ಮರುಕುಂಬಿ ಗ್ರಾಮದ 98 ಮಂದಿಗೆ ಜೀವಾವಧಿ ಶಿಕ್ಷೆ: ಹೈಕೋರ್ಟ್ ಮೊರೆ ಹೋಗಲು ಕುಟುಂಬಸ್ಥರ ನಿರ್ಧಾರ
ಕೊಪ್ಪಳ: ಜಿಲ್ಲೆಯ ಗಂಗಾವತಿ ತಾಲೂಕಿನ ಮರುಕುಂಬಿ ಗ್ರಾಮದಲ್ಲಿ 2014ರಲ್ಲಿ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ 98 ಮಂದಿಗೆ ಜೀವಾವಧಿ ಶಿಕ್ಷೆ ವಿಧಿಸಿ ನ್ಯಾಯಾಲಯ ತೀರ್ಪು ನೀಡಿದ ಕೆಲವೇ ದಿನಗಳಲ್ಲಿ ಅಪರಾಧಿಗಳ ಕುಟುಂಬಸ್ಥರು ಹೈಕೋರ್ಟ್ನಲ್ಲಿ ತೀರ್ಪು ಪ್ರಶ್ನಿಸಲು ನಿರ್ಧರಿಸಿದ್ದಾರೆ.
ನಮ್ಮ ಜೀವನಕ್ಕೆ ಆಧಾರವಾಗಿರುವವರು ಜೈಲಿಗೆ ಹೋದರೆ ನಮಗೆ ಜೀವನ ನಡೆಸಲು ಕಷ್ಟವಾಗುತ್ತದೆ ಎಂದು ಕುಟುಂಬಸ್ಥರು ಅಳಲು ತೋಡಿಕೊಳ್ಳುತ್ತಿದ್ದಾರೆ. ಮರುಕುಂಬಿಯಲ್ಲಿ ಹಲವು ದಲಿತರ ಗುಡಿಸಲುಗಳಿಗೆ ಬೆಂಕಿ ಹಚ್ಚಿದ ಆರೋಪದಲ್ಲಿ 98 ಮಂದಿಗೆ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ.
ಗ್ರಾಮದ ಹೋಟೆಲ್ಗಳು ಮತ್ತು ಸಲೂನ್ಗಳಿಗೆ ದಲಿತರಿಗೆ ಪ್ರವೇಶ ನಿರಾಕರಿಸಿ ಹಿನ್ನೆಲೆಯಲ್ಲಿ ಘರ್ಷಣೆ ನಡೆದು, ಆರೋಪಿಗಳು ಅವರ ಗುಡಿಸಲುಗಳಿಗೆ ಬೆಂಕಿ ಹಚ್ಚಿದರು.
98 ಅಪರಾಧಿಗಳು ಮರುಕುಂಬಿಯಲ್ಲಿ ವಾಸಿಸುವ 200 ಕುಟುಂಬಗಳಿಗೆ ಸೇರಿದವರು. ಅವರ ಕುಟುಂಬ ಸದಸ್ಯರು ಈಗ ತಮ್ಮ ಅನ್ನದಾತರಿಲ್ಲದೆ ಕಠಿಣ ಸಮಯವನ್ನು ಎದುರಿಸಬೇಕಾಗಿದೆ. ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸುವುದೂ ಕಷ್ಟವಾಗಿದೆ. ಹೀಗಾಗಿ ಹೈಕೋರ್ಟ್ ಮೊರೆ ಹೋಗಲು ನಿರ್ಧರಿಸಿದ್ದಾರೆ.
ನ್ಯಾಯಾಲಯದ ಆದೇಶದಿಂದ ಅಪರಾಧಿಗಳ ಕುಟುಂಬ ಸದಸ್ಯರು ಅಸಮಾಧಾನಗೊಂಡಿರುವುದರಿಂದ ಮರುಕುಂಬಿಯಲ್ಲಿ ಮತ್ತೆ ಹಿಂಸಾಚಾರ ಸಂಭವಿಸಬಹುದು ಎಂದು ಕೆಲವು ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದರು.
