News headlines 10-07-2025 | ಬೀದಿ ನಾಯಿಗಳಿಗೆ ಪ್ರತಿ ದಿನ ಸರ್ಕಾರದಿಂದ ಬಿರಿಯಾನಿ ಭಾಗ್ಯ! ಕಾಂಗ್ರೆಸ್ ಶಾಸಕನಿಗೆ ED ಶಾಕ್; 5 ವರ್ಷವೂ ನಾನೇ ಸಿಎಂ- ದೆಹಲಿಯಲ್ಲಿ ಸಿದ್ದರಾಮಯ್ಯ

News headlines
ಸುದ್ದಿ ಮುಖ್ಯಾಂಶಗಳುonline desk

1. ಕಾಂಗ್ರೆಸ್ ಶಾಸಕ ಸುಬ್ಬಾರೆಡ್ಡಿ ನಿವಾಸದ ಮೇಲೆ ED ದಾಳಿ

ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ ಉಲ್ಲಂಘನೆ ಆರೋಪದಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಎಸ್.ಎನ್. ಸುಬ್ಬಾ ರೆಡ್ಡಿಗೆ ಸಂಬಂಧಿಸಿದ ಬೆಂಗಳೂರಿನ ಐದು ಸ್ಥಳಗಳಲ್ಲಿ ಜಾರಿ ನಿರ್ದೇಶನಾಲಯ ಅಧಿಕಾರಿಗಳು ಗುರುವಾರ ಬೆಳಗಿನ ಜಾವ ದಾಳಿ ನಡೆಸಿದ್ದಾರೆ. ಶಾಸಕ ಸುಬ್ಬಾರೆಡ್ಡಿ ಅವರು ಹಾಂಗ್ ಕಾಂಗ್, ಮಲೇಷ್ಯಾ ಮತ್ತು ಜರ್ಮನಿಯಾದ್ಯಂತ ಬ್ಯಾಂಕ್‌ಗಳಲ್ಲಿ ಕಪ್ಪು ಹಣ ಹೊಂದಿದ್ದಾರೆ, ಸರ್ಕಾರಕ್ಕೆ ದಾಖಲೆಗಳನ್ನು ತಿಳಿಸದೆ ವಾಹನಗಳು ಮತ್ತು ಆಸ್ತಿಗಳನ್ನು ಖರೀದಿಸಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಈ ದಾಳಿ ನಡೆದಿದೆ. ವಿದೇಶಗಳಲ್ಲಿನ ಬ್ಯಾಂಕ್ ಅಕೌಂಟ್, ವಿದೇಶ ವ್ಯವಹಾರದಲ್ಲಿ ಹೂಡಿಕೆ ವಿಚಾರವಾಗಿ ಶೋಧ ನಡೆಸಲಾಗುತ್ತಿದೆ.

2. 5 ವರ್ಷವೂ ನಾನೇ ಸಿಎಂ- ಸಿದ್ದರಾಮಯ್ಯ

5 ವರ್ಷವೂ ನಾನೇ ಮುಖ್ಯಮಂತ್ರಿಯಾಗಿ ಅಧಿಕಾರದಲ್ಲಿ ಇರುತ್ತೇನೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪುನರುಚ್ಚರಿಸಿದ್ದಾರೆ. ಹೈಕಮಾಂಡ್ ನಾಯಕರ ಭೇಟಿಗೂ ಮುನ್ನ ಹೇಳಿಕೆ ನೀಡಿರುವ ಸಿಎಂ, ಎರಡೂವರೆ ವರ್ಷದ ಬಳಿಕ ಯಾವುದೇ ಅಧಿಕಾರ ಹಂಚಿಕೆ ಮಾತುಕತೆ ನಡೆದಿಲ್ಲ. ನಾನೇ ಮುಖ್ಯಮಂತ್ರಿ ಕುರ್ಚಿಯಲ್ಲಿ ಇರುತ್ತೇನೆ ಎಂದು ಸ್ಪಷ್ಟಪಡಿಸಿದ್ದಾರೆ. ಡಿ.ಕೆ. ಶಿವಕುಮಾರ್ ಕೂಡ ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿ. ಅದರಲ್ಲಿ ತಪ್ಪೇನೂ ಇಲ್ಲ. ಆದರೆ, ಕುರ್ಚಿ ಈಗ ಖಾಲಿ ಇಲ್ಲ ಎಂದು ಡಿ.ಕೆ. ಶಿವಕುಮಾರ್ ಅವರೇ ಹೇಳಿದ್ದಾರೆಂದು ಹೇಳಿದರು. ಇನ್ನು ನಾಯಕತ್ವ ಬದಲಾವಣೆ ವಿಷಯವಾಗಿ ಗೃಹ ಸಚಿವ ಪರಮೇಶ್ವರ್ ಪ್ರತಿಕ್ರಿಯೆ ನೀಡಿದ್ದು, ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಊಹಾಪೋಹಗಳ ನಡುವೆ ಅಂತಹ ಸಂದರ್ಭ ಬಂದಾಗ ಪಕ್ಷದ ಹೈಕಮಾಂಡ್ ಸೂಕ್ತ ತೀರ್ಮಾನ ತೆಗೆದುಕೊಳ್ಳಲಿದೆ ಎಂದು ತಿಳಿಸಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಧ್ಯಮಗಳು ವಿಶ್ಲೇಷಣೆ ಮಾಡಿದಂತೆ ಇದೊಂದು ಡ್ರಾಮಾ. ನಿಮ್ಮ ಹೇಳಿಕೆಯನ್ನು ನಾನು ಒಪ್ಪಬೇಕಾಗುತ್ತೆ. ಪದೇ ಪದೇ ಇದರ ಬಗ್ಗೆ ಚರ್ಚೆ ಆಗುವುದು, ಅವರೊಂದು ಹೇಳಿಕೆ ಕೊಡುವುದು ನಾನೊಂದು ಹೇಳೋದು, ಮತ್ತೊಬ್ಬರು ಒಂದು ಹೇಳೋದು ಆಗಬಾರದು ಎಂದು ತಿಳಿಸಿದ್ದಾರೆ.

