ಸಾವಿನಲ್ಲೂ ಬಿಜೆಪಿ ರಾಜಕೀಯ ನಾಚಿಕೆಗೇಡು, ತನಿಖೆಯಿಂದ ಸತ್ಯ ಹೊರಬರಲಿದೆ: ಶಾಸಕ ಪೊನ್ನಣ್ಣ

ಇಂದು ಮಡಿಕೇರಿಯಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಬೆಂಗಳೂರಿನಲ್ಲಿ ಆತ್ಮಹತ್ಯೆ ಮಾಡಿಕೊಂಡ ಬಿಜೆಪಿ ಕಾರ್ಯಕರ್ತ ವಿನಯ್ ಸೋಮಯ್ಯ ಅವರ ಕುಟುಂಬಕ್ಕೆ ಸಂತಾಪ ಸೂಚಿಸಿದರು.
ಎ.ಎಸ್. ಪೊನ್ನಣ್ಣ
ಎ.ಎಸ್. ಪೊನ್ನಣ್ಣ
Updated on

ಮಡಿಕೇರಿ: “ಸೂಕ್ತ ತನಿಖೆಯ ಮೂಲಕ ಸತ್ಯ ಹೊರಬರುತ್ತದೆ. ಆದರೆ, ಬಿಜೆಪಿಗೆ ತನಿಖೆ ಮಾಡುವುದು ಬೇಕಿಲ್ಲ. ಅವರು ಈ ವಿಷಯದಲ್ಲೂ ರಾಜಕೀಯ ಮಾಡುತ್ತಾರೆ” ಎಂದು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಮತ್ತು ವಿರಾಜಪೇಟೆ ಕಾಂಗ್ರೆಸ್ ಶಾಸಕ ಎ.ಎಸ್. ಪೊನ್ನಣ್ಣ ಅವರು ಶನಿವಾರ ಹೇಳಿದ್ದಾರೆ.

ಇಂದು ಮಡಿಕೇರಿಯಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಬೆಂಗಳೂರಿನಲ್ಲಿ ಆತ್ಮಹತ್ಯೆ ಮಾಡಿಕೊಂಡ ಬಿಜೆಪಿ ಕಾರ್ಯಕರ್ತ ವಿನಯ್ ಸೋಮಯ್ಯ ಅವರ ಕುಟುಂಬಕ್ಕೆ ಸಂತಾಪ ಸೂಚಿಸಿದರು.

“ಬಿಜೆಪಿ ಮೃತದೇಹದ ಮೇಲೆ ರಾಜಕೀಯ ಮಾಡುತ್ತಿರುವುದು ನಾಚಿಕೆಗೇಡಿನ ಸಂಗತಿ. ಅವರು ಇಂದು ಮಾಡಿದ್ದು ಹಿಂದೂ ಸಂಸ್ಕೃತಿಗೆ ವಿರುದ್ಧವಾಗಿದೆ. ಎಫ್‌ಐಆರ್ ದಾಖಲಿಸದೆ ವಿನಯ್ ಅವರ ಕುಟುಂಬಕ್ಕೆ ಅಂತಿಮ ವಿಧಿವಿಧಾನಗಳನ್ನು ನಡೆಸಲು ಬಿಡುವುದಿಲ್ಲ ಎಂದು ಬಿಜೆಪಿ ಪ್ರತಿಭಟನಾಕಾರರು ಘೋಷಿಸಿದರು. ಈ ಕೃತ್ಯ ನಾಚಿಕೆಗೇಡಿನ ಸಂಗತಿ. ವಿನಯ್ ಅವರ ಮೃತದೇಹದೊಂದಿಗೆ ಆಂಬ್ಯುಲೆನ್ಸ್‌ನಲ್ಲಿ ಪಕ್ಷದ ಯಾವುದೇ ನಾಯಕರು ಅಥವಾ ಕಾರ್ಯಕರ್ತರು ಬಂದಿದ್ದಾರೆಯೇ? ಎಂದು ಪ್ರಶ್ನಿಸಿದರು.

ಮೃತದೇಹವನ್ನು ಒಬ್ಬಂಟಿಯಾಗಿ ತರಲಾಯಿತು. ಮೃತದೇಹವನ್ನು ವಿನಯ್ ಅವರ ಊರಿಗೆ ಕೊಂಡೊಯ್ಯುವ ಬದಲು, ಘಟನೆಯ ಮೂಲಕ ರಾಜಕೀಯ ಲಾಭ ಪಡೆಯಲು ಅವರು ಅದನ್ನು ಕುಶಾಲನಗರಕ್ಕೆ ತಂದರು” ಎಂದು ಪೊನ್ನಣ್ಣ ವಾಗ್ದಾಳಿ ನಡೆಸಿದರು.

