
ಬೆಂಗಳೂರು: ಆಘಾತಕಾರಿ ಬೆಳವಣಿಗೆಯೊಂದರಲ್ಲಿ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣ ಬಳಿ ಸಂಭವಿಸಿದ ಕಾಲ್ತುಳಿತದಲ್ಲಿ ಮೃತಪಟ್ಟ ನನ್ನ ಮಗಳ ಚಿನ್ನಾಭರಣವು ಕಳುವಾಗಿದೆ ಎಂದು ತಾಯಿಯೊಬ್ಬರು ದೂರು ನೀಡಿದ್ದಾರೆ.
ಜೂನ್ 4 ರಂದು ರಾಯಲ್ ಚಾಲೆಂಜರ್ಸ್ ಬೆಂಗಳೂರಿನ ಐಪಿಎಲ್ ವಿಜಯೋತ್ಸವದ ಮೆರವಣಿಗೆಯ ಸಮಯದಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣದ ಹೊರಗೆ ಸಂಭವಿಸಿದ ಕಾಲ್ತುಳಿತದಲ್ಲಿ ಸಾವನ್ನಪ್ಪಿದ 18 ವರ್ಷದ ದಿವ್ಯಾಂಶಿ ಅವರ ತಾಯಿ ಅಶ್ವಿನಿ, ಕಮರ್ಷಿಯಲ್ ಸ್ಟ್ರೀಟ್ ಪೊಲೀಸ್ ಠಾಣೆಯಲ್ಲಿ ಪೊಲೀಸ್ ದೂರು ದಾಖಲಿಸಿದ್ದಾರೆ.
ಶವಪರೀಕ್ಷೆಯ ನಂತರ ತನ್ನ ಮಗಳ ದೇಹವನ್ನು ಹಸ್ತಾಂತರಿಸಿದರು. ಆದರೆ ಚಿನ್ನದ ಕಿವಿಯೋಲೆಗಳು ಕಾಣೆಯಾಗಿವೆ ಎಂದು ಅಶ್ವಿನಿ ದೂರಿನಲ್ಲಿ ತಿಳಿಸಿದ್ದಾರೆ. ಈ ಕಿವಿಯೋಲೆಗಳನ್ನು ದಿವ್ಯಾಂಶಿಗೆ ಒಂದೂವರೆ ವರ್ಷಗಳ ಹಿಂದೆ ಅವಳ ಚಿಕ್ಕಪ್ಪ ಉಡುಗೊರೆಯಾಗಿ ನೀಡಿದ್ದರು. ಮಗಳು ಅದನ್ನು ಯಾವಾಗಲೂ ಧರಿಸುತ್ತಿದ್ದಳು ಎಂದು ಅಶ್ವಿನಿ ಹೇಳಿಕೊಂಡಿದ್ದಾರೆ.
ಈ ಸಂಬಂಧ ದೂರು ದಾಖಲಿಸಲು ಹಲವು ಪೊಲೀಸ್ ಠಾಣೆಗಳಿಗೆ ಭೇಟಿ ನೀಡಿದ್ದೇವು. ಆದರೆ ಯಾವುದೇ ಪರಿಹಾರ ಸಿಗಲಿಲ್ಲ ಎಂದು ಹೇಳಿದರು. ಮಾಧ್ಯಮಗಳೊಂದಿಗೆ ಮಾತನಾಡಿದ ಅಶ್ವಿನಿ, ನಾವು ಎಲ್ಲಾ ವಸ್ತುಗಳನ್ನು ಕೇಳುತ್ತಿಲ್ಲ. ನಮಗೆ ಬೇಕಾಗಿರುವುದು ಅವಳ ಕಿವಿಯೋಲೆಗಳು ಮಾತ್ರ ಎಂದು ಹೇಳಿದರು.
ಈ ವರ್ಷ ಜೂನ್ 4 ರಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಮ್ಮ ಚೊಚ್ಚಲ ಇಂಡಿಯನ್ ಪ್ರೀಮಿಯರ್ ಲೀಗ್ ಪ್ರಶಸ್ತಿಯನ್ನು ಗೆದ್ದುಕೊಂಡಿತು. 18 ವರ್ಷಗಳ ಪಂದ್ಯಾವಳಿಯ ಇತಿಹಾಸದಲ್ಲಿ ಫ್ರಾಂಚೈಸಿಗೆ ಇದು ಮೊದಲ ಪ್ರಶಸ್ತಿಯಾಗಿದ್ದು, ಬೃಹತ್ ಆಚರಣೆಗೆ ಕಾರಣವಾಯಿತು. ಇದರ ಭಾಗವಾಗಿ, ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ವಿಜಯೋತ್ಸವವನ್ನು ಘೋಷಿಸಲಾಯಿತು. ಈ ವೇಳೆ ಲಕ್ಷಾಂತರ ಸಂಖ್ಯೆಯಲ್ಲಿ ಅಭಿಮಾನಿಗಳು ಜಮಾಯಿಸಿದ್ದರಿಂದ ಕಾಲ್ತುಳಿತ ಸಂಭವಿಸಿ 11 ಮಂದಿ ಮೃತಪಟ್ಟಿದ್ದರು.
Advertisement