
ಬೆಂಗಳೂರು: ಬೆಂಗಳೂರು ಮೆಟ್ರೋ ರೈಲು ನಿಗಮ ಲಿಮಿಟೆಡ್ (ಬಿಎಂಆರ್ಸಿಎಲ್) ಪೀಣ್ಯದಲ್ಲಿರುವ ಯೋಜಿತ ಮೆಟ್ರೋ ನಿಲ್ದಾಣವನ್ನು ಸ್ಥಳಾಂತರಿಸುವ ಬಗ್ಗೆ ಮಾಹಿತಿ ಹಂಚಿಕೊಂಡಿದೆ.
ಈ ಯೋಚನೆ ಮೆಟ್ರೋ ಯೋಜನೆಯ 3 ನೇ ಹಂತದ ಭಾಗವಾಗಿದ್ದು, ಜೆ.ಪಿ. ನಗರ ಹಂತ 4 ರಿಂದ ಕೆಂಪಾಪುರ (32.15 ಕಿಮೀ) ವರೆಗಿನ ಆರೆಂಜ್ ಲೈನ್ ನ್ನು 300 ಮೀಟರ್ಗಳಷ್ಟು ಕಡಿಮೆ ಮಾಡುವ ಉದ್ದೇಶದಿಂದ ಪೀಣ್ಯ ಮೆಟ್ರೋ ನಿಲ್ದಾಣವನ್ನು ಸ್ಥಳಾಂತರ ಮಾಡುವ ಕ್ರಮವನ್ನು ಬಿಎಂಆರ್ ಸಿಎಲ್ ಪರಿಗಣಿಸುತ್ತಿರುವುದಾಗಿ ಹೇಳಿದೆ.
3 ನೇ ಹಂತದ ವಿವರವಾದ ಯೋಜನಾ ವರದಿ (DPR) ನ್ನು ರಾಜ್ಯ ಸರ್ಕಾರ ಈಗಾಗಲೇ ಅನುಮೋದಿಸಿದೆ. ಆರೆಂಜ್ ಲೈನ್ ಮತ್ತು ಹೊಸಹಳ್ಳಿಯಿಂದ ಕಡಬಗೆರೆವರೆಗಿನ ಎರಡನೇ ಕಾರಿಡಾರ್ (12.5 ಕಿಮೀ) ಸೇರಿ 3ನೇ ಹಂತ ಎರಡು ಕಾರಿಡಾರ್ಗಳನ್ನು ಒಳಗೊಂಡಿದೆ.
ಈ ಹಿಂದಿನ ಯೋಜನೆಯ ಪ್ರಕಾರ ಜೆ.ಪಿ. ನಗರ, ಮೈಸೂರು ರಸ್ತೆ, ಸುಮನಹಳ್ಳಿ ಮತ್ತು ಪೀಣ್ಯದಲ್ಲಿ ಇಂಟರ್ಚೇಂಜ್ ನಿಲ್ದಾಣಗಳನ್ನು ಯೋಜಿಸಲಾಗಿತ್ತು. ಆದರೆ ಪೀಣ್ಯ ಮೆಟ್ರೋ ನಿಲ್ದಾಣದ ಸ್ಥಳದಲ್ಲಿ ಇಂಟರ್ಚೇಂಜ್ ವ್ಯವಸ್ಥೆ ನಿರ್ಮಾಣಕ್ಕೆ
ಅತಿ ಹೆಚ್ಚಿನ ಎತ್ತರದ ಸ್ಥಳ ಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಇಂಟರ್ಚೇಂಜ್ ನಿಲ್ದಾಣದ ಬಗ್ಗೆ ಮರು ಮೌಲ್ಯಮಾಪನ ನಡೆಯುತ್ತಿದೆ.
ಪೀಣ್ಯ ಮೆಟ್ರೋ ನಿಲ್ದಾಣವನ್ನು ಹೊರ ವರ್ತುಲ ರಸ್ತೆಯ ಗೋರ್ಗುಂಟೆಪಾಳ್ಯ ಸಿಗ್ನಲ್ ಬಳಿಯ ಸ್ಥಳಕ್ಕೆ ಸ್ಥಳಾಂತರಿಸುವ ಬಗ್ಗೆ ಯೋಚನೆ ನಡೆಸಲಾಗುತ್ತಿದೆ ಎಂದು ಬಿಎಂಆರ್ ಸಿಎಲ್ ಹೇಳಿದೆ.