ಎ.ಎಸ್. ಪೊನ್ನಣ್ಣ
ಪಕ್ಷದ ಕಾರ್ಯಕರ್ತ ವಿನಯ್ ಸೋಮಯ್ಯ ಸಾವು ಖಂಡಿಸಿ ಕುಶಾಲನಗರದಲ್ಲಿ ಬಿಜೆಪಿ ಪ್ರತಿಭಟನೆ

ರಾಜ್ಯ ಸರ್ಕಾರ ಈ ಬಗ್ಗೆ ಸಮಗ್ರ ತನಿಖೆ ನಡೆಸಲಿದೆ. ವಿನಯ್ ಸಾವಿಗೆ ಬಿಜೆಪಿಯೇ ನೇರ ಕಾರಣ ಎಂದು ಆರೋಪಿಸಿದರು. "ಅವರು ಜೀವಂತವಾಗಿದ್ದಾಗ ಅವರನ್ನು ಬೆಂಬಲಿಸದ ಬಿಜೆಪಿ ಈಗ ಅವರ ಮೃತ ದೇಹದ ಮೇಲೆ ರಾಜಕೀಯ ಮಾಡಲು ಬಂದಿದ್ದಾರೆ ಎಂದರು.

ಕಾಂಗ್ರೆಸ್ ಕಾರ್ಯಕರ್ತ ತೆನ್ನಿರಾ ಮೈನಾ ಅವರು ಕಾನೂನುಬದ್ಧವಾಗಿ ದೂರು ದಾಖಲಿಸಿದ್ದಾರೆ. ನಾನು ಮೈನಾ ಅವರನ್ನು ಬೆಂಬಲಿಸುತ್ತಿಲ್ಲ ಅಥವಾ ರಕ್ಷಿಸುತ್ತಿಲ್ಲ. ಆದಾಗ್ಯೂ, ಮೈನಾ ಈ ದೂರಿನ ಬಗ್ಗೆ ನನ್ನೊಂದಿಗೆ ಚರ್ಚಿಸಿಲ್ಲ ಮತ್ತು ನನಗೆ ಅದರ ಬಗ್ಗೆ ತಿಳಿಸಿಲ್ಲ. ಪೊಲೀಸರು ಆರಂಭದಲ್ಲಿ ಎಫ್‌ಐಆರ್ ದಾಖಲಿಸಲು ನಿರಾಕರಿಸಿದಾಗ, ಮೈನಾ ನ್ಯಾಯಾಲಯವನ್ನು ಸಂಪರ್ಕಿಸಿ ಅವಹೇಳನಕಾರಿ ಪೋಸ್ಟ್‌ನಿಂದಾಗಿ ತಮ್ಮ ಭಾವನೆಗೆ ಧಕ್ಕೆಯಾಗಿದೆ ಎಂದು ಹೇಳಿದರು ಮತ್ತು ನಂತರ ಅವರು ಎಫ್‌ಐಆರ್ ದಾಖಲಿಸಿದರು" ಎಂದು ಪೊನ್ನಣ್ಣ ವಿವರಿಸಿದರು.

ಇನ್ನು ಪ್ರಕರಣದಲ್ಲಿ ತಮ್ಮ ಅಥವಾ ಮಂತರ್ ಗೌಡ ಅವರ ನಂಟು ನಿರಾಕರಿಸಿದ ಪೊನ್ನಣ್ಣ, ಸತ್ಯ ಹೊರಬರಲು ನಾನೂ ಕಾಯುತ್ತಿದ್ದೇನೆ. "ಯಾವುದೇ ಡೆತ್ ನೋಟ್ ಸಾಮಾನ್ಯವಾಗಿ ಬಲಿಪಶುವಿನ ಕೈಬರಹದಲ್ಲಿರುತ್ತದೆ. ಆದರೆ ವಿನಯ್ ಅವರ ಡೆತ್ ನೋಟ್ ಕೈಬರಹದಲ್ಲಿ ಇಲ್ಲ. ಟೈಪ್ ಮಾಡಿದ ಪತ್ರವನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಲಾಗಿದೆ. ನಮಗೆಲ್ಲರಿಗೂ ಬಿಜೆಪಿ ಐಟಿ ಸೆಲ್ ಬಗ್ಗೆ ಗೊತ್ತು. ಸತ್ಯ ಹೊರಬರುತ್ತದೆ. ಅದಕ್ಕೆ ಸ್ವಲ್ಪ ಸಮಯ ಬೇಕಾಗುತ್ತದೆ" ಎಂದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com