

ಉಡುಪಿ: ಭಯೋತ್ಪಾದಕ ದಾಳಿಯ ನಂತರ ಹಿಂದಿನ ಸರ್ಕಾರಗಳು ತಕ್ಕ ಪ್ರತಿಕ್ರಿಯೆ ನೀಡಲು ಹಿಂಜರಿಯುತ್ತಿದ್ದವು. ಆದರೆ ನವ ಭಾರತ ತನ್ನ ಜನರನ್ನು ರಕ್ಷಿಸಲು ಬದ್ಧವಾಗಿದ್ದು, ಯಾರ ಮುಂದೆಯೂ ತಲೆಬಾಗುವುದಿಲ್ಲ ಅಥವಾ ಹಿಂಜರಿಯುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಹೇಳಿದ್ದಾರೆ.
ಇಂದು ಉಡುಪಿಯಲ್ಲಿ ಜನರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, "ಹಿಂದಿನ ಸರ್ಕಾರಗಳು ಭಯೋತ್ಪಾದಕ ದಾಳಿಯ ನಂತರ ಸುಮ್ಮನೆ ಕುಳಿತುಕೊಳ್ಳುತ್ತಿದ್ದವು. ಆದರೆ ನವ ಭಾರತ ತನ್ನ ಜನರನ್ನು ರಕ್ಷಿಸಲು ಬದ್ಧವಾಗಿದೆ ಮತ್ತು ಯಾರ ಮುಂದೆಯೂ ತಲೆಬಾಗುವುದಿಲ್ಲ ಅಥವಾ ಹಿಂಜರಿಯುವುದಿಲ್ಲ" ಎಂದರು.
ಒಂದು ಲಕ್ಷ ಜನ ಶ್ರೀಮದ್ ಭಗವದ್ಗೀತೆಯನ್ನು ಪಠಿಸಿದ "ಲಕ್ಷ ಕಂಠ ಗೀತಾ ಪಾರಾಯಣ"ದಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಉಡುಪಿಗೆ ಆಗಮಿಸಿದ್ದರು. ಉಡುಪಿಯ ಶ್ರೀ ಕೃಷ್ಣ ಮಠವು ಈ ಕಾರ್ಯಕ್ರಮವನ್ನು ಆಯೋಜಿಸಿತ್ತು.
"ನಮಗೆ ಶಾಂತಿ ಸ್ಥಾಪನೆಯೂ ಗೊತ್ತು, ರಕ್ಷಣೆಯೂ ಗೊತ್ತು. ಸತ್ಯಕ್ಕಾಗಿ ಶ್ರಮಿಸಲು ಹಾಗೂ ದೌರ್ಜನ್ಯ ಎಸಗುವವರನ್ನು ಹತ್ತಿಕ್ಕುವ ಅಗತ್ಯವನ್ನು ಗೀತೆ ನಮಗೆ ಕಲಿಸುತ್ತದೆ. ನಾವು ವಸುಧೈವ ಕುಟುಂಬಕಂನಲ್ಲಿ ನಂಬಿಕೆ ಇಟ್ಟಿದ್ದೇವೆ ಮತ್ತು 'ಧರ್ಮೋ ರಕ್ಷತಿ ರಕ್ಷಿತಃ'(ಧರ್ಮವನ್ನು ರಕ್ಷಿಸುವವರನ್ನು ಧರ್ಮ ರಕ್ಷಿಸುತ್ತದೆ) ಎಂದು ಪಠಿಸುತ್ತೇವೆ" ಎಂದರು.
ಈ ವರ್ಷ ಏಪ್ರಿಲ್ನಲ್ಲಿ ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ ಭಯೋತ್ಪಾದಕ ದಾಳಿಯನ್ನು ನೆನಪಿಸಿಕೊಂಡ ಪ್ರಧಾನಿ ಮೋದಿ, ಮೃತರಲ್ಲಿ ಕರ್ನಾಟಕದ ಜನರು ಸಹ ಸೇರಿದ್ದಾರೆ ಎಂದು ಹೇಳಿದರು.
