ಕೇಂದ್ರ ಸಚಿವ ನಿತಿನ್ ಗಡ್ಕರಿ ಭೇಟಿಯಾದ ಸಿಎಂ ಸಿದ್ದರಾಮಯ್ಯ: ಮೈಸೂರು, ಶಿರಾಡಿ ಘಾಟ್ ಸೇರಿ 12 ಯೋಜನೆಗಳ ಮಂಜೂರಾತಿಗೆ ಮನವಿ

ದೆಹಲಿಯಲ್ಲಿ ಕೇಂದ್ರ ರಸ್ತೆ, ಭೂ ಸಾರಿಗೆ ಹಾಗೂ ಹೆದ್ದಾರಿ ಸಚಿವ ನಿತಿನ್ ಗಡ್ಕರಿಯನ್ನು ಭೇಟಿ ಮಾಡಿ ಮನವಿ ಪತ್ರ ಸಲ್ಲಿಸಿದ ಮುಖ್ಯಮಂತ್ರಿ, ಕರ್ನಾಟಕದಲ್ಲಿ ರಾಷ್ಟ್ರೀಯ ಹೆದ್ದಾರಿಗಳ ಸಂರ್ಪಕ ಜಾಲವನ್ನು ವೃದ್ಧಿಸಲು ಸಹಕಾರ ನೀಡುತ್ತಿರುವುದಕ್ಕಾಗಿ ರಾಜ್ಯದ ಪರವಾಗಿ ಕೇಂದ್ರ ಸಚಿವರಿಗೆ ಅಭಿನಂದನೆ ಸಲ್ಲಿಸಿದರು.
CM Siddaramaiah met Union Minister Nitin Gadkari
ನಿತಿನ್ ಗಡ್ಕರಿ ಭೇಟಿಯಾದ ಸಿಎಂ ಸಿದ್ದರಾಮಯ್ಯ
Updated on

ಬೆಂಗಳೂರು: ರಾಜ್ಯದ ಸಾಮಾಜಿಕ, ಆರ್ಥಿಕ ಅಭಿವೃದ್ಧಿಗಾಗಿ ಪುಣೆ-ಬೆಂಗಳೂರು ಗ್ರೀನ್‌ ಫೀಲ್ಡ್ ಎಕ್ಸ್‌ಪ್ರೆಸ್‌ ವೇಗೆ ಶೀಘ್ರ ಮಂಜೂರಾತಿ ನೀಡಬೇಕು ಎಂಬುದು ಸೇರಿದಂತೆ ಸಂಚಾರ ದಟ್ಟಣೆ ಹೆಚ್ಚಿರುವ ರಾಜ್ಯ ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೇಂದ್ರ ಭೂಸಾರಿಗೆ ಮತ್ತು ಹೆದ್ದಾರಿಗಳ ಸಚಿವ ನಿತಿನ್‌ ಗಡ್ಕರಿಗೆ ಮನವಿ ಮಾಡಿದ್ದಾರೆ.

ಬುಧವಾರ ದೆಹಲಿಯಲ್ಲಿ ಕೇಂದ್ರ ರಸ್ತೆ, ಭೂ ಸಾರಿಗೆ ಹಾಗೂ ಹೆದ್ದಾರಿ ಸಚಿವ ನಿತಿನ್ ಗಡ್ಕರಿಯನ್ನು ಭೇಟಿ ಮಾಡಿ ಮನವಿ ಪತ್ರ ಸಲ್ಲಿಸಿದ ಮುಖ್ಯಮಂತ್ರಿ, ಕರ್ನಾಟಕದಲ್ಲಿ ರಾಷ್ಟ್ರೀಯ ಹೆದ್ದಾರಿಗಳ ಸಂರ್ಪಕ ಜಾಲವನ್ನು ವೃದ್ಧಿಸಲು ಸಹಕಾರ ನೀಡುತ್ತಿರುವುದಕ್ಕಾಗಿ ರಾಜ್ಯದ ಪರವಾಗಿ ಕೇಂದ್ರ ಸಚಿವರಿಗೆ ಅಭಿನಂದನೆ ಸಲ್ಲಿಸಿದರು.

ರಾಷ್ಟ್ರೀಯ ಹೆದ್ದಾರಿ 275 ರಲ್ಲಿ ಮಣಿಪಾಲ್ ಆಸ್ಪತ್ರೆ ಜಂಕ್ಷನ್ (ಮೈಸೂರು ನಗರ)ದಲ್ಲಿ ಫ್ಲೈಓವರ್ ನಿರ್ಮಾಣ. 30.35 ಕಿ.ಮೀ. ಉದ್ದದ ಹುಬ್ಬಳ್ಳಿ ಧಾರವಾಡ ಷಟ್ಪಥ ಬೈಪಾಸ್ ನಿರ್ಮಾಣ. ರಾ.ಹೆ 369 ಇ(ಸಿಗಂದೂರು ಸೇತುವೆ)ರಲ್ಲಿ ಶರಾವತಿ ಹಿನ್ನೀರಿನ ಮೇಲೆ ಪ್ರಮುಖ ಸೇತುವೆ ನಿರ್ಮಾಣ ಮಾಡಬೇಕಿದೆ ಎಂದು ಸಿದ್ದರಾಮಯ್ಯ ತಿಳಿಸಿದರು.

