VC ನೇಮಕಾತಿಯಲ್ಲಿ ರಾಜ್ಯಪಾಲರ ಅಧಿಕಾರ ಮೊಟಕು: ಸರ್ಕಾರ-ಗವರ್ನರ್ ಮಧ್ಯೆ ಮತ್ತೊಂದು ಸುತ್ತು ಸಂಘರ್ಷ

ಮುಂದಿನ ವಿಧಾನಮಂಡಲ ಅಧಿವೇಶನದಲ್ಲಿ ಈ ಮಸೂದೆ ಮಂಡನೆಯಾಗಲಿದ್ದು, ಅದಕ್ಕೆ ಅಂಗೀಕಾರ ಸಿಗುವ ಸಾಧ್ಯತೆಯಿದೆ. ಆದರೆ ವಿಧೇಯಕವು ರಾಜ್ಯಪಾಲರ ಬಳಿಗೆ ಹೋಗಬೇಕಾಗಿದ್ದು, ಅವರು ಅದನ್ನು ಅಂಗೀಕರಿಸುವ ಅಥವಾ ತಿರಸ್ಕರಿಸುವ ಸಾಧ್ಯತೆಯಿದೆ.
ಥಾವರ್ ಚಂದ್ ಗೆಹ್ಲೊಟ್
ಥಾವರ್ ಚಂದ್ ಗೆಹ್ಲೊಟ್
Updated on

ಬೆಂಗಳೂರು: ಗದಗ ಜಿಲ್ಲೆಯ ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯದ ಉಪ ಕುಲಪತಿ ನೇಮಕಕ್ಕೆ ಸಂಬಂಧಿಸಿದಂತೆ ರಾಜ್ಯಪಾಲರ ಅಧಿಕಾರವನ್ನು ಮೊಟಕುಗೊಳಿಸಿ ಸರ್ಕಾರದ ಸುಪರ್ದಿಗೆ ತರುವ ಬಗ್ಗೆ ಮೊನ್ನೆ ಮಂಗಳವಾರ ಕಲಬುರಗಿಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಸರ್ಕಾರ ತೀರ್ಮಾನಿಸುವ ಮೂಲಕ ಸರ್ಕಾರ ಮತ್ತು ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ನಡುವೆ ಮತ್ತೊಂದು ಸುತ್ತಿನ ಸಂಘರ್ಷ ಮುಂದುವರಿದಂತಾಗಿದೆ. ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ (ತಿದ್ದುಪಡಿ) ಮಸೂದೆ-2024ರ ಕರಡು ಪ್ರತಿಯನ್ನು ರಾಜ್ಯ ಸಚಿವ ಸಂಪುಟ ಅನುಮೋದಿಸಿದೆ.

ಮುಂದಿನ ವಿಧಾನಮಂಡಲ ಅಧಿವೇಶನದಲ್ಲಿ ಈ ಮಸೂದೆ ಮಂಡನೆಯಾಗಲಿದ್ದು, ಅದಕ್ಕೆ ಅಂಗೀಕಾರ ಸಿಗುವ ಸಾಧ್ಯತೆಯಿದೆ. ಆದರೆ ವಿಧೇಯಕವು ರಾಜ್ಯಪಾಲರ ಬಳಿಗೆ ಹೋಗಬೇಕಾಗಿದ್ದು, ಅವರು ಅದನ್ನು ಅಂಗೀಕರಿಸುವ ಅಥವಾ ತಿರಸ್ಕರಿಸುವ ಸಾಧ್ಯತೆಯಿದೆ. ಸಂಸದೀಯ ವ್ಯವಹಾರಗಳು ಮತ್ತು ಶಾಸನಗಳ ಇಲಾಖೆಯು ಕರಡು ಮಸೂದೆಯನ್ನು ಕೂಲಂಕಷವಾಗಿ ಪರಿಶೀಲಿಸಿದ್ದು, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಹೆಚ್ .ಕೆ.ಪಾಟೀಲ್ ಅನುಮೋದನೆ ನೀಡಿದ್ದಾರೆ.