3. Raichur: ಸರ್ಕಾರಿ ಆಸ್ಪತ್ರೆಯಲ್ಲಿ ನವಜಾತ ಶಿಶು ಅಪಹರಣಕ್ಕೆ ವಿಫಲ ಯತ್ನ; ಮಹಿಳೆಯ ವೇಷದಲ್ಲಿದ್ದ ವ್ಯಕ್ತಿ ಬಂಧನ

ರಾಯಚೂರಿನ ಸರ್ಕಾರಿ ಆಸ್ಪತ್ರೆಯಲ್ಲಿ ನವಜಾತ ಶಿಶುವನ್ನು ಅಪಹರಿಸುವ ಯತ್ನವನ್ನು ರೋಗಿಗಳ ಪರಿಚಾರಕರು ಮತ್ತು ಆಸ್ಪತ್ರೆಗೆ ಬಂದಿದ್ದ ಸಂದರ್ಶಕರು ವಿಫಲಗೊಳಿಸಿದ್ದಾರೆ. ಬುಧವಾರ ಮುಂಜಾನೆ ರೋಗಿಗಳ ಪರಿಚಾರಕರು ನಿದ್ರೆಗೆ ಜಾರಿದ ಸಂದರ್ಭದಲ್ಲಿ ರಾಯಚೂರು ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ಮಹಿಳೆಯರ ವೇಷದಲ್ಲಿ ಆಗಮಿಸಿದ ಗುಂಪೊಂದು ನಾಲ್ಕನೇ ಮಹಡಿಯಲ್ಲಿರುವ ಹೆರಿಗೆ ವಾರ್ಡ್ ಗೆ ತೆರಳಿತ್ತು. ಅವರಲ್ಲಿ ಓರ್ವ ನವ ಜಾತ ಶಿಶುವನ್ನು ಅಪಹರಿಸಲು ಯತ್ನಿಸಿದ್ದಾರೆ. ಆದರೆ ಸ್ಥಳದಲ್ಲಿದ್ದ ಪರಿಚಾರಕರೊಬ್ಬರು ಅನುಮಾನಗೊಂಡು ಮಧ್ಯ ಪ್ರವೇಶಿಸಿದ್ದಾರೆ. ಈ ವೇಳೆ ಮಹಿಳೆಯ ವೇಷದಲ್ಲಿದ್ದ ವ್ಯಕ್ತಿಯ ಜೊತೆಗೆ ಕೆಲಹೊತ್ತು ವಾಗ್ವಾದ ನಡೆಸಿ, ಪೊಲೀಸರಿಗೆ ಒಪ್ಪಿಸಿದ್ದಾರೆ. ಘಟನೆಯ ವೇಳೆ ಗೃಹರಕ್ಷಕ ಸಿಬ್ಬಂದಿ ಕರ್ತವ್ಯದಲ್ಲಿ ಇರಲಿಲ್ಲ ಎಂದು ಪ್ರತ್ಯಕ್ಷದರ್ಶಿಗಳು ಆತಂಕ ವ್ಯಕ್ತಪಡಿಸಿದ್ದಾರೆ.