ಹೊಸ ನಿಲ್ದಾಣವನ್ನು ಪೀಣ್ಯ ಮತ್ತು ಗೋರ್ಗುಂಟೆಪಾಳ್ಯದಲ್ಲಿರುವ ಅಸ್ತಿತ್ವದಲ್ಲಿರುವ ಮೆಟ್ರೋ ನಿಲ್ದಾಣಗಳಿಗೆ ಎರಡು ಪ್ರತ್ಯೇಕ ಪಾದಚಾರಿ ಮೇಲ್ಸೇತುವೆಗಳ ಮೂಲಕ ಸಂಪರ್ಕಿಸಲಾಗುವುದು. ಮೆಟ್ರೋ ನಿರ್ಮಾಣ ಸ್ಥಳಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಗುರುವಾರ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಬಿಎಂಆರ್ಸಿಎಲ್ ಅಧಿಕಾರಿಗಳು ಈ ಪ್ರಸ್ತಾವನೆಯನ್ನು ವಿವರಿಸಿದ್ದಾರೆ.
ನೀರಿನ ದರ ಹೆಚ್ಚಳದ ಬಗ್ಗೆ ಶಿವಕುಮಾರ್ ಮಾತನಾಡಿದ್ದು, “ಕುಡಿಯುವ ನೀರಿನ ದರ ಹೆಚ್ಚಿಸುವ ಪ್ರಸ್ತಾಪವನ್ನು ಸಚಿವ ಸಂಪುಟದ ಮುಂದೆ ಇಡಲಾಗುವುದು. 14 ವರ್ಷಗಳಿಂದ ನೀರಿನ ದರ ಹೆಚ್ಚಳ ಮಾಡಲಾಗಿಲ್ಲ. ಮಂಡಳಿ ವಾರ್ಷಿಕ 1,000 ಕೋಟಿ ರೂ. ನಷ್ಟವನ್ನು ಅನುಭವಿಸುತ್ತಿರುವುದರಿಂದ ಸುಂಕ ಹೆಚ್ಚಳ ಅನಿವಾರ್ಯವಾಗಿದೆ. ಬಿಡಬ್ಲ್ಯೂಎಸ್ಎಸ್ಬಿ ವರದಿಯನ್ನು ಸಲ್ಲಿಸಿದೆ, ಇದನ್ನು ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಲಾಗುವುದು ಎಂದು ಹೇಳಿದ್ದಾರೆ.
ಪ್ರಸ್ತಾವಿತ ಮೆಟ್ರೋ ದರ ಹೆಚ್ಚಳವನ್ನು ಉದ್ದೇಶಿಸಿ ಮಾತನಾಡಿದ ಅವರು, “ಈ ಉದ್ದೇಶಕ್ಕಾಗಿ ನ್ಯಾಯಾಧೀಶರ ನೇತೃತ್ವದಲ್ಲಿ ಕೇಂದ್ರ ಸಮಿತಿಯನ್ನು ರಚಿಸಲಾಗಿದೆ ಮತ್ತು ಸರ್ಕಾರ ಮಧ್ಯಪ್ರವೇಶಿಸುವುದಿಲ್ಲ” ಎಂದು ಹೇಳಿದರು.
ಬೆಂಗಳೂರಿನಲ್ಲಿ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡುವ ಪ್ರಯತ್ನಗಳ ಕುರಿತು, ಹೊಸದಾಗಿ ನಿರ್ಮಿಸಲಾದ ಮೆಟ್ರೋ ಮಾರ್ಗಗಳಲ್ಲಿ ಡಬಲ್ ಡೆಕ್ಕರ್ ಫ್ಲೈಓವರ್ಗಳನ್ನು ನಿರ್ಮಿಸುವ ಯೋಜನೆಯನ್ನು ಶಿವಕುಮಾರ್ ಬಹಿರಂಗಪಡಿಸಿದರು. "ನಗರ ಸೌಂದರ್ಯೀಕರಣ ಪ್ರಯತ್ನಗಳ ಭಾಗವಾಗಿ ಹೊಸ ಮೆಟ್ರೋ ಮಾರ್ಗಗಳಲ್ಲಿ ಡಬಲ್ ಡೆಕ್ಕರ್ ಫ್ಲೈಓವರ್ಗಳ ನಿರ್ಮಾಣ ಸೇರಿದಂತೆ ಬೆಂಗಳೂರಿನಲ್ಲಿ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡಲು ಕ್ರಮಗಳನ್ನು ಜಾರಿಗೆ ತರಲು ನಿರ್ಧಾರ ತೆಗೆದುಕೊಳ್ಳಲಾಗಿದೆ" ಎಂದು ಅವರು ಹೇಳಿದರು.