ಪ್ರಸ್ತುತ, ರಾಜ್ಯ ಸರ್ಕಾರವು ನೇಮಿಸಿದ ಶೋಧನಾ ಸಮಿತಿಯು ಅರ್ಹ ಶಿಕ್ಷಣ ತಜ್ಞರ ಮೂರು ಹೆಸರನ್ನು ಅಖೈರುಗೊಳಿಸಿ ರಾಜ್ಯಪಾಲರಿಗೆ ಕಳುಹಿಸಿ, ಅವರ ಅನುಮೋದನೆಯನ್ನು ಕೋರಿದೆ. ಆದರೆ, ಪ್ರಸ್ತಾವಿತ ಮಸೂದೆಯು ಕಾನೂನಾದರೆ, ರಾಜ್ಯ ಸರ್ಕಾರದ ಸಮಿತಿಯು ಸೂಚಿಸುವ ಮೂರು ಹೆಸರುಗಳಲ್ಲಿ ಒಬ್ಬರನ್ನು ಅಂತಿಮಗೊಳಿಸಿ ಅದನ್ನು ರಾಜ್ಯಪಾಲರಿಗೆ ಕಳುಹಿಸುತ್ತದೆ, ಅವರು ತಮ್ಮ ಅನುಮೋದನೆ ನೀಡದೆ ಬೇರೆ ಮಾರ್ಗವಿಲ್ಲ.

ಈ ಕಾನೂನು ಅಗತ್ಯವನ್ನು ಸಮರ್ಥಿಸಿರುವ ರಾಜ್ಯ ಸರ್ಕಾರ ಜೂನ್ 18, 2015 ರಂದು ಯುಜಿಸಿ ನಿಯಮಾವಳಿಗಳನ್ನು ಉಲ್ಲೇಖಿಸಿದೆ. ವಿಶ್ವವಿದ್ಯಾಲಯಗಳ ಸ್ಥಾಪನೆ, ಆಡಳಿತ ಮತ್ತು ನೇಮಕಾತಿಗಾಗಿ ಏಕರೂಪದ ನಿಬಂಧನೆಗಳನ್ನು ತರಲು ಕಾನೂನು ಅಗತ್ಯವಿದೆ ಎಂದು ಹೇಳಿದೆ. ಯುಜಿಸಿ ಅಧಿಸೂಚನೆಯು ನಿಯಮಾವಳಿಗಳ ಸೆಕ್ಷನ್ 7.3 ರಲ್ಲಿ ವಿಶ್ವವಿದ್ಯಾಲಯಗಳ ಉಪಕುಲಪತಿಗಳ ನೇಮಕಾತಿಗೆ ಕನಿಷ್ಠ ವಿದ್ಯಾರ್ಹತೆಯನ್ನು ನಿಗದಿಪಡಿಸಿದೆ.

ಅದರಂತೆ, ಹುದ್ದೆಗೆ ಅಭ್ಯರ್ಥಿಗಳು ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರ ಹುದ್ದೆಯಲ್ಲಿ ಕನಿಷ್ಠ 10 ವರ್ಷ ಸೇವೆ ಸಲ್ಲಿಸಿರಬೇಕು. ಇದರ ಜೊತೆಗೆ, ಯುಜಿಸಿ ನಿಯಮಾವಳಿಗಳ ನಿಬಂಧನೆಗಳಿಗೆ ವಿರುದ್ಧವಾಗಿ ಉಪ ಕುಲಪತಿಗಳ ಆಯ್ಕೆ ಆಗಿ ಯಾವುದೇ ನೇಮಕಾತಿಯನ್ನು ಶಾಸನಬದ್ಧ ನಿಬಂಧನೆಗಳ ಉಲ್ಲಂಘನೆ ಎಂದು ಹೇಳಬಹುದು ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಹಾಗಾಗಿ, ಯುಜಿಸಿ ನಿಯಮಾವಳಿಗಳಿಗೆ ಅನುಗುಣವಾಗಿ ಈ ವಿಶ್ವವಿದ್ಯಾಲಯ ಕಾಯ್ದೆಯನ್ನು ತರಲು ಸರ್ಕಾರ ಈ ತಿದ್ದುಪಡಿ ಮಸೂದೆಯನ್ನು ಪ್ರಸ್ತಾಪಿಸುತ್ತಿದೆ ಎಂದು ಸರ್ಕಾರ ಸಮರ್ಥಿಸಿಕೊಂಡಿದೆ.

