NICE ಯೋಜನೆಯನ್ನು ಸರ್ಕಾರ ವಶಕ್ಕೆ ಪಡೆಯಲಿ, ವಾಹನ ಸವಾರರೇ ಟೋಲ್ ಪಾವತಿಸಬೇಡಿ: ಸಚಿವ ಎಚ್.ಡಿ. ಕುಮಾರಸ್ವಾಮಿ-Video

ನೈಸ್ ಯೋಜನೆ ಮತ್ತು ಪ್ರಸ್ತಾವಿತ ಬಿಡದಿ ಟೌನ್‌ಶಿಪ್ ಯೋಜನೆಗಳು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಈ ಎರಡೂ ವಿಚಾರಗಳನ್ನು ಮುಂಬರುವ ವಿಧಾನಮಂಡಲದ ಮುಂಗಾರು ಅಧಿವೇಶನದಲ್ಲಿ ಪ್ರಸ್ತಾಪಿಸಲಾಗುವುದು ಎಂದರು.
H D Kumaraswamy
ಹೆಚ್ ಡಿ ಕುಮಾರಸ್ವಾಮಿ
Updated on

ಬೆಂಗಳೂರು: ನೈಸ್ (Nandi Infrastructure Corridor Enterprise) ಸಂಸ್ಥೆಯ ಬೆಂಗಳೂರು-ಮೈಸೂರು ಮೂಲಸೌಕರ್ಯ ಕಾರಿಡಾರ್ (BMIC) ಯೋಜನೆಯನ್ನು ರಾಜ್ಯ ಸರ್ಕಾರ ಕೂಡಲೇ ವಶಕ್ಕೆ ಪಡೆದು, ಈ ರಸ್ತೆಯಲ್ಲಿನ ಎಲ್ಲ ಟೋಲ್ ಸಂಗ್ರಹವನ್ನು ನಿಲ್ಲಿಸಬೇಕು ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಒತ್ತಾಯಿಸಿದ್ದಾರೆ. ಅಲ್ಲದೆ, ವಾಹನ ಸವಾರರು ಟೋಲ್ ಪಾವತಿಸಬಾರದು ಎಂದು ಅವರು ಮನವಿ ಮಾಡಿದ್ದಾರೆ.

ನೈಸ್ ಯೋಜನೆ ಮತ್ತು ಪ್ರಸ್ತಾವಿತ ಬಿಡದಿ ಟೌನ್‌ಶಿಪ್ ಯೋಜನೆಗಳು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಈ ಎರಡೂ ವಿಚಾರಗಳನ್ನು ಮುಂಬರುವ ವಿಧಾನಮಂಡಲದ ಮುಂಗಾರು ಅಧಿವೇಶನದಲ್ಲಿ ಪ್ರಸ್ತಾಪಿಸಲಾಗುವುದು ಎಂದರು.

ನೈಸ್ ಯೋಜನೆ ಕುರಿತು ಹೈಕೋರ್ಟ್ ಮಾಡಿರುವ ಗಂಭೀರ ಅವಲೋಕನಗಳ ಬಗ್ಗೆ ರಾಜ್ಯ ಸರ್ಕಾರ ಎಚ್ಚೆತ್ತುಕೊಳ್ಳಬೇಕು. ಯೋಜನೆಯ ಅನುಷ್ಠಾನದಲ್ಲಿ ಗಂಭೀರ ಅಕ್ರಮಗಳು ನಡೆದಿರುವುದನ್ನು ನ್ಯಾಯಾಲಯ ಬೆಟ್ಟುಮಾಡಿದೆ ಹಾಗೂ ಟೋಲ್ ಸಂಗ್ರಹಿಸುತ್ತಿರುವ ರೀತಿಯನ್ನೂ ಪ್ರಶ್ನಿಸಿದೆ. ನೈಸ್ ಸಂಸ್ಥೆ ಕೂಡಲೇ ಟೋಲ್ ಸಂಗ್ರಹವನ್ನು ನಿಲ್ಲಿಸಬೇಕು ಎಂದು ಅವರು ಹೇಳಿದರು.