4. MGRoad, BrigadeRoad ಗಳಲ್ಲಿ ಮಹಿಳೆಯರು ಯುವತಿಯರ ರಹಸ್ಯ ಫೋಟೋ ಶೂಟ್; ವ್ಯಕ್ತಿ ಬಂಧನ

ಬೆಂಗಳೂರಿನ ಪ್ರತಿಷ್ಠಿತ ಪ್ರದೇಶಳಾದ ಎಂಜಿ ರಸ್ತೆ, ಬ್ರಿಗೇಡ್ ರಸ್ತೆ ಮತ್ತು ಚರ್ಚ್ ಸ್ಟ್ರೀಟ್ ಗಳಲ್ಲಿ ತಿರುಗಾಡುತ್ತಾ ಅಲ್ಲಿನ ಮಹಿಳೆಯರು ಮತ್ತು ಯುವತಿಯರ ಅಂಗಾಂಗಳನ್ನು ಫೋಕಸ್ ಮಾಡಿ ರಹಸ್ಯವಾಗಿ ವಿಡಿಯೋ ಚಿತ್ರೀಕರಿಸುತ್ತಿದ್ದ ವ್ಯಕ್ತಿಯನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ. ಬಂಧನಕ್ಕೊಳಗಾದ ವ್ಯಕ್ತಿ ಮಹಿಳೆಯರ ಅನುಮತಿಯಿಲ್ಲದೇ ಅವರ ದೇಹವನ್ನು ರಹಸ್ಯವಾಗಿ ವಿಡಿಯೋ ಚಿತ್ರೀಕರಿಸಿ ಅವುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡುತ್ತಿದ್ದ. ಬಂಧಿತ ವ್ಯಕ್ತಿಯನ್ನು 26 ವರ್ಷದ ಗುರುದೀಪ್ ಸಿಂಗ್ ಎಂದು ಗುರುತಿಸಲಾಗಿದೆ. ಗುರುದೀಪ್ ಸಿಂಗ್ ಈ ರೀತಿ ನೂರಾರು ಹೆಣ್ಣುಮಕ್ಕಳ ವಿಡಿಯೋಗಳನ್ನು ಅಪ್ಲೋಡ್ ಮಾಡಿದ್ದು, ಇದೀಗ ಈ ದೂರ್ತನ ರಹಸ್ಯವನ್ನು ಓರ್ವ ಸಂತ್ರಸ್ಥೆ ಬಯಲಿಗೆಳೆದಿದ್ದಾರೆ.

5. ದೇಶದಲ್ಲೇ ಮೊದಲು: BBMP ಯಿಂದ ಬೀದಿ ನಾಯಿಗಳಿಗೆ ದಿನನಿತ್ಯ ಬಿರಿಯಾನಿ ನೀಡುವ ಯೋಜನೆ!

ರಾಜ್ಯದ ಸರ್ಕಾರ ಹಾಗೂ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ದೇಶದಲ್ಲೇ ಮೊದಲ ಬಾರಿಗೆ ಬೀದಿ ನಾಯಿಗಳಿಗೆ ದಿನನಿತ್ಯ ಬಿರಿಯಾನಿ ನೀಡಲು ಮುಂದಾಗಿವೆ. ನಗರದ ಎಂಟು ವಲಯಗಳಲ್ಲಿ ಬೀದಿ ನಾಯಿಗಳಿಗೆ ಪ್ರತಿದಿನ ಚಿಕನ್ ಮತ್ತು ಎಗ್ ರೈಸ್ ನೀಡಲು ಬಿಬಿಎಂಪಿ 2.8 ಕೋಟಿ ರೂ.ಗಳ ಟೆಂಡರ್ ಕರೆದಿದೆ, ಪ್ರತಿ ವಲಯದಲ್ಲಿ ಸರಿಸುಮಾರು 600 ರಿಂದ 700 ಬೀದಿನಾಯಿಗಳಿವೆ ಎಂದು ಅಂದಾಜಿಸಲಾಗಿದೆ. ಈ ಯೋಜನೆಯು ಆರಂಭದಲ್ಲಿ ಕೇವಲ 5,000 ನಾಯಿಗಳಿಗೆ ಮಾತ್ರ ಲಭ್ಯವಿರುವುದು ತೀವ್ರ ಚರ್ಚೆಗೆ ಗ್ರಾಸವಾಗಿದೆ. ಬಿಬಿಎಂಪಿಯ ಈ ಬಾಡೂಟ ಯೋಜನೆ ಮಾನವೀಯತೆಯ ವಿಶಿಷ್ಟ ಪ್ರಯೋಗವೋ ಅಥವಾ ತೆರಿಗೆದಾರರ ಹಣದ ದುರುಪಯೋಗವೋ ಎಂಬ ಚರ್ಚೆಗೆ ದಾರಿ ಹಾಕಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com