ರಾಯಚೂರು: ಮೊಹರಂ ಆಚರಣೆ ವೇಳೆ ಅಗ್ನಿ ಕುಂಡಕ್ಕೆ ಬಿದ್ದ ಯುವಕ, ಗಂಭೀರ ಗಾಯ
ರಾಯಚೂರು: ಮೊಹರಂ ಆಚರಣೆ ವೇಳೆ ಅಗ್ನಿ ಕುಂಡದಲ್ಲಿ ಬಿದ್ದ ಯುವಕನೋರ್ವ ಗಂಭೀರವಾಗಿ ಗಾಯಗೊಂಡಿರುವ ಘಟನೆ ಜಿಲ್ಲೆಯ ಲಿಂಗಸೂಗೂರು ತಾಲ್ಲೂಕಿನಲ್ಲಿ ನಡೆದಿದೆ. ಹನುಮಂತ ಯರಗಂಟಿ (33) ಗಾಯಗೊಂಡ ಯುವಕನಾಗಿದ್ದಾನೆ.
ದರ್ಗಾದ ಮುಂದೆ ಕೆಂಡ ಹಾಯಲು ಸಿದ್ಧಪಡಿಸಲಾದ ಅಗ್ನಿ ಕುಂಡದಲ್ಲಿ ಕಟ್ಟಿಗೆಗಳನ್ನು ಹಾಕಿ ಬೆಂಕಿ ಹಚ್ಚಲಾಗಿತ್ತು. ಈ ವೇಳೆ ಹನುಮಂತನಿಗೆ ಬೆಂಕಿಗೆ ಬಿದ್ದಿದ್ದಾನೆ. ಕೂಡಲೇ ಬೆಂಕಿಯಿಂದ ದೇಹ ಸುಟ್ಟು ಹೋಗಿದೆ. ತಕ್ಷಣ ಸ್ಥಳದಲ್ಲಿದ್ದವರು ಆತನ ನೆರವಿಗೆ ಧಾವಿಸಿದ್ದು, ರಕ್ಷಿಸಲು ಹರಸಾಹಸ ಪಟ್ಟಿದ್ದಾರೆ.
ಬಳಿಕ ಗಾಯಾಳುವನ್ನು ಲಿಂಗಸೂಗೂರು ತಾಲೂಕ್ ಆಸ್ಪತ್ರೆಗೆ, ತದನಂತರ ರಾಯಚೂರಿನ ರಿಮ್ಸ್ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆತ ಸಾವು- ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾನೆ ಎಂದು ತಿಳಿದುಬಂದಿದೆ.
ಈ ಘಟನೆ ಸ್ಥಳೀಯರನ್ನು ಬೆಚ್ಚಿ ಬೀಳಿಸಿದೆ. ಅಲಾಯಿ ಅಗ್ನಿ ಕುಂಡದ ಬಳಿ ನಡೆದು ಹೋಗುವಾಗ ಆಕಸ್ಮಿಕ ಕಾಲು ಜಾರಿ ಹನುಮಂತ ಕುಂಡಕ್ಕೆ ಬಿದ್ದಿದ್ದು, ಬೆಂಕಿಯ ತೀವ್ರತೆ ಹೆಚ್ಚಾಗಿದ್ದರಿಂದ ಆತನನ್ನು ತಕ್ಷಣವೇ ರಕ್ಷಿಸಲು ನಮಗೆ ಸಾಧ್ಯವಾಗಲಿಲ್ಲ ಎಂದು ಅವರ ಸಂಬಂಧಿ ಮೌನೇಶ್ ಹೇಳಿದರು.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