ಕಳೆದ ವರ್ಷ ಶೇ.70 ರಷ್ಟು ತಾಯಂದಿರ ಸಾವು ತಪ್ಪಿಸಬಹುದಾಗಿತ್ತು: ಬಾಣಂತಿಯರ ಡೆತ್ ಆಡಿಟ್ ವರದಿಯಲ್ಲಿ ಉಲ್ಲೇಖ

ಪ್ರಸವ ಪೂರ್ವ ಮತ್ತು ಪ್ರಸವಾನಂತರದ ಸೇವೆಗಳನ್ನು ಉತ್ತಮಪಡಿಸುವುದರ ಜತೆಗೆ ಸೌಲಭ್ಯಗಳ ಸುಧಾರಣೆ ಬಗ್ಗೆಯೂ ಒತ್ತು ನೀಡಲು ಸೂಚಿಸಲಾಗಿದೆ. ಮುಖ್ಯವಾಗಿ, ಉತ್ತಮ ಕಟ್ಟಡ ಸೌಲಭ್ಯ, ಉಪಕರಣಗಳು, ಔಷಧಗಳು, ರಕ್ತನಿಧಿ ಸೌಲಭ್ಯ ಒದಗಿಸಬೇಕು.
Dinesh Gundu rao
ದಿನೇಶ್ ಗುಂಡೂರಾವ್
Updated on

ಬೆಂಗಳೂರು: ಕಳೆದ ಏಪ್ರಿಲ್ ಮತ್ತು ಡಿಸೆಂಬರ್ ನಡುವೆ ಕರ್ನಾಟಕದಲ್ಲಿ ವರದಿಯಾದ 464 ತಾಯಂದಿರ ಸಾವುಗಳಲ್ಲಿ 70% ಕ್ಕಿಂತ ಹೆಚ್ಚು ತಾಯಂದಿರ ಸಾವನ್ನು ತಡೆಯಬಹುದಿತ್ತು ಎಂದು ರಾಜ್ಯ ಸರ್ಕಾರದ ತಾಯಂದಿರ ಮರಣ ಲೆಕ್ಕಪರಿಶೋಧನಾ ವರದಿಯ ತಿಳಿಸಿದೆ.

ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿನ ಲೋಪಗಳನ್ನು ವರದಿಯು ಎತ್ತಿ ತೋರಿಸಿದೆ. ಕನಿಷ್ಠ 10 ಸಾವುಗಳು ವೈದ್ಯರ ನಿರ್ಲಕ್ಷ್ಯಕ್ಕೆ ಸಂಬಂಧಿಸಿವೆ, ಆದರೆ 18 ಸಾವುಗಳು ರಿಂಗರ್‌ನ ಲ್ಯಾಕ್ಟೇಟ್ ದ್ರವದ ಬಳಕೆಗೆ ಸಂಬಂಧಿಸಿವೆ ಎಂದು ವರದಿಯನ್ನು ಬಿಡುಗಡೆ ಮಾಡಿದ ಆರೋಗ್ಯ ಸಚಿವ ದಿನೇಶ್ ಗುಂಡೂ ರಾವ್ ತಿಳಿಸಿದ್ದಾರೆ. 70% ತಾಯಂದಿರ ಸಾವುಗಳನ್ನು ಸಕಾಲಿಕ ಆರೈಕೆ ಮತ್ತು ವೈದ್ಯಕೀಯ ಪ್ರೋಟೋಕಾಲ್‌ಗಳ ಅನುಸರಣೆಯಿಂದ ತಡೆಯಬಹುದಿತ್ತು ಎಂದು ಹೇಳಿದರು.

ಶೇ 68.05 ರಷ್ಟು ಸಾವಿಗೆ ಅಧಿಕ ರಕ್ತದೊತ್ತಡ, ಹೃದ್ರೋಗ, ಡಯಾಬಿಟಿಸ್, ಸೋಂಕು ಮುಂತಾದವುಗಳು ಕಾರಣವಾಗಿದೆ. ಹೆರಿಗೆಯನ್ನು ಹೆಚ್ಚಾಗಿ ಕೇಂದ್ರ ಸರ್ಕಾರದ ಮಾರ್ಗಸೂಚಿಗಳು ಮತ್ತು ಉಲ್ಲೇಖಿತ ಪ್ರೋಟೋಕಾಲ್‌ಗಳಿಗೆ ವಿರುದ್ಧವಾಗಿ ಮಾಡಲಾಗುತ್ತಿತ್ತು.

ಡಿಸೆಂಬರ್‌ನಿಂದ ಇದನ್ನು ಸರಿಪಡಿಸಲು ತಯಾರಿ ಮಾಡಿದ್ದೇವೆ. ಫ್ರೆಷ್ ಫ್ರೋಜನ್ ಪ್ಲಾಸ್ಮಾ ಇದ್ದಿದ್ದರೆ ಸಾವಿನ ಸಂಖ್ಯೆ ತಡೆಯಬಹುದಿತ್ತು. ಹೀಗಾಗಿ ಈ ನಿಟ್ಟಿನಲ್ಲಿ ಸಾಕಷ್ಟು ಸುಧಾರಣಾ ಕ್ರಮಗಳನ್ನು ಕೈಗೊಳ್ಳುವ ಅವಶ್ಯಕತೆ ಇದೆ ಎಂದು ದಿನೇಶ್ ಗುಂಡೂರಾವ್ ಹೇಳಿದರು.

