ಬೆಳಗಾವಿ: ತನ್ನನ್ನು ಒಂಟಿಯಾಗಿ ಬಿಟ್ಟು ಬೇರೊಬ್ಬ ಪುರುಷನೊಂದಿಗೆ ಓಡಿಹೋಗಿದ್ದಕ್ಕೆ ಆಕ್ರೋಶಗೊಂಡ ವ್ಯಕ್ತಿಯೊಬ್ಬ ತನ್ನ ಮಾಜಿ ಪತ್ನಿ ಮತ್ತು ಆಕೆಯ ಹೊಸ ಪತಿಯನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದ ಕೊಕಟ್ನೂರು ಗ್ರಾಮದ ಯೆಲ್ಲಮ್ಮವಾಡಿಯಲ್ಲಿ ಮಂಗಳವಾರ ಮಧ್ಯಾಹ್ನ ನಡೆದಿದೆ.
ಕೊಲೆಯಾದ ಜೋಡಿಯನ್ನು ಅಥಣಿ ಪಟ್ಟಣದ ಕೊಕಟ್ನೂರು ಗ್ರಾಮದ ನಿವಾಸಿಗಳಾದ ಯಾಸಿನ್ ಬಾಗೋಡಿ(21) ಮತ್ತು ಹೀನಾ ಕೌಸರ್ (19) ಎಂದು ಗುರುತಿಸಲಾಗಿದೆ. ಆರೋಪಿಯನ್ನು ಕೊಕಟ್ನೂರು ಗ್ರಾಮದ ತೌಫಿಕ್ ಖ್ಯಾದಿ ಎಂದು ಗುರುತಿಸಲಾಗಿದ್ದು, ಬುಧವಾರ ಬೆಳಗ್ಗೆ ಪೊಲೀಸರು ಬಂಧಿಸಿದ್ದಾರೆ. ಘಟನಾ ಸ್ಥಳಕ್ಕೆ ಪ್ರಭಾರಿ ಪೊಲೀಸ್ ವರಿಷ್ಠಾಧಿಕಾರಿ ಎಸ್.ಬಿ.ನೇಮಗೌಡರ್ ಹಾಗೂ ಇತರೆ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಸ್ಥಿತಿಯನ್ನು ಪರಿಶೀಲಿಸಿದ್ದಾರೆ.
ಗ್ರಾಮಸ್ಥರ ಪ್ರಕಾರ, ಹೀನಾ ಕೌಸರ್ ಮತ್ತು ಆರೋಪಿ ತೌಫಿಕ್ ಖ್ಯಾದಿ ಒಂದೂವರೆ ವರ್ಷಗಳ ಹಿಂದೆ ಮದುವೆಯಾಗಿದ್ದರು ಮತ್ತು ಒಟ್ಟಿಗೆ ವಾಸಿಸುತ್ತಿದ್ದರು. ಆದರೆ, ಅದೇ ಗ್ರಾಮದ ಯಾಸಿನ್ ಬಾಗೋಡಿ ಹಾಗೂ ಆರೋಪಿ ತೌಫಿಕ್ನ ಸ್ನೇಹಿತನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ಹೀನಾ ಕೌಸರ್ ಕೆಲ ತಿಂಗಳ ಹಿಂದೆ ಆತನೊಂದಿಗೆ ಓಡಿಹೋಗಿ 2023ರ ಡಿಸೆಂಬರ್ನಲ್ಲಿ ಮದುವೆಯಾಗಿದ್ದಳು.
ಶಾಕಿಂಗ್ ಏನೆಂದರೆ ತೌಫಿಕ್, ತನ್ನ ಪತ್ನಿಯಿಂದ ಕಾನೂನುಬದ್ಧವಾಗಿ ವಿಚ್ಛೇದನ ಪಡೆದಿದ್ದರು. ಮೃತ ಹೀನಾ ಮತ್ತು ಯಾಸಿನ್ ಡಿಸೆಂಬರ್ 2023 ರಲ್ಲಿ ವಿವಾಹವಾಗಿದ್ದರು ಮತ್ತು ಸೋಮವಾರ(ಜ. 29) ಗ್ರಾಮಕ್ಕೆ ಮರಳಿದ್ದರು.
ತನ್ನನ್ನು ಬಿಟ್ಟು ಬೇರೊಬ್ಬನೊಂದಿಗೆ ಹೊಸ ಜೀವನ ಆರಂಭಿಸಿದ್ದಕ್ಕೆ ಸೇಡು ತೀರಿಸಿಕೊಳ್ಳಲು ನಿರ್ಧರಿಸಿದ ಆರೋಪಿ ತೌಫಿಕ್, ಹೀನಾ ಮತ್ತು ಯಾಸಿನ್ ಅವರ ಮೇಲೆ ಹರಿತವಾದ ಕುಡುಗೋಲಿನಿಂದ ಹಲವು ಬಾರಿ ಹಲ್ಲೆ ನಡೆಸಿ ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ಘಟನೆಯಲ್ಲಿ ತೌಫಿಕ್ ಅವರನ್ನು ತಡೆಯಲು ಯತ್ನಿಸಿದ ಅಮೀನ್ ಬಾಗೋಡಿ ಮತ್ತು ಮುಶಿಫ್ ಮುಲ್ಲಾ ಅವರು ಗಾಯಗೊಂಡಿದ್ದಾರೆ.
ಘಟನಾ ಸ್ಥಳಕ್ಕೆ ಐಗಳಿ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮುಂದಿನ ತನಿಖೆ ಕೈಗೊಂಡಿದ್ದಾರೆ.
Advertisement