ಮುಡಾ ಪ್ರಕರಣ: ಮನವಿ ಪತ್ರದಲ್ಲಿ ವೈಟ್ನರ್ ಹಾಕಿದ್ದನ್ನ ಒಪ್ಪಿಕೊಂಡ ಸಿಎಂ ಪತ್ನಿ ಪಾರ್ವತಿ!

ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ಮೊದಲ ಆರೋಪಿಯಾಗಿದ್ದು, ಅವರ ಪತ್ನಿ ಎರಡನೇ ಆರೋಪಿಯಾಗಿದ್ದಾರೆ. ಪಾರ್ವತಿ ಅವರು ಶುಕ್ರವಾರ ಮೈಸೂರು ಲೋಕಾಯುಕ್ತ ಎಸ್ ಪಿ ಟಿ.ಜೆ. ಉದೇಶ ಅವರ ಕಚೇರಿಯಲ್ಲಿ ವಿಚಾರಣೆ ಎದುರಿಸಿದ್ದಾರೆ.
CM Siddaramaiah and his wife photo
ಪತ್ನಿ ಪಾರ್ವತಿ ಅವರೊಂದಿಗೆ ಸಿಎಂ ಸಿದ್ದರಾಮಯ್ಯ ಫೋಟೋ
Updated on

ಮೈಸೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (ಮುಡಾ) ಪ್ರಕರಣದ ತನಿಖೆ ನಡೆಸುತ್ತಿರುವ ಲೋಕಾಯುಕ್ತರಿಂದ ಮೂರು ಗಂಟೆಗಳ ಕಾಲ ವಿಚಾರಣೆಗೊಳಗಾದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಅವರು ಪ್ರಾಧಿಕಾರಕ್ಕೆ ಸಲ್ಲಿಸಿದ ಮನವಿ ಪತ್ರಕ್ಕೆ ವೈಟ್ನರ್ ಹಾಕಿರುವುದನ್ನು ಒಪ್ಪಿಕೊಂಡಿದ್ದಾರೆ ಎಂದು ಮೂಲಗಳು ಶನಿವಾರ ತಿಳಿಸಿವೆ.

ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ಮೊದಲ ಆರೋಪಿಯಾಗಿದ್ದು, ಅವರ ಪತ್ನಿ ಎರಡನೇ ಆರೋಪಿಯಾಗಿದ್ದಾರೆ. ಪಾರ್ವತಿ ಅವರು ಶುಕ್ರವಾರ ಮೈಸೂರು ಲೋಕಾಯುಕ್ತ ಎಸ್ ಪಿ ಟಿ.ಜೆ. ಉದೇಶ ಅವರ ಕಚೇರಿಯಲ್ಲಿ ವಿಚಾರಣೆ ಎದುರಿಸಿದ್ದಾರೆ. ಸಿಎಂ ಪತ್ನಿಯ ಹೇಳಿಕೆ ವಿಡಿಯೋ ಕ್ಯಾಮರಾದಲ್ಲಿ ದಾಖಲಾಗಿದೆ.

ತನಿಖೆ ವೇಳೆ ಪರಿಹಾರದ ನಿವೇಶನ ಹಂಚಿಕೆಗೆ ಸಂಬಂಧಿಸಿದಂತೆ ಮುಡಾಕ್ಕೆ ಸಲ್ಲಿಸಿದ್ದ ಮನವಿ ಪತ್ರಕ್ಕೆ ವೈಟ್ನರ್ ಹಾಕಿದ್ದೆ ಎಂದು ಸ್ಪಷ್ಟಪಡಿಸಿದ್ದಾರೆ. ವಾಕ್ಯದಲ್ಲಿ ತಪ್ಪಿದ್ದ ಕಾರಣಕ್ಕೆ ವೈಟ್ನರ್ ಬಳಸಬೇಕಾಯಿತು ಎಂದು ಸಮರ್ಥಿಸಿಕೊಂಡಿದ್ದಾರೆ. ತಪ್ಪು ಏನು ಎಂದು ತನಗೆ ನಿಖರವಾಗಿ ನೆನಪಿಲ್ಲ ಎಂದು ಅವರು ಹೇಳಿದ್ದಾರೆ ಎನ್ನಲಾಗಿದೆ. ಮೈಸೂರಿನ ವಿಜಯನಗರ ಬಡಾವಣೆಯಲ್ಲಿ ನಿವೇಶನಗಳನ್ನು ಮಂಜೂರು ಮಾಡುವಂತೆ ಬೇಡಿಕೆ ಇಟ್ಟಿರುವುದನ್ನು ಮರೆಮಾಚಲು ಮುಡಾ ಪ್ರಕರಣ ಬೆಳಕಿಗೆ ಬಂದ ನಂತರ ಮನವಿ ಪತ್ರಕ್ಕೆ ವೈಟ್ನರ್ ಹಾಕಲಾಗಿದೆ ಎಂದು ಆರೋಪಿಸಲಾಗಿದೆ.

