
ಬೆಂಗಳೂರು: ವಿಧಾನ ಪರಿಷತ್ ಸದಸ್ಯರಿಗೆ ಎಂಎಲ್ ಸಿ ನಿಧಿ ನೀಡುವ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಕರಾತ್ಮಕವಾಗಿ ಸ್ಪಂದಿಸಿದ್ದಾರೆ ಎನ್ನಲಾಗಿದೆ, ಮಂಗಳವಾರ ಕಾಂಗ್ರೆಸ್ ಪರಿಷತ್ ಸದಸ್ಯರ ಜೊತೆ ಸಿಎಂ ಸಭೆ ನಡೆಸಿದರು. ಸಭೆಯಲ್ಲಿ ಎಂಎಲ್ ಸಿ ಗಳು ನಿಧಿ ಬಗ್ಗೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದಾರೆ.
ಎಂಎಲ್ಸಿಗಳು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಹಣವನ್ನು ಕೋರಿದ್ದಾರೆ. ನಮ್ಮಲ್ಲಿ ಶಾಸಕರಿಗೆ ನೀಡಬೇಕಾದ 8,000 ಕೋಟಿ ರೂ. ಹಣವಿದೆ. ನಾನು ಅವರಿಗೆ ಇಷ್ಟು ಮೊತ್ತದ ಹಣ ನೀಡುತ್ತೇನೆ ಎಂದು ಭರವಸೆ ನೀಡಲು ಬಯಸುವುದಿಲ್ಲ, ಆದರೆ ಕೆಲ ಪ್ರಮಾಣದಲ್ಲಿ ಹಣವನ್ನು ಹಂಚಿಕೆ ಮಾಡಲಾಗುವುದು ಎಂದು ಭರವಸೆ ನೀಡಿದ್ದೇನೆ ಎಂದು ಸಿಎಂ ಸಭೆಯ ನಂತರ ಸುದ್ದಿಗಾರರಿಗೆ ತಿಳಿಸಿದರು.
ಸಿದ್ದರಾಮಯ್ಯ ಅವರು ಆಡಳಿತ ಪಕ್ಷದ ಎಂಎಲ್ಸಿಗಳೊಂದಿಗೆ ಸುಮಾರು ಮೂರು ಗಂಟೆಗಳ ಕಾಲ ಸಭೆ ನಡೆಸಿದ್ದು, 30 ಎಂಎಲ್ಸಿಗಳು ಸಭೆಯಲ್ಲಿ ಭಾಗವಹಿಸಿದ್ದರು. ಇತ್ತೀಚೆಗೆ ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ, ಎಂಎಲ್ಸಿಗಳು ಸಿಎಂ ಅವರನ್ನು ಶಾಸಕರೊಂದಿಗೆ ಮಾಡುವಂತೆಯೇ ಸಭೆ ಕರೆಯುವಂತೆ ಒತ್ತಾಯಿಸಿದ್ದರು.
ಹಲವು ರಾಜ್ಯ ಸಮಸ್ಯೆಗಳು ಮತ್ತು ಗ್ಯಾರಂಟಿ ಯೋಜನೆಗಳ ಬಗ್ಗೆ ಚರ್ಚಿಸಲಾಯಿತು. ನಮ್ಮ ಬೇಡಿಕೆಗಳಲ್ಲಿ ಒಂದಾದ ನಿಧಿಯನ್ನು ಮಂಜೂರು ಮಾಡುವುದು ಪ್ರಮುಖವಾಗಿತ್ತು, ಅದಕ್ಕೆ ಮುಖ್ಯಮಂತ್ರಿ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದರು" ಎಂದು ಎಂಎಲ್ಸಿ ಸಲೀಮ್ ಅಹ್ಮದ್ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದರು.
ರಾಜ್ಯಪಾಲರು ನಾಲ್ಕು ಎಂಎಲ್ಸಿಗಳ ನಾಮನಿರ್ದೇಶನಕ್ಕೆ ಒಪ್ಪಿಗೆ ನೀಡಿರುವುದರಿಂದ ಮೇಲ್ಮನೆಯಲ್ಲಿ ಕಾಂಗ್ರೆಸ್ ಸದಸ್ಯರ ಸಂಖ್ಯೆ 37 ಆಗಲಿದೆ, ಇದು ಬಿಜೆಪಿ ಮತ್ತು ಜೆಡಿಎಸ್ ಎಂಎಲ್ಸಿಗಳನ್ನು ಒಟ್ಟುಗೂಡಿಸಿದರೆ ಸಮನಾಗಿರುತ್ತದೆ. ಸ್ವತಂತ್ರ ಎಂಎಲ್ಸಿ ಲಖನ್ ಜಾರಕಿಹೊಳಿ ಕಾಂಗ್ರೆಸ್ಗೆ ಬೆಂಬಲ ನೀಡುವ ಸಾಧ್ಯತೆಯಿದೆ, ಹೀಗಾಗಿ ಪರಿಷತ್ತಿನಲ್ಲಿ ಕಾಂಗ್ರೆಸ್ ಮೇಲುಗೈ ಸಿಗುತ್ತದೆ.
ಬಿಜೆಪಿ ಮತ್ತು ಜೆಡಿಎಸ್ನಿಂದ ಆಯ್ಕೆಯಾದ ಪರಿಷತ್ ಅಧ್ಯಕ್ಷ ಬಸವರಾಜ ಹೊರಟ್ಟಿ ಅವರನ್ನು ಬದಲಾಯಿಸುವ ಬಗ್ಗೆ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ, ಚಳಿಗಾಲದ ಅಧಿವೇಶನದವರೆಗೆ ನಾವು ಕಾಯುತ್ತೇವೆ" ಎಂದು ಮೂಲಗಳು ತಿಳಿಸಿವೆ.
Advertisement