ಮಂಡ್ಯ: 'ಕಾವೇರಿ ಆರತಿ'ಗೆ ಒಂದು ವಾರದಲ್ಲಿ ನೀಲನಕ್ಷೆ ತಯಾರಿ- ಡಿಸಿಎಂ ಡಿ.ಕೆ ಶಿವಕುಮಾರ್
ಮಂಡ್ಯ: ಕಾವೇರಿ ಆರತಿ ಕಾರ್ಯಕ್ರಮಕ್ಕೆ ಒಂದು ವಾರದಲ್ಲಿ ನೀಲನಕ್ಷೆ ಸಿದ್ಧವಾಗಲಿದ್ದು, ದಸರಾಗೆ ಕಾರ್ಯಕ್ರಮ ಆಯೋಜಿಸುವ ಉದ್ದೇಶವಿದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಶುಕ್ರವಾರ ತಿಳಿಸಿದರು.
ಕೆಆರ್ಎಸ್ನಲ್ಲಿ 'ಕಾವೇರಿ ಆರತಿ' ನಡೆಸುವ ಸಂಬಂಧ ಜನ ಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಜತೆ ಸಭೆ ನಡೆಸಿದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಿಕೆ ಶಿವಕುಮಾರ್, ಕಾರ್ಯಕ್ರಮ ರೂಪಿಸಲು ಸಚಿವ ಚಲುವರಾಯಸ್ವಾಮಿ ಅವರ ನೇತೃತ್ವದ ಸಮಿತಿ ರಚಿಸಲಾಗಿದೆ. ಈ ಸಮಿತಿ ಮುಂದಿನ 8-10 ದಿನಗಳಲ್ಲಿ ಕಾರ್ಯಕ್ರಮದ ನೀಲನಕ್ಷೆ ಸಿದ್ಧಪಡಿಸಲಿದೆ. ಕಾವೇರಿ ಆರತಿ ಕಾರ್ಯಕ್ರಮ ರೂಪುರೇಷೆಗಳ ಕುರಿತು ಅಧಿಕಾರಿಗಳು ಹಾಗೂ ನಮ್ಮ ನಾಯಕರ ಜತೆ ಚರ್ಚೆ ಮಾಡಿದ್ದೇನೆ," ಎಂದು ತಿಳಿಸಿದರು.
ಚೆಸ್ಕಾಂ ಸಂಸ್ಥೆ, ಪ್ರವಾಸೋದ್ಯಮ, ಧಾರ್ಮಿಕ ದತ್ತಿ ಇಲಾಖೆ, ಇಬ್ಬರು ಜಿಲ್ಲಾಧಿಕಾರಿಗಳು, ಇಬ್ಬರು ಸ್ಥಳೀಯ ಶಾಸಕರು ಹಾಗೂ ಪರಿಷತ್ ಸದಸ್ಯರು, ಸಿಇಓಗಳು, ಬಿಡ್ಬ್ಲ್ಯೂಎಸ್ಎಸ್ಬಿ ಮುಖ್ಯಸ್ಥರು ಸೇರಿ ಸಮಿತಿ ರಚಿಸಲಾಗಿದೆ. ನೀರಾವರಿ ಇಲಾಖೆ ಅಧಿಕಾರಿಗಳು ಮೂಲಸೌಕರ್ಯ ಕಲ್ಪಿಸುವ ಕೆಲಸ ಮಾಡಲಿದ್ದಾರೆ ಎಂದು ಮಾಹಿತಿ ನೀಡಿದರು.'
ಜಲ ಸಂರಕ್ಷಣೆ' ಕುರಿತು ಅರಿವು ಮೂಡಿಸುವ ಭಾಗವಾಗಿ ಕಾವೇರಿ ಆರತಿ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ದಿನಾಂಕ ಇನ್ನೂ ನಿಗದಿಯಾಗಿಲ್ಲ.ಇದಕ್ಕಾಗಿ ರೂ. 92 ಕೋಟಿ ನೀಡಲು ರಾಜ್ಯ ಸರ್ಕಾರ ನಿರ್ಧರಿಸಿದೆ. 10, 000 ಜನರಿಗೆ ಆಸನ ವ್ಯವಸ್ಥೆ ಮಾಡಲಾಗುವುದು, ಎಷ್ಟು ದಿನಗಳವರೆಗೆ ಕಾರ್ಯಕ್ರಮ ನಡೆಯಲಿದೆ ಎಂಬುದನ್ನು ಸಮಿತಿ ನಿರ್ಧರಿಸಿದೆ. ವಿವಿಧ ಇಲಾಖೆಗಳು ತಮ್ಮ ಚಟುವಟಿಕೆಗಳ ಕುರಿತು ವರದಿ ಸಲ್ಲಿಸಿವೆ ಎಂದರು.