ಕೆಸರೆ ಗ್ರಾಮದ 3.16 ಎಕರೆ ವಿವಾದಿತ ಆಸ್ತಿ ಹಾಗೂ ಪರಿಹಾರವಾಗಿ 14 ನಿವೇಶನಗಳನ್ನು ವಿಜಯನಗರದಲ್ಲಿ ಮಂಜೂರು ಮಾಡುವಂತೆ ಪತ್ರ ಬರೆದಿರುವ ಬಗ್ಗೆ ಸಿಎಂ ಪತ್ನಿಯನ್ನು ಪ್ರಶ್ನಿಸಲಾಗಿದೆ. ಅಪರೂಪಕ್ಕೆ ದಾಖಲೆಗಳಿಗೆ ಸಹಿ ಹಾಕುವುದರಿಂದಾಗಿ ಸಹಿಯಲ್ಲಿ ಸ್ವಲ್ಪ ವ್ಯತ್ಯಾಸವಾಗಿದೆ ಎಂದು ಅವರು ಹೇಳಿರುವುದಾಗಿ ಮೂಲಗಳು ತಿಳಿಸಿವೆ.

ಪಾರ್ವತಿ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ಗುರುವಾರ ಸಂಜೆ ನೋಟಿಸ್ ನೀಡಲಾಗಿತ್ತು. ಕುಟುಂಬದ ಸ್ನೇಹಿತರ ಜತೆಗೂಡಿ ಲೋಕಾಯುಕ್ತ ಕಚೇರಿಗೆ ಆಗಮಿಸಿದ್ದರು. ಪರಿಹಾರಕ್ಕಾಗಿ ಮುಡಾಕ್ಕೆ ಎಷ್ಟು ಮನವಿ ಪತ್ರಗಳನ್ನು ಸಲ್ಲಿಸಿದ್ದೀರಿ ಎಂಬ ಬಗ್ಗೆಯೂ ಪಾರ್ವತಿ ಅವರನ್ನು ಕೇಳಲಾಯಿತು. ಐದರಿಂದ ಆರು ಪತ್ರಗಳನ್ನು ನೀಡಲಾಗಿದೆ ಮತ್ತು ನಿಖರವಾದ ಸಂಖ್ಯೆಗಳು ತಿಳಿದಿಲ್ಲ ಎಂದು ಅವರು ಸಮರ್ಥಿಸಿಕೊಂಡಿದ್ದಾರೆ.

ತಾನು ನಿರ್ದಿಷ್ಟ ಸ್ಥಳದಲ್ಲಿ ನಿವೇಶನ ಕೇಳಿಲ್ಲ. ಈ ಜಮೀನು ತನ್ನ ಪೋಷಕರ ಕಡೆಯಿಂದ ಉಡುಗೊರೆಯಾಗಿ ಬಂದಿದ್ದು, ತನ್ನ ಜಮೀನು ಸ್ವಾಧೀನಪಡಿಸಿಕೊಂಡಿದ್ದರಿಂದ ಪರಿಹಾರ ನಿವೇಶನಕ್ಕೆ ಮನವಿ ಮಾಡಿದ್ದಾಗಿ ಅವರು ಲೋಕಾಯುಕ್ತಕ್ಕೆ ತಿಳಿಸಿದ್ದಾರೆ.

CM Siddaramaiah and his wife photo
ಮುಡಾ ಪ್ರಕರಣ: ಸಿಎಂ ಸಿದ್ದರಾಮಯ್ಯಗೆ ಲೋಕಾಯುಕ್ತ ನೋಟಿಸ್!

ಸಿಎಂ ಸಿದ್ದರಾಮಯ್ಯ ಅವರ ಭಾಮೈದುನ ಮೂರನೇ ಆರೋಪಿ ಮಲ್ಲಿಕಾರ್ಜುನ ಸ್ವಾಮಿ ಮತ್ತು ನಾಲ್ಕನೇ ಆರೋಪಿ ಜಮೀನು ಮಾಲೀಕ ಜೆ.ದೇವರಾಜು ಅವರನ್ನು ಲೋಕಾಯುಕ್ತರು ಇತ್ತೀಚೆಗೆ ವಿಚಾರಣೆಗೆ ಒಳಪಡಿಸಿದ್ದರು. ವಿಶೇಷ ನ್ಯಾಯಾಲಯದ ಆದೇಶದ ನಂತರ ಲೋಕಾಯುಕ್ತರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.

ಕೋರ್ಟ್ ಆದೇಶವನ್ನು ಪ್ರಶ್ನಿಸಿ ಸಿಎಂ ಸಿದ್ದರಾಮಯ್ಯ ಕರ್ನಾಟಕ ಹೈಕೋರ್ಟ್ ವಿಭಾಗೀಯ ಪೀಠದಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಮತ್ತೊಂದೆಡೆ, ಜಾರಿ ನಿರ್ದೇಶನಾಲಯ (ಇಡಿ) ಕೂಡ ಪ್ರಕರಣದ ತನಿಖೆ ನಡೆಸುತ್ತಿದ್ದು, ಮೈಸೂರಿನ ಮುಡಾ ಕಚೇರಿ ಮತ್ತು ಬೆಂಗಳೂರಿನಲ್ಲಿರುವ ದೇವರಾಜು ನಿವಾಸದ ಮೇಲೂ ಇಡಿ ದಾಳಿ ನಡೆಸಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com