
ಮಡಿಕೇರಿ: ನಗರದ ರಸ್ತೆಗಳಲ್ಲಿ ಶನಿವಾರ ರಾತ್ರಿ ಸಾಲುದೀಪಗಳಂತೆ ಹೊರಟ ಬೆಳಕಿನ ದಿಬ್ಬಣವು ನಾಡಿನ ದಸರಾ ಮಹೋತ್ಸವಕ್ಕೆ ಸಂಭ್ರಮದ ತೆರೆ ಎಳೆಯಿತು. ಉತ್ಸವವನ್ನು ವೀಕ್ಷಿಸಲು ಸಾವಿರಾರು ಜನರು ನಗರದಲ್ಲಿ ಸೇರಿದ್ದರು. ನಗರದ ಹತ್ತು ದೇವಸ್ಥಾನ ಸಮಿತಿಗಳು ಹತ್ತು ದಿನಗಳ ಆಚರಣೆಯ ಅಂತ್ಯವನ್ನು ಸೂಚಿಸುವ ಮೂಲಕ ಆಡಂಬರದ ಟ್ಯಾಬ್ಲೋ ಪ್ರದರ್ಶನ ಮಾಡಿದವು.
ಮಳೆಯ ನಡುವೆಯೂ ಮಡಿಕೇರಿ ನಗರ ಶನಿವಾರದಂದು ಭಾರೀ ಶಬ್ಧ ಮತ್ತು ದೀಪಗಳ ಬೆಳಕಿನಿಂದ ಕಂಗೊಳಿಸುತ್ತಿತ್ತು. ನಗರದಲ್ಲಿ ಪಟಾಕಿ ಸಿಡಿಸಿ ವಿಜಯದಶಮಿ ಆಚರಣೆಯನ್ನು ವೈಭವದಿಂದ ಆರಂಭಿಸಿದವು. ಈ ಕಾರ್ಯಕ್ರಮವನ್ನು ಕಣ್ತುಂಬಿಕೊಳ್ಳಲು ಹೆಚ್ಚಿನ ಸಂಖ್ಯೆಯಲ್ಲಿ ಜನರು ರಸ್ತೆಯುದ್ದಕ್ಕೂ ಜಮಾಯಿಸಿದ್ದರು. ಇಲ್ಲಿನ ಪೇಟೆ ಶ್ರೀರಾಮಮಂದಿರದ ಮಂಟಪವು ಅಡಿ ಇಡುತ್ತಿದ್ದಂತೆ ದಶಮಂಟಪಗಳ ಶೋಭಾಯಾತ್ರೆಗೆ ಸಾಂಪ್ರದಾಯಿಕ ಚಾಲನೆ ಸಿಕ್ಕಿತು. ‘ವಿಷ್ಣುವಿನ ಮತ್ಯ್ಸಾವತಾರ’ ಕಥಾಪ್ರಸಂಗವನ್ನು ಪ್ರದರ್ಶಿಸುತ್ತಾ ಸಾಗಿದ ಮಂಪಟವನ್ನು ರಸ್ತೆಯಲ್ಲಿದ್ದ ಸಾವಿರಾರು ಮಂದಿ ಕಣ್ತುಂಬಿಕೊಂಡರು.
ನಂತರ ಒಂದರ ಮೇಲೋಂದರಂತೆ ಮಂಟಪಗಳು ಹೊರಡಲು ಅನುವಾದವು. ನಗರದ ಎಲ್ಲೆಡೆ ಜನಸಾಗರ ಪ್ರವಾಹದೋಪಾದಿಯಲ್ಲಿ ನುಗ್ಗಿ ಬಂದಿತು. ವಾಹನ ಸಂಚಾರಕ್ಕಿರಲಿ, ನಡೆಯಲೂ ಒಂದಿನಿತೂ ಜಾಗವಿಲ್ಲದ ಸ್ಥಿತಿ ಹಲವೆಡೆ ಕಂಡು ಬಂತು. ಪೇಟೆ ಶ್ರೀರಾಮಂದಿರದ ನಂತರ ದೇಚೂರು ಶ್ರೀರಾಮಮಂದಿರವು ‘ಕಾಳಿಂಗ ಮರ್ಧನ’, ದಂಡಿಯ ಮಾರಿಯಮ್ಮ ‘ಕೌಶಿಕೆ ಮಹಾತ್ಮೆ’, ಚೌಡೇಶ್ವರಿ ದೇಗುಲವು ‘ಅರುಣಾಸುರ ವಧೆ’, ಕಂಚಿ ಕಾಮಾಕ್ಷಿಯಮ್ಮ ದೇವಾಲಯ ‘ಸಿಂಧೂರ ಗಣಪತಿ’, ಚೌಟಿ ಮಾರಿಯಮ್ಮ ‘ಕದಂಬ ಕೌಶಿಕೆ’, ಕೋದಂಡರಾಮ ದೇಗುಲ ‘ರಾಮನಿಂದ ರಾವಣನ ಸಂಹಾರ’, ಕೋಟೆ ಮಾರಿಯಮ್ಮ ದೇಗಲುವು ‘ಕೃಷ್ಣನ ಬಾಲಲೀಲೆ, ಕಂಸವಧೆ’, ಕೋಟೆ ಮಹಾಗಣಪತಿ ದೇವಾಲಯವು ‘ಅಜಗರ–ಶಲಭಾಸುರ ವಧೆ’, ಕರವಲೆ ಭಗವತಿ ದೇಗಲವು ‘ಕೊಲ್ಲೂರು ಮೂಕಾಂಬಿಕೆ ಮಹಾತ್ಮೆ’ ಕಥಾಪ್ರಸಂಗವನ್ನ ತನ್ನ ಮಂಪಟಗಳಲ್ಲಿ ನಗರದ ವಿವಿಧೆಡೆ ಪ್ರಸ್ತುತಪಡಿಸಿದವು.
ಫಲಿತಾಂಶ ಪ್ರಕಟವಾದ ನಂತರ ದೇವಸ್ಥಾನದ ಸಮಿತಿ ಮತ್ತು ಟ್ಯಾಬ್ಲೋ ಸ್ಪರ್ಧೆಯ ತೀರ್ಪುಗಾರರ ನಡುವೆ ಸಣ್ಣ ಮನಸ್ತಾಪ ಉಂಟಾಗಿತ್ತು. ಆದಾಗ್ಯೂ, ನಂತರ ಸಮಸ್ಯೆಯನ್ನು ಪರಿಹರಿಸಲಾಯಿತು. ಸಂಭ್ರಮದ ಅಂಗವಾಗಿ ಗಾಂಧಿ ಮೈದಾನದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಎಲ್ಲೆಡೆ ಪೊಲೀಸ್ ಸರ್ಪಗಾವಲು ಹಾಕಲಾಗಿತ್ತು. ಸುಮಾರು 2 ಸಾವಿರಕ್ಕೂ ಹೆಚ್ಚು ಪೊಲೀಸರು ಬಿಗಿ ಭದ್ರತೆ ಒದಗಿಸಿದ್ದರು. ತಲಾ 15 ಪೊಲೀಸರನ್ನು ಒಳಗೊಂಡು ‘ಜಂಬೊ’ ತಂಡಗಳನ್ನು ಹೆಚ್ಚು ಜನಸಂದಣಿ ಇರುವ ಪ್ರದೇಶಗಳಲ್ಲಿ ನಿಯೋಜಿಸಲಾಗಿತ್ತು.
Advertisement