ಮರುಕುಂಬಿ ಸಮೀಪದ ಕೆಲ ಗ್ರಾಮಗಳ ಮೇಲೂ ನ್ಯಾಯಾಲಯದ ಆದೇಶದ ಪರಿಣಾಮ ಬೀರಿದೆ. ಅನೇಕರು ತಮ್ಮ ಸಲೂನ್ಗಳು ಮತ್ತು ಹೋಟೆಲ್ಗಳನ್ನು ಮುಚ್ಚಲು ಪ್ರಾರಂಭಿಸಿದ್ದಾರೆ. ಆದರೆ, ಇತ್ತೀಚೆಗೆ ಪೊಲೀಸ್ ತಂಡ ಮರುಕುಂಬಿ ಮತ್ತು ಸಮೀಪದ ಗ್ರಾಮಗಳಿಗೆ ಭೇಟಿ ನೀಡಿ ಸಲೂನ್ ಮತ್ತು ಹೋಟೆಲ್ಗಳನ್ನು ತೆರೆಯುವಂತೆ ಮಾಲೀಕರಿಗೆ ಮನವರಿಕೆ ಮಾಡಿತು.
ನ್ಯಾಯಾಲಯ ತೀರ್ಪು ಪ್ರಕಟಿಸಿದ ಬಳಿಕ ಅಪರಾಧಿಗಳನ್ನು ಬಳ್ಳಾರಿ ಜೈಲಿಗೆ ಕರೆದೊಯ್ಯುವಾಗ ಅವರ ಕುಟುಂಬದ ಹಲವು ಸದಸ್ಯರು ಭಾವಪರವಶರಾದರು. ಮರುಕುಂಬಿಯ ಕೆಲವು ಹಿರಿಯರು, ಗ್ರಾಮದಲ್ಲಿ ಈಗ ದಲಿತರು ಮತ್ತು ಇತರ ಸಮುದಾಯಗಳ ನಡುವೆ ಯಾವುದೇ ಸಮಸ್ಯೆಗಳಿಲ್ಲ. ನಾವೆಲ್ಲರೂ ಈಗ ಶಾಂತಿ ಮತ್ತು ಸಾಮರಸ್ಯದಿಂದ ಬದುಕುತ್ತಿದ್ದೇವೆ ಎನ್ನುತ್ತಾರೆ.
2014ರಲ್ಲಿ ಸ್ಥಳೀಯ ಥಿಯೇಟರ್ನಲ್ಲಿ ಚಿತ್ರ ವೀಕ್ಷಿಸಲು ತೆರಳಿದ್ದ ದಲಿತರು ಅಲ್ಲಿದ್ದ ಇತರ ಸಮುದಾಯದ ಜನರೊಂದಿಗೆ ಹೊಡೆದಾಟ ನಡೆಸಿ ಗುಡಿಸಲುಗಳನ್ನು ಸುಟ್ಟು ಹಾಕಲಾಗಿತ್ತು. ನಂತರ, ಕೆಲವು ದಲಿತರು ಗ್ರಾಮದ ಸಲೂನ್ ಮತ್ತು ಹೋಟೆಲ್ಗಳಿಗೆ ಪ್ರವೇಶಿಸಲು ಬಿಡದಿದ್ದಾಗ ಘರ್ಷಣೆಗಳು ನಡೆದವು. ಗ್ರಾಮದಲ್ಲಿ ಘರ್ಷಣೆಗೆ ಕಾರಣರಾದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಹಲವು ದಲಿತ ಮುಖಂಡರು ಕೊಪ್ಪಳದಿಂದ ಬೆಂಗಳೂರಿಗೆ ಪಾದಯಾತ್ರೆ ನಡೆಸಿದ್ದರು.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