
ಬೆಂಗಳೂರು: ಬೆಂಗಳೂರು ಸಂಸದ ತೇಜಸ್ವಿ ಸೂರ್ಯ (Tejasvi Surya) ಬೆಂಗಳೂರಿನ "ಮೆಟ್ರೋ ಮಿತ್ರ" ಎಂದು ಕೇಂದ್ರ ನಗರಾಭಿವೃದ್ಧಿ & ವಸತಿ ಸಚಿವ ಮನೋಹರ್ ಲಾಲ್ ಖಟ್ಟರ್ ಸಂಸದರ ಕಾರ್ಯದಕ್ಷತೆಯನ್ನು ಪ್ರಶಂಸಿಸಿದ್ದಾರೆ.
ಸಂಸದರು ಬೆಂಗಳೂರು ಮಹಾನಗರದ ಮೆಟ್ರೋ ಅಗತ್ಯತೆಗಳಿಗೆ ತಕ್ಕಂತೆ ತ್ವರಿತಗತಿಯಲ್ಲಿ ಕಾರ್ಯನಿರ್ವಹಿಸಿರುವುದು ಅಭಿನಂದನಾರ್ಹ ಎಂದು ಕೇಂದ್ರ ಸಚಿವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಕೋಲ್ಕತ್ತಾದ ಟೀಟಾಘರ್ ನಲ್ಲಿ ಬೆಂಗಳೂರು ಮೆಟ್ರೋ ಹಳದಿ ಮಾರ್ಗದ ಪ್ರಥಮ ಬೋಗಿಗಳ ಚಾಲನಾ ಸಮಾರಂಭದಲ್ಲಿ ವರ್ಚುವಲ್ ಸಭೆಯ ಮೂಲಕ ಮಾತನಾಡಿದ ಸಚಿವ ಖಟ್ಟರ್, ಸಂಸದ ತೇಜಸ್ವೀ ಸೂರ್ಯ ರವರ ಕಾರ್ಯವೈಖರಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
"ಒಂದು ವ್ಯವಸ್ಥಿತ ತಂಡವಾಗಿ ಕಾರ್ಯನಿರ್ವಹಿಸುವುದು ಪ್ರಗತಿಯ ಸಂಕೇತ, ಯುವ ನಾಯಕರಾಗಿ ಸೂರ್ಯ ಈ ತಂಡದಲ್ಲಿ ಇರುವುದರಿಂದ ಅವರ ಪ್ರಯತ್ನದ ಫಲವಾಗಿ ವೇಗದ ಗತಿಯಲ್ಲಿ ಈ ಕಾಮಗಾರಿಗಳು ನಡೆಯುತ್ತಿವೆ. ತೇಜಸ್ವಿ ಸೂರ್ಯ ಯಾವುದೇ ಕಾರ್ಯ ಕೈಗೆತ್ತಿಕೊಂಡರೆ, ಅದನ್ನು ಪೂರ್ಣಗೊಳ್ಳುವ ವರೆಗೂ ಅವಿರತವಾಗಿ ಶ್ರಮಿಸುವುದು ಅವರ ಕಾರ್ಯವೈಖರಿಗೆ ಸಾಕ್ಷಿ. ಮೆಟ್ರೋ ಕಾರ್ಯಗಳಿಗೆ ಸಂಬಂಧಿಸಿದಂತೆ ಹಲವಾರು ಬಾರಿ ನನ್ನನ್ನು ಭೇಟಿಯಾಗಿ ಬೆಂಗಳೂರು ಮೆಟ್ರೋ ಶೀಘ್ರ ಗತಿಯ ಕಾರ್ಯಾಚರಣೆ ಕುರಿತಂತೆ ಒತ್ತಾಯಪಡಿಸಿದ್ದನ್ನು ನಾನು ಹೇಳಲೇಬೇಕಿದೆ. ಆದ್ದರಿಂದಲೇ ನಾನು ಅವರನ್ನು 'ಬೆಂಗಳೂರು ಮೆಟ್ರೋ ಮಿತ್ರ ' ಎಂದು ಸಂಬೋಧಿಸಲು ಇಚ್ಛಿಸುತ್ತೇನೆ" ಎಂದು ವಿವರಿಸಿದರು.
ನಮ್ಮ ಮೆಟ್ರೋ ಹಳದಿ ಮಾರ್ಗ 18.8 ಕಿಮೀ ಉದ್ದವನ್ನು ಹೊಂದಿದ್ದು, ಜಯನಗರದ ಆರ್ ವಿ ರೋಡ್ ನಿಂದ, ಬೊಮ್ಮಸಂದ್ರದ ವರೆಗೆ 3 ಇಂಟರ್ ಚೇಂಜ್ ( ಸಿಲ್ಕ್ ಬೋರ್ಡ್, ಆರ್ ವಿ ರೋಡ್, ಜಯದೇವ) ನಿಲ್ದಾಣಗಳೊಂದಿಗೆ, ಒಟ್ಟು 16 ನಿಲ್ದಾಣಗಳನ್ನು ಒಳಗೊಂಡಿದೆ. ಬೆಂಗಳೂರು ದಕ್ಷಿಣವನ್ನು ಐಟಿ, ಬಿಟಿ, ಕೈಗಾರಿಕಾ ಕಾರಿಡಾರ್ ನೊಂದಿಗೆ ಸಂಪರ್ಕ ಕಲ್ಪಿಸಲಿದ್ದು, ಈ ಮಾರ್ಗ ಕಾರ್ಯಾಚರಣೆಗೆ ಶುರುವಾದರೆ ಪ್ರತಿನಿತ್ಯ 2.5 ಲಕ್ಷ ಪ್ರಯಾಣಿಕರು ಸಂಚರಿಸುವ ಸಾಧ್ಯತೆಗಳಿವೆ.
ಚಾಲನಾ ಸಮಾರಂಭದಲ್ಲಿ ಮಾತನಾಡಿದ ಸಂಸದ ತೇಜಸ್ವಿ ಸೂರ್ಯ, " ಬೆಂಗಳೂರು ಸಂಚಾರ ದಟ್ಟಣೆ ನಿಯಂತ್ರಣದಲ್ಲಿ ಬಹುಮುಖ್ಯ ಪಾತ್ರ ವಹಿಸಲಿರುವ ಹಳದಿ ಮಾರ್ಗದ ಕಾರ್ಯಾಚರಣೆಗೆ ಸಂಬಂಧಿಸಿದಂತೆ ಇಂದು ಅತ್ಯಂತ ಮಹತ್ವದ ದಿನವಾಗಿದ್ದು, ಟೀಟಾಘರ್ ನಲ್ಲಿ ಇಂದು ಹಳದಿ ಮಾರ್ಗದ ಪ್ರಥಮ ಮೆಟ್ರೋ ಬೋಗಿಗಳಿಗೆ ಚಾಲನೆ ನೀಡಲಾಗಿದೆ. ಪ್ರತೀ ತಿಂಗಳು ಒಂದು ಬೋಗಿ ಈ ಮಾರ್ಗಕ್ಕೆ ಸೇರಿಕೊಳಲಿದ್ದು, ನಂತರದ ದಿನಗಳಲ್ಲಿ ತಿಂಗಳಿಗೆ 2 ಬೋಗಿಗಳ ಸೇರ್ಪಡೆಯಿಂದ ಬೆಂಗಳೂರು ಸಂಚಾರ ದಟ್ಟಣೆ ನಿಯಂತ್ರಣದಲ್ಲಿ ಬಹುಮುಖ್ಯ ಪಾತ್ರ ವಹಿಸಲಿವೆ ಎಂದು ಹೇಳಿದ್ದಾರೆ.
ಮೆಟ್ರೊ ಮಾರ್ಗದ ಆರಂಭಕ್ಕೆ ಇದ್ದ ಅಡೆತಡೆಗಳನ್ನು ನಿವಾರಿಸಲು ಹಲವಾರು ಪ್ರಯತ್ನಗಳನ್ನು ಮಾಡಿರುವ ಸಂಸದ ತೇಜಸ್ವಿ ಸೂರ್ಯ, ಈ ಕಾರ್ಯಕ್ಕೆ ಸಂಬಂಧಿಸಿದಂತೆ ಎಲ್ಲ ಸಹವರ್ತಿಗಳನ್ನು ಒಂದೇ ವೇದಿಕೆಗೆ ತಂದು, ಅಧಿಕಾರಿಗಳ ಮತ್ತು ಸಚಿವರ ಮಟ್ಟದಲ್ಲಿ ಇದ್ದ ತೊಂದರೆಗಳನ್ನು ಬಗೆಹರಿಸಲು ಅವಿರತ ಶ್ರಮವಹಿಸಿದ್ದಾರೆ.
1.2 ಕೋಟಿ ವಾಹನಗಳು ರಸ್ತೆಗಿಳಿಯುವ ಬೆಂಗಳೂರು ನಗರದಲ್ಲಿ, ಈ ಮಾರ್ಗದ ಆರಂಭದಿಂದ ಪ್ರತಿನಿತ್ಯ 2.5 ಲಕ್ಷಕ್ಕೂ ಅಧಿಕ ಪ್ರಯಾಣಿಕರಿಗೆ ಐಟಿ ಬಿಟಿ, ಕೈಗಾರಿಕಾ ಕಾರಿಡಾರ್ ಗಳಲ್ಲಿ ಸಂಚರಿಸಲು ಅನುಕೂಲವಾಗಲಿದೆ.
ಪ್ರಧಾನಿ ನರೇಂದ್ರ ಮೋದಿ, ನಗರಾಭಿವೃದ್ಧಿಗೆ ಆದ್ಯತೆಯ ಮೇರೆಗೆ ಅಭಿವೃದ್ಧಿ ಕಾರ್ಯಗಳಿಗೆ ಒತ್ತು ನೀಡಿದ್ದು, ಪ್ರತೀ ನಗರದಿಂದಲೂ ತೇಜಸ್ವಿ ಸೂರ್ಯ ಅವರಂತಹ ಜನಪ್ರತಿನಿಧಿಗಳು ಆಯ್ಕೆಯಾಗಿ ಬಂದರೆ ಅಭಿವೃದ್ಧಿಯಲ್ಲಿ ದಾಪುಗಾಲು ಹಾಕಲು ಯಾವುದೇ ಅಡೆತಡೆಗಳು ಇರುವುದಿಲ್ಲ. ಬೆಂಗಳೂರು ಅಭಿವೃದ್ಧಿಗೆ, ವಿಶ್ವದರ್ಜೆಯ ನಗರವನ್ನಗಿಸಲು ಕೇಂದ್ರ ಸರ್ಕಾರದಿಂದ ಎಲ್ಲ ರೀತಿಯ ಸಹಕಾರ ನೀಡಲಾಗುವುದು " ಎಂದು ಮನೋಹರ್ ಲಾಲ್ ಖಟ್ಟರ್ ಹೇಳಿದ್ದಾರೆ.
ಸಂಸದ ತೇಜಸ್ವಿ ಸೂರ್ಯ ಇದೇ ಸಂದರ್ಭದಲ್ಲಿ ಕೇಂದ್ರ ಸರ್ಕಾರದ ಸಹಕಾರಕ್ಕೆ ಧನ್ಯವಾದಗಳನ್ನು ತಿಳಿಸಿದರು.
Advertisement