
ಗದಗ: ಬೀದಿ ನಾಯಿಗಳ ದಾಳಿಯಿಂದ ಮಹಿಳೆಯೊಬ್ಬರು ಮೃತಪಟ್ಟ ಘಟನೆ ಭಾನುವಾರ ನಡೆದಿದೆ. ಪಟ್ಟಣದ ಚೋಳಿನವರ ಓಣಿಯ ನಿವಾಸಿ ಪ್ರೇಮಾ ಶರಣಪ್ಪ ಚೋಳಿನ (53) ಮೃತ ಮಹಿಳೆ.
ಪ್ರೇಮಾ ಚೋಳಿನ ಭಾನುವಾರ ಬೆಳಗಿನ ಜಾವ ಮನೆ ಹತ್ತಿರ ಹೂ ಕೀಳುತ್ತಿದ್ದಾಗ ಬೀದಿ ನಾಯಿಗಳು ಸಾಮೂಹಿಕವಾಗಿ ದಾಳಿ ಮಾಡಿ, ನೆಲಕ್ಕೆ ಬೀಳಿಸಿ ಕಚ್ಚಿವೆ.
ಬೀದಿ ನಾಯಿಗಳ ದಾಳಿಯಿಂದ ಬಿದ್ದು ತೀವ್ರವಾಗಿ ಗಾಯಗೊಂಡಿದ್ದ ಪ್ರೇಮಾ ಚೋಳಿನ ಅವರನ್ನು ಸ್ಥಳೀಯ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆ ತರಲಾಯಿತು. ಆದರೆ, ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಪ್ರೇಮಾ ಹೂವುಗಳನ್ನು ಖರೀದಿಸಲು ಹತ್ತಿರದ ಮಾರುಕಟ್ಟೆಗೆ ಹೋಗಿದ್ದರು ಎಂದು ಅವರ ಕೆಲವು ಸಂಬಂಧಿಕರು ಹೇಳಿದರೆ, ಘಟನೆ ನಡೆದಾಗ ಅವರು ಮನೆಯ ಮುಂದೆ ಹೂವುಗಳನ್ನು ಕೀಳುತ್ತಿದ್ದರು ಎಂದು ಕೆಲವರು ಹೇಳಿದ್ದಾರೆ.
ಪ್ರೇಮಾ ಅವರ ಸಂಬಂಧಿಕರು ಮತ್ತು ಚೋಳಿನ್ ಕಾಲೋನಿಯ ನಿವಾಸಿಗಳು ಗಜೇಂದ್ರಗಡದ ಸರ್ಕಾರಿ ಆಸ್ಪತ್ರೆಯ ಮುಂದೆ ಪ್ರತಿಭಟನೆ ನಡೆಸಿ ಸ್ಥಳೀಯ ಆಡಳಿತದ ನಿರಾಸಕ್ತಿಯಿಂದಾಗಿ ಈ ಘಟನೆ ಸಂಭವಿಸಿದೆ ಎಂದು ಆರೋಪಿಸಿದರು. ಆಸ್ಪತ್ರೆ ಮುಂದಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಮೃತದೇಹವನ್ನು ಇಟ್ಟು ರಸ್ತೆ ತಡೆದು ಪ್ರತಿಭಟನೆ ನಡೆಸಿ, ಸ್ಥಳೀಯ ಪುರಸಭೆ ವಿರುದ್ದ ಆಕ್ರೋಶ ಹೊರ ಹಾಕಿದರು. ಈ ಕುರಿತು ಗಜೇಂದ್ರಗಡ ಪೊಲೀಸ್ ಠಾಣೆಯಲ್ಲಿ (ಯು.ಡಿ) ಪ್ರಕರಣ ದಾಖಲಾಗಿದೆ.
ಈ ಸಂಬಂಧ ನಾವು ಹಲವಾರು ದೂರುಗಳನ್ನು ಸಲ್ಲಿಸಿದ್ದೇವೆ ಮತ್ತು ಅನೇಕ ಅಧಿಕಾರಿಗಳು ಮತ್ತು ಸ್ಥಳೀಯ ನಾಯಕರಿಗೆ ಹಲವು ಬಾರಿ ವಿನಂತಿಸಿದ್ದೇವೆ. ಅವರು ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು, ಆದರೆ ಯಾವ ಕ್ರಮ ಕೂಡ ಕೈಗೊಂಡಿಲ್ಲ, ಸ್ಥಳೀಯ ನಾಯಕರು ಅಥವಾ ಅಧಿಕಾರಿಗಳು ಅಗತ್ಯ ಕ್ರಮಗಳನ್ನು ತೆಗೆದುಕೊಂಡಿದ್ದರೆ, ಒಂದು ಜೀವವನ್ನು ಉಳಿಸಬಹುದಿತ್ತು, ”ಎಂದು ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಚೋಳಿನ್ ಕಾಲೋನಿಯ ನಿವಾಸಿಯೊಬ್ಬರು ಹೇಳಿದರು.
ಗಜೇಂದ್ರಗಡ ಪಟ್ಟಣ ಪುರಸಭೆ (ಟಿಎಂಸಿ) ಅಧ್ಯಕ್ಷ ಸುಭಾಷ್ ಮೈಗೇರಿ ಮಾತನಾಡಿ, "ನಮ್ಮ ಅಧಿಕಾರಿಗಳಿಗೆ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವಂತೆ ನಾವು ಸೂಚನೆ ನೀಡಿದ್ದೇವೆ. ಸಂತ್ರಸ್ತರ ಕುಟುಂಬಕ್ಕೆ 3 ಲಕ್ಷ ರೂ. ಪರಿಹಾರ ನೀಡಲಿದೆ ಮತ್ತು ಶಾಸಕರು ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ 2 ಲಕ್ಷ ರೂ. ನೀಡುವುದಾಗಿ ಭರವಸೆ ನೀಡಿದ್ದಾರೆ" ಎಂದು ಹೇಳಿದರು.
Advertisement