

ದಾವಣಗೆರೆ: ಕೊಡಗಿನ ತಡಿಯಾಂಡಮೋಳ್ ಚಾರಣಕ್ಕೆ ಬಂದಿದ್ದ ಕೇರಳದ 34 ವರ್ಷದ ಯುವತಿ ಜಿ.ಎಸ್. ಶರಣ್ಯಾ ಪತ್ತೆಗೆ ಹೆಚ್ಚುವರಿ ಸಿಬ್ಬಂದಿಯ ನಾಲ್ಕು ತಂಡಗಳನ್ನು ನಿಯೋಜಿಸಲು ಹಾಗೂ ಡ್ರೋನ್ ಕ್ಯಾಮರಾ ಬಳಸುವಂತೆ ಸೂಚಿಸಲಾಗಿದೆ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ.ಖಂಡ್ರೆ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಯುವತಿ ನಾಪತ್ತೆ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಶೋಧ ಕಾರ್ಯ ತೀವ್ರಗೊಳಿಸುವಂತೆ ಸೂಚನೆ ನೀಡಿದ್ದಾರೆ ಎಂದರು.
ಚಾರಣಕ್ಕಾಗಿ ಕೇರಳದಿಂದ ಆಗಮಿಸಿದ್ದ ಯುವತಿ ಕಕ್ಕಬ್ಬೆ ಗ್ರಾಮದಲ್ಲಿ ಖಾಸಗಿ ಹೋಂ ಸ್ಟೇನಲ್ಲಿ ತಂಗಿದ್ದರು. ಕಳೆದ ಗುರುವಾರ ಗೈಡ್ ಹಾಗೂ ಇತರ 15 ಚಾರಣಿಗರೊಂದಿಗೆ ಕೊಡಗಿನ ಎತ್ತರದ ಗಿರಿಶ್ರೇಣಿ ತಡಿಯಂಡವಮೋಳ್ ಬೆಟ್ಟಕ್ಕೆ ತೆರಳಿದ್ದರು.
ಗುರುವಾರ ಕೊನೆಯದಾಗಿ ದೂರವಾಣಿ ಮೂಲಕ ಹೋಂ ಸ್ಟೇ ಸಂಪರ್ಕಿಸಿರುವ ಯುವತಿ, ತಾನು ದಾರಿತಪ್ಪಿದ್ದಾಗಿ ತಿಳಿಸಿದ್ದಾರೆ ಎಂಬ ಮಾಹಿತಿ ಇದೆ.
ವಿಷಯ ತಿಳಿದ ಕೂಡಲೇ ಪೊಲೀಸರು, ನಕ್ಸಲ್ ನಿಗ್ರಹ ದಳ ಹಾಗೂ ಶ್ವಾನದಳ ಹಾಗೂ ಅರಣ್ಯ ಸಿಬ್ಬಂದಿ ಸೇರಿದಂತೆ 50 ಜನರ ಐದು ತಂಡಗಳು ಶೋಧ ಕಾರ್ಯ ನಡೆಸುತ್ತಿವೆ ಎಂದು ಸಚಿವರು ತಿಳಿಸಿದರು.
Advertisement