ಪಹಲ್ಗಾಮ್ ದಾಳಿಯ ನಂತರ ಪಾಕಿಸ್ತಾನದ ಭಯೋತ್ಪಾದಕ ನೆಲೆಗಳ ಮೇಲೆ ನಿಖರವಾದ ದಾಳಿಗಳನ್ನು ನಡೆಸಿದ ಭಾರತದ ಮಿಲಿಟರಿ ಕಾರ್ಯಾಚರಣೆ ಆಪರೇಷನ್ ಸಿಂಧೂರ್ ಸಮಯದಲ್ಲಿ ನಮ್ಮ ಸರ್ಕಾರದ ದೃಢಸಂಕಲ್ಪವನ್ನು ಇಡೀ ದೇಶ ನೋಡಿದೆ ಎಂದರು.
"ನಾವು ಕೆಂಪು ಕೋಟೆಯಿಂದ ಕೃಷ್ಣನ ಕರುಣೆಯ ಸಂದೇಶವನ್ನು ನೀಡುತ್ತೇವೆ ಮತ್ತು ಮಿಷನ್ ಸುದರ್ಶನ ಚಕ್ರವನ್ನು ಸಹ ಘೋಷಿಸುತ್ತೇವೆ" ಎಂದು ಪ್ರಧಾನಿ ಹೇಳಿದರು.
ಉಡುಪಿ ಪಟ್ಟಣವು ಐದು ದಶಕಗಳ ಹಿಂದೆಯೇ ಹೊಸ ಆಡಳಿತ ಮಾದರಿಯನ್ನು ಪ್ರಸ್ತುತಪಡಿಸಿತು. ಇದು ಇಂದು ಸ್ವಚ್ಛತೆ ಮತ್ತು ನೀರು ಸರಬರಾಜಿನ ಕುರಿತು ರಾಷ್ಟ್ರೀಯ ನೀತಿಗಳಿಗೆ ಮಾರ್ಗದರ್ಶನ ನೀಡುತ್ತಿದೆ ಎಂದು ಅವರು ತಿಳಿಸಿದರು.
ಉಡುಪಿಯ ಪೇಜಾವರ ಮಠದ ಸ್ವಾಮಿ ವಿಶ್ವೇಶ ತೀರ್ಥರನ್ನು ಶ್ಲಾಘಿಸಿದ ಪ್ರಧಾನಿ ಮೋದಿ, ರಾಮ ಜನ್ಮಭೂಮಿ ಚಳುವಳಿಯಲ್ಲಿ ಅವರ ಪಾತ್ರ ಎಷ್ಟು ದೊಡ್ಡದು ಎಂದು ಇಡೀ ದೇಶಕ್ಕೆ ಗೊತ್ತಿದೆ ಎಂದು ಹೇಳಿದರು.
ಮಧ್ವಾಚಾರ್ಯರರು ಭಕ್ತಿಯ ಮಾರ್ಗ ತೋರಿಸಿಕೊಟ್ಟಿದ್ದಾರೆ. ಅವರ ಮಾರ್ಗದರ್ಶನದಿಂದ ಆರಂಭಗೊಂಡ ಈ ಅಷ್ಟ ಮಠಗಳು ಧರ್ಮಕಾರ್ಯದಲ್ಲಿ ತೊಡಗಿವೆ. ಕನಕದಾಸರಿಗೆ ನಮಿಸುವ ಪುಣ್ಯ ನನಗೆ ಸಿಕ್ಕಿದೆ. ನನ್ನಂತ ಎಲ್ಲಾ ಭಕ್ತರಿಗೂ ಕಿಂಡಿಯ ಮೂಲಕ ಕೃಷ್ಣ ದರ್ಶನ ಆಗುವಂತೆ ಮಾಡಿದ್ದು ಕನಕದಾಸರು. ಭಗವಾನ್ ಕೃಷ್ಣನ ಪ್ರೇರಣೆಯಿಂದಲೇ ಕೆಲವೊಂದು ಯೋಜನೆಗಳನ್ನ ಮಾಡಲಾಗಿದೆ ಎಂದು ಮೋದಿ ಹೇಳಿದರು.
Advertisement