ಸರ್ಕಾರ ಕ್ರಮ ಕೈಗೊಳ್ಳಲು ವಿಫಲವಾದರೆ, ಜನರೇ ಈ ವಿಚಾರವನ್ನು ಕೈಗೆತ್ತಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು. ಟೋಲ್ ಸಂಗ್ರಹ ನಿಲ್ಲಿಸಲು ಸರ್ಕಾರಕ್ಕೆ ಎರಡು ವಾರಗಳ ಗಡುವು ನೀಡಿದ ಅವರು, ಅಷ್ಟರೊಳಗೆ ಯಾವುದೇ ಕ್ರಮ ಕೈಗೊಳ್ಳದಿದ್ದರೆ ಜೆಡಿಎಸ್ ಪ್ರತಿಭಟನೆ ಆರಂಭಿಸಲಿದೆ ಎಂದರು.

ಜುಲೈ 29ರಂದು ಹೈಕೋರ್ಟ್ ನೀಡಿದ ತೀರ್ಪನ್ನು ಉಲ್ಲೇಖಿಸಿದ ಅವರು, ಬೆಂಗಳೂರು-ಮೈಸೂರು ಮೂಲಸೌಕರ್ಯ ಕಾರಿಡಾರ್ (BMIC) ಯೋಜನೆಯು ರಾಜ್ಯದ ಅತಿದೊಡ್ಡ ಹಗರಣಗಳಲ್ಲಿ ಒಂದಾಗಿ ಕಾಣುತ್ತಿದೆ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ. ವಂಚನೆ ಮತ್ತು ಇತರ ಅಪರಾಧಗಳ ಆರೋಪಗಳ ಕುರಿತು ತಜ್ಞರ ತಂಡದಿಂದ ಸ್ವತಂತ್ರ ತನಿಖೆ ನಡೆಸುವುದು ಹಾಗೂ ಯೋಜನೆಯ ಲೆಕ್ಕಪತ್ರಗಳ ಫೊರೆನ್ಸಿಕ್ ಆಡಿಟ್ ನಡೆಸುವುದು ಸೂಕ್ತ ಎಂದು ನ್ಯಾಯಾಲಯ ಹೇಳಿದೆ ಎಂದರು.

ನ್ಯಾಯಾಲಯದ ಈ ಅವಲೋಕನಗಳ ಹೊರತಾಗಿಯೂ ರಾಜ್ಯ ಸರ್ಕಾರ ಮೌನವಾಗಿರುವುದನ್ನು ಅವರು ಪ್ರಶ್ನಿಸಿದರು. ಸರ್ಕಾರ ಜನರ ಹಿತಾಸಕ್ತಿಯನ್ನು ರಕ್ಷಿಸಬೇಕಿದೆ. ಖಾಸಗಿ ಸಂಸ್ಥೆಯೊಂದು ಸಾರ್ವಜನಿಕರನ್ನು ಶೋಷಿಸುತ್ತಿದೆ ಎಂಬ ಆರೋಪಗಳಿರುವಾಗ ಸರ್ಕಾರ ಏಕೆ ಮೌನವಾಗಿದೆ ಎಂದು ಅವರು ಪ್ರಶ್ನಿಸಿದರು.

ನೈಸ್ ಯೋಜನೆಯ ಹೆಸರಿನಲ್ಲಿ ಭೂಮಿ ಸ್ವಾಧೀನಪಡಿಸಿಕೊಳ್ಳಲಾಗಿದ್ದು, ಸ್ವಹಿತಾಸಕ್ತಿಯುಳ್ಳವರು ಇದರಿಂದ ಲಾಭ ಪಡೆದಿದ್ದಾರೆ. 20,000 ಎಕರೆಗೂ ಹೆಚ್ಚು ಭೂಮಿಯನ್ನು ಸಂಗ್ರಹಿಸಿ ಲ್ಯಾಂಡ್ ಬ್ಯಾಂಕ್ ಆಗಿ ಇರಿಸಲಾಗಿದೆ ಎಂದು ಅವರು ಆರೋಪಿಸಿದರು.

