ಪೊಲೀಸ್ ಠಾಣೆಗಳಲ್ಲಿ ಭ್ರಷ್ಟಾಚಾರ, ಜನರ ಶೋಷಣೆಗೆ ರಾಜಕಾರಣಿಗಳೇ ಕಾರಣ: ಲೋಕಾಯುಕ್ತ ವಿಶೇಷ ನ್ಯಾಯಾಲಯ

ಗೋವಿಂದಪುರ ಪೊಲೀಸ್ ಠಾಣೆಯಲ್ಲಿ ಎಸ್‌ಐ ಆಗಿರುವ ಸಾವಿತ್ರಿ ಬಾಯಿ ಜೆಕೆ ಅವರ ಮೇಲೆ ಲೋಕಾಯುಕ್ತ ಪೊಲೀಸರು 1.25 ಲಕ್ಷ ರೂ. ಲಂಚ ಪಡೆದ ಆರೋಪ ಹೊರಿಸಿದ್ದಾರೆ.
Lokayukta office
ಲೋಕಾಯುಕ್ತ ಕಚೇರಿ
Updated on

ಬೆಂಗಳೂರು: ಲಂಚದ ಆರೋಪ ಹೊತ್ತಿರುವ ಮಹಿಳಾ ಸಬ್ ಇನ್ಸ್‌ಪೆಕ್ಟರ್ ಜಾಮೀನು ಅರ್ಜಿಯನ್ನು ತಿರಸ್ಕರಿಸಿದ ಲೋಕಾಯುಕ್ತ ಪ್ರಕರಣಗಳ ವಿಶೇಷ ನ್ಯಾಯಾಲಯವು, ಪೊಲೀಸ್ ಠಾಣೆಗಳು ಜನರ ನಂಬಿಕೆ ಕಳೆದುಕೊಂಡಿರುವುದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿತು.

ಗೋವಿಂದಪುರ ಪೊಲೀಸ್ ಠಾಣೆಯಲ್ಲಿ ಎಸ್‌ಐ ಆಗಿರುವ ಸಾವಿತ್ರಿ ಬಾಯಿ ಜೆಕೆ ಅವರ ಮೇಲೆ ಲೋಕಾಯುಕ್ತ ಪೊಲೀಸರು 1.25 ಲಕ್ಷ ರೂ. ಲಂಚ ಪಡೆದ ಆರೋಪ ಹೊರಿಸಿದ್ದಾರೆ.

ಪೊಲೀಸ್ ಠಾಣೆಗಳು ಇನ್ನು ಮುಂದೆ ಅಪರಾಧಗಳನ್ನು ಕಡಿಮೆ ಮಾಡಲು ಮತ್ತು ಸಮಾಜದಲ್ಲಿ ಆರೋಗ್ಯಕರ ವಾತಾವರಣವನ್ನು ನಿರ್ಮಿಸುವ ಉದ್ದೇಶ ಹೊಂದಿರುವುದಿಲ್ಲ ಎಂದು ನ್ಯಾಯಾಧೀಶ ಕೆ.ಎಂ. ರಾಧಾಕೃಷ್ಣ ಅಭಿಪ್ರಾಯ ಪಟ್ಟರು. ಜನಸ್ನೇಹಿ ಆಗುವ ಬದಲು ಪೊಲೀಸರು ತಮ್ಮ ಹುದ್ದೆಗಳಿಗೆ ನೀಡಿರುವ ಹಣವನ್ನು ಮರಳಿ ಪಡೆಯಲು ಭ್ರಷ್ಟ ಚಟುವಟಿಕೆಗಳನ್ನು ಸಮರ್ಥಿಸಿಕೊಳ್ಳುವಷ್ಟು ಧೈರ್ಯ ಮಾಡುತ್ತಿದ್ದಾರೆ, ಇದು ಅಪಾಯಕಾರಿ ಸಂಕೇತವಾಗಿದೆ. ನಮ್ಮನ್ನು ಆಳುತ್ತಿರುವ ಜನಪ್ರತಿನಿಧಿಗಳು ಸದ್ಯದ ವಾತಾವರಣ ಮತ್ತು ಶೋಷಣೆಗೆ ಹೇಗೆ ಕಾರಣರಾಗಿದ್ದಾರೆ ಎಂಬುದನ್ನು ಇದು ಸೂಚಿಸುತ್ತದೆ ಎಂದು ನ್ಯಾಯಾಧೀಶರು ಹೇಳಿದರು.

