
ಉಡುಪಿ: ಕಾರ್ಕಳದ ಮುಂಡ್ಕೂರಿನ 16 ವರ್ಷದ ಪಿಯುಸಿ ವಿದ್ಯಾರ್ಥಿ ನಾಪತ್ತೆಯಾದ ಹದಿಮೂರು ವರ್ಷಗಳ ನಂತರ ಪತ್ತೆಯಾಗಿದ್ದಾನೆ. ಉಡುಪಿ ಪೊಲೀಸರು ಬೆಂಗಳೂರಿನಲ್ಲಿ ಆತನನ್ನು ಪತ್ತೆ ಮಾಡಿದ್ದಾರೆ.
ಡಿಸೆಂಬರ್ 6, 2012 ರಂದು ದೇವಸ್ಥಾನಕ್ಕೆ ಹೋಗುವುದಾಗಿ ಹೇಳಿ ಮನೆಯಿಂದ ಹೋಗಿದ್ದ ಬಾಲಕ ವಾಪಸ್ ಮನೆಗೆ ಹಿಂತಿರುಗಲಿಲ್ಲ. ಅದೇ ಬಾಲಕ ಅನಂತಕೃಷ್ಣ ಪ್ರಭುಗೆ ಈಗ 29 ವರ್ಷ ವಯಸ್ಸಾಗಿದ್ದು, ಕುಟುಂಬದೊಂದಿಗೆ ಮತ್ತೆ ಒಂದುಗೂಡಿ ಸಂತೋಷವಾಗಿದ್ದಾರೆ.
ಪ್ರಭಾಕರ ಪ್ರಭು ಅವರ ಮಗ ಆ ದಿನ ಮನೆಗೆ ಹಿಂತಿರುಗದಿದ್ದಾಗ, ಕಾರ್ಕಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದರು.
ನಡೆದ ಘಟನೆಯೇನು?
13 ವರ್ಷದ ಬಾಲಕನಾಗಿದ್ದಾಗ ಅನಂತಕೃಷ್ಣ ಪರೀಕ್ಷೆ ವೇಳೆ ಮಾಡಿದ್ದ ತಪ್ಪಿನಿಂದ ಅವಮಾನಿತನಾಗಿ ಮನೆಬಿಟ್ಟು ಹೋಗಿದ್ದ. ಶಾಲೆಯಲ್ಲಿ ನಡೆದ ಘಟನೆಯನ್ನು ಮನೆಯಲ್ಲಿ ಹೇಳಲು ಭಯಗೊಂಡಿದ್ದನಂತೆ. ಹೀಗಾಗಿ ಮನೆಬಿಟ್ಟು ಹೋದವನು ಸಕಲೇಶಪುರದ ಕಾರ್ಖಾನೆಯಲ್ಲಿ ಎರಡು ವರ್ಷಗಳ ಕಾಲ ಕೆಲಸ ಮಾಡುತ್ತಿದ್ದನು, ಅಲ್ಲಿ ಅವನಿಗೆ ಕೆಲಸ ಕೊಡಿಸಿದವರು ಶಿಕ್ಷಣವನ್ನು ಮುಂದುವರಿಸಲು ಆರ್ಥಿಕವಾಗಿ ಸಹಾಯ ಮಾಡಿದರು. ಯುವಕನಾಗಿರುವ ಅನಂತಕೃಷ್ಣ ಈಗ ಬೆಂಗಳೂರಿನಲ್ಲಿ ಇಂಟೀರಿಯರ್ ಡಿಸೈನರ್ ಆಗಿ ಕೆಲಸ ಮಾಡುತ್ತಿದ್ದಾರೆ ಎಂದು ಎಸ್ಪಿ ಹೇಳಿದ್ದಾರೆ.
ತಮ್ಮ ಏಕೈಕ ಮಗ ಮನೆಗೆ ಹಿಂದಿರುಗಿದ್ದು ತಂದೆ ತಾಯಿಗಳ ಸಂತೋಷ ಹೇಳತೀರದಾಗಿದೆ. ಅವನು ಕಾಣೆಯಾದ ದಿನ, ಜನರು ಅವನು ಬಸ್ನಲ್ಲಿ ಪ್ರಯಾಣಿಸುತ್ತಿರುವುದನ್ನು ನೋಡಿದ್ದರು. ನಾವು ಅವನನ್ನು ಹಲವು ಸ್ಥಳಗಳಲ್ಲಿ ಹುಡುಕಿದ್ದೆವು. ಇಷ್ಟು ವರ್ಷಗಳ ಕಾಲ ಪ್ರಾರ್ಥಿಸುತ್ತಲೇ ಇದ್ದೆವು. ಪೊಲೀಸರು ನಿಜವಾಗಿಯೂ ಆತನನ್ನು ಪತ್ತೆಹಚ್ಚಿದ್ದಾರೆ ಎಂದರೆ ನಂಬಲೇ ಆಗುತ್ತಿಲ್ಲ ಎನ್ನುತ್ತಾರೆ ಅನಂತಕೃಷ್ಣ ತಂದೆ.
