ಉದ್ದೇಶಪೂರ್ವಕವಾಗಿಯೇ ದಾವೋಸ್ ಶೃಂಗಸಭೆಯಿಂದ ದೂರ: ಕೈಗಾರಿಕಾ ಸಚಿವ ಎಂ.ಬಿ ಪಾಟೀಲ್ ಸ್ಪಷ್ಟನೆ

ಫೆ.11ರಿಂದ 14ರವರೆಗೆ ಬೆಂಗಳೂರಿನಲ್ಲಿ ನಡೆಯಲಿರುವ ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ಜಾಗತಿಕ ಮಟ್ಟದ ಕಂಪನಿಗಳೆಲ್ಲ ಭಾಗವಹಿಸಲಿವೆ.
MB Patil
ಎಂ.ಬಿ ಪಾಟೀಲ್
Updated on

ಬೆಂಗಳೂರು: ದಾವೋಸ್ ಶೃಂಗಸಭೆಯಲ್ಲಿ ರಾಜ್ಯವು ಈ ಸಲ ಪ್ರಜ್ಞಾಪೂರ್ವಕವಾಗಿಯೇ ಭಾಗವಹಿಸುತ್ತಿಲ್ಲ. ಅಲ್ಲಿಗೂ ಹೋಗಿ ಒಡಂಬಡಿಕೆಗಳಿಗೆ ಸಹಿ ಹಾಕುವುದು ಮತ್ತು ಅವೇ ಕಂಪನಿಗಳನ್ನು‌‌ ಇಲ್ಲಿಗೂ ಕರೆದು ಮತ್ತೆ ಅದೇ ಒಡಂಬಡಿಕೆಗಳಿಗೆ ಸಹಿ ಹಾಕುವುದರಿಂದ ವೃಥಾ ಗೊಂದಲ ಉಂಟಾಗುತ್ತದೆ. ಇದನ್ನು ತಪ್ಪಿಸಲೆಂದೇ ನಾವು ಈ ಸಲ ದಾವೋಸ್ ಶೃಂಗಸಭೆಯಿಂದ ದೂರ ಉಳಿದಿದ್ದೇವೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ಹೇಳಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಫೆ.11ರಿಂದ 14ರವರೆಗೆ ಬೆಂಗಳೂರಿನಲ್ಲಿ ನಡೆಯಲಿರುವ ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ಜಾಗತಿಕ ಮಟ್ಟದ ಕಂಪನಿಗಳೆಲ್ಲ ಭಾಗವಹಿಸಲಿವೆ. ಇದರಿಂದ ರಾಜ್ಯಕ್ಕೆ 8ರಿಂದ 10 ಲಕ್ಷ ಕೋಟಿ ರೂಪಾಯಿ ಹೂಡಿಕೆ ಬರುವ ನಿರೀಕ್ಷೆ ಇದೆ ಎಂದು ಅವರು ಭರವಸೆ ವ್ಯಕ್ತಪಡಿಸಿದ್ದಾರೆ.

ನಾವು ಮಾಡಿಕೊಳ್ಳುವ ಒಡಂಬಡಿಕೆಗಳ ಪೈಕಿ ಮುಕ್ಕಾಲು ಪಾಲಾದರೂ ವಾಸ್ತವವಾಗಿ ಬಂಡವಾಳ ರೂಪದಲ್ಲಿ ನಮಗೆ ಬರಬೇಕು. ಇಲ್ಲದೆ ಹೋದರೆ ಎಲ್ಲವೂ ವ್ಯರ್ಥ. ಆದ್ದರಿಂದ ನಾವು ವಾಸ್ತವಿಕ ದೃಷ್ಟಿಕೋನ ಹೊಂದಿದ್ದೇವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ಇದನ್ನೇ ಹೇಳಿದ್ದಾರೆ ಎಂದು ಅವರು ತಿಳಿಸಿದ್ದಾರೆ.

2022ರಲ್ಲಿ ಬಿಜೆಪಿ ಸರಕಾರ ಕೂಡ ಹೂಡಿಕೆದಾರರ ಸಮಾವೇಶ ಮಾಡಿ, 50 ಲಕ್ಷ ಕೋಟಿ ರೂಪಾಯಿ ಬರುತ್ತದೆ ಎಂದಿತು. ಅದರಲ್ಲೂ ಗ್ರೀನ್ ಎನರ್ಜಿ ವಲಯಕ್ಕೆ 2.40 ಲಕ್ಷ ಕೋಟಿ ರೂಪಾಯಿ ಹೂಡಿಕೆ ಆಗಲಿದೆ ಎಂದಿತು‌. ಆದರೆ ಒಂದು ರೂಪಾಯಿ ಕೂಡ ಬರಲಿಲ್ಲ ಎಂದು ಮಾಹಿತಿ ನೀಡಿದರು.

MB Patil
2035 ರೊಳಗೆ ಬೆಂಗಳೂರಿಗೆ 2ನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಬೇಕು: ಎಂ ಬಿ ಪಾಟೀಲ್

ನಮ್ಮಲ್ಲಿ ಹಸಿರು ಇಂಧನ ಕ್ಷೇತ್ರಕ್ಕೆ ಅಷ್ಟೊಂದು ಬಂಡವಾಳ ತಡೆದುಕೊಳ್ಳುವ ಶಕ್ತಿಯೇ ಇಲ್ಲ. ಆದರೂ ಬಿಜೆಪಿ ಸರಕಾರ ದೊಡ್ಡದಾಗಿ ಹೇಳಿಕೊಂಡಿತು. ಅಂತಹ ತಪ್ಪು ಈ ಬಾರಿ ಆಗುವುದಿಲ್ಲ ಎಂದು ಪಾಟೀಲ ಸ್ಪಷ್ಟಪಡಿಸಿದ್ದಾರೆ.

