಾರೊಂದರಲ್ಲಿದ್ದ ವಾಚ್ ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಪಿ.ಎನ್. ರವೀಂದ್ರ ತಿಳಿಸಿದ್ದಾರೆ.
ನ್ಯೂ ಇಂಡಿಯನ್ ಎಕ್ಸ್ಪ್ರೆಸ್ನೊಂದಿಗೆ ಮಾತನಾಡಿದ ಅವರು, ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಹೆಚ್ಚುವರಿ ಪಡೆಗಳೊಂದಿಗೆ ಗಡಿ ಪ್ರದೇಶಗಳಲ್ಲಿ ಬಿಗಿ ಭದ್ರತಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಬುಧವಾರ ತಡರಾತ್ರಿ ಶಿವಪ್ಪ ಮತ್ತು ಸಿಬ್ಬಂದಿಯನ್ನೊಳಗೊಂಡ ಎಸ್ ಎಸ್ ಟಿ-2 ತಂಡವು ಬಾಗೇಪಲ್ಲಿ ಟೋಲ್ ಪ್ಲಾಜಾದಲ್ಲಿ ಕಾರನ್ನು ಪರಿಶೀಲಿಸಿದಾಗ ನಾಲ್ಕು ಬಾಕ್ಸ್ಗಳು ಪತ್ತೆಯಾಗಿವೆ. ಸರಿಯಾಗಿ ಪರಿಶೀಲಿಸಿದಾಗ ಅದರಲ್ಲಿ ಆಂಧ್ರಪ್ರದೇಶ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಫೋಟೋವಿರುವ 96 ವಾಚ್ಗಳು ಪತ್ತೆಯಾಗಿವೆ ಎಂದು ತಿಳಿಸಿದರು.
ಕಾರಿನಲ್ಲಿದ್ದ ಇಬ್ಬರು ವ್ಯಕ್ತಿಗಳನ್ನು ಅನಂತಪುರ ನಿವಾಸಿ ಬಂಡಿ ನಾಗೇಂದ್ರ, ಮತ್ತೋರ್ವರನ್ನು ಆಂಧ್ರ ಪೊಲೀಸ್ ಗನ್ ಮ್ಯಾನ್ ಎಂದು ಹೇಳಲಾದ ನಾಗೇಂದ್ರ ಎಂದು ಗುರುತಿಸಲಾಗಿದೆ. ಅವರು ವಾಚ್ಗಳಿಗೆ ಸಂಬಂಧಿಸಿದಂತೆ ಯಾವುದೇ ಬಿಲ್ಗಳನ್ನು ಒದಗಿಸಿಲ್ಲ. ಶಿವಪ್ಪ ದೂರಿನನ್ವಯ ಬಾಗೇಪಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
Advertisement