ರಾಜ್ಯಪಾಲರ ಕಛೇರಿ ಮತ್ತು ವಿಶ್ವವಿದ್ಯಾಲಯದ ಕುಲಪತಿಗಳು ಕಳೆದ ಮೇ 16.05.2024 ರಂದು ಯುಜಿಸಿ ನಿಯಮಾವಳಿಗಳಲ್ಲಿ ಸೂಚಿಸಲಾದ ಕಾರ್ಯವಿಧಾನಗಳನ್ನು ಅನುಸರಿಸಲು ಸರ್ಕಾರಕ್ಕೆ ವಿನಂತಿಸಿಕೊಂಡಿದ್ದರು. ಆದ್ದರಿಂದ ಸರ್ಕಾರವು ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯ ಕಾಯಿದೆ, 2016 ರ ಸೆಕ್ಷನ್ 15 (2) ಗೆ ತಿದ್ದುಪಡಿಯನ್ನು ಪ್ರಸ್ತಾಪಿಸುತ್ತಿದೆ.

ಈ ಕಾನೂನು ಕೇವಲ RDPR ವಿಶ್ವವಿದ್ಯಾಲಯಕ್ಕೆ ಮಾತ್ರ ಅನ್ವಯಿಸುವುದಿಲ್ಲ, ರಾಜ್ಯದ ಇತರ 32 ಸಾರ್ವಜನಿಕ ವಿಶ್ವವಿದ್ಯಾಲಯಗಳಲ್ಲಿಯೂ ಸಹ ಪುನರಾವರ್ತಿಸಲಾಗುವುದು ಎಂದು ಸಚಿವರೊಬ್ಬರು TNIE ಪ್ರತಿನಿಧಿಗೆ ತಿಳಿಸಿದ್ದಾರೆ.

2013ರಲ್ಲಿ ಪ್ರಧಾನಿ ಮೋದಿ ಗುಜರಾತ್ ಸಿಎಂ ಆಗಿದ್ದಾಗ ಅವರ ಸರ್ಕಾರವೂ ಇದೇ ಕ್ರಮ ಕೈಗೊಂಡಿತ್ತು. ಆದರೆ ಕೇಂದ್ರದಲ್ಲಿ ಯುಪಿಎ ಅಧಿಕಾರದಲ್ಲಿದ್ದಾಗ ನೇಮಕಗೊಂಡ ರಾಜ್ಯಪಾಲ ಕಮಲಾ ಬೇನಿವಾಲ್ ಅವರು ಮಸೂದೆಗೆ ಅಂಕಿತ ಹಾಕಿರಲಿಲ್ಲ. ಕೊನೆಗೆ ಮೋದಿಯವರು ಪ್ರಧಾನಿಯಾದಾಗ, ಕಮಲಾ ಬದಲಿಗೆ ಓಪಿ ಕೊಹ್ಲಿ ರಾಜ್ಯಪಾಲರಾಗಿದ್ದಾಗ ಮಸೂದೆಯನ್ನು ಅಂಗೀಕರಿಸಿದ್ದರು.

2022 ರಲ್ಲಿ ತಮಿಳುನಾಡು ವಿಧಾನಸಭೆಯು ಉಪ ಕುಲಪತಿಗಳನ್ನು ನೇಮಿಸುವಲ್ಲಿ ರಾಜ್ಯಪಾಲರ ಅಧಿಕಾರವನ್ನು ಸರ್ಕಾರಕ್ಕೆ ವರ್ಗಾಯಿಸುವ ಮಸೂದೆಯನ್ನು ಅಂಗೀಕರಿಸಿತು. ವಿಶ್ವ ವಿದ್ಯಾಲಯಗಳ ಮುಖ್ಯಸ್ಥರಾಗಿ ರಾಜ್ಯಪಾಲರನ್ನು ತೆಗೆದುಹಾಕುವ ಸುಗ್ರೀವಾಜ್ಞೆಯನ್ನು ತರಲು ಕೇರಳ ಸರ್ಕಾರ ನಿರ್ಧರಿಸಿದ್ದಾಗ, ಅಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನೇತೃತ್ವದ ಯುಡಿಎಫ್ ಎರಡೂ ವಿರೋಧಿಸಿದ್ದವು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com