

ಬೆಂಗಳೂರು: ಸಿಎಂ ಸಿದ್ದರಾಮಯ್ಯ ಅವರು ಜನವರಿ 6ರಂದು ರಾಜ್ಯದಲ್ಲಿ ಸುದೀರ್ಘ ಅವಧಿಗೆ ಆಡಳಿತ ನಡೆಸಿದ ಮುಖ್ಯಮಂತ್ರಿ ಎಂಬ ದಿವಂಗತ ದೇವರಾಜ ಅರಸು ಅವರ ದಾಖಲೆ ಸರಿಗಟ್ಟಿ, ಹೊಸ ದಾಖಲೆ ಬರೆಯಲಿದ್ದಾರೆ. ಈ ಸಂಭ್ರಮವನ್ನು ವಿಭಿನ್ನವಾಗಿ ''ನಾಟಿ ಕೋಳಿ ಔತಣಕೂಟ'' ಆಯೋಜಿಸಿ ಸಂಭ್ರಮಿಸಲು ಅಭಿಮಾನಿಗಳು ಸಿದ್ಧತೆ ನಡೆಸಿದ್ದಾರೆ.
ಜ.6ರಂದು ನೆಲಮಂಗಲದ ಭಕ್ತನ ಪಾಳ್ಯದಲ್ಲಿ ನಾಟಿ ಕೋಳಿ ಔತಣಕೂಟ ನಡೆಯಲಿದ್ದು, ನಾಟಿಕೋಳಿ ಸಾಂಬಾರ್, ಮುದ್ದೆ, ಕಾಳು ಗೊಜ್ಜು, ರೈಸ್, ಪುಲಾವ್ ಮತ್ತು ಸಿಹಿತಿಂಡಿ ನೀಡಲು ತೀರ್ಮಾನಿಸಲಾಗಿದೆ. ಐದರಿಂದ ಹತ್ತು ಸಾವಿರ ಜನರು ಸೇರುವ ನಿರೀಕ್ಷೆ ಇರಿಸಲಾಗಿದೆ.
ಒಂದು ವರ್ಷದ ಹಿಂದೆ, ಕರ್ನಾಟಕದ ಅತಿ ಹೆಚ್ಚು ಕಾಲ ಮುಖ್ಯಮಂತ್ರಿಯಾಗುವ ಬಯಕೆಯನ್ನು ಸಿದ್ದರಾಮಯ್ಯ ವ್ಯಕ್ತಪಡಿಸಿದ್ದರು. ಸದ್ಯ ಆ ಆಸೆ ಈಡೇರಲಿದೆ.
ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಸಿಎಂ ಹುದ್ದೆಗೇರುವ ಪ್ರಯತ್ನಗಳ ನಡುವೆ ಪಕ್ಷದೊಳಗಿನ ಬಿರುಗಾಳಿಯನ್ನು ಎದುರಿಸಿ ಸಿದ್ದರಾಮಯ್ಯ ಗಟ್ಟಿಯಾಗಿ ಕುಳಿತಿದ್ದು ಈಗ ಕರ್ನಾಟಕದ ಅತಿ ಹೆಚ್ಚು ಕಾಲ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ ಹಿಂದುಳಿದ ಸಮುದಾಯದ ಮತ್ತೊಬ್ಬ ಧೀಮಂತ ನಾಯಕ ಡಿ ದೇವರಾಜ್ ಅರಸ್ ಅವರ ದಾಖಲೆಯನ್ನು ಮುರಿಯಲಿದ್ದಾರೆ.
ಅದ್ದೂರಿ ಸಿದ್ಧತೆಗಳನ್ನು ಅರಸು ಅವರೇ ಸೃಷ್ಟಿಸಿದ ರಾಜಕೀಯ ಪದ 'ಅಹಿಂದ' ಸಂಘಟನೆ ಯೋಜಿಸುತ್ತಿದೆ. ಡಿ. ದೇವರಾಜ್ ಅರಸ್ ಒಟ್ಟು 2,792 ದಿನಗಳು ಸುಮಾರು 7.6 ವರ್ಷಗಳ ಕಾಲ ಅಧಿಕಾರದಲ್ಲಿದ್ದರು. ಸಿದ್ದರಾಮಯ್ಯ ಈಗ ಆ ದಾಖಲೆ ಮುರಿಯುತ್ತಿದ್ದಾರೆ.
ರಾಜ್ಯದಲ್ಲಿ ನಾಯಕತ್ವ ಬಿಕ್ಕಟ್ಟು ಸೃಷ್ಟಿಯಾದ ಸಂದರ್ಭದಲ್ಲಿ ಹೈಕಮಾಂಡ್ ಸೂಚನೆಯಂತೆ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಅವರು ಉಪಹಾರ ಮೀಟಿಂಗ್ ಹಮ್ಮಿಕೊಂಡಿದ್ದರು. ಮೊದಲು ಸಿದ್ದರಾಮಯ್ಯ ಅವರ ನಿವಾಸದಲ್ಲಿ ಬ್ರೇಕ್ ಫಾಸ್ಟ್ ಮೀಟಿಂಗ್ ಹಮ್ಮಿಕೊಳ್ಳಲಾಗಿತ್ತು.
ಬಳಿಕ ಡಿಕೆ ಶಿವಕುಮಾರ್ ಅವರ ನಿವಾಸಕ್ಕೆ ಸಿದ್ದರಾಮಯ್ಯ ಅವರನ್ನು ಆಹ್ವಾನ ಮಾಡಲಾಗಿತ್ತು. ಸಿದ್ದರಾಮಯ್ಯ ಅವರಿಗಾಗಿ ನಾಟಿಕೋಳಿ ಸಾಂಬಾರ್ ಹಾಗೂ ಇಡ್ಲಿ ಮಾಡಲಾಗಿತ್ತು. ಸಿದ್ದರಾಮಯ್ಯ ಹೇಳಿದಂತೆ ಹಳ್ಳಿಯಿಂದ ನಾಟಿಕೋಳಿ ತರಿಸಿ ಮೈಸೂರು ಶೈಲಿಯ ಸಾಂಬಾರ್ ಮಾಡಲಾಗಿತ್ತು.
Advertisement