ಬೆಂಗಳೂರು: ಹೊಸಕೋಟೆಯ ಅವಿಮುಕ್ತೇಶ್ವರ ದೇವಾಲಯದ ಬ್ರಹ್ಮರಥೋತ್ಸವ ಸಮಿತಿಗೆ ಅನ್ಯ ಧರ್ಮೀಯರನ್ನು ನೇಮಕ ಮಾಡಿರುವುದು ವಿವಾದಕ್ಕೀಡಾಗಿದೆ.
ಸರ್ಕಾರದ ಈ ನಡೆಯನ್ನು ಬಿಜೆಪಿ ತೀವ್ರವಾಗಿ ಟೀಕಿಸಿತ್ತು, ಬಿಜೆಪಿ ಟೀಕೆಗೆ ಸಿಎಂ ಸಿದ್ದರಾಮಯ್ಯ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ.
ಸಮಿತಿಗೆ ಮುಸ್ಲಿಂ ವ್ಯಕ್ತಿಯನ್ನು ನೇಮಕ ಮಾಡುವ ಮೂಲಕ ಕಾಂಗ್ರೆಸ್ ಸರ್ಕಾರ ಹಿಂದೂಗಳ ಅಧಿಕಾರವನ್ನು ಕಸಿದುಕೊಳ್ಳಲು ಯತ್ನಿಸುತ್ತಿದೆ ಎಂದು ಬಿಜೆಪಿ ಆರೋಪಿಸಿತ್ತು. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಸಿದ್ದರಾಮಯ್ಯ ಬಿಜೆಪಿಯ ಆರೋಪ ಸುಳ್ಳು ಎಂದು ಹೇಳಿದ್ದಾರೆ. ಬಿಜೆಪಿ ಸರ್ಕಾರದ ಅವಧಿಯಲ್ಲೂ ದೇವಾಲಯದ ಸಮಿತಿಗೆ ಮುಸ್ಲಿಮರ ನೇಮಕ ಮಾಡಲಾಗಿತ್ತು ಎಂಬ ಅಂಶವನ್ನು ಸಿಎಂ ಸಿದ್ದರಾಮಯ್ಯ ದಾಖಲೆಯ ಸಮೇತ ಬಹಿರಂಗಪಡಿಸಿದ್ದಾರೆ. ಬಿಜೆಪಿ ಈ ವಿಷಯದಲ್ಲಿ ಸುಳ್ಳು ಹೇಳುತ್ತಿದೆ, ದಾಖಲೆ ಬಿಡುಗಡೆ ಮಾಡಿದ ಬೆನ್ನಲ್ಲೆ ಬಿಜೆಪಿ ತನ್ನ ಆರೋಪವಿರುವ ಪೋಸ್ಟ್ ನ್ನು ಡಿಲೀಟ್ ಮಾಡಿದೆ, ಆದರೆ ಜನತೆಯಲ್ಲಿ ಕ್ಷಮೆ ಕೋರಿಲ್ಲ ಎಂದು ಸಿದ್ದರಾಮಯ್ಯ ಟೀಕಾ ಪ್ರಹಾರ ನಡೆಸಿದ್ದಾರೆ.
2020 ಹಾಗೂ 2022 ರಲ್ಲಿ ಬಿಜೆಪಿ ಅವಧಿಯಲ್ಲೂ ಹೊಸಕೋಟೆಯ ಅವಿಮುಕ್ತೇಶ್ವರ ದೇವಾಲಯದ ಸಮಿತಿಗೆ ಮುಸ್ಲಿಮ್ ಸದಸ್ಯರೊಬ್ಬರನ್ನು ನೇಮಕ ಮಾಡಲಾಗಿತ್ತು. "ಈಗ ನಿನ್ನಲ್ಲಿ ತುಂಬಿ ತುಳುಕುತ್ತಿರುವ ಹಿಂದೂ ಧರ್ಮದ ಮೋಹ ಆಗ ಎಲ್ಲಿತ್ತು?" ಹೊಸಕೋಟೆಯ ಅವಿಮುಕ್ತೇಶ್ವರ ಸ್ವಾಮಿ ದೇವಾಲಯವು ಹಿಂದೂ ಧರ್ಮದ ಸಮಚಿತ್ತತೆಗೆ ಸಾಕ್ಷಿಯಾಗಿದೆ ಮತ್ತು ಎಲ್ಲಾ ಧರ್ಮದ ಜನರು ಅಲ್ಲಿ ನಡೆಯುವ ಪ್ರತಿಯೊಂದು ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಕ್ತಿ ಮತ್ತು ಗೌರವದಿಂದ ಪಾಲ್ಗೊಳ್ಳುತ್ತಾರೆ ಎಂದು ಸಿಎಂ ಹೇಳಿದ್ದಾರೆ.
Advertisement