
ಮಂಗಳೂರು: ಧಾರ್ಮಿಕ ಆಚರಣೆಯೊಂದಿಗೆ ರಾಜಕೀಯ ಬೆರೆಸುವುದರಿಂದ ನಿಜವಾದ ಹಿಂದೂ ಆಗುವುದಿಲ್ಲ ಎಂದು ನಟ ಪ್ರಕಾಶ್ ರಾಜ್ ಹೇಳಿದ್ದಾರೆ. ಮಂಗಳೂರಿಗೆ ಭೇಟಿ ನೀಡಿದ್ದ ವೇಳೆ ಅವರು, ಮಹಾ ಕುಂಭಮೇಳದಲ್ಲಿ ಸ್ನಾನ ಮಾಡುವ ತಮ್ಮ ಎಐನಿಂದ ರೂಪುಗೊಂಡ ಚಿತ್ರದ ಕುರಿತು ಮಾಧ್ಯಮದ ಪ್ರಶ್ನೆಗೆ ಉತ್ತರಿಸುತ್ತಿದ್ದರು.
ನನಗೆ ಧರ್ಮದಲ್ಲಿ ನಂಬಿಕೆ ಇಲ್ಲ. ಧಾರ್ಮಿಕ ವಿಷಯಗಳಲ್ಲಿಯೂ ರಾಜಕೀಯ ಬೆರೆಸುವುದರಿಂದ ನಿಜವಾದ ಹಿಂದೂಗಳಾಗುವುದಿಲ್ಲ. AI-ರಚಿತ ನನ್ನ ಚಿತ್ರವನ್ನು ಬಳಸಿಕೊಂಡು ನನ್ನನ್ನು ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ ಮಾಡಿದರು. ಒಬ್ಬ ವ್ಯಕ್ತಿ ಸರ್ಕಾರ ಅಥವಾ ವ್ಯಕ್ತಿಯನ್ನು ಟೀಕಿಸುತ್ತಾನೆ ಎಂಬ ಕಾರಣಕ್ಕಾಗಿ ವಾಟ್ಸಾಪ್ ವಿಶ್ವವಿದ್ಯಾಲಯಗಳಲ್ಲಿ ಸುಳ್ಳು ಅಥವಾ ತಪ್ಪು ಮಾಹಿತಿಯನ್ನು ಹರಡುವುದನ್ನು ಪ್ರಶಾಂತ್ ಸಂಬರ್ಗಿಯಂತಹ ಜನರು ಮಾಡುತ್ತಿದ್ದಾರೆ. ನಾನು ಸಂಬರ್ಗಿ ವಿರುದ್ಧ ಪ್ರಕರಣ ದಾಖಲಿಸಿದ್ದೇನೆ. AI ಒಂದು ಅದ್ಭುತ ತಂತ್ರಜ್ಞಾನ, ಆದರೆ ಅದನ್ನು ವ್ಯಕ್ತಿಯ ಇಮೇಜ್ ನ್ನು ಹಾಳು ಮಾಡಲು ಬಳಸುವುದು ಅಪರಾಧ ಎಂದು ಹೇಳಿದರು.
ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸುವ ಭರದಲ್ಲಿ ರಾಜ್ಯ ಸರ್ಕಾರದ ಬಳಿ ಅಭಿವೃದ್ಧಿ ಕಾರ್ಯಗಳಿಗೆ ಹಣವಿಲ್ಲದಿರುವ ಬಗ್ಗೆ ಮತ್ತೊಂದು ಪ್ರಶ್ನೆ ಕೇಳಿದಾಗ ಅವರು, ಚುನಾವಣಾ ಪ್ರಕ್ರಿಯೆಯಲ್ಲಿ ಅಥವಾ ರಾಜಕೀಯದಲ್ಲಿ, ವಿರೋಧ ಪಕ್ಷ ಗೆಲ್ಲುವುದಿಲ್ಲ, ಆದರೆ ಆಡಳಿತ ಪಕ್ಷ ಸೋಲುತ್ತದೆ. ಕಾಂಗ್ರೆಸ್ ಈಗ ಅಧಿಕಾರಕ್ಕೆ ಬಂದಿದ್ದರೆ, ಮುಂದೆ ಸೋಲುವುದು ಅವರೇ. ಅವರು ಹೇಗೆ ಆಡಳಿತ ನಡೆಸುತ್ತಿದ್ದಾರೆ ಎಂಬುದು ಇಲ್ಲಿ ಮುಖ್ಯವಾಗುತ್ತದೆ. ಸರ್ಕಾರ ನಷ್ಟದಲ್ಲಿದ್ದರೆ, ನಾವು ಜನರು ಅದನ್ನು ಪ್ರಶ್ನಿಸಬೇಕಾಗಿದೆ ಎಂದರು.
ನೀವು ಎಲ್ಲಿ ವಿಫಲರಾಗುತ್ತಿದ್ದೀರಿ? ಒಂದು ಸರ್ಕಾರ ಅಥವಾ ರಾಷ್ಟ್ರವು ನಾಗರಿಕರ ಹಣದಿಂದ ನಡೆಯುತ್ತದೆ. ಕೆಲವು ದಿನಗಳ ಹಿಂದೆ, ಸುಪ್ರೀಂ ಕೋರ್ಟ್ 'ಉಚಿತ ಕೊಡುಗೆಗಳು ಕೆಲಸ ಮಾಡಲು ಇಚ್ಛಿಸದ ಜನರ ವರ್ಗವನ್ನು ಸೃಷ್ಟಿಸುತ್ತಿವೆಯೇ' ಎಂದು ಕೇಳಿತು. ಹಾಗಿದ್ದಲ್ಲಿ, ಕಾರ್ಪೊರೇಟ್ ಸಾಲಗಳನ್ನು ಮನ್ನಾ ಮಾಡುವುದರಿಂದಲೂ ಅವರು ಪರಾವಲಂಬಿಗಳಾಗಿದ್ದಾರೆಯೇ? ಯಾವ ಪಕ್ಷವು ರಾಜ್ಯವನ್ನು ಆಳುತ್ತದೆ ಎಂದು ನೋಡುವ ಬದಲು, ತೆರಿಗೆದಾರರ ಹಣವನ್ನು ಸರ್ಕಾರಗಳು ಹೇಗೆ ಬಳಸಿಕೊಳ್ಳುತ್ತವೆ ಎಂಬುದನ್ನು ನಾವು ಪ್ರಶ್ನಿಸಬೇಕು ಎಂದು ನಟ ಪ್ರಕಾಶ್ ರಾಜ್ ತಮ್ಮ ಅಭಿಪ್ರಾಯ ಹೇಳಿದರು.
Advertisement