
ಬೆಂಗಳೂರು: ಪಾಕಿಸ್ತಾನದ ಮೇಲೆ ಭಾರತ ಯುದ್ಧ ಮಾಡಬಾರದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ನೀಡಿದ್ದ ಹೇಳಿಕೆ ವ್ಯಾಪಕ ಸುದ್ದಿಯಾಗಿ ಪಾಕಿಸ್ತಾನ ಮಾಧ್ಯಮಗಳಲ್ಲಿ ಸಹ ಪ್ರಸಾರವಾಗಿವೆ. ಇದನ್ನೇ ಅಸ್ತ್ರವಾಗಿಸಿಕೊಂಡ ವಿರೋಧ ಪಕ್ಷ ಬಿಜೆಪಿ ನಾಯಕರು ಸಿದ್ದರಾಮಯ್ಯನವರನ್ನು ಟೀಕಿಸುತ್ತಿದ್ದಾರೆ.
ಈ ಬಗ್ಗೆ ಇಂದು ಮಾಧ್ಯಮ ಪ್ರತಿನಿಧಿಗಳು ಕೇಳಿದಾಗ ಸ್ಪಷ್ಟನೆ ನೀಡಿರುವ ಸಿಎಂ, ಪಾಕಿಸ್ತಾನದ ವಿರುದ್ಧ ಯುದ್ಧ ಮಾಡುವುದೇ ಬೇಡವೆಂದು ನಾನು ಹೇಳಿಲ್ಲ. ಯುದ್ಧ ಅನಿವಾರ್ಯವಾದರೆ ಮಾತ್ರ ಮಾಡಬೇಕು. ಯುದ್ಧದಿಂದಲೇ ಪರಿಹಾರ ಅಲ್ಲ, ಯುದ್ಧ ಬೇಡವೇ ಬೇಡ ಎಂದು ನಾನು ಹೇಳಿಲ್ಲ, ಅನಿವಾರ್ಯವಾದರೆ ಮಾಡಬೇಕಾಗುತ್ತದೆ, ಈಗ ತಕ್ಷಣಕ್ಕೆ ಬೇಡ ಎಂದು ಹೇಳಿದ್ದೇನೆ ಎಂದು ಸ್ಪಷ್ಟನೆ ನೀಡಿದ್ದಾರೆ.
ನಿಮ್ಮ ಮಾತುಗಳು ಪಾಕಿಸ್ತಾನ ಮಾಧ್ಯಮಗಳಲ್ಲಿ ಸುದ್ದಿಯಾಗಿವೆಯಲ್ಲವೇ ಎಂದು ಕೇಳಿದಾಗ, ಪಾಕಿಸ್ತಾನ ಜೊತೆ ಯುದ್ಧವೇ ಮಾಡುದು ಬೇಡ ಎಂದು ನಾನು ಹೇಳಿಲ್ಲ. ಯುದ್ಧ ಪರಿಹಾರ ಅಲ್ಲ, ಕಾಶ್ಮೀರಕ್ಕೆ ಸಾಕಷ್ಟು ಮಂದಿ ಪ್ರವಾಸಿಗರು ಹೋಗುತ್ತಾರೆ. ಅವರಿಗೆ ಭದ್ರತೆ ನೀಡಬೇಕಾಗಿತ್ತು ಅಲ್ಲವೇ, ಭದ್ರತೆ ನೀಡಬೇಕಾಗಿದ್ದ ಕೇಂದ್ರ ಗೃಹ ಇಲಾಖೆಯ ವೈಫಲ್ಯವಾಗಿದೆ ಎಂದು ಹೇಳಿದ್ದೇನೆ ಎಂದರು.
ಈ ಸಲ 26 ಮಂದಿ ಸಾವಿಗೀಡಾಗಿದ್ದಾರೆ, ಕೆಲ ವರ್ಷಗಳ ಹಿಂದೆ ಪುಲ್ವಾಮಾದಲ್ಲಿ 40 ಸೈನಿಕರು ಹುತಾತ್ಮರಾಗಿದ್ದರು. ಇದು ಗುಪ್ತಚರ ಇಲಾಖೆಯ ವೈಫಲ್ಯದಿಂದ ಆಗಿದೆ. ಭಾರತ ಸರ್ಕಾರ ಭದ್ರತೆಯನ್ನು ಸರಿಯಾಗಿ ನೀಡಿರಲಿಲ್ಲ ಎನ್ನುತ್ತಾರೆ.
ನಾನು ಓಲೈಕೆ ರಾಜಕಾರಣ ಮಾಡುತ್ತೇನೆ ಎಂದು ಬಿಜೆಪಿಯವರು ಹೇಳುತ್ತಾರೆ, ಅವರು ಹೇಳುವುದು, ಉತ್ತರ ಕೊಡುವುದು ಸರಿಯಿಲ್ಲ ಎಂದು ಟೀಕಿಸಿದರು.
ಅವರನ್ನೇ ಕೇಳಿ
ಇನ್ನು ಇದಕ್ಕೂ ಮೊದಲು ಇಂದು ಬೆಳಗ್ಗೆ ಸಿದ್ದರಾಮಯ್ಯನವರ ಹೇಳಿಕೆ ಬಗ್ಗೆ ಡಿಸಿಎಂ ಡಿ ಕೆ ಶಿವಕುಮಾರ್ ಅವರಲ್ಲಿ ಅಭಿಪ್ರಾಯ ಕೇಳಿದ್ದಾಗ, ನಾನು ಪ್ರತಿಕ್ರಿಯಿಸುವುದಿಲ್ಲ, ಅವರು ಯಾವ ಅರ್ಥದಲ್ಲಿ ಹೇಳಿದ್ದಾರೋ ಎಂದು ಅವರನ್ನೇ ಕೇಳಿ ಸ್ಪಷ್ಟಪಡಿಸಿಕೊಳ್ಳಿ ಎಂದಿದ್ದರು.
ಈಗಾಗಲೇ ನಾವು ಮಲ್ಲಿಕಾರ್ಜುನ ಖರ್ಗೆ ಮತ್ತು ರಾಹುಲ್ ಗಾಂಧಿಯವರ ನೇತೃತ್ವದಲ್ಲಿ ನಮ್ಮ ಪಕ್ಷದ ನಿಲುವನ್ನು ಸ್ಪಷ್ಟಪಡಿಸಿದ್ದೇವೆ. ದೇಶದ ಭದ್ರತೆ, ಶಾಂತಿ ಬಹಳ ಮುಖ್ಯವಾಗಿರುತ್ತದೆ. ದೇಶವನ್ನು ರಕ್ಷಿಸಲು ನಾವೆಲ್ಲರೂ ಒಟ್ಟಾಗಿ ಕಾರ್ಯಪ್ರವೃತ್ತರಾಗೋಣ, ಈ ವಿಚಾರದಲ್ಲಿ ನಾವು ಕೇಂದ್ರ ಸರ್ಕಾರಕ್ಕೆ ಬೆಂಬಲ ನಿಲ್ಲುತ್ತೇವೆ ಎಂದರು.
Advertisement