
ಬೆಂಗಳೂರು: ಶಾಸಕಾಂಗವು ಅಂಗೀಕರಿಸಿದ ನಾಲ್ಕು ಮಸೂದೆಗಳಿಗೆ ಒಪ್ಪಿಗೆ ನೀಡದ ರಾಜ್ಯಪಾಲ ಥಾವರ್ಚಂದ್ ಗೆಹ್ಲೋಟ್ ಅವರ ನಿರ್ಧಾರದ ಬಗ್ಗೆ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್ಕೆ ಪಾಟೀಲ್ ಕಳವಳ ವ್ಯಕ್ತಪಡಿಸಿದ್ದಾರೆ.
ನಾನು ಈ ವಿಷಯವನ್ನು ನೇರವಾಗಿ ಸಂಪುಟದಲ್ಲಿ ಅಥವಾ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಳಿ ಪ್ರಸ್ತಾಪಿಸುತ್ತೇನೆ ಎಂದು ಪಾಟೀಲ್ ಹೇಳಿದರು. ರಾಜ್ಯಪಾಲರಿಗೆ ಕೆಲವು ಅಧಿಕಾರಗಳಿವೆ ಆದರೆ ಆ ಅಧಿಕಾರಗಳನ್ನು ದುರುಪಯೋಗಪಡಿಸಿಕೊಳ್ಳಬಾರದು ಎಂದು ಪಾಟೀಲ್ ಹೇಳಿದರು.
ಸ್ಪಷ್ಟೀಕರಣಗಳನ್ನು ಕೋರಿದಾಗ ರಾಜ್ಯಪಾಲ ಥಾವರ್ಚಂದ್ ಗೆಹ್ಲೋಟ್ ಅವರನ್ನು ಭೇಟಿ ಮಾಡಲು ತಾವು ವೈಯಕ್ತಿಕವಾಗಿ ರಾಜಭವನಕ್ಕೆ ಭೇಟಿ ನೀಡಿದ್ದಾಗಿ ಹೇಳಿದ ಪಾಟೀಲ್ ಇದರ ಗಂಭೀರತೆಯನ್ನು ಒತ್ತಿ ಹೇಳಿದರು. ರಾಜ್ಯಪಾಲರು ಬಯಸುತ್ತಿರುವ ಸ್ಪಷ್ಟೀಕರಣಗಳನ್ನು ನಾವು ನೀಡುತ್ತೇವೆ, ಆದರೆ ಅವರು ಅಡಚಣೆಯನ್ನು ತ್ವರಿತವಾಗಿ ಪರಿಹರಿಸುವ ಅಗತ್ಯವಿದೆ ಎಂದು ಒತ್ತಿ ಹೇಳಿದರು.
ಇನ್ನೂ ಈ ಸಂಬಂಧ ಟ್ವೀಟ್ ಮಾಡಿದ್ದ ಸಿಎಂ ಸಿದ್ದರಾಮಯ್ಯ ಕರ್ನಾಟಕದಲ್ಲಿ ಕೂಡಾ ವಿಧಾನಮಂಡಲ ಅಂಗೀಕರಿಸಿದ ಕೆಲವು ಮಸೂದೆಗೆಳ ಬಗ್ಗೆ ರಾಷ್ಟ್ರಪತಿಗಳ ಅಂಕಿತ ಪಡೆಯಲು ರಾಜ್ಯಪಾಲರು ವಿಳಂಬ ಧೋರಣೆಯನ್ನು ಅನುಸರಿಸುತ್ತಿರುವುದು ಸಂಘರ್ಷಕ್ಕೆ ಕಾರಣವಾಗಿದೆ.
ಹೀಗಿದ್ದರೂ ನಮ್ಮ ಸರ್ಕಾರ ಅನಗತ್ಯವಾಗಿ ಈ ಬೆಳವಣಿಗೆಗೆ ರಾಜಕೀಯ ಬೆರೆಸದೆ ಸಂಯಮದಿಂದ ನಡೆದುಕೊಂಡಿದೆ. ರಾಜ್ಯ ಸರ್ಕಾರ ಮತ್ತು ರಾಜಭವನದ ನಡುವಿನ ಅನಗತ್ಯ ಸಂಘರ್ಷವನ್ನು ಸುಪ್ರೀಂ ಕೋರ್ಟ್ ನ ಈ ತೀರ್ಪು ಶಾಶ್ವತವಾಗಿ ಕೊನೆಗೊಳಿಸಲಿದೆ ಎಂದು ನಂಬಿದ್ದೇನೆ ಎಂದು ಬರೆದುಕೊಂಡಿದ್ದರು. ಈ ಘರ್ಷಣೆ ತೀವ್ರ ಚರ್ಚೆಗೆ ನಾಂದಿ ಹಾಡಿದೆ: ಈಗಾಗಲೇ ಎರಡೂ ಸದನಗಳಲ್ಲಿ ಸಂಪೂರ್ಣವಾಗಿ ಚರ್ಚಿಸಿ ಅಂಗೀಕರಿಸಲ್ಪಟ್ಟ ಮಸೂದೆಗಳನ್ನು ರಾಜ್ಯಪಾಲರು ಹೇಗೆ ವಾಪಸ್ ಕಳುಹಿಸಬಹುದು? ಎಂದು ಪ್ರಶ್ನಿಸಿದ್ದಾರೆ.
ಮಾಜಿ ಕಾನೂನು ಸಚಿವ ಟಿ.ಬಿ. ಜಯಚಂದ್ರ ತಮ್ಮದೇ ಆದ ಅನುಭವ ಹಂಚಿಕೊಂಡಿದ್ದಾರೆ,"ನಾನು ಸಂಸದೀಯ ವ್ಯವಹಾರಗಳ ಸಚಿವನಾಗಿದ್ದಾಗ, ವಿವಿಧ ಮಸೂದೆಗಳ ನಿಬಂಧನೆಗಳನ್ನು ಸ್ಪಷ್ಟಪಡಿಸಲು ನಾನು ಆಗಾಗ್ಗೆ ರಾಜ್ಯಪಾಲರನ್ನು ಭೇಟಿಯಾಗುತ್ತಿದ್ದೆ. ಸ್ಪಷ್ಟತೆ ಪಡೆಯುವುದು ರಾಜ್ಯಪಾಲರ ಹಕ್ಕಾಗಿದೆ. "ಮಸೂದೆಗಳನ್ನು ಸಂಪೂರ್ಣವಾಗಿ ಚರ್ಚಿಸಲಾಗಿಲ್ಲ ಅಥವಾ ಸಾರ್ವಜನಿಕರಿಗೆ ವಿವರಿಸಲಾಗಿಲ್ಲ ಎಂಬುದು ಸಾಮಾನ್ಯವಾಗಿ ದೂರು ಎಂದು ಹೇಳಿದರು. ಆದರೂ, "ಆಡಳಿತವನ್ನು ವಿಳಂಬಗೊಳಿಸಲು ಅದು ಯಾವುದೇ ನೆಪವಲ್ಲ" ಎಂದು ಹೇಳಿದ್ದಾರೆ.
Advertisement