News headlines 02-04-2025 | ಬೆಲೆ ಏರಿಕೆಗೆ ಬಿಜೆಪಿ ಪ್ರತಿಭಟನೆ; ನೀರಿನ ದರ ಏರಿಕೆ ಗ್ಯಾರೆಂಟಿ- ಡಿ.ಕೆ ಶಿವಕುಮಾರ್; ಚಿಕ್ಕಮಗಳೂರಿನಲ್ಲಿ ಕುಟುಂಬಸ್ಥರನ್ನು ಕೊಂದು ವ್ಯಕ್ತಿ ತಾನೂ ಆತ್ಮಹತ್ಯೆ, ಸಿಎಂ ಗೆ ಮತ್ತೆ MUDA ಸಂಕಷ್ಟ

News highlights
ಸುದ್ದಿ ಮುಖ್ಯಾಂಶಗಳುonline desk

1. ಬೆಲೆ ಏರಿಕೆಗೆ ವ್ಯಾಪಕ ಆಕ್ರೋಶ, ಬಿಜೆಪಿ ಪ್ರತಿಭಟನೆ

ವಿರೋಧಪಕ್ಷ ಬಿಜೆಪಿ ಇಂದು 2 ಪ್ರತ್ಯೇಕ ವಿಷಯಗಳನ್ನಿಟ್ಟುಕೊಂಡು ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿತು. ಬಿಜೆಪಿಯ 18 ಶಾಸಕರನ್ನು ಆರು ತಿಂಗಳ ಕಾಲ ಅಮಾನತು ಮಾಡಿದ ಕ್ರಮವನ್ನು ಖಂಡಿಸಿ ಬೆಂಗಳೂರಿನ ವಿಧಾನ ಸೌಧದ ಕೆಂಗಲ್ ಹನುಮಂತಯ್ಯ ಪ್ರತಿಮೆ ಬಳಿ ಇಂದು ವಿಪಕ್ಷ ನಾಯಕ ಆರ್ ಅಶೋಕ್ ನೇತೃತ್ವದಲ್ಲಿ ಬಿಜೆಪಿ ಶಾಸಕರು ಪ್ರತಿಭಟನೆ ನಡೆಸಿದ್ದು, ಸ್ಪೀಕರ್ ಕಾಂಗ್ರೆಸ್ ಪಕ್ಷದ ಕೈಗೊಂಬೆಯಾಗಿ ವರ್ತಿಸುತ್ತಿದ್ದಾರೆ ಎಂದು ಬಿಜೆಪಿ ಶಾಸಕರು ಆರೋಪಿಸಿದ್ದಾರೆ. ನಮ್ಮ ನ್ಯಾಯಯುತ ಹೋರಾಟ ಮುಂದುವರಿಯಲಿದೆ ರಾಜ್ಯಪಾಲರನ್ನೂ ಭೇಟಿ ಮಾಡುತ್ತೇವೆ ಎಂದು ವಿಪಕ್ಷ ನಾಯಕ ಆರ್ ಅಶೋಕ್ ಹೇಳಿದ್ದಾರೆ. ಇದೇ ವೇಳೆ, ಬೆಲೆ ಏರಿಕೆ ಖಂಡಿಸಿ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಅಹೋರಾತ್ರಿ ಧರಣಿ ಆರಂಭಿಸಿದೆ. ಈ ಹೋರಾಟದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ, ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ, ಇತರ ಮಾಜಿ ಸಿಎಂಗಳು, ಶಾಸಕರು, ಮಾಜಿ ಶಾಸಕರು, ಪರಿಷತ್ ಸದಸ್ಯರು ಭಾಗಿಯಾಗಿದ್ದು, ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಬಿಜೆಪಿ ಪ್ರತಿಭಟನೆಗೆ ಪ್ರತಿಕ್ರಿಯೆ ನೀಡಿರುವ ಡಿಕೆ ಶಿವಕುಮಾರ್, ಹಾಲಿನ ದರ ವಿಚಾರದಲ್ಲಿ ರೈತರಿಗೆ ಸಹಾಯ ಮಾಡಬಾರದಾ. ಬಿಜೆಪಿ ರೈತರ ವಿರೋಧಿ ಎನ್ನಲು ಇದೇ ಸಾಕ್ಷಿಯಾಗಿದೆ ಎಂದು ಹೇಳಿದ್ದಾರೆ. ಇದೇ ವೇಳೆ ನೀರಿನ ದರ ಏರಿಕೆ ಬಗ್ಗೆಯೂ ಮಾತನಾಡಿರುವ ಡಿಸಿಎಂ, ಬೇಸಿಗೆ ಸಮಯದಲ್ಲಿ ಜನರಿಗೆ ಕುಡಿಯುವ ನೀರು ಪೂರೈಸುವುದು ನಮ್ಮ ಮೊದಲ ಆದ್ಯತೆ, ಕುಡಿಯೋ ನೀರಿನ ದರ ಬೆಂಗಳೂರಿನಲ್ಲಿ ಪ್ರತಿ ಲೀಟರ್ ಗೆ 1 ಪೈಸೆ ಏರಿಕೆ ಅನಿವಾರ್ಯ ಎಂದು ಹೇಳಿದ್ದಾರೆ.