ಈ ಉಪಕ್ರಮದ ಪ್ರಮಾಣದ ಬಗ್ಗೆ ಕೇಳಿದಾಗ, ಅವರು, "ಹೊಸದಾಗಿ ನಿರ್ಮಿಸಲಾದ ಎಲ್ಲಾ ಮೆಟ್ರೋ ಮಾರ್ಗಗಳಲ್ಲಿ ಸುಮಾರು 40 ಕಿ.ಮೀ. ಉದ್ದದ ಡಬಲ್ ಡೆಕ್ಕರ್ಗಳನ್ನು ನಿರ್ಮಿಸಲಾಗುವುದು. ನಾವು ಮುಂದಿನ 30-40 ವರ್ಷಗಳವರೆಗೆ ಯೋಜಿಸುತ್ತಿದ್ದೇವೆ. ವೆಚ್ಚವನ್ನು ಬಿಬಿಎಂಪಿ ಮತ್ತು ಬಿಎಂಆರ್ಸಿಎಲ್ ನಡುವೆ ಸಮಾನವಾಗಿ ಹಂಚಿಕೊಳ್ಳಲಾಗುವುದು" ಎಂದು ಹೇಳಿದರು.
"ಡಬಲ್ ಡೆಕ್ಕರ್ಗಳನ್ನು ನಿರ್ಮಿಸುವ ಹೆಚ್ಚುವರಿ ವೆಚ್ಚ 9,800 ಕೋಟಿ ರೂ. ಆಗಿರುತ್ತದೆ. ಪ್ರಸ್ತುತ, ನಾವು ಇದನ್ನು ನಗರದ ಪಶ್ಚಿಮ ಭಾಗದಲ್ಲಿ ಕಾರ್ಯಗತಗೊಳಿಸುತ್ತಿದ್ದೇವೆ. ರಾಗಿಗುಡ್ಡ ಪ್ರದೇಶದಲ್ಲಿ ನಾವು ಈ ಮಾದರಿಯನ್ನು ಯಶಸ್ವಿಯಾಗಿ ಪರೀಕ್ಷಿಸಿದ್ದೇವೆ ಮತ್ತು ಅಗತ್ಯಕ್ಕೆ ತಕ್ಕಂತೆ ಮತ್ತಷ್ಟು ಸುಧಾರಣೆಗಳನ್ನು ಮಾಡುತ್ತೇವೆ."
ಬಿಬಿಎಂಪಿ, ಬಿಎಂಆರ್ಸಿಎಲ್ ಮತ್ತು ಬಿಡಿಎ ಆಯುಕ್ತರು ಹೆಬ್ಬಾಳ, ಗೊರಗುಂಟೆಪಾಳ್ಯ, ಬಿಇಎಲ್ ಸೈಡ್ ರೋಡ್, ಲೊಟ್ಟೆಗೊಲ್ಲಹಳ್ಳಿ ಮತ್ತು ಸುಮನಹಳ್ಳಿಯಂತಹ ಹೆಚ್ಚಿನ ದಟ್ಟಣೆಯ ಪ್ರದೇಶಗಳಲ್ಲಿ ಫ್ಲೈಓವರ್ಗಳು ಮತ್ತು ಅಂಡರ್ಪಾಸ್ಗಳಿಗಾಗಿ ಸ್ಥಳಗಳನ್ನು ಗುರುತಿಸುತ್ತಿದ್ದಾರೆ.
“ಬ್ರಾಂಡ್ ಬೆಂಗಳೂರು ಯೋಜನೆಯಡಿ ನಗರದ ಸೌಂದರ್ಯವನ್ನು ಹೆಚ್ಚಿಸಲು, ಮೆಟ್ರೋ ಪಿಲ್ಲರ್ಗಳ ಮೇಲೆ ಜಾಹೀರಾತುಗಳನ್ನು ಅನುಮತಿಸಲಾಗುವುದು, ಬಿಬಿಎಂಪಿ ಮತ್ತು ಬಿಎಂಆರ್ಸಿಎಲ್ ನಡುವೆ ಆದಾಯವನ್ನು ಸಮಾನವಾಗಿ ಹಂಚಿಕೊಳ್ಳಲಾಗುವುದು” ಎಂದು ಉಪಮುಖ್ಯಮಂತ್ರಿ ಹೇಳಿದರು.
ನಗರದಲ್ಲಿನ ಅನಧಿಕೃತ ಆಸ್ತಿಗಳ ವಿಷಯದ ಕುರಿತು, ಅವರು, “ನಾವು 25 ಲಕ್ಷ ಖಾತೆಗಳನ್ನು ಸಿದ್ಧಪಡಿಸಿದ್ದೇವೆ, ಇನ್ನೂ 7 ಲಕ್ಷ ಬಾಕಿ ಇದೆ. ಇದನ್ನು ಪರಿಹರಿಸಲು ಒಂದು ಕಾರ್ಯವಿಧಾನವನ್ನು ಜಾರಿಗೆ ತರಲಾಗಿದೆ, ಆದರೆ ಈ ಹಂತದಲ್ಲಿ ವಿವರಗಳನ್ನು ಬಹಿರಂಗಪಡಿಸಲಾಗುವುದಿಲ್ಲ ಎಂದು ಹೇಳಿದ್ದಾರೆ.
Advertisement