'ಪೊಲೀಸ್' ಎಂಬ ಪದವು ಎಲ್ಲರಿಗೂ ತಾಯಿಯ ನಂಬಿಕೆಯಂತಿತ್ತು, ಆದರೆ ಪೊಲೀಸ್ ಠಾಣೆಗಳಲ್ಲಿ ಆಳವಾಗಿ ಬೇರೂರಿರುವ ಭ್ರಷ್ಟಾಚಾರದಿಂದಾಗಿ ಸಾಮಾನ್ಯ ಜನರು ಅಂತಹ ನಂಬಿಕೆ ಮತ್ತು ಭರವಸೆಯನ್ನು ಕಳೆದುಕೊಳ್ಳುತ್ತಿರುವುದು ಅತ್ಯಂತ ದುರದೃಷ್ಟಕರ ಎಂದು ನ್ಯಾಯಾಧೀಶರು ಹೇಳಿದರು.

Lokayukta office
ಅಕ್ರಮ ಆಸ್ತಿ ಗಳಿಕೆ ಪ್ರಕರಣ: ಐವರು ಸರ್ಕಾರಿ ಅಧಿಕಾರಿಗಳ ಮನೆಗಳ ಮೇಲೆ ಲೋಕಾಯುಕ್ತ ದಾಳಿ

ದೂರುದಾರ ಮೊಹಮ್ಮದ್ ಯೂನಸ್ ಅವರಿಂದ 1.25 ಲಕ್ಷ ರೂ. ಲಂಚ ಪಡೆಯುತ್ತಿದ್ದಾಗ, ಜುಲೈ 21 ರಂದು ಲೋಕಾಯುಕ್ತ ಪೊಲೀಸರಿಗೆ ಸಾವಿತ್ರಿ ಬಾಯಿ ಸಿಕ್ಕಿಬಿದ್ದಿದ್ದರು. ತನ್ನ ವಿರುದ್ಧ ದಾಖಲಾಗಿರುವ ಅಪರಾಧವನ್ನು ಮುಚ್ಚಲು ಉನ್ನತ ಅಧಿಕಾರಿಗೆ 1 ಲಕ್ಷ ರೂ. ಮತ್ತು ತನಗಾಗಿ 25,000 ರೂ.ಹಣ ಲಂಚವಾಗಿ ನೀಡಬೇಕೆಂದು ಸಾವಿತ್ರಿ ಬಾಯಿ ದೂರುದಾರರಿಗೆ ತಿಳಿಸಿದ್ದರು.

ಸಾವಿತ್ರಿ ಬಾಯಿ ಅವರ ನಡವಳಿಕೆಯನ್ನು ಉಲ್ಲೇಖಿಸಿದ, ನ್ಯಾಯಾಧೀಶ ರಾಧಾಕೃಷ್ಣ ಅವರು ಈ ರೀತಿಯ ವಿಧಾನವು ಸಾಮಾನ್ಯ ಜನರನ್ನು ಭಯಭೀತರನ್ನಾಗಿಸುತ್ತದೆ, ಜೊತೆಗೆ ಹಲವು ಸಮಸ್ಯೆಗಳನ್ನು ಸೃಷ್ಟಿಸುತ್ತಗೆ. ಸಮಾಜದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ, ಇದು ಘೋರ ಅಪರಾಧಗಳಿಗಿಂತಲೂ ಹೆಚ್ಚು ಎಂದರು. ಇದರಿಂದಾಗಿ, ಇತ್ತೀಚಿನ ದಿನಗಳಲ್ಲಿ ಪೊಲೀಸರಿಂದ ಸಾಮಾನ್ಯ ಜನರು ಸಮಸ್ಯೆಗಳಿಗೆ ಪರಿಹಾರ ಪಡೆಯುವುದು ಕನಸಾಗಿದೆ ಎಂದು ನಾವು ಪ್ರತಿಯೊಬ್ಬರೂ ಅರ್ಥಮಾಡಿಕೊಳ್ಳಬೇಕು ಎಂದರು.

ಅಂಜಲಿ ಎಂಬುವರು ಯೂನಸ್ ವಿರುದ್ಧ ಕ್ರಿಮಿನಲ್ ಬೆದರಿಕೆ, ಇತರ ಆರೋಪಗಳ ಮೇಲೆ ದೂರು ದಾಖಲಿಸಿದರು. ಇದರ ನಂತರ, ಸಾವಿತ್ರಿ ಬಾಯಿ ಯೂನಸ್ ಅವರನ್ನು ಸ್ಟೇಷನ್ ಜಾಮೀನಿನ ಮೇಲೆ ಬಿಡುಗಡೆ ಮಾಡಿದರು. ತರುವಾಯ, ಯೂನಸ್ ಮತ್ತು ಅವರ ಪತ್ನಿ ಎಸ್‌ಐ ಜೊತೆ ಸಂಪರ್ಕದಲ್ಲಿದ್ದರು. ನಂತರ, ಯೂನಸ್ ಏಪ್ರಿಲ್ 23, 2025 ರಂದು ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದು, ಸಾವಿತ್ರಿ ಬಾಯಿ ಜಾಮೀನಿನ ಮೇಲೆ ಬಿಡುಗಡೆ ಮಾಡಲು 25,000 ರೂ. ಅಕ್ರಮ ಹಣಕ್ಕಾಗಿ ಬೇಡಿಕೆ ಇಟ್ಟು ಹಣ ಪಡೆದಿದ್ದಾರೆ ಎಂದು ಆರೋಪಿಸಿದ್ದಾರೆ.

ಜುಲೈ 10 ಮತ್ತು 17 ರಂದು, ಅವರ ವಿರುದ್ಧದ ಅಪರಾಧವನ್ನು ಮುಚ್ಚಿಹಾಕಲು ಅವರು 3 ಲಕ್ಷ ರೂ. ಲಂಚ ಕೇಳಿದ್ದರು. ಆದರೆ ತಾವು ಮನವಿ ಮಾಡಿದ ಹಿನ್ನೆಲೆಯಲ್ಲಿ ಉನ್ನತ ಅಧಿಕಾರಿಗೆ 1 ಲಕ್ಷ ರೂ. ಮತ್ತು ತನಗಾಗಿ 25,000 ರೂ. ಹಣ ನೀಡುವಂತೆ ಒಟ್ಟು 1.25 ಲಕ್ಷ ರೂ.ಗಳ ಬೇಡಿಕೆ ಇಟ್ಟರು. ಆರೋಪಿಗಳು ಪೊಲೀಸ್ ಅಧಿಕಾರಿಯಾಗಿರುವುದರಿಂದ ಸಾಕ್ಷ್ಯಗಳನ್ನು ಹಾಳುಮಾಡುವ ಮತ್ತು ಸಾಕ್ಷಿಗಳಿಗೆ ಬೆದರಿಕೆ ಹಾಕುವ ಸಾಧ್ಯತೆಯನ್ನು ತಪ್ಪಿಸಲು ಪ್ರಾಸಿಕ್ಯೂಷನ್ ಆರೋಪಿಗಳನ್ನು ಕಸ್ಟಡಿಯಲ್ಲಿ ವಿಚಾರಣೆಗೆ ಒಳಪಡಿಸುವಂತೆ ಸೂಚಿಸಿತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com