Dinesh Gundu rao
ಬಳ್ಳಾರಿ ಬಿಮ್ಸ್​ನಲ್ಲಿ ನಿಲ್ಲದ ಬಾಣಂತಿಯರ ಮರಣ: 15 ದಿನಗಳ ಅಂತರದಲ್ಲಿ 3ನೇ ಸಾವು

ಶೇ.63ರಷ್ಟು ತಾಯಂದಿರು ಸಿಸೇರಿಯನ್ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರೆ, ಶೇ.37ರಷ್ಟು ಮಂದಿ ಬಾಣಂತಿಯರಿಗೆ ಸಾಮಾನ್ಯ ಹೆರಿಗೆಗಳಾಗಿವೆ. ಭವಿಷ್ಯದಲ್ಲಿ ತಾಯಂದಿರ ಸಾವನ್ನು ತಪ್ಪಿಸಲು 27 ಶಿಫಾರಸುಗಳನ್ನು ಮಾಡಲಾಗಿದೆ. ಪ್ರಸವ ಪೂರ್ವ ಮತ್ತು ಪ್ರಸವಾನಂತರದ ಸೇವೆಗಳನ್ನು ಉತ್ತಮಪಡಿಸುವುದರ ಜತೆಗೆ ಸೌಲಭ್ಯಗಳ ಸುಧಾರಣೆ ಬಗ್ಗೆಯೂ ಒತ್ತು ನೀಡಲು ಸೂಚಿಸಲಾಗಿದೆ. ಮುಖ್ಯವಾಗಿ, ಉತ್ತಮ ಕಟ್ಟಡ ಸೌಲಭ್ಯ, ಉಪಕರಣಗಳು, ಔಷಧಗಳು, ರಕ್ತನಿಧಿ, ಸಾಮಾನ್ಯ ಹೆರಿಗೆ ಆದವರು 3 ದಿನಗಳು ಮತ್ತು ಸಿಸೇರಿಯನ್‌ ಆದವರು 7 ದಿನಗಳು ಕಡ್ಡಾಯವಾಗಿ ಆಸ್ಪತ್ರೆಯಲ್ಲಿ ಉಳಿದುಕೊಳ್ಳಲು ವ್ಯವಸ್ಥೆ ಮಾಡಬೇಕು.

ಪ್ರಸ್ತುತ ಶೇ. 57 ರಲ್ಲಿರುವ ತಾಯಂದಿರ ಮರಣ ಅನುಪಾತ (ಎಂಎಂಆರ್) ವನ್ನು ಶೇ. 20 ಕ್ಕಿಂತ ಕಡಿಮೆ ಮಾಡಲು ಸರ್ಕಾರ ಕೆಲಸ ಮಾಡುತ್ತಿದೆ ಎಂದು ಹೇಳಿದರು. ತಮಿಳುನಾಡು ಶೇ 54 ಎಂಎಂಆರ್ ಹೊಂದಿದ್ದರೆ, ಕೇರಳದಲ್ಲಿ ಕೇವಲ18 ಇದೆ ಎಂದು ವಿವರಿಸಿದ್ದಾರೆ.

ಸುಮಾರು 10% ಸಾವುಗಳು ಸಾಗಣೆ ವೇಳೆ ಸಂಭವಿಸಿವೆ ಎಂದು ಸಂಶೋಧನೆಗಳು ಬಹಿರಂಗಪಡಿಸಿವೆ. ಸಾವನ್ನಪ್ಪಿದ ಹೆಚ್ಚಿನ ಮಹಿಳೆಯರು 19 ರಿಂದ 25 ವರ್ಷ ವಯಸ್ಸಿನವರಾಗಿದ್ದರು, ಮತ್ತು ಅನೇಕರು ಮೊದಲ ಅಥವಾ ಎರಡನೇ ಬಾರಿಗೆ ತಾಯಂದಿರಾಗಿದ್ದರು, ಅವರು ಅಧಿಕ ರಕ್ತದೊತ್ತಡ, ಮಧುಮೇಹ ಅಥವಾ ಅಪಾಯಕಾರಿ ಹೃದಯ ಸಮಸ್ಯೆಗಳನ್ನು ಹೊಂದಿದ್ದರು ಎಂದು ಅವರು ಹೇಳಿದರು.

ರಿಂಗರ್ ಲ್ಯಾಕ್ಟೇಟ್ ಸಮಸ್ಯೆಗೆ ಸಂಬಂಧಿಸಿದ 18 ಬಾಣಂತಿಯರ ಸಾವುಗಳಾಗಿವೆ. ಅದರಲ್ಲಿ 5 ಬಳ್ಳಾರಿ, 4 ರಾಯಚೂರು, 4 ಬೆಂಗಳೂರು ನಗರ, 3 ಉತ್ತರ ಕನ್ನಡ ಮತ್ತು ಯಾದಗಿರಿ ಮತ್ತು ಬೆಳಗಾವಿಯಲ್ಲಿ ತಲಾ ಒಂದು ಪ್ರಕರಣ ದಾಖಲಾಗಿತ್ತು ಹೀಗಾಗಿ ಸರ್ಕಾರವು ವಿವರವಾದ ತಾಯಂದಿರ ಮರಣ ಲೆಕ್ಕಪರಿಶೋಧನೆ ನಡೆಸಿತ್ತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com