
ಬೆಂಗಳೂರು: ರಾಜ್ಯದಲ್ಲಿ ಹೊಸ ಹಾಗೂ ತಾತ್ಕಾಲಿಕ ವಿದ್ಯುತ್ ಸಂಪರ್ಕಗಳಿಗೆ ಸ್ಮಾರ್ಟ್ ಮೀಟರ್ ವ್ಯವಸ್ಥೆ ಕಡ್ಡಾಯಗೊಳಿಸಲಾಗಿದೆ ಎಂದು ಇಂಧನ ಸಚಿವ ಕೆ.ಜೆ. ಜಾರ್ಜ್ ಬುಧವಾರ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಇಂಧನ ಸಚಿವಾಲಯವು ಫೆ. 22ರಂದು ಹೊರಡಿಸಿದ್ದ ಅಧಿಸೂಚನೆ ಅನ್ವಯ ಕರ್ನಾಟಕ ಮತ್ತು ತೆಲಂಗಾಣ ಬಿಟ್ಟು ಬೇರೆ ಎಲ್ಲಾ ರಾಜ್ಯಗಳಲ್ಲಿ ಸ್ಮಾರ್ಟ್ ಮೀಟರ್ ಜಾರಿಗೆ ತರಲಾಗಿದೆ. ಇತ್ತೀಚಿಗೆ ಕೇಂದ್ರ ಇಂಧನ ಸಚಿವರನ್ನು ಭೇಟಿ ಮಾಡಿದಾಗಲೂ ಸ್ಮಾರ್ಟ್ ಮೀಟರ್ ಅಳವಡಿಸಲು ಸೂಚಿಸಿದರು ಎಂದು ತಿಳಿಸಿದರು.
ಸ್ಮಾರ್ಟ್ ಮೀಟರ್ ಪೂರೈಕೆಗೆ ಬೆಸ್ಕಾಂನವರು ಟೆಂಡರ್ ಕರೆದಿದ್ದಾರೆ. ಮೂರು ಪಾರ್ಟ್ ಟೆಂಡರ್ ಕರೆದಿದ್ದಾರೆ. ಒಬ್ಬರು ಸ್ಮಾರ್ಟ್ ಮೀಟರ್ ಅಳವಡಿಸುತ್ತಾರೆ. ಸಿಮ್ ಕಾರ್ಡ್ ಹಾಕುವವರು ಬೇರೆ ಇರ್ತಾರೆ. ಟೆಂಡರ್ ಕೊಟ್ಟಿದ್ರಲ್ಲಿ ತಪ್ಪಾಗಿದ್ರೆ ತಡೆಯುತ್ತೇವೆ ಎಂದು ಹೇಳಿದರು.
ರಾಜ್ಯದಲ್ಲಿ ಕಪ್ಪು ಪಟ್ಟಿಗೆ ಸೇರಿದ ಕಂಪನಿಗಳು ಸ್ಮಾರ್ಟ್ ವಿದ್ಯುತ್ ಮೀಟರ್ ಪೂರೈಕೆ ಮಾಡುತ್ತಿವೆ ಎಂಬ ಬಿಜೆಪಿ ಶಾಸಕ ಅಶ್ವತ್ಥ ನಾರಾಯಣ್ ಅವರ ಆರೋಪವನ್ನು ತಳ್ಳಿಹಾಕಿದ ಕೆಜೆ ಜಾರ್ಜ್, ಇದು ಸಂಪೂರ್ಣ ತಪ್ಪು. ಮೀಟರ್ ಪೂರೈಕೆ ಮಾಡುತ್ತಿರುವ ಕಂಪನಿಗಳು ಕಪ್ಪು ಪಟ್ಟಿಯಲ್ಲಿ ಇಲ್ಲ ಎಂದರು.
ಉತ್ತರ ಪ್ರದೇಶ ಸರ್ಕಾರ ಎರಡು ವರ್ಷಗಳ ಕಾಲ ಕಂಪನಿಯನ್ನು ನಿರ್ಬಂಧಿಸಿದೆ ಆದರೆ ಆ ಕಂಪನಿಯನ್ನು ಕಪ್ಪು ಪಟ್ಟಿಗೆ ಸೇರಿಸಲಾಗಿಲ್ಲ. ಯುಪಿ ಸರ್ಕಾರ ನಿರ್ಬಂಧ ಹೇರಿದಾಗ ತನಿಖೆ ಮತ್ತು ದಂಡ ವಿಧಿಸುವುದು ಸರ್ಕಾರದ ಕರ್ತವ್ಯವಾಗಿತ್ತು. ಇತರ 16 ರಾಜ್ಯಗಳು ಸಂಸ್ಥೆಗೆ ಗುತ್ತಿಗೆ ನೀಡಿವೆ ಎಂದು ಸಚಿವರು ಹೇಳಿದರು.
ಸ್ಮಾರ್ಟ್ ಮೀಟರ್ ನಲ್ಲಿ ವಿದ್ಯುತ್ ಬಳಕೆ, ವೋಲ್ಟೇಜ್ ಮಟ್ಟ, ಲೋಡ್ ಮತ್ತಿತರ ತಾಂತ್ರಿಕ ಅಂಶಗಳ ಮಾಹಿತಿ ದಾಖಲಾಗುತ್ತದೆ. ಈ ಮಾಹಿತಿಯನ್ನು ಸರ್ವರ್ಗೆ ರವಾನಿಸಲಾಗುತ್ತದೆ.
ಸ್ಮಾರ್ಟ್ ಮೀಟರ್ ಪೂರೈಕೆಯ ಟೆಂಡರ್ ಪ್ರಕ್ರಿಯೆಯಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಭಾರೀ ಅಕ್ರಮವೆಸಗಿದೆ. ಕೆಟಿಪಿಪಿ ಕಾಯ್ದೆ ಉಲ್ಲಂಘಿಸಿದ್ದು, ರೂ. 15,500 ಕೋಟಿ ಹಗರಣವಾಗಿದೆ ಎಂದು ಆರೋಪಿಸಿದ್ದ ಶಾಸಕ ಅಶ್ವತ್ಥ ನಾರಾಯಣ, ಎಸ್ಕಾಂಗಳು ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗದ (ಕೆಇಆರ್ಸಿ) ನಿಯಮಗಳಿಗೆ ಬದ್ಧವಾಗಿರಬೇಕು ಎಂದು ಒತ್ತಾಯಿಸಿದ್ದರು.
Advertisement