'ಒಬ್ಬರ ಧರ್ಮ ಅವರ ಮನೆಯೊಳಗೆ ನಾಲ್ಕು ಗೋಡೆ ಮಧ್ಯೆ ಸೀಮಿತವಾಗಿರಬೇಕು': ಉಗ್ರರ ಗುಂಡಿಗೆ ಬಲಿಯಾದ ಮಂಜುನಾಥ ರಾವ್ ಬಾವನ ಪ್ರತಿಕ್ರಿಯೆ
ಬೆಂಗಳೂರು: ಒಬ್ಬರ ಧರ್ಮವು ಅವರವರ ಮನೆಗಳೊಳಗೆ ಇರಬೇಕು ಮತ್ತು ಪೂಜಾ ಸ್ಥಳಗಳಿಗೆ ಸೀಮಿತವಾಗಿರಬೇಕು. ಅದನ್ನು ಮೀರಿ ವಿಸ್ತರಿಸಿ ಹೋಗಬಾರದು ಎನ್ನುತ್ತಾರೆ ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ ಕೊಲ್ಲಲ್ಪಟ್ಟ ಶಿವಮೊಗ್ಗ ರಿಯಲ್ ಎಸ್ಟೇಟ್ ಏಜೆಂಟ್ ಮಂಜುನಾಥ ರಾವ್ ಅವರ ಬಾವ ಪ್ರದೀಪ್.
ಧರ್ಮದ ಹೆಸರಿನಲ್ಲಿ ಮುಸ್ಲಿಮೇತರರ ಮೇಲೆ ಪಹಲ್ಗಾಮ್ ನಲ್ಲಿ ನಡೆದ ದಾಳಿಯನ್ನು ಖಂಡಿಸಿರುವ ಅವರು ಸರ್ಕಾರವು ಅಪರಾಧಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಇಂದು ಗುರುವಾರ ಮುಂಜಾನೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಂಜುನಾಥ್ ರಾವ್ ಅವರ ಮೃತದೇಹವನ್ನು ಸ್ವೀಕರಿಸಲು, ಅವರ ಸಹೋದರಿ ಪಲ್ಲವಿ ಮತ್ತು 18 ವರ್ಷದ ಸೋದರಳಿಯ ಅಭಿಜಯ ಅವರನ್ನು ಭೇಟಿ ಮಾಡಲು ಕಾಯುತ್ತಿದ್ದಾಗ ತಮ್ಮ ದುಃಖವನ್ನು ತಡೆದುಕೊಂಡು ಪ್ರದೀಪ್ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ (The New Indian Express) ಪತ್ರಿಕೆ ಪ್ರತಿನಿಧಿ ಜೊತೆ ಮಾತನಾಡಿದರು.
ಧರ್ಮವು ವೈಯಕ್ತಿಕ ವಿಷಯ. ಅದು ಒಬ್ಬರ ಮನೆ ಅಥವಾ ಪೂಜಾ ಸ್ಥಳಗಳ ನಾಲ್ಕು ಗೋಡೆಗಳ ಒಳಗೆ ಇರಬೇಕು. ಅದನ್ನು ಎಂದಿಗೂ ಭಯೋತ್ಪಾದನೆ ಅಥವಾ ಹಿಂಸಾಚಾರದ ಮೂಲಕ ಇತರರ ಮೇಲೆ ಹೇರಬಾರದು.
ನನ್ನ ಸೋದರಳಿಯ 12ನೇ ತರಗತಿ ಪರೀಕ್ಷೆ ಮುಗಿಸಿ ಉತ್ತಮ ಫಲಿತಾಂಶ ಬಂದ ಖುಷಿಯಲ್ಲಿ ಕಾಶ್ಮೀರಕ್ಕೆ ಪ್ರವಾಸ ಹೋಗಿದ್ದರು. ಈ ವೇಳೆ ತನ್ನ ತಂದೆಯನ್ನು ತನ್ನ ಕಣ್ಣ ಮುಂದೆಯೇ ಗುಂಡಿಕ್ಕಿ ಕೊಲ್ಲಲ್ಪಟ್ಟಿದ್ದನ್ನು ನೋಡಿದ ಭಯಾನಕ ಘಟನೆಯನ್ನು ಅವನು ಹೇಗೆ ಮರೆಯಲು ಸಾಧ್ಯ ಎಂದು ಪ್ರದೀಪ್ ಪ್ರಶ್ನಿಸುತ್ತಾರೆ. ದಾಳಿಯ ಒಂದು ದಿನ ಮೊದಲು, ಏಪ್ರಿಲ್ 21 ರ ಸಂಜೆ ಮಂಜುನಾಥ್ ರಾವ್ ತಮ್ಮೊಂದಿಗೆ ಮಾತನಾಡಿದ್ದರು ಎಂದು ನೆನಪಿಸಿಕೊಂಡರು.
ಮಂಜುನಾಥ ರಾವ್ ತಮ್ಮ ಪತ್ನಿ ಮತ್ತು ಮಗನೊಂದಿಗೆ ಏಪ್ರಿಲ್ 18 ರಂದು ಜಮ್ಮು-ಕಾಶ್ಮೀರಕ್ಕೆ ತೆರಳಿ ಇಂದು ಹಿಂತಿರುಗುವ ನಿರೀಕ್ಷೆಯಲ್ಲಿದ್ದರು. ಆದರೆ ಇಂದು ನನ್ನ ಬಾವನ ಮೃತದೇಹವನ್ನು ಸ್ವೀಕರಿಸಲು ನಾನು ಇಲ್ಲಿದ್ದೇನೆ ಎಂದು ದುಃಖದಿಂದ ನುಡಿದರು.
ಸರ್ಕಾರಿ ಬ್ಯಾಂಕ್ ಉದ್ಯೋಗಿ ಪ್ರದೀಪ್, ತನಗೆ ಈ ಘಟನೆಯನ್ನು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಹೇಳುತ್ತಾರೆ. ಭಯೋತ್ಪಾದಕ ದಾಳಿಗಳು ಮತ್ತೆ ಎಂದಿಗೂ ಸಂಭವಿಸದಂತೆ ನೋಡಿಕೊಳ್ಳಲು ಅಗತ್ಯವಿರುವ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳುವಂತೆ ಸರ್ಕಾರವನ್ನು ಒತ್ತಾಯಿಸಿದರು.
ಇಂದು ಸೂರ್ಯಾಸ್ತದ ಮೊದಲು ನಾವು ಅವರ ಅಂತಿಮ ವಿಧಿವಿಧಾನಗಳು ಮತ್ತು ಆಚರಣೆಗಳನ್ನು ನಮ್ಮ ಧಾರ್ಮಿಕ ಸಂಪ್ರದಾಯಗಳ ಪ್ರಕಾರ ಮಾಡಬೇಕು ಎಂದು ಹೇಳುತ್ತಾರೆ.
ಮಂಜುನಾಥ ರಾವ್ ನಿಧನಕ್ಕೆ ಅವರ ಕುಟುಂಬಕ್ಕೆ ಬೆಂಬಲವಾಗಿ ಶಿವಮೊಗ್ಗ ನಿವಾಸಿಗಳು ಇಂದು ಅರ್ಧ ದಿನಗಳ ಬಂದ್ಗೆ ಸ್ವಯಂಪ್ರೇರಣೆಯಿಂದ ಕರೆ ನೀಡಿ ಅವರ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲಿದ್ದಾರೆ.