
ಬೆಂಗಳೂರು: ರಾಜ್ಯಪಾಲರು ದೂರುಗಳ ಬಗ್ಗೆ ಸ್ಪಷ್ಟೀಕರಣ ನೀಡುವಂತೆ ಸೂಚಿಸಿ ಲೋಕಾಯುಕ್ತಕ್ಕೆ ವಾಪಸ್ ಕಳುಹಿಸಿದ್ದು, ಲೋಕಾಯುಕ್ತದವರು ಸ್ಪಷ್ಟಿಕರಣ ನೀಡಲಿದ್ದಾರೆ ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ ಅವರು ಹೇಳಿದರು.
ಸದಾಶಿವನಗರದ ತಮ್ಮ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲೋಕಾಯುಕ್ತದಿಂದ ದೂರುಗಳ ಕಡತ ಹೋಗಿದೆ. ಇದಾದ ನಂತರ, ಕ್ಲ್ಯಾರಿಫಿಕೇಶನ್ ಕೇಳಿ ವಾಪಸ್ ಕಳುಹಿಸಿದ್ದೇವೆ ಎಂದು ರಾಜ್ಯಪಾಲರು ಹೇಳುತ್ತಿದ್ದಾರೆ. ಲೋಕಾಯುಕ್ತದಿಂದ ಸ್ಪಷ್ಟೀಕರಣ ಬರುವವರೆಗೂ ವಿಷಯ ರಿಜೆಕ್ಟ್ ಆಗುವುದಿಲ್ಲ. ರಾಜ್ಯಪಾಲರ ಬಳಿ ಇದ್ದಂತೆಯಲ್ಲವೇ? ಇದನ್ನೇ ರಾಜ್ಯಪಾಲರು ನನ್ನ ಬಳಿ ದೂರುಗಳು ಬಾಕಿ ಇಲ್ಲ ಎಂದು ಹೇಳುತ್ತಿದ್ದಾರೆ ಎಂದರು.
ರಾಜ್ಯಪಾಲರ ಕಚೇರಿಯಿಂದ ಮೂರು ದೂರುಗಳ ಕುರಿತು ಕ್ಲಾರಿಫಿಕೇಶನ್ ಕೇಳಿದ್ದಾರೆ ಎಂದಾದರೆ ಲೋಕಾಯುಕ್ತದವರು ಸುಮ್ಮನೆ ಇರಲು ಬರುವುದಿಲ್ಲ. ಸ್ಪಷ್ಟಿಕರಣ ನೀಡಬೇಕಾಗುತ್ತದೆ. ತದನಂತರದ ವಿಚಾರ ರಾಜ್ಯಪಾಲರಿಗೆ ಬಿಟ್ಟದ್ದು ಎಂದು ಹೇಳಿದರು.
ರಾಜ್ಯಪಾಲರು ಒಂದು ಕಡತ ಮಾತ್ರ ಇದೆ ಎಂಬುದನ್ನು ನಿನ್ನೆ ತಿಳಿಸಿದರು. ಹೆಚ್.ಡಿ. ಕುಮಾರಸ್ವಾಮಿಯವರದ್ದು ಎಂಬುದು ಗೊತ್ತಾಗಿದೆ. ಅದಕ್ಕಾದರೂ ಕ್ರಮ ತೆಗೆದುಕೊಳ್ಳಬೇಕಲ್ಲವೇ? ಕಾನೂನು ರೀತಿ ಇದೆಯೇ? ಕಾನೂನು ಬಾಹಿರವಾಗಿದೆಯೇ ಎಂಬುದನ್ನು ಲೋಕಾಯುಕ್ತದವರು ತಿಳಿಸಿದ್ದಾರೆ. ಅದನ್ನು ಆಧರಿಸಿ ಕ್ರಮ ತೆಗೆದುಕೊಳ್ಳಬೇಕು ಎಂದರು.