2. ಕುಟುಂಬಸ್ಥರನ್ನು ಕೊಂದು ತಾನೂ ಆತ್ಮಹತ್ಯೆ-ಚಿಕ್ಕಮಗಳೂರಿನಲ್ಲಿ ಹೃದಯ ವಿದ್ರಾವಕ ಘಟನೆ

ವ್ಯಕ್ತಿಯೋರ್ವ ಕುಟುಂಬದ ನಾಲ್ವರ ಮೇಲೆ ಗುಂಡು ಹಾರಿಸಿದ್ದು, ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಿಕ್ಕಮಗಳೂರು ಜಿಲ್ಲೆ ಬಾಳೆಹೊನ್ನೂರಿನ ಮಾಗಲು ಗ್ರಾಮದಲ್ಲಿ ನಡೆದಿದೆ. ಕಡಬಗೆರೆಯ ಶಾಲೆಯಲ್ಲಿ ವಾಹನ ಚಾಲಕನಾಗಿದ್ದ ರತ್ನಾಕರ ಗುಂಡು ಹಾರಿಸಿದ್ದು, ಅತ್ತೆ, ಮಗಳು, ನಾದಿನಿ ಹಾಗೂ ನಾದಿನಿಯ ಗಂಡನ ಮೇಲೆ ಗುಂಡು ಹಾರಿಸಿದ್ದಾನೆ. ಘಟನೆಯಲ್ಲಿ ಮೂವರು ಮೃತಪಟ್ಟಿದ್ದು, ಮತ್ತೋರ್ವ ವ್ಯಕ್ತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

3. ಬೇಟೆಯಾಡಿದ ಕಾಡು ಮೊಲಗಳೊಂದಿಗೆ ಮೆರವಣಿಗೆ: ಕಾಂಗ್ರೆಸ್ ಶಾಸಕನ ಪುತ್ರರ ವಿರುದ್ಧ ಕೇಸ್

ಬೇಟೆಯಾಡಿದ ಕಾಡು ಮೊಲಗಳೊಂದಿಗೆ ಸಾರ್ವಜನಿಕವಾಗಿ ಮೆರವಣಿಗೆ ನಡೆಸಿದ ಪ್ರಕರಣದ ಸಂಬಂಧ ಕಾಂಗ್ರೆಸ್ ಶಾಸಕ ಬಸನಗೌಡ ತುರುವಿಹಾಳ್ ಅವರ ಪುತ್ರ ಸತೀಶ್ ಗೌಡ, ಅವರ ಸಹೋದರ ಸೇರಿದಂತೆ ಹಲವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಯುಗಾದಿ ಹಬ್ಬ ಹಿನ್ನೆಲೆಯಲ್ಲಿ ಮಸ್ಕಿ ಶಾಸಕನ ಪುತ್ರ ಮತ್ತು ಸಹೋದರ ಕಾಡುಪ್ರಾಣಿಗಳನ್ನು ಬೇಟೆಯಾಡಿ ಮೆರವಣಿಗೆ ಮಾಡಿರುವ ವಿಡಿಯೋ ವೈರಲ್ ಆಗಿದೆ. ಸತ್ತ ಮೊಲಗಳನ್ನು ಕಟ್ಟಿಗೆಗಳಿಗೆ ಕಟ್ಟಿ ಸಿಂಧನೂರು ತಾಲೂಕಿನ ‌ತುರ್ವಿಹಾಳ ಪಟ್ಟಣದಲ್ಲಿ ನಡೆದ ಮೆರವಣಿಗೆಯಲ್ಲಿ ಖಡ್ಗ ಮತ್ತು ಕೊಡಲಿ ಪ್ರದರ್ಶನ ನಡೆದಿದೆ.