H D Kumaraswamy
ಬಿಡದಿ ಟೌನ್‌ಶಿಪ್ ಕುರಿತು ಚರ್ಚೆ ಆರಂಭಿಸಲು ಬಿಜೆಪಿ-ಜೆಡಿಎಸ್ ನಿರ್ಧಾರ; ರೈತರ ಹಿತಕ್ಕಾಗಿ ವಿಧಾನಸಭೆಯಲ್ಲಿ ಒಗ್ಗಟ್ಟಿನಿಂದ ಹೋರಾಟ: HD ಕುಮಾರಸ್ವಾಮಿ; Video

ನೈಸ್‌ಗೆ ಹೆಚ್ಚುವರಿಯಾಗಿ 550 ಎಕರೆ ಭೂಮಿ ನೀಡಲಾಗಿದೆ

ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಸಾವಿರಾರು ರೈತರು ಭೂಮಿ ಮತ್ತು ಜೀವನೋಪಾಯ ಕಳೆದುಕೊಂಡಿದ್ದಾರೆ. ಟೋಲ್ ಸಂಗ್ರಹದಲ್ಲಿಯೂ ಕಂಪನಿ ಅಗತ್ಯ ನಿಯಮಗಳನ್ನು ಪಾಲಿಸಿಲ್ಲ ಎಂದು ಆರೋಪಿಸಿದರು. ಕಂಪನಿಯು ಫ್ರೇಮ್‌ವರ್ಕ್ ಒಪ್ಪಂದವನ್ನು ಉಲ್ಲಂಘಿಸಿದೆ ಎಂದು ಅವರು ದೂರಿದರು.

ಹಿರಿಯ ಶಾಸಕ ಟಿ.ಬಿ. ಜಯಚಂದ್ರ ನೇತೃತ್ವದ ಸದನ ಸಮಿತಿಯು ನೈಸ್ ಯೋಜನೆಯನ್ನು ರಾಜ್ಯ ಸರ್ಕಾರ ವಶಕ್ಕೆ ಪಡೆಯುವಂತೆ ಶಿಫಾರಸು ಮಾಡಿತ್ತು ಎಂದು ಅವರು ತಿಳಿಸಿದರು.

ರೈತರು ಭೂಮಿ ಕಳೆದುಕೊಂಡು ಸುಮಾರು 20 ವರ್ಷಗಳಾಗಿವೆ. ಆದರೆ ಕೆಐಎಡಿಬಿ ಇನ್ನೂ ಹಲವರಿಗೆ ಪರಿಹಾರ ನೀಡಿಲ್ಲ. ನೈಸ್ ಸಂಸ್ಥೆ ಭೂಮಿಯನ್ನು ಇತರರಿಗೆ ವರ್ಗಾಯಿಸುತ್ತಿದೆ ಎಂಬ ಆರೋಪವಿದೆ ಎಂದು ಹೇಳಿದರು.

ಸುಮಾರು 550 ಎಕರೆ ಹೆಚ್ಚುವರಿ ಭೂಮಿಯನ್ನು ನೈಸ್‌ಗೆ ನೀಡಲಾಗಿತ್ತು. ಆದರೂ ಅಗತ್ಯ ಭೂಮಿಯನ್ನು ನೀಡಿಲ್ಲ ಎಂದು ಕಂಪನಿ ಹೇಳುತ್ತಲೇ ಇತ್ತು. ಪೂರ್ವಾನುಮತಿ ಪಡೆಯದೆ ನೈಸ್ ಹಲವು ಬಾರಿ ಟೋಲ್ ದರ ಪರಿಷ್ಕರಿಸಿದೆ ಎಂದು ಸರ್ಕಾರ ನ್ಯಾಯಾಲಯಕ್ಕೆ ತಿಳಿಸಿತ್ತು ಎಂದು ಅವರು ಆರೋಪಿಸಿದರು.

‘ಶೋಭಾ ಡೆವಲಪರ್ಸ್‌ಗೆ ನೈಸ್ ಎನ್‌ಒಸಿ ನೀಡಿದ್ದು ಹೇಗೆ?’

ಬೆಂಗಳೂರಿನ ಹೊಸಕೆರೆಹಳ್ಳಿಯ ನೈಸ್ ಜಂಕ್ಷನ್ ಬಳಿ ಶೋಭಾ ಡೆವಲಪರ್ಸ್‌ಗೆ ನೈಸ್ ಸಂಸ್ಥೆ ನಿರಾಕ್ಷೇಪಣಾ ಪ್ರಮಾಣಪತ್ರ (NOC) ನೀಡಿದ ಸಂದರ್ಭಗಳ ಬಗ್ಗೆಯೂ ಕುಮಾರಸ್ವಾಮಿ ಪ್ರಶ್ನೆಗಳನ್ನು ಎತ್ತಿದರು.

ಈ ವ್ಯವಸ್ಥೆಯಿಂದ ಲಾಭ ಪಡೆದವರು ಯಾರು ಎಂಬುದನ್ನು ಮುಖ್ಯಮಂತ್ರಿಗಳಿಗೆ ಕೇಳಲು ಬಯಸುತ್ತೇನೆ. ಹೊಸಕೆರೆಹಳ್ಳಿಯ ನೈಸ್ ಜಂಕ್ಷನ್ ಬಳಿ ರೈತರನ್ನು ಸ್ಥಳಾಂತರಿಸಿದ ಬಳಿಕ, ಕಟ್ಟಡ ನಿರ್ಮಿಸಲು ಎನ್‌ಒಸಿ ಕೋರಿ ಶೋಭಾ ಡೆವಲಪರ್ಸ್ ನೈಸ್‌ಗೆ ಪತ್ರ ಬರೆದಿತ್ತು. ನೈಸ್ ಅದಕ್ಕೆ ಎನ್‌ಒಸಿ ನೀಡಿತು. ಆ ಭೂಮಿ ಯಾರದ್ದು? ಬೇರೆಯವರ ಆಸ್ತಿಗೆ ಎನ್‌ಒಸಿ ನೀಡುವ ಹಕ್ಕು ನೈಸ್‌ಗೆ ಇದೆಯೇ? ಈ ಭೂಮಿಯನ್ನು ಶೋಭಾ ಡೆವಲಪರ್ಸ್‌ಗೆ ಯಾವ ಆಧಾರದ ಮೇಲೆ ನೀಡಲಾಯಿತು ಎಂದು ಅವರು ಪ್ರಶ್ನಿಸಿದರು.

ಎಚ್‌ಡಿಕೆ ವಿರುದ್ಧ ಸಚಿವ ಬಾಲಕೃಷ್ಣ ವಾಗ್ದಾಳಿ

ಸಚಿವ ಹಾಗೂ ಮಾಗಡಿ ಶಾಸಕ ಎಚ್.ಸಿ. ಬಾಲಕೃಷ್ಣ ಕುಮಾರಸ್ವಾಮಿ ಆರೋಪಗಳಿಗೆ ತಿರುಗೇಟು ನೀಡಿದ್ದಾರೆ. ಜವಾಬ್ದಾರಿಯುತ ಸ್ಥಾನದಲ್ಲಿರುವ ವ್ಯಕ್ತಿಯೊಬ್ಬರು ಇಂತಹ ಹೇಳಿಕೆಗಳನ್ನು ನೀಡಬಾರದು. ಏನಾದರೂ ಸಮಸ್ಯೆಯಾಗಿ ಕಾನೂನು ಮತ್ತು ಸುವ್ಯವಸ್ಥೆಯ ಪರಿಸ್ಥಿತಿ ಉಂಟಾದರೆ, ಅದಕ್ಕೆ ಯಾರು ಹೊಣೆ? ಕುಮಾರಸ್ವಾಮಿ ಅವರು ಇಂತಹ ಜವಾಬ್ದಾರಿಯುತ ಸ್ಥಾನದಲ್ಲಿದ್ದು, ಬೇಜವಾಬ್ದಾರಿ ಹೇಳಿಕೆಗಳನ್ನು ನೀಡುವುದನ್ನು ನಿಲ್ಲಿಸಬೇಕು ಎಂದು ಹೇಳಿದರು.

ನೈಸ್ ಮತ್ತು ಬಿಡದಿ ಟೌನ್‌ಶಿಪ್ ಯೋಜನೆಗಳನ್ನು ಆರಂಭಿಸಿದ್ದಕ್ಕಾಗಿ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಮತ್ತು