

ತುಮಕೂರು: ನಡೆದಾಡುವ ದೇವರು ಎಂದೇ ಪ್ರಸಿದ್ಧರಾದ ಸಿದ್ದಗಂಗಾ ಮಠದ ಡಾ. ಶಿವಕುಮಾರ ಸ್ವಾಮೀಜಿ ಅವರ 119ನೇ ಜನ್ಮದಿನೋತ್ಸವವನ್ನು ಇಂದು ತುಮಕೂರು ಜಿಲ್ಲೆಯ ಜನತೆ ಸೇರಿದಂತೆ ನಾಡಿನಾದ್ಯಂತ ಅವರ ಭಕ್ತರು ಅದ್ದೂರಿಯಾಗಿ ಆಚರಿಸುತ್ತಿದ್ದಾರೆ.
ಇಂದು ತುಮಕೂರಿನ ಕ್ಯಾತಸಂದ್ರದಲ್ಲಿರುವ ಸಿದ್ದಗಂಗಾ ಮಠದ ಶಿವಕುಮಾರ ಶ್ರೀಗಳ ಗದ್ದುಗೆಯನ್ನು ಫಲಪುಷ್ಪಗಳಿಂದ ವಿಶೇಷವಾಗಿ ಅಲಂಕರಿಸಲಾಗಿದೆ. ಬೆಳಗಿನ ಜಾವ 5 ಗಂಟೆಯಿಂದಲೇ ಭಕ್ತಾದಿಗಳು ಆಗಮಿಸಿ ಗದ್ದುಗೆಯ ದರ್ಶನ ಪಡೆಯುತ್ತಿದ್ದಾರೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸಹ ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದು, ಮಠದ ಆವರಣದಲ್ಲಿ ಬಿಗಿ ಭದ್ರತೆಯನ್ನು ಏರ್ಪಡಿಸಲಾಗಿದೆ. ರಾಜ್ಯಪಾಲರು ಸೇರಿದಂತೆ ಹಲವು ಗಣ್ಯರು ಸಹ ಸಮಾರಂಭದಲ್ಲಿ ಉಪಸ್ಥಿತರಿರಲಿದ್ದಾರೆ.
ರಾಷ್ಟ್ರಪತಿಗಳ ಆಗಮನ
ನಿನ್ನೆ ಸಾಯಂಕಾಲವೇ ಬೆಂಗಳೂರಿಗೆ ಆಗಮಿಸಿದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ರಾಜ್ಯಪಾಲ ತ್ಯಾವರ್ ಚಂದ್ ಗೆಹ್ಲೋಟ್ ಅವರು ಸ್ವಾಗತಿಸಿದರು.
ಪ್ರಧಾನಿ ಮೋದಿ ಶುಭಾಶಯ
ಡಾ ಶಿವಕುಮಾರ ಸ್ವಾಮಿಗಳ ಜಯಂತಿ ಸಂದರ್ಭದಲ್ಲಿ ಪ್ರಧಾನಿ ಮೋದಿ ಅವರನ್ನು ಸ್ಮರಿಸಿದ್ದಾರೆ. ಕನ್ನಡದಲ್ಲಿ ಎಕ್ಸ್ ಸಂದೇಶ ನೀಡಿರುವ ಪ್ರಧಾನ ಮಂತ್ರಿಗಳು, ಮನುಕುಲದ ಬಗೆಗಿನ ಕರುಣೆ, ನಮ್ರತೆ ಮತ್ತು ಅಚಲ ಸೇವೆಯ ಸಂಕೇತವಾಗಿ ಅವರು ಜನರ ಸ್ಮೃತಿಯಲ್ಲಿ ನೆಲೆಸಿದ್ದಾರೆ ಎಂದರು.
Advertisement