ಕೆಆರ್ ಎಸ್ ನಲ್ಲಿ ಬೃಂದಾವನ ಗಾರ್ಡನ್ ಮೇಲ್ಧರ್ಜೆಗೇರಿಸಲು ಸರ್ಕಾರ ಈಗಾಗಲೇ ಟೆಂಡರ್ ಕರೆದಿದೆ ಎಂದು ತಿಳಿಸಿದರು. ಬೃಂದಾವನ ಗಾರ್ಡನ್ ಅಭಿವೃದ್ಧಿಪಡಿಸಲು ಏಳು ಸಂಸ್ಥೆಗಳು ಮುಂದೆ ಬಂದಿದ್ದು, ಚರ್ಚೆ ನಡೆಯುತ್ತಿದೆ. ಸ್ಥಳೀಯರಿಗೆ ಉದ್ಯೋಗಕ್ಕೆ ಆದ್ಯತೆ ನೀಡುವಂತೆ ನಾವು ಬಿಡ್ದಾರರಿಗೆ ಷರತ್ತು ವಿಧಿಸಿದ್ದೇವೆ ಎಂದು ಅವರು ಹೇಳಿದರು.
ನಾಲ್ಕು ಪಂಚಾಯತ್ಗಳಿಗೆ ಯೋಜನಾ ಪ್ರಾಧಿಕಾರ ರಚಿಸಲು ನಿರ್ಧರಿಸಿದ್ದೇವೆ. ಇದು ಅವುಗಳ ಕಾರ್ಯನಿರ್ವಹಣೆಯ ಮೇಲೆ ಪರಿಣಾಮ ಬೀರುವುದಿಲ್ಲ; ಪ್ರಾಧಿಕಾರವು ಯೋಜನೆಯಲ್ಲಿ ಮಾತ್ರ ಗಮನಹರಿಸುತ್ತದೆ. ಅಲ್ಲದೇ ಯೋಜನೆಯಿಂದ ಬರುವ ಆದಾಯವು ಈ ಪಂಚಾಯತ್ಗಳಿಗೆ ಲಾಭವಾಗುವಂತೆ ನೋಡಿಕೊಳ್ಳುತ್ತದೆ ಎಂದು ಅವರು ತಿಳಿಸಿದರು.
ಕಾವೇರಿ ಆರತಿ ಕಾರ್ಯಕ್ರಮಕ್ಕೆ ಸಂಭಾವ್ಯ ಸ್ಥಳಗಳನ್ನು ಪರಿಶೀಲಿಸಿದ್ದು, ತಾಂತ್ರಿಕ ಸಮಿತಿಯನ್ನು ಸಂಪರ್ಕಿಸಿದ್ದೇವೆ. ಸ್ಥಳವು ನೀರಿನ ಹತ್ತಿರ ಇರಬೇಕು. ಪಾರ್ಕಿಂಗ್, ಆಸನ ಮತ್ತು ಕಲಾವಿದರಿಗೆ ಸಾಕಷ್ಟು ಸ್ಥಳಾವಕಾಶವಿದ್ದು,, ದೋಣಿ ವಿಹಾರವನ್ನು ಸಹ ಒಳಗೊಂಡಿರುತ್ತದೆ. ಈ ಸಂಬಂಧ ಸಮಿತಿ ನಿರ್ಧರಿಸಲಿದೆ. ಕಾರ್ಯಕ್ರಮಕ್ಕ ಬರುವ ಸಾರ್ವಜನಿಕರಿಗೆ ಪ್ರವೇಶ ಉಚಿತವಾಗಿರುತ್ತದೆ. ಬಡವರಿಗೆ ಪ್ರವೇಶ ನಿರಾಕರಿಸಲು ಸಾಧ್ಯವಿಲ್ಲ ಮತ್ತು ಸಾರ್ವಜನಿಕರಿಗೆ ಪ್ರಾರ್ಥನೆ ಸಲ್ಲಿಸಲು ಅವಕಾಶವಿದೆ" ಎಂದು ಅವರು ಹೇಳಿದರು.
ಕಾವೇರಿ ನದಿಯ ಅತಿಕ್ರಮಣ ಮತ್ತು ಮಾಲಿನ್ಯದ ಬಗ್ಗೆ ಕಳವಳ ವ್ಯಕ್ತಪಡಿಸಿದ ಅವರು, ''ಎಲ್ಲ ಅಣೆಕಟ್ಟುಗಳನ್ನು ಡ್ರೋನ್ ಬಳಸಿ ಸಮೀಕ್ಷೆ ನಡೆಸಿ ಗರಿಷ್ಠ ಮಟ್ಟಕ್ಕೆ ಗುರುತು ಮಾಡಲಾಗಿದೆ. ಆಸ್ತಿಗಳ ಲೆಕ್ಕಪರಿಶೋಧನೆಗೆ ಇಲಾಖೆಗೆ ಸೂಚನೆ ನೀಡಲಾಗಿದೆ ಎಂದರು.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