
ಬೆಂಗಳೂರು: ಹಾಸನ ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ ಲೈಂಗಿಕ ಹಗರಣ ಆರೋಪದ ಸಂತ್ರಸ್ತ ಮಹಿಳೆಯರು ಪ್ರಭಾವಿ ರಾಜಕಾರಣಿಗಳ ಬೆದರಿಕೆಯ ಕಾರಣದಿಂದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (SIT) ಯನ್ನು ಸಂಪರ್ಕಿಸಲು ಹಿಂದೇಟು ಹಾಕುತ್ತಿದ್ದಾರೆ ಎಂದು ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಆರೋಪಿಸಿದ್ದಾರೆ.
ನಿನ್ನೆ ವಿಧಾನಸೌಧದಲ್ಲಿ ನಡೆದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಸ್ಐಟಿ ಮೊರೆ ಹೋಗಿರುವ ಸಂತ್ರಸ್ತ ಮಹಿಳೆಯರ ಹೆಸರನ್ನು ಬಹಿರಂಗಪಡಿಸಿಲ್ಲ, ಏಕೆಂದರೆ ಅವರು ಪ್ರಬಲ ರಾಜಕಾರಣಿಗಳಿಂದ ಬೆದರಿಕೆಗಳನ್ನು ಎದುರಿಸುತ್ತಿದ್ದಾರೆ. ಅವರ ಗುರುತುಗಳನ್ನು ಬಹಿರಂಗಪಡಿಸಬಾರದು ಎಂಬುದು ಅವರ ಆಸಕ್ತಿಗೆ ಬಿಟ್ಟ ವಿಚಾರ ಎಂದರು.
ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರು ಮೊನ್ನೆ ಗುರುವಾರ ರಾಜ್ಯಪಾಲ ಥಾವರ್ಚಂದ್ ಗೆಹ್ಲೋಟ್ ಅವರನ್ನು ಭೇಟಿ ಮಾಡಿ ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರನ್ನು ಪದಚ್ಯುತಗೊಳಿಸುವಂತೆ ಮತ್ತು ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸುವಂತೆ ಕೋರಿ ಮನವಿ ಮಾಡಿಕೊಂಡಿರುವ ಬಗ್ಗೆ ಕೇಳಿದಾಗ ಡಿ ಕೆ ಶಿವಕುಮಾರ್, ಡಿಸಿಎಂ 12 ನೇ ಶತಮಾನದ ಸುಧಾರಕ ಬಸವಣ್ಣ ಅವರ ವಚನ ಉಲ್ಲೇಖಿಸಿದರು. ಇತರರತ್ತ ಬೊಟ್ಟು ಮಾಡುವ ಮುನ್ನ ತಮ್ಮನ್ನು ತಾವು ಪರಾಮರ್ಶಿಸಿಕೊಳ್ಳಲಿ ಎಂದರು.
ನೀವು ಇಡೀ ಜಗತ್ತನ್ನು ಸರಿಯಾಗಿಸಲು ಏಕೆ ಪ್ರಯತ್ನಿಸುತ್ತಿದ್ದೀರಿ ನೀವು ನಿಮ್ಮ ಸ್ವಂತ ಮನಸ್ಸು ಮತ್ತು ದೇಹವನ್ನು ಸರಿಪಡಿಸಿಕೊಳ್ಳಿ ಎಂದರು.
ಪ್ರಜ್ವಲ್ ರೇವಣ್ಣ ಅವರ ಪ್ರಕರಣದಲ್ಲಿ ಯಾವುದೇ ಸಂತ್ರಸ್ತೆಯರು ಇದುವರೆಗೆ ದೂರು ದಾಖಲಿಸಿಲ್ಲ ಎಂಬ ರಾಷ್ಟ್ರೀಯ ಮಹಿಳಾ ಆಯೋಗದ ಹೇಳಿಕೆಗೆ ಶಿವಕುಮಾರ್, ಈಗಾದರೂ ಆಯೋಗವು ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿರುವುದಕ್ಕೆ ನನಗೆ ಸಂತೋಷವಾಗಿದೆ. ಇದಕ್ಕೆ ಪ್ರತಿಕ್ರಿಯಿಸುವುದು ನನ್ನ ಕೆಲಸವಲ್ಲ, ತನಿಖಾಧಿಕಾರಿಗಳು ಪ್ರತಿಕ್ರಿಯಿಸುತ್ತಾರೆ ಎಂದರು.
ಕರ್ನಾಟಕ ಬಸವಣ್ಣನವರ ತತ್ವಗಳ ನಾಡು. ನಮ್ಮ ಸರ್ಕಾರವೂ ಎಲ್ಲರಿಗೂ ಸಮಾನ ಪಾಲು ಮತ್ತು ಎಲ್ಲರಿಗೂ ಸಮಾನ ಜೀವನ ಎಂಬ ತತ್ವವನ್ನು ಅನುಸರಿಸುತ್ತದೆ. ನಾವು ಬಸವಣ್ಣನವರ ತತ್ವಗಳಿಂದ ಪ್ರೇರಿತರಾಗಿದ್ದೇವೆ. ನಮ್ಮ ಯೋಜನೆಗಳು ಜಾತಿ ಮತ್ತು ಧರ್ಮದ ಭೇದವಿಲ್ಲದೆ ಎಲ್ಲರಿಗೂ ಇರುತ್ತದೆ ಎಂದರು.
Advertisement