ಸಿದ್ದಾರ್ಥ ಟ್ರಸ್ಟ್ಗೆ ನೀಡಿರುವ ಕೆಐಎಡಿಬಿ ನಿವೇಶನದ ಬಗ್ಗೆ ರಾಜ್ಯಪಾಲರ ಬಳಿ ಚರ್ಚೆ ಆಗಿಲ್ಲ. ವಿಶೇಷ ಅಧಿವೇಶನ ಕರೆಯುವ ಬಗ್ಗೆ ಮುಖ್ಯಮಂತ್ರಿಯವರ ಬಳಿ ಪ್ರಸ್ತಾಪ ಆಗಿಲ್ಲ ಎಂದ ಅವರು, ಕೋರ್ಟ್ ತೀರ್ಪು ಆಧರಿಸಿ, ಮುಂದಿನ ಬೆಳವಣಿಗೆಗಳನ್ನು ನೋಡಿ ರಾಷ್ಟ್ರಪತಿ ಭೇಟಿಯ ಬಗ್ಗೆ ತೀರ್ಮಾನಿಸಲಾಗುವುದು ಎಂದು ಹೇಳಿದರು.
ಮುಡಾ ವಿಚಾರದಿಂದ ಸಿಎಂ ಆತಂಕಗೊಂಡಿದ್ದಾರೆ ಎಂಬುದರ ಕುರಿತು ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವ ಪರಮೇಶ್ವರ್, ಮುಖ್ಯಮಂತ್ರಿಯವರು ಆತಂಕದಲಿಲ್ಲ. ಎಲ್ಲ ವಿಚಾರದಲ್ಲೂ ಸ್ಪಷ್ಟವಾಗಿದ್ದಾರೆ. ವಿರೋಧ ಪಕ್ಷದ ನಾಯಕನಾಗಿ, ಮುಖ್ಯಮಂತ್ರಿಯಾಗಿ ಅಧಿಕಾರವನ್ನು ದುರುಪಯೋಗಪಡಿಸಿಕೊಂಡಿಲ್ಲ. ಯಾವುದೇ ರೀತಿಯ ಕಾನೂನು ಬಾಹಿರ ಕೆಲಸಗಳನ್ನು ಮಾಡಿಲ್ಲ ಎಂಬುದನ್ನು ರಾಜ್ಯದ ಜನತೆಯ ಮುಂದೆ ಸ್ಪಷ್ಟಪಡಿಸಿದ್ದಾರೆ ಎಂದರು.
ನಿವೃತ್ತ ನ್ಯಾಯಮೂರ್ತಿ ಜಾನ್ ಮೈಕಲ್ ಡಿಕುನ್ಹಾ ಮುಖ್ಯಮಂತ್ರಿಯವರಿಗೆ ವರದಿ ಸಲ್ಲಿಸುವಾಗ ನಾನು ಇರಲಿಲ್ಲ. ಅದನ್ನು ಪರಿಶೀಲಿಸಿ, ಏನು ಶಿಫಾರಸ್ಸು ಮಾಡಿದ್ದಾರೆ ಎಂಬುದನ್ನು ಆಧರಿಸಿ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು ಎಂದರು.
ಯಾವುದಾದರು ವಿಷಯದ ಕುರಿತು ಸತ್ಯಾಸತ್ಯತೆಗಳನ್ನು ಸರ್ಕಾರಕ್ಕೆ ತಿಳಿಸಬೇಕು ಎಂಬ ಉದ್ದೇಶ ಇಟ್ಟುಕೊಂಡು ಆಯೋಗಗಳನ್ನು ರಚಿಸಲಾಗಿರುತ್ತದೆ. ಆಯೋಗ ವರದಿ ಬಂದಾದ ಮೇಲೆ ಕ್ರಮ ಕೈಗೊಳ್ಳಬೇಕಾಗುತ್ತದೆ. ಇಲ್ಲವಾದರೆ ಆಯೋಗ ಏಕೆ ರಚಿಸಬೇಕು. ಕ್ರಮ ತೆಗೆದುಕೊಳ್ಳಲಾಗುವುದು. ಕುನ್ನಾ ವರದಿ ಕ್ಯಾಬಿನೆಟ್ ಮುಂದೆ ಬಂದರೆ ಚರ್ಚಿಸಲಾಗುವುದು ಎಂದು ತಿಳಿಸಿದರು.
Advertisement