ಅಭಿವೃದ್ಧಿ ಪತ್ರಿಕೋದ್ಯಮ ಪ್ರಶಸ್ತಿ: ಗಿರೀಶ್ ಲಿಂಗಣ್ಣಗೆ ನಿರ್ಮಲಾನಂದನಾಥ ಸ್ವಾಮೀಜಿ, ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಶ್ಲಾಘನೆ; ಬಹುಮಾನದ ಹಣ ಪತ್ರಕರ್ತರ ನಿಧಿಗೆ ದಾನ!
ಬೆಂಗಳೂರು: ಕರ್ನಾಟಕ ಸರ್ಕಾರದ ವಾರ್ತಾ ಇಲಾಖೆ ನೀಡುವ ಪ್ರತಿಷ್ಠಿತ 'ಅಭಿವೃದ್ಧಿ ಪತ್ರಿಕೋದ್ಯಮ' ಪ್ರಶಸ್ತಿಗೆ ಹಿರಿಯ ಅಂಕಣಕಾರರಾದ ಗಿರೀಶ್ ಲಿಂಗಣ್ಣ ಅವರನ್ನು ಆಯ್ಕೆ ಮಾಡಲಾಗಿದೆ. ಬಾಹ್ಯಾಕಾಶ, ರಕ್ಷಣೆ, ಮತ್ತು ವಿದೇಶಾಂಗ ನೀತಿಯ ವಿಚಾರಗಳಲ್ಲಿ ಮಾಹಿತಿಪೂರ್ಣ ಲೇಖನಗಳನ್ನು ಬರೆಯುತ್ತಿರುವ ಗಿರೀಶ್ ಲಿಂಗಣ್ಣ ಅವರ ಕೊಡುಗೆಯನ್ನು ಗುರುತಿಸಿ, ಈ ಪ್ರಶಸ್ತಿ ಘೋಷಿಸಲಾಗಿದೆ.
ಪ್ರಶಸ್ತಿಯ ಜೊತೆಗೆ, ಒಂದು ಲಕ್ಷ ರೂಪಾಯಿಗಳ ನಗದು ಬಹುಮಾನವನ್ನೂ ನೀಡಲಾಗುತ್ತದೆ. ಆದರೆ, ಗಿರೀಶ್ ಲಿಂಗಣ್ಣ ಅವರು ಈ ಬಹುಮಾನದ ಮೊತ್ತವನ್ನು ಕರ್ನಾಟಕ ವೃತ್ತಿ ನಿರತ ಪತ್ರಕರ್ತರ ಸಂಘಕ್ಕೆ ಹಸ್ತಾಂತರಿಸಿ, ಅದರಿಂದ ಹಿರಿಯ ಪರಮಾಣು ವಿಜ್ಞಾನಿ, ಕರ್ನಾಟಕದವರೇ ಆದ ಡಾ. ರಾಜಾ ರಾಮಣ್ಣ ಅವರ ಹೆಸರಿನಲ್ಲಿ ದತ್ತಿ ನಿಧಿಯೊಂದನ್ನು ಸ್ಥಾಪಿಸಿ, ಅದರಿಂದ ಬರುವ ಮೊತ್ತವನ್ನು ಪ್ರತಿ ವರ್ಷವೂ ವಿಜ್ಞಾನದ ಕುರಿತು ಮಾಹಿತಿಪೂರ್ಣ ಲೇಖನಗಳನ್ನು ಪ್ರಕಟಿಸುವ ಪತ್ರಕರ್ತ ಅಥವಾ ಅಂಕಣಕಾರರಿಗೆ ನೀಡಬೇಕೆಂದು ಕೆಯುಡಬ್ಲ್ಯುಜೆಗೆ ಮನವಿ ಮಾಡಿಕೊಂಡಿದ್ದರು. ಅವರ ಮನವಿಯನ್ನು ಕರ್ನಾಟಕ ರಾಜ್ಯ ವೃತ್ತಿ ನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಶಿವಾನಂದ ತಗಡೂರು ಅವರು ಒಪ್ಪಿಕೊಂಡು, ಪ್ರಶಂಸೆ ವ್ಯಕ್ತಪಡಿಸಿ, ದತ್ತಿ ನಿಧಿಯನ್ನು ಆರಂಭಿಸುವುದಾಗಿ ತಿಳಿಸಿದ್ದಾರೆ.
ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ, ಸ್ವತಃ ಪ್ರತಿಷ್ಠಿತ ಐಐಟಿ ಪದವೀಧರರಾದ ಡಾ. ನಿರ್ಮಲಾನಂದನಾಥ ಮಹಾಸ್ವಾಮೀಜಿ ಗಿರೀಶ್ ಲಿಂಗಣ್ಣ ಅವರಿಗೆ ಪ್ರಶಸ್ತಿ ಘೋಷಿಸಿರುವುದನ್ನು ಸ್ವಾಗತಿಸಿ, ಗಿರೀಶ್ ಲಿಂಗಣ್ಣ ಅವರನ್ನು ಅಭಿನಂದಿಸಿದ್ದಾರೆ. “ಹೊಸ ಪೀಳಿಗೆಗೆ ಸ್ಫೂರ್ತಿ ನೀಡುವಲ್ಲಿ, ಸುಶಿಕ್ಷಿತರನ್ನಾಗಿಸುವಲ್ಲಿ ಬಾಹ್ಯಾಕಾಶ, ರಕ್ಷಣಾ ವ್ಯವಸ್ಥೆ ಹಾಗು ವಿದೇಶಾಂಗ ವ್ಯವಹಾರಗಳ ಕ್ಷೇತ್ರಗಳಲ್ಲಿ ಸಮರ್ಥವಾಗಿ ಬರವಣಿಗೆ ಮಾಡಬಲ್ಲ ಪ್ರತಿಭಾವಂತ ಲೇಖಕರ ಪಾತ್ರ ಬಹು ನಿರ್ಣಾಯಕವಾದುದು. ಅಂತಹ ಪ್ರತಿಭಾಶಾಲೀ ಲೇಖಕರು ಹೆಚ್ಚು ಹೆಚ್ಚು ಸಂಖ್ಯೆಯಲ್ಲಿ ಸೃಷ್ಟಿಯಾಗಬೇಕಾದ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ಒಕ್ಕಲಿಗ ಸಮುದಾಯದ ಹೆಮ್ಮೆಗೆ ಕಾರಣಕರ್ತರಾದ ಗಿರೀಶ್ ಲಿಂಗಣ್ಣನವರ ಸಾಧನೆ ಶ್ಲಾಘನೀಯವಾದುದು.” ಎಂದು ಸ್ವಾಮೀಜಿ ಹೇಳಿದ್ದಾರೆ.
ಮಹದೇಶ್ವರ ಬೆಟ್ಟ, ಸಾಲೂರು ಬೃಹನ್ಮಠದ ವಿದ್ವಾನ್ ಶಾಂತಮಲ್ಲಿಕಾರ್ಜುನ ಮಹಾಸ್ವಾಮಿಗಳೂ ಗಿರೀಶ್ ಲಿಂಗಣ್ಣ ಅವರನ್ನು ಅಭನಂದಿಸಿದ್ದಾರೆ.
"ಇಂದು ಜಗತ್ತು ವಿಜ್ಞಾನ, ತಂತ್ರಜ್ಞಾನ ಕೇಂದ್ರಿತವಾಗಿದೆ. ಬಾಹ್ಯಾಕಾಶ, ರಕ್ಷಣೆ ಮತ್ತು ಅಂತಾರಾಷ್ಟ್ರೀಯ ವ್ಯವಹಾರಗಳು ಬಹಳ ಮುಖ್ಯ ವಿಚಾರಗಳಾಗಿದ್ದು, ಅವುಗಳ ಕುರಿತು ಜ್ಞಾನ ಹೊಂದುವುದು ಅತ್ಯಂತ ಅವಶ್ಯಕವಾಗಿದೆ. ಇಂತಹ ಮುಖ್ಯವಾದ ಕ್ಷೇತ್ರಗಳ ಕುರಿತು ಬರೆದು, ಓದುಗರಿಗೆ, ಯುವ ಜನರಿಗೆ ಜ್ಞಾನ ಹಂಚುವಂತಹ ಬರಹಗಾರರ ಅವಶ್ಯಕತೆ ಇಂದು ಬಹಳ ಹೆಚ್ಚಿದೆ. ಈ ನಿಟ್ಟಿನಲ್ಲಿ, ಅಂಕಣಕಾರರಾದ ಶ್ರೀ ಗಿರೀಶ್ ಲಿಂಗಣ್ಣ ಅವರು ಬಾಹ್ಯಾಕಾಶ, ರಕ್ಷಣೆ, ಮತ್ತು ಅಂತಾರಾಷ್ಟ್ರೀಯ ವ್ಯವಹಾರಗಳ ಕುರಿತು ಬರೆಯುತ್ತಾ ಓದುಗರ ಜ್ಞಾನ ಹೆಚ್ಚಿಸುತ್ತಿದ್ದಾರೆ. ಅವರ ಬರಹ, ಕೊಡುಗೆಗಳನ್ನು ಪರಿಗಣಿಸಿ, ಕರ್ನಾಟಕ ಸರ್ಕಾರದ ವಾರ್ತಾ ಇಲಾಖೆ ಪ್ರತಿಷ್ಠಿತ ಅಭಿವೃದ್ಧಿ ಪತ್ರಿಕೋದ್ಯಮ ಪ್ರಶಸ್ತಿಯನ್ನು ಅವರಿಗೆ ನೀಡುತ್ತಿರುವುದು ಅವರ ಕೊಡುಗೆಗಳಿಗೆ ಸಂದ ಗೌರವವಾಗಿದೆ. ಇದಕ್ಕಾಗಿ ಗಿರೀಶ್ ಲಿಂಗಣ್ಣ ಅವರಿಗೆ ಮತ್ತು ಅವರನ್ನು ಗುರುತಿಸಿರುವುದಕ್ಕೆ ಸರ್ಕಾರವನ್ನೂ ನಾವು ಅಭಿನಂದಿಸುತ್ತೇವೆ" ಎಂದು ಸ್ವಾಮೀಜಿ ಹೇಳಿದ್ದಾರೆ.
"ಪ್ರಶಸ್ತಿಯ ಜೊತೆಗೆ ನೀಡುವ ಮೊತ್ತವನ್ನು ಕರ್ನಾಟಕ ರಾಜ್ಯ ವೃತ್ತಿ ನಿರತ ಪತ್ರಕರ್ತರ ಸಂಘಕ್ಕೆ ನೀಡಿ, ಕರ್ನಾಟಕದ ಹೆಮ್ಮೆಯ ವಿಜ್ಞಾನಿ ಡಾ. ರಾಜಾ ರಾಮಣ್ಣನವರ ಹೆಸರಿನಲ್ಲಿ ದತ್ತಿ ನಿಧಿ ಸ್ಥಾಪಿಸುವುದಾಗಿ ಗಿರೀಶ್ ಲಿಂಗಣ್ಣ ಅವರು ನಿರ್ಧರಿಸಿರುವುದು ಶ್ಲಾಘನೀಯ ನಡೆ. ಈ ದತ್ತಿ ನಿಧಿಯಿಂದ, ವಿಜ್ಞಾನ ಬರವಣೆಗೆಯಲ್ಲಿ ತೊಡಗುವ ಬರಹಗಾರರನ್ನು ಗುರುತಿಸಿ, ಅವರಿಗೆ ಬಹುಮಾನ ನೀಡಲಾಗುತ್ತದೆ. ಇದು ವಿಜ್ಞಾನ ಬರವಣೆಗೆಯ ಕುರಿತು ಯುವ ಜನರಲ್ಲಿ ಆಸಕ್ತಿ ಮೂಡಿಸಿ, ಇನ್ನಷ್ಟು ಜನರು ವಿಜ್ಞಾನ ಬರವಣಿಗೆಯಲ್ಲಿ ಆಸಕ್ತಿ ಹೊಂದಲು ಪ್ರೇರೇಪಣೆ ನೀಡಬಹುದು. ಇದು ನಮ್ಮ ನಾಡಿನ ವಿಜ್ಞಾನಿ ಡಾ. ರಾಜಾ ರಾಮಣ್ಣನವರಿಗೆ ನೀಡುವ ಸೂಕ್ತ ಗೌರವವಾಗಿದೆ" ಎಂದು ಸ್ವಾಮೀಜಿ ಅಭಿನಂದಿಸಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