
ವಿಜಯನಗರ: ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲೂಕಿನಲ್ಲಿ ಕಲುಷಿತ ನೀರು ಸೇವಿಸಿ ಮೃತಪಟ್ಟವರ ಸಂಖ್ಯೆ ಐದಕ್ಕೆ ಏರಿಕೆಯಾಗಿದ್ದು, ಮಂಗಳವಾರ ತಡರಾತ್ರಿ ಇನ್ನೂ ಮೂವರು ಗ್ರಾಮಸ್ಥರು ದಾವಣಗೆರೆಯ ಸರ್ಕಾರಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಎರಡು ವಾರಗಳಿಂದ ತಂಬಿಗೇರಿ ಗ್ರಾಮದಲ್ಲಿ ಕಲುಷಿತ ನೀರು ಸಮಸ್ಯೆ ಕಾಣಿಸಿಕೊಂಡಿತ್ತು. ನೀರು ಸರಬರಾಜು ಪೈಪ್ಗಳಲ್ಲಿ ಗ್ರಾಮದ ಮನೆಗಳಿಗೆ ಕಲುಷಿತ ನೀರು ಸೇರಿತ್ತು. ಈ ನೀರು ಸೇವಿದ್ದರಿಂದ ಗ್ರಾಮದ ಹಲವರು ಆಸ್ಪತ್ರೆ ಸೇರುವಂತಾಯಿತು. ಸುಮಾರು 25 ಜನರನ್ನು ದಾವಣಗೆರೆ ಮತ್ತು ಸುತ್ತಮುತ್ತಲಿನ ಆಸ್ಪತ್ರೆಗಳಿಗೆ ದಾಖಲಿಸಲಾಗಿದ್ದು ಈ ಪೈಕಿ ಆವರು ಸಾವನ್ನಪ್ಪಿದ್ದಾರೆ.
ಅಕ್ಟೋಬರ್ 17ರಂದು ಮೊದಲ ಸಾವು ವರದಿಯಾಗಿತ್ತು. 35 ವರ್ಷದ ಸುರೇಶ್ ಭೋವಿ ಮಣಿಪಾಲದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ನಂತರ ಅಕ್ಟೋಬರ್ 21ರಂದು ದಾವಣಗೆರೆಯ ಚಿಗಟೇರಿ ಸರ್ಕಾರಿ ಆಸ್ಪತ್ರೆಯಲ್ಲಿ 45 ಮಹಾಂತೇಶ ಭೋವಿ ಮೃತಪಟ್ಟರು. ಮಂಗಳವಾರ ತಡರಾತ್ರಿ ಇನ್ನೂ ಮೂವರು ಗ್ರಾಮಸ್ಥರಾದ ಗೌರಮ್ಮ (60), ಹನುಮಂತಪ್ಪ (38) ಮತ್ತು 8 ತಿಂಗಳ ಮಗು ಸಹ ಸಾವನ್ನಪ್ಪಿದೆ. ಈ ಸಾವುಗಳು ನೀರಿನ ಮಾಲಿನ್ಯದಿಂದ ಸಂಭವಿಸಿವೆ ಎಂದು ಲ್ಯಾಬ್ ವರದಿಗಳು ದೃಢಪಡಿಸಿವೆ.
ವಿಜಯನಗರ ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ್ ಹಾಗೂ ಇತರ ಹಿರಿಯ ಅಧಿಕಾರಿಗಳು ಬುಧವಾರ ಗ್ರಾಮಕ್ಕೆ ಭೇಟಿ ನೀಡುವ ನಿರೀಕ್ಷೆಯಿದೆ. ಸೋಮವಾರ ಗ್ರಾಮಕ್ಕೆ ಆರೋಗ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿದ್ದ ವೇಳೆ ಕಲುಷಿತ ನೀರಿನ ಸಮಸ್ಯೆಯನ್ನು ನಿರ್ಲಕ್ಷಿಸಿದ್ದಾರೆ ಎಂದು ಆರೋಪಿಸಿ ಗ್ರಾಮಸ್ಥರಿಂದ ಪ್ರತಿಭಟನೆ ಎದುರಿಸಿದರು.
ಕಲುಷಿತ ನೀರು ಸೇವಿಸಿ ಇನ್ನೂ ನಾಲ್ವರು ಗ್ರಾಮಸ್ಥರು ದಾವಣಗೆರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹಲವು ಬಾರಿ ಮನವಿ ಮಾಡಿದರೂ ಅಧಿಕಾರಿಗಳು ಕ್ಷಿಪ್ರವಾಗಿ ಕ್ರಮಕೈಗೊಳ್ಳಲು ವಿಫಲರಾಗಿದ್ದಾರೆ. ಈ ಸಾವಿಗೆ ಕಾರಣರಾದ ಅಧಿಕಾರಿಗಳನ್ನು ಅಮಾನತುಗೊಳಿಸಬೇಕೆಂದು ತಂಬಿಗೇರಿಯ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಕಳೆದ ವಾರದಲ್ಲಿ ಕರ್ನಾಟಕದಲ್ಲಿ ಕಲುಷಿತ ನೀರು ಸೇವಿಸಿ ಸಾವನ್ನಪ್ಪಿದವರ ಸಂಖ್ಯೆ ಏಳಕ್ಕೆ ಏರಿಕೆಯಾಗಿದೆ. ಮಂಗಳವಾರ ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿಯಲ್ಲಿ ಕಲುಷಿತ ನೀರು ಸೇವಿಸಿ ಇಬ್ಬರು ಸಾವನ್ನಪ್ಪಿದ್ದಾರೆ.
Advertisement