
ಬೆಂಗಳೂರು: ರಾಜ್ಯ ಸರ್ಕಾರ ಕೈಗೊಂಡಿರುವ ಸಾಮಾಜಿಕ, ಆರ್ಥಿಕ & ಶೈಕ್ಷಣಿಕ ಸಮೀಕ್ಷೆ (Caste census) ಹಿನ್ನೆಲೆ ಮನೆಗೆ ಗಣತಿಗೆ ಬಂದವರಿಗೆ ಕೇಂದ್ರ ಸಚಿವ ವಿ.ಸೋಮಣ್ಣ ತರಾಟೆಗೆ ತೆಗೆದುಕೊಂಡ ಪ್ರಸಂಗ ಇಂದು ನಡೆಯಿತು.
ಮನೆಗೆ ಬಂದವರನ್ನು ನೋಡಿ ಇಷ್ಟು ಜನ ಯಾಕೆ ಬಂದಿದ್ದೀರಾ ಎಂದು ಕೇಳಿದ ಕೇಂದ್ರ ಸಚಿವರು, ಮುಂದಿನ ದಿನಗಳಲ್ಲಿ ಕೇಂದ್ರ ಸರ್ಕಾರವೇ ಜಾತಿಗಣತಿ ಮಾಡಿಸುತ್ತದೆ. ಹೀಗಿರುವಾಗ ಇಷ್ಟು ಪ್ರಶ್ನೆಗಳು ಬೇಕಾ, ಇದೆಲ್ಲಾ ನೀವು ಸರ್ಕಾರಕ್ಕೆ ತಿಳಿಸಬೇಕಿರುವಾಗ ಸರ್ಕಾರಿ ನೌಕರರು ಸರ್ಕಾರದ ಏಜೆಂಟ್ ಆಗಿ ಕೆಲಸ ಮಾಡಬಾರದು ಎಂದು ಹೇಳಿದ್ದಾರೆ.
ಇಂದು ಗಣತಿಯಲ್ಲಿ ಏನಾಯಿತು
ಬೆಂಗಳೂರಿನ ವಿಜಯನಗರದಲ್ಲಿರುವ ಕೇಂದ್ರ ಸಚಿವ ಸೋಮಣ್ಣ ಮನೆಗೆ ಇಂದು ಬೆಳಗ್ಗೆ 9 ಜನ ಸಿಬ್ಬಂದಿ ತೆರಳಿದ್ದರು. ಉಪಜಾತಿ ಯಾವುದು ಎಂದು ಗಣತಿದಾರರು ಕೇಳಿದಾಗ ಅದೆಲ್ಲಾ ಯಾಕೆ ಬೇಕು, ಸಿದ್ದರಾಮಯ್ಯ ಜಾತಿ ಅಂತಾ ಬರೆದುಕೊಳ್ಳಿ ಎಂದು ಸೋಮಣ್ಣ ತಿಳಿಸಿದ್ದಾರೆ. ಮದುವೆ ಆದಾಗ ನಿಮಗೆ ಎಷ್ಟು ವರ್ಷ ಎಂದು ಸಿಬ್ಬಂದಿ ಕೇಳಿದ್ದು, ಇದನ್ನ ನಮ್ಮ ಅಪ್ಪ-ಅಮ್ಮನ ಕೇಳಬೇಕು. 26 ಅಂತಾ ಬರೆದುಕೊಳ್ಳಿ ಎಂದಿದ್ದಾರೆ.
ಇದು ವೋಟ್ ಗಾಗಿ ಸಿದ್ದರಾಮಯ್ಯ ಮಾಡಿಸುತ್ತಿರುವ ಸಮೀಕ್ಷೆ ಎಂದಿರುವ ಕೇಂದ್ರ ಸಚಿವರು, ಅನೇಕ ಪ್ರಶ್ನೆಗಳಿಗೆ ಸಿದ್ದರಾಮಯ್ಯ ಮತ್ತು ಡಿಕೆಶಿ ಹೆಸರನ್ನೇ ಹಾಕೊಳ್ಳಿ ಎಂದಿದ್ದಾರೆ. ಉತ್ತರ ಕೊಡಲಾಗದ ಪ್ರಶ್ನೆಗಳನ್ನೆಲ್ಲಾ ನೀವು ಕೇಳುತ್ತಿದ್ದೀರಿ. ಸಿದ್ದರಾಮಯ್ಯ, ಡಿಕೆಶಿಯವರನ್ನು ಯಾವ ಗ್ರೂಪ್ ಹಾಕ್ತೀರಿ ಎಂದು ಗಣತಿದಾರ ಸಿಬ್ಬಂದಿಗೆ ಸೋಮಣ್ಣ ಮರು ಪ್ರಶ್ನಿಸಿದ ಪ್ರಸಂಗವೂ ನಡೆದಿದೆ.
ಗಣತಿಗೆ ವಿದ್ಯಾರ್ಥಿಗಳ ಬಳಕೆ ಆರೋಪ
ರಾಜ್ಯ ಸರ್ಕಾರ ನಡೆಸುತ್ತಿರುವ ಜಾತಿಗಣತಿಗೆ ಕಾಲೇಜು ವಿದ್ಯಾರ್ಥಿಗಳನ್ನು ಬಳಕೆ ಮಾಡಿಕೊಳ್ಳುತ್ತಿರುವ ಆರೋಪ ಕೇಳಿಬಂದಿದೆ. ಮೈಸೂರಿನ ದೇವರಾಜ ಅರಸು ರಸ್ತೆಯ ದೇವರಾಜ ಶಾಲೆಯ ಆಸುಪಾಸಿನಲ್ಲಿ ಕಾಲೇಜು ವಿದ್ಯಾರ್ಥಿಗಳು ಸಮೀಕ್ಷೆ ನಡೆಸುತ್ತಿರುವುದನ್ನ ಸ್ಥಳೀಯರು ಪ್ರಶ್ನಿಸುವ ವಿಡಿಯೋ ವೈರಲ್ ಆಗಿದೆ.
Advertisement