
ಚಾಮರಾಜನಗರ: ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದಲ್ಲಿ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ನಲ್ಲಿ ನಡೆದ ಭಯೋತ್ಪಾದಕ ದಾಳಿಯನ್ನು ಖಂಡಿಸಿ ನಿರ್ಣಯ ಅಂಗೀಕರಿಸಲಾಗಿದೆ.
ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆ, ಕೇಂದ್ರ ಗೃಹ ಸಚಿವಾಲಯ ಮತ್ತು ಗುಪ್ತಚರ ಇಲಾಖೆ ಉಗ್ರರ ದಾಳಿ ತಡೆಯುವಲ್ಲಿ "ವಿಫಲವಾಗಿವೆ" ಎಂದು ಆರೋಪಿಸಿದೆ ಮತ್ತು ಗುಪ್ತಚರ ಇಲಾಖೆಯ ವೈಫಲ್ಯದ ಬಗ್ಗೆ ತನಿಖೆ ನಡೆಸುವಂತೆಯೂ ಆಗ್ರಹಿಸಿದೆ.
ಮಂಗಳವಾರ ಪಹಲ್ಗಾಮ್ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ಕರ್ನಾಟಕದ ಇಬ್ಬರು ಸೇರಿದಂತೆ ಕನಿಷ್ಠ 26 ಜನ ಸಾವನ್ನಪ್ಪಿದ್ದಾರೆ.
"ಪಹಲ್ಗಾಮ್ನಲ್ಲಿ ಅಮಾಯಕ ನಾಗರಿಕರ ಮೇಲೆ ನಡೆದ ಭಯೋತ್ಪಾದಕ ದಾಳಿಯನ್ನು ನಮ್ಮ ಸರ್ಕಾರ ಬಲವಾಗಿ ಖಂಡಿಸುತ್ತದೆ. ಕರ್ನಾಟಕದ ಜನರ ಪರವಾಗಿ ಮೃತರ ಕುಟುಂಬಗಳಿಗೆ ನಾವು ಹೃತ್ಪೂರ್ವಕ ಸಂತಾಪ ಸೂಚಿಸುತ್ತೇವೆ" ಎಂದು ನಿರ್ಣಯದಲ್ಲಿ ತಿಳಿಸಲಾಗಿದೆ.
ಭಯೋತ್ಪಾದಕ ದಾಳಿಗಳು ಮಾನವೀಯತೆಯ ವಿರುದ್ಧದ ಘೋರ ಅಪರಾಧಗಳು ಎಂದು ಟೀಕಿಸಲಾಗಿದೆ ಮತ್ತು ಎಲ್ಲಾ ರೀತಿಯ ಭಯೋತ್ಪಾದನೆಯನ್ನು ನಿರ್ಮೂಲನೆ ಮಾಡುವ ಹೋರಾಟದಲ್ಲಿ ದೇಶ ಒಗ್ಗಟ್ಟಾಗಬೇಕೆಂದು ಒತ್ತಾಯಿಸಿದೆ.
"ಆದಾಗ್ಯೂ, ಪುಲ್ವಾಮಾದಿಂದ ಪಹಲ್ಗಾಮ್ ವರೆಗಿನ ಈ ಘೋರ ದಾಳಿಗಳಿಗೆ ಕೇಂದ್ರ ಗೃಹ ಇಲಾಖೆಯ ವೈಫಲ್ಯವೇ ಕಾರಣ ಎಂದು ನಿರ್ಣಯವು ಹೇಳಿದೆ. ಗುಪ್ತಚರ ಇಲಾಖೆಯು ತನ್ನ ದೌರ್ಬಲ್ಯ ಮತ್ತು ವೈಫಲ್ಯಗಳಿಗಾಗಿ ಅಂತರರಾಷ್ಟ್ರೀಯ ಮಟ್ಟದಲ್ಲಿ ನಾಚಿಕೆಯಿಂದ ತಲೆ ತಗ್ಗಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ." "ಇದಲ್ಲದೆ, ನೂರಾರು ಕುಟುಂಬಗಳು ಅನಾಥವಾಗಿವೆ. ಕರ್ನಾಟಕ ಸರ್ಕಾರವು ಗೃಹ ಸಚಿವಾಲಯದ ಈ ವೈಫಲ್ಯವನ್ನು ಬಲವಾಗಿ ಖಂಡಿಸುತ್ತದೆ" ಎಂದು ನಿರ್ಣಯ ಹೇಳಿದೆ.
"ಕೋಮು ಧ್ರುವೀಕರಣದ ದುಷ್ಟ ರಾಜಕೀಯ"ಕ್ಕಾಗಿ ಮುಗ್ಧ ನಾಗರಿಕರ ಮೇಲೆ ಭಯೋತ್ಪಾದಕ ದಾಳಿ ಬಳಸುವುದನ್ನು ಸಚಿವ ಸಂಪುಟ ಖಂಡಿಸಿದೆ ಮತ್ತು ವೈಫಲ್ಯಗಳ ಬಗ್ಗೆ ಸಂಪೂರ್ಣ ತನಿಖೆಗೆ ಒತ್ತಾಯಿಸಿದೆ.
Advertisement