
ಬೆಂಗಳೂರು: 'ಜಾತಿ ಗಣತಿ' ಎಂದು ಜನಪ್ರಿಯವಾಗಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷಾ ವರದಿಯ ಬಗ್ಗೆ ಚರ್ಚಿಸಲು ಗುರುವಾರ ಸಂಜೆ ಕರೆಯಲಾಗಿದ್ದ ವಿಶೇಷ ಸಚಿವ ಸಂಪುಟ ಸಭೆಯಲ್ಲಿ ವರದಿಗೆ ಯಾರೂ ಯಾವುದೇ ವಿರೋಧ ವ್ಯಕ್ತಪಡಿಸಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ ಹೇಳಿದ್ದಾರೆ.
ಕೆಲವು ಮಾಧ್ಯಮಗಳು ವರದಿ ಮಾಡಿದಂತೆ ಚರ್ಚೆಯ ಸಮಯದಲ್ಲಿ ಕೆಲವು ಸಚಿವರು ಪರಸ್ಪರ ಏರು ಧ್ವನಿಯಲ್ಲಿ ವಾಗ್ವಾದ ನಡೆಸಿಲ್ಲ ಎಂದು ಸಿಎಂ ಸ್ಪಷ್ಟಪಡಿಸಿದ್ದಾರೆ.
"ನಿನ್ನೆ, ಜಾತಿ ಗಣತಿ ವರದಿ ಕುರಿತು ಸಚಿವ ಸಂಪುಟದಲ್ಲಿ ಚರ್ಚಿಸಲಾಯಿತು. ಚರ್ಚೆ ಅಪೂರ್ಣವಾಗಿದೆ ಮತ್ತು ಅದನ್ನು ಇನ್ನೊಂದು ದಿನಕ್ಕೆ ಮುಂದೂಡಲಾಗಿದೆ. ಈ ವಿಷಯವನ್ನು ಮುಂದಿನ ಸಚಿವ ಸಂಪುಟದಲ್ಲಿ ಚರ್ಚಿಸಲಾಗುವುದು. ಯಾರೂ ಅದನ್ನು ವಿರೋಧಿಸಿಲ್ಲ" ಎಂದು ಸಿದ್ದರಾಮಯ್ಯ ಹೇಳಿದರು.
ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ, "ಕೆಲವು ಸಚಿವರು ಪರಸ್ಪರ ಏರು ಧ್ವನಿಯಲ್ಲಿ ವಾಗ್ವಾದ ನಡೆಸಿದರು ಎಂಬ ಮಾಧ್ಯಮ ವರದಿ ಸುಳ್ಳು" ಎಂದು ಹೇಳಿದರು.
ಇನ್ನು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಕೂಡ ಸಂಪುಟ ಸಭೆಯಲ್ಲಿ ಯಾವುದೇ ಆಕ್ರಮಣಕಾರಿ ವಾದಗಳನ್ನು ತಳ್ಳಿಹಾಕಿದ್ದಾರೆ.
"ನಾವು ನಮ್ಮ ಆಲೋಚನೆಗಳನ್ನು ಹಂಚಿಕೊಂಡಿದ್ದೇವೆ ಅಷ್ಟೇ. ಏರು ಧ್ವನಿ ಅಥವಾ ವಾಗ್ವಾದ, ಅಂತಹದ್ದೇನೂ ನಡೆದಿಲ್ಲ. ಸಲಹೆಗಳನ್ನು ನೀಡಲಾಯಿತು. ಅದನ್ನು ಹೊರತುಪಡಿಸಿ ಯಾವುದೇ ನಿರ್ಧರ ಕೈಗೊಂಡಿಲ್ಲ" ಎಂದು ಅವರು ಹೇಳಿದ್ದಾರೆ.
Advertisement