
ಬೆಂಗಳೂರು: ಅಧಿಕಾರಕ್ಕೆ ಸನಿಹವಾಗುತ್ತಿರುವಂತೆಲ್ಲಾ, ಡಿಸಿಎಂ ಡಿಕೆ ಶಿವಕುಮಾರ್ ವಿವಾದಗಳನ್ನು ಮೈಮೇಲೆ ಎಳೆದುಕೊಳ್ಳುತ್ತಿರುವ ಪ್ರಕರಣಗಳು ಹೆಚ್ಚಾಗತೊಡಗಿದೆ.
ಇತ್ತೀಚಿನ ದಿನಗಳಲ್ಲಿ ತಮ್ಮ ಹೇಳಿಕೆಗಳಿಂದಲೇ ಸುದ್ದಿಯಾಗುತ್ತಿರುವ ಡಿಕೆ ಶಿವಕುಮಾರ್ ಈಗ ಮಂಡ್ಯದ ಜನತೆಯ ವಿಷಯವಾಗಿ ಹೇಳಿಕೆ ನೀಡಿ ಯಡವಟ್ಟು ಮಾಡಿಕೊಂಡಿದ್ದಾರೆ.
ಬೆಂಗಳೂರಿನ ಅರಮನೆ ಮೈದಾನದಲ್ಲಿ ಮಾ.17ರಂದು ನಡೆದ ಯೂತ್ ಕಾಂಗ್ರೆಸ್ ಅಧ್ಯಕ್ಷರ ಪದಗ್ರಹಣ ಕಾರ್ಯಕ್ರಮದಲ್ಲಿ ಡಿಕೆ ಶಿವಕುಮಾರ್ ಮಾತನಾಡುತ್ತಿದ್ದಾಗ ಮಂಡ್ಯದ ಜನ ಫಲಕ ಹಾಗೂ ಭಾವುಟಗಳನ್ನು ಪ್ರದರ್ಶಿಸಿದ್ದರು. ಇದನ್ನು ಕಂಡು ಸಿಟ್ಟಾದ ಡಿಕೆ ಶಿವಕುಮಾರ್, ಅದೆಲ್ಲ ಕೆಳಗಿಳಿಸಿ, ನಿಮ್ಮ ಮಂಡ್ಯದವ್ರ ಛತ್ರಿಗಳ ಆಟ ನಿಲ್ಲಿಸಿ ಎಂದು ಗದರಿಸಿದ್ದರು.
ಮಂಡ್ಯ ಜನತೆಗೆ ಛತ್ರಿಗಳು ಎಂಬ ಡಿಕೆ ಶಿವಕುಮಾರ್ ಹೇಳಿಕೆ ಈಗ ಜಿಲ್ಲೆಯ ಜನರನ್ನು ಕೆರಳಿಸಿದೆ. ಈ ಹೇಳಿಕೆಗೆ ಜಿಲ್ಲೆಯಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿದೆ.
ಜಿಲ್ಲೆ ಜನರಿಗೆ ಡಿಕೆ ಶಿವಕುಮಾರ್ ಅವಮಾನ ಮಾಡಿದ್ದಾರೆ. ಮಂಡ್ಯ ಜನರ ಭಿಕ್ಷೆಯಿಂದ ಕಾಂಗ್ರೆಸ್ಗೆ ಅಧಿಕಾರ ಸಿಕ್ಕಿದೆ. 7 ರಲ್ಲಿ 5 ಕ್ಷೇತ್ರಗಳು ಕಾಂಗ್ರೆಸ್ ಶಾಸಕರು ಆಯ್ಕೆಯಾಗಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಡಿಕೆ ಶಿವಕುಮಾರ್ ವಿರುದ್ಧ ಜನತೆ ಆಕ್ರೋಶ ಹೊರಹಾಕಿದ್ದಾರೆ.
ಇನ್ನೂ ಕೆಲವರು ಡಿಕೆ ಶಿವಕುಮಾರ್ ಅವರ ಹಳೆಯ ಹೇಳಿಕೆಯನ್ನು ಉಲ್ಲೇಖಿಸಿ, ಅಧಿಕಾರಕ್ಕಾಗಿ ಮಂಡ್ಯ ಜನರ ಬಳಿ ಬಂದು ಪೆನ್ನು, ಪೇಪರ್ ಕೊಡಿ ಎಂದು ಅಂಗಲಾಚಿದ್ದು ಮರೆತು ಹೋಯ್ತಾ ಡಿಸಿಎಂ ಸಾಹೇಬ್ರೆ? ಮಂಡ್ಯದವರು ಸಿಎಂ ಆಗಿದ್ದಾಗ ಅವರ ಕಾಲಿಗೆ ಬಿದ್ದು ಬೆಳೆದವರು ನೀವು ಎಂದು ಡಿಕೆ ಶಿವಕುಮಾರ್ ಗೆ ಜನತೆ ತಿವಿದಿದ್ದಾರೆ.
ಇಂತಹ ದುರಹಂಕಾರಿಗೆ ಸರಿಯಾದ ಬುದ್ಧಿ ಕಲಿಸಬೇಕು. ಅತೀ ಹೆಚ್ಚು ಕನ್ನಡ ಮಾತನಾಡುವ ಜಿಲ್ಲೆ ಜನರಿಗೆ ಅವಮಾನ ಮಾಡಿದ್ದೀರಿ ಎಂದು ಸಾಲು ಸಾಲು ಪೋಸ್ಟ್ ಹಾಕಿ ಜನ ಆಕ್ರೋಶ ಹೊರಹಾಕಿದ್ದಾರೆ. ಡಿ.ಕೆ ಶಿವಕುಮಾರ್ ತಮ್ಮ ಹೇಳಿಕೆಗೆ ಮಂಡ್ಯ ಜನರ ಕ್ಷಮೆಯಾಚಿಸಬೇಕು. ಇಲ್ಲದಿದ್ದರೇ ಮಂಡ್ಯಕ್ಕೆ ಅವರು ಬಂದರೆ ಕಪ್ಪು ಬಾವುಟ ಪ್ರದರ್ಶನ ಮಾಡುತ್ತೇವೆ. ಅವರ ಹೇಳಿಕೆ ಖಂಡಿಸದೇ ಜಿಲ್ಲೆಯ ಜನರ ಪರ ನಿಲ್ಲದ ಕಾಂಗ್ರೆಸ್ ನ ಶಾಸಕರು ಛತ್ರಿಗಳು ಎಂದು ಜಿಲ್ಲೆಯ ಜನತೆ ಕಿಡಿಕಾರಿದ್ದಾರೆ.
Advertisement