4. ಸಿಎಂ ಗೆ ಮತ್ತೆ MUDA ಸಂಕಷ್ಟ

ಮುಡಾ ನಿವೇಶನ ಹಂಚಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಇತರರಿಗೆ ಮತ್ತೆ ಸಂಕಷ್ಟ ಎದುರಾಗಿದ್ದು, ಪ್ರಕರಣ ಸಂಬಂಧ ಲೋಕಾಯುಕ್ತ ಪೊಲೀಸರು ಸಲ್ಲಿಸಿದ ಬಿ ರಿಪೋರ್ಟ್ ಅನ್ನು ಜಾರಿ ನಿರ್ದೇಶನಾಲಯ(ಇಡಿ) ಪ್ರಶ್ನಿಸಿದೆ. ಸಂಸದರು ಮತ್ತು ಶಾಸಕರ ವಿಶೇಷ ನ್ಯಾಯಾಲಯದಲ್ಲಿ ಇಡಿ ಮಂಗಳವಾರ ತಕರಾರು ಅರ್ಜಿಯನ್ನು ಸಲ್ಲಿಸಿದೆ. ಇನ್ನು, ‘ಶೇ. 40 ಕಮಿಷನ್’ ಆರೋಪ ಕುರಿತು ನಿವೃತ್ತ ನ್ಯಾಯಮೂರ್ತಿ ಹೆಚ್.ಎನ್. ನಾಗಮೋಹನ್‌ ದಾಸ್‌ ಆಯೋಗದ ವರದಿಯಲ್ಲಿ ಬಿಜೆಪಿಯ ಇಬ್ಬರು ಮಾಜಿ ಶಾಸಕರು ಹಾಗೂ ಲೋಕೋಪಯೋಗಿ ಇಲಾಖೆಯ ಹಿರಿಯ ಎಂಜಿನಿಯರ್‌ ಹೆಸರನ್ನು ಉಲ್ಲೇಖಿಸಲಾಗಿದೆ. ಚಿತ್ರದುರ್ಗದ ಮಾಜಿ ಶಾಸಕ ಜಿ ಹೆಚ್ ತಿಪ್ಪಾರೆಡ್ಡಿ, ಕಾರವಾರದ ರೂಪಾಲಿ ನಾಯ್ಕ್ ಮತ್ತು ಲೋಕೋಪಯೋಗಿ ಇಲಾಖೆ (ಪಿಡಬ್ಲ್ಯುಡಿ) ಇಂಜಿನಿಯರ್ ಎಸ್ ಎಫ್ ಪಾಟೀಲ್ ವಿರುದ್ಧದ ಪ್ರತ್ಯೇಕ ಕಿಕ್ ಬ್ಯಾಕ್ ಆರೋಪಗಳು ಸತ್ಯ ಎಂಬುದು ಆಯೋಗಕ್ಕೆ ತಿಳಿದುಬಂದಿದೆ. ಇದು ಗುತ್ತಿಗೆದಾರರ ಸಾಕ್ಷ್ಯವನ್ನು ಆಧರಿಸಿದೆ.

5. ಚಿತ್ರದುರ್ಗ: ರಸ್ತೆ ಅಪಘಾತದಲ್ಲಿ ಮೂವರು ಸಾವು

ವೇಗವಾಗಿ ಬಂದ ಕಾರೊಂದು ಡಿವೈಡರ್ ಗೆ ಡಿಕ್ಕಿ ಹೊಡೆದು 10 ಬಾರಿ ಪಲ್ಟಿಯಾದ ಪರಿಣಾಮ ಇಬ್ಬರು ಬಾಲಕರು ಸೇರಿದಂತೆ ಒಂದೇ ಕುಟುಂಬದ ಮೂವರು ಸಾವನ್ನಪ್ಪಿರುವ ಘಟನೆ ಚಿತ್ರದುರ್ಗದಲ್ಲಿ ನಡೆದಿದೆ. ಗಾಯಾಳುಗಳನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಯಾದಗಿರಿ ಜಿಲ್ಲೆಯವರಾದ ಕುಟುಂಬ ಬೆಂಗಳೂರಿನಿಂದ ತಮ್ಮ ಸ್ವಗ್ರಾಮಕ್ಕೆ ತೆರಳುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com