ಪ್ರಭಾಕರ ಪ್ರಭು ಮುಂಡ್ಕೂರಿನಲ್ಲಿ ಒಂದು ಅಂಗಡಿಯನ್ನು ನಡೆಸುತ್ತಿದ್ದಾರೆ. ಸ್ಥಳೀಯ ದೇವಾಲಯ ಆಡಳಿತದ ಭಾಗವಾಗಿದ್ದಾರೆ. ಎರಡು ವರ್ಷಗಳ ಹಿಂದೆ, ಅನಂತಪ್ರಭುಗೆ ತನ್ನ ಹುಟ್ಟೂರಿಗೆ ಹೋಗಬೇಕು, ಪೋಷಕರನ್ನು ನೋಡಬೇಕೆಂಬ ಆಸೆ ಬಲವಾಯಿತಂತೆ. ಹೀಗೆ ಸದ್ದಿಲ್ಲದೆ ಬಂದಿದ್ದ ಅನಂತಕೃಷ್ಣ ಪೋಷಕರನ್ನು ನೋಡಿ ಹೋಗಿದ್ದನಂತೆ, ಆದರೆ ಅವರಿಗೆ ಮಗ ಕಂಡಿರಲಿಲ್ಲ.
ಕಾಣೆಯಾದ ಮಕ್ಕಳ ಪ್ರಕರಣ
ಇಂದು ಅನಂತಕೃಷ್ಣ ಅವರ ಕನಸು -- ಸ್ವಂತ ಮನೆ ಕಟ್ಟಬೇಕು, ಕಾರು ಖರೀದಿಸಬೇಕು ಮತ್ತು ನಂತರ ಮನೆಗೆ ಬರಬೇಕು ಎಂಬುದಾಗಿತ್ತು. 13 ವರ್ಷ ಹಳೆಯ ಪ್ರಕರಣವನ್ನು ಪುನಃ ತನಿಖೆ ಮಾಡಲು ಮತ್ತು ಕಳೆದ 15 ವರ್ಷಗಳಲ್ಲಿ ಕಾಣೆಯಾದ ಇತರ ಮಕ್ಕಳನ್ನು ಪತ್ತೆಹಚ್ಚಲು ವಿಶೇಷ ತನಿಖಾ ತಂಡವನ್ನು ರಚಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹೇಳುತ್ತಾರೆ.
ಪೊಲೀಸರು ಅನಂತಕೃಷ್ಣ ಅವರನ್ನು ಪತ್ತೆಹಚ್ಚಿದ್ದಾರೆ. ಅವರ ಆಧಾರ್ ಕಾರ್ಡ್ ಫೋಟೋಗೆ ಹೊಂದಿಕೆಯಾಗುವ ಹಳೆಯ ಫೋಟೋ ಇದೆ. ಬೆಂಗಳೂರಿನಲ್ಲಿರುವ ವ್ಯಕ್ತಿಯೊಬ್ಬರು ಅವರಿಗೆ ಆಶ್ರಯ ನೀಡಿರುವುದು ಪೊಲೀಸರಿಗೆ ತಿಳಿದಿತ್ತು. ಅದರ ಜಾಡು ಹಿಡಿದುಕೊಂಡು ಹಲವು ಸುಳಿವುಗಳನ್ನು ಅನುಸರಿಸಿದ ಪೊಲೀಸರು, ಅನಂತಕೃಷ್ಣ ಬೆಂಗಳೂರಿನಲ್ಲಿ ವಾಸಿಸುತ್ತಿದ್ದಾರೆ ಎಂದು ದೃಢಪಡಿಸಿ ವಿಳಾಸ ಪತ್ತೆಹಚ್ಚಿದರು.
ಕಾಣೆಯಾದ ಎಲ್ಲಾ ಮಕ್ಕಳ ಪ್ರಕರಣಗಳನ್ನು ಪತ್ತೆಹಚ್ಚಲು ಸಿಐಡಿಯ ಮಾನವ ಕಳ್ಳಸಾಗಣೆ ವಿರೋಧಿ ಘಟಕಕ್ಕೆ ವರ್ಗಾಯಿಸಲಾಗುತ್ತದೆ ಎಂದು ಎಸ್ಪಿ ಶಂಕರ್ ಹೇಳಿದರು. ಪಿಎಸ್ಐ ಈರಣ್ಣ ಮತ್ತು ಪಿಎಸ್ಐ ಸುದರ್ಶನ್ ಮತ್ತು ಇತರ ಆರು ಸಿಬ್ಬಂದಿ ಒಂದೂವರೆ ವರ್ಷದಿಂದ ಇದನ್ನು ಮಾಡುತ್ತಿದ್ದಾರೆ ಎಂದು ಅವರು ಹೇಳಿದರು.
Advertisement