ರಾ.ಹೆ.167 ಹಗರಿ-ಜೆಡ್ಚೆರ್ಲಾ ಸೆಕ್ಷನ್ ನಲ್ಲಿ ಕೃಷ್ಣಾ ನದಿ ಮೇಲೆ 180.865 ಕಿ.ಮೀ.ನಲ್ಲಿ ಪ್ರಮುಖ ಸೇತುವೆ ನಿರ್ಮಾಣ. ಹೊಸಪೇಟೆಯಿಂದ ಬಳ್ಳಾರಿ ಸೆಕ್ಷನ್ ನ ಹಳೆಯ ರಾ.ಹೆ-63(ಹೊಸ ರಾ.ಹೆ-67) ನ ಕಿ.ಮಿ.340+640 (ಬಳ್ಳಾರಿ ನಗರ ಮಿತಿಯಲ್ಲಿನ ಸುಧಾ ಕ್ರಾಸ್) ನಲ್ಲಿ ಐಅ-110ಇ ಬದಲಿಗೆ 2-ಲೇನ್ ರೈಲ್ವೆ ಮೇಲ್ಸೆತುವೆ ನಿರ್ಮಾಣ. ರಾ.ಹೆ.150ಎ ರಲ್ಲಿನ ಸಿಂದಿಗೆರಿ-ಬಳ್ಳಾರಿ ಸೆಕ್ಷನ್ ಕಿ.ಮೀ.235.00 ರಿಂದ 254.800ವರೆಗೆ ‘ಟೂ ಲೇನ್ ವಿತ್ ಪವೇಡ್ ಶೋಲ್ಡರ್ಸ್’ ಗೆ ಅಗಲೀಕರಣ ಯೋಜನೆ ರೂಪಿಸಲಾಗಿದೆ ಎಂದು ಅವರು ಹೇಳಿದರು.

CM Siddaramaiah met Union Minister Nitin Gadkari
ಕಳೆದ ಎರಡು ವರ್ಷಗಳಲ್ಲಿ ರಾಜ್ಯದಲ್ಲಿ ಅಪರಾಧಗಳ ಸಂಖ್ಯೆ ಇಳಿಮುಖ: ಸಿಎಂ ಸಿದ್ದರಾಮಯ್ಯ

ರಾಜ್ಯ ಸರಕಾರವು ರಾಜ್ಯದ ರಾಷ್ಟ್ರೀಯ ಹೆದ್ದಾರಿ ಸಂಪರ್ಕ ಜಾಲದ ಅಭಿವೃದ್ಧಿಯನ್ನು ಬೆಂಬಲಿಸುತ್ತಿದ್ದು, ರಸ್ತೆ ನಿರ್ಮಾಣಕ್ಕೆ ಅಗತ್ಯವಿರುವ ಭೂಸ್ವಾಧೀನ ಪ್ರಕ್ರಿಯೆಗಳನ್ನು ಚುರುಕುಗೊಳಿಸಲು ಕಂದಾಯ ಇಲಾಖೆಯೊಂದಿಗೆ ಹಾಗೂ ಅರಣ್ಯ ತೀರುವಳಿ ಪ್ರಕ್ರಿಯೆ ತ್ವರಿತಗೊಳಿಸಲು ಅರಣ್ಯ ಇಲಾಖೆಯೊಂದಿಗೆ ಪ್ರಗತಿ ಪರಿಶೀಲನಾ ಸಭೆಗಳನ್ನು ನಡೆಸುತ್ತಿದೆ ಎಂದು ಮುಖ್ಯಮಂತ್ರಿ ತಿಳಿಸಿದರು.

ನೀರು ಹಾಗೂ ವಿದ್ಯುತ್ ಸಂಪರ್ಕ ಸೇರಿದಂತೆ ಯೂಟಿಲಿಟಿ ಶಿಫ್ಟಿಂಗ್ ಕಾರ್ಯವನ್ನು ಚುರುಕುಗೊಳಿಸಲು ಸಂಬಂಧಪಟ್ಟ ಇಲಾಖೆಗೊಂದಿಗೆ ಸಭೆ ನಡೆಸುವ ಮೂಲಕ ರಾಷ್ಟ್ರೀಯ ಹೆದ್ದಾರಿ ಯೋಜನೆಗಳ ತ್ವರಿತ ಅನುಷ್ಠಾನಕ್ಕೆ ಆದ್ಯತೆ ನೀಡಲಾಗಿದೆ ಎಂದು ಸಿದ್ದರಾಮಯ್ಯ ಹೇಳಿದರು.

10 ಸಾವಿರ ಪಿ.ಯು.ಸಿ ಗಿಂತಲೂ ಸಂಚಾರ ತೀವ್ರತೆ ಹೆಚ್ಚಿರುವ ರಾಜ್ಯ ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಹಾಗೂ ರಾಜ್ಯದ ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿಗಾಗಿ ಈ ಕೆಳಕಂಡ ಯೋಜನೆಗಳನ್ನು ಮಂಜೂರು ಮಾಡಬೇಕೆಂದು ಮುಖ್ಯಮಂತ್ರಿ ಮನವಿ ಮಾಡಿದರು.

  • ಮೈಸೂರಿನ ರಾಷ್ಟ್ರೀಯ ಹೆದ್ದಾರಿ -275ರಲ್ಲಿ 9 ಗ್ರೇಡ್‌ ಸೆಪರೇಟರ್‌

  • ಶಿರಾಡಿ ಘಾಟ್‌ನಲ್ಲಿಮಾರನಹಳ್ಳಿಯಿಂದ ಅಡ್ಡಹೊಳೆ ಸೆಕ್ಷನ್‌ವರೆಗೆ ಸುರಂಗ

  • ಪುಣೆ- ಬೆಂಗಳೂರು ಗ್ರೀನ್‌ ಫೀಲ್ಡ್ ಎಕ್ಸ್‌ಪ್ರೆಸ್‌ ವೇಗೆ ಶೀಘ್ರ ಮಂಜೂರು

  • ಮುಂಬರಲಿರುವ ವಾರ್ಷಿಕ ಯೋಜನೆ 2025-26ರಡಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳನ್ನು 24,000 ಕೋಟಿಗಳಿಗೆ ಹೆಚ್ಚಿಸಿ ಮಂಜೂರು

  • ಬೆಂಗಳೂರು ನಗರದ ಹೆಬ್ಬಾಳ ಜಂಕ್ಷನ್‌ನ ರಾಷ್ಟ್ರೀಯ ಹೆದ್ದಾರಿ- 44 ರಲ್ಲಿಮೇಲ್ಸೇತುವೆ ನಿರ್ಮಾಣ

  • ತಾತ್ವಿಕವಾಗಿ ಘೋಷಿತವಾಗಿರುವ ರಸ್ತೆಗಳನ್ನು ರಾಷ್ಟ್ರೀಯ ಹೆದ್ದಾರಿಯಾಗಿ ಆದ್ಯತೆ ಮೇಲೆ ಮೇಲ್ದರ್ಜೆಗೇರಿಕೆ

  • ಬೆಂಗಳೂರು ನಗರದಲ್ಲಿ ಟನೆಲ್‌ ರೋಡ್‌ ಯೋಜನೆಗೆ ಆದ್ಯತೆ ಮೇಲೆ ಮಂಜೂರಿ

  • ಬೆಳಗಾವಿ ನಗರದಲ್ಲಿಸಂಚಾರ ದಟ್ಟಣೆ ತಗ್ಗಿಸಲು ರಾಷ್ಟ್ರೀಯ ಹೆದ್ದಾರಿ -4 ರಲ್ಲಿ ಎಲಿವೇಟೆಡ್‌ ಕಾರಿಡಾರ್‌

  • ಕಲಬುರಗಿ -ವಾಡಿ-ಯಾದಗಿರಿ-ಕೆಂದೆಚೂರ್‌-ಜಡ್‌ಚೇರ್ಲಾ ವಿಭಾಗದಲ್ಲಿಚತುಷ್ಪಥ ರಸ್ತೆ

  • ಯಾದಗಿರಿ ಜಿಲ್ಲೆಯಲ್ಲಿ ಎನ್‌ಎಚ್‌150- (ಎ)ದಲ್ಲಿಭೀಮರಾಯನಗುಡಿ ಮತ್ತು ಶಹಪುರ ಪಟ್ಟಣಕ್ಕೆ ಬೈಪಾಸ್‌ ನಿರ್ಮಾಣ

  • ರಾಜ್ಯ ಹೆದ್ದಾರಿ -752 ರಿಂದ ರಾಜ್ಯ ಹೆದ್ದಾರಿ -65 ವರೆಗೆ ರಾಷ್ಟ್ರೀಯ ಹೆದ್ದಾರಿ ಎಂದು ಘೋಷಣೆ

ದೇವಲ್‌ ಗಾಣಗಾಪುರದಿಂದ ಪಂಡರಾಪುರ ವರೆಗಿನ ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿ ಎಂದು ಘೋಷಣೆ ಈ ಎಲ್ಲಾ ಪ್ರಸ್ತಾವನೆಗಳನ್ನು ಪರಿಗಣಿಸಿ ಮಂಜೂರಾತಿಗಳನ್ನು ನೀಡಲು ಸಂಬಂಧಿಸಿದವರಿಗೆ ಅಗತ್ಯ ನಿರ್ದೇಶನಗಳನ್ನು ನೀಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೇಂದ್ರ ಸಚಿವ ನಿತಿನ್ ಗಡ್ಕರಿಗೆ ಸಲ್ಲಿಸಿದ ಪತ್ರದಲ್ಲಿ ಮನವಿ ಮಾಡಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com