ಕಾಂಗ್ರೆಸ್ ಪಕ್ಷದಲ್ಲಿನ ಆಂತರಿಕ ಕಚ್ಚಾಟದಿಂದ ಸ್ವಿಟ್ಜರ್ಲೆಂಡ್‌ನ ದಾವೋಸ್‌ನಲ್ಲಿ ನಡೆಯುತ್ತಿರುವ ವಿಶ್ವ ಆರ್ಥಿಕ ವೇದಿಕೆಯಲ್ಲಿ (WEF) ಕರ್ನಾಟಕವನ್ನು ಯಾರು ಪ್ರತಿನಿಧಿಸದಂತಾಗಿದೆ ಎಂದು ಬಿಜೆಪಿ ಬುಧವಾರ ಹೇಳಿದೆ.

ಅಂತಾರಾಷ್ಟ್ರೀಯ ವೇದಿಕೆಯಲ್ಲಿ ರಾಜ್ಯದ ಯಾವುದೇ ಪ್ರತಿನಿಧಿ ಹಾಜರಾಗದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ ರಾಜ್ಯ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್.ಅಶೋಕ್, ದೇಶದ ಪ್ರಮುಖ ರಾಜ್ಯಗಳ ಮುಖ್ಯಮಂತ್ರಿಗಳು ದಾವೋಸ್‌ನಲ್ಲಿದ್ದು, ತಮ್ಮ ರಾಜ್ಯಗಳಿಗೆ ಹೂಡಿಕೆಗೆ ಬಲವಾದ ಪ್ರಯತ್ನ ನಡೆಸುತ್ತಿರುವಾಗ ಸಿಎಂ ಸಿದ್ದರಾಮಯ್ಯ ಅಥವಾ ಅವರ ಸಂಪುಟ ಸಹೋದ್ಯೋಗಿಗಳು ರಾಜ್ಯವನ್ನು ಪ್ರಮುಖ ವಿಶ್ವ ವೇದಿಕೆಯಲ್ಲಿ ಪ್ರತಿನಿಧಿಸಲು ಆಸಕ್ತಿ ತೋರಿಲ್ಲ ಎಂದು ಟೀಕಿಸಿದರು.

ರಹಸ್ಯ ಅಧಿಕಾರ ಹಂಚಿಕೆ ಒಪ್ಪಂದಕ್ಕೆ ಧನ್ಯವಾದಗಳು. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಸೇರಿದಂತೆ ಇಡೀ ಸಂಪುಟ ಕೊಳಕು ಅಧಿಕಾರ ರಾಜಕಾರಣದಲ್ಲಿ ಮುಳುಗಿದ್ದಾರೆ. ಇದು ಕರ್ನಾಟಕದ ಆರ್ಥಿಕತೆ ಮತ್ತು ಆಡಳಿತವನ್ನು ಸಂಪೂರ್ಣವಾಗಿ ಸ್ತಬ್ಧಗೊಳಿಸಿದೆ ಎಂದು ಅಶೋಕ್ ವಾಗ್ದಾಳಿ ನಡೆಸಿದ್ದಾರೆ.

ಜಾರಕಿಹೊಳಿಗೆ ಶಕ್ತಿ ಇದೆ

ಕಾಂಗ್ರೆಸ್ ಮುಖಂಡ ಸತೀಶ ಜಾರಕಿಹೊಳಿ ಪಕ್ಷದ ನೇತಾರರು. ಅವರನ್ನು ರಾಜಕೀಯವಾಗಿ ಯಾರೂ ಮುಗಿಸಲಾರರು. ಅಂತಹ ಆಲೋಚನೆ ಕೂಡ ಯಾರಿಗೂ ಇಲ್ಲ. ಈ ವಿಚಾರವಾಗಿ ಬಿಜೆಪಿಯ ಜನಾರ್ದನ ರೆಡ್ಡಿ ಮಾತನಾಡಿರುವುದು ರಾಜಕೀಯಪ್ರೇರಿತ ಎಂದರು.

ಶ್ರೀರಾಮುಲು ಮತ್ತು ರೆಡ್ಡಿ ಅವರ ಸಂಬಂಧ ಈಗ ಹಳಸಿದೆ. ಶ್ರೀರಾಮುಲು ನಮ್ಮ ಪಕ್ಷಕ್ಕೆ ಬರುವ ಆಸಕ್ತಿ ವ್ಯಕ್ತಪಡಿಸಿದರೆ, ಅದರ ಬಗ್ಗೆ ಹೈಕಮಾಂಡ್ ತೀರ್ಮಾನಿಸುತ್ತದೆ. ಆದರೆ ರೆಡ್ಡಿ ವಿರುದ್ಧ ನಾವೆಲ್ಲರೂ ಹೋರಾಡಿದ್ದೇವೆ. ಹೀಗಾಗಿಯೇ ಹಿಂದೆ ಅವರು ನಮ್ಮ ಪಕ್ಷಕ್ಕೆ ಸೇರಲು ಬಂದರೂ ನಾವು ಅದನ್ನು ಒಪ್ಪಲಿಲ್ಲ ಎಂದು ಪಾಟೀಲ್ ಸ್ಪಷ್ಟ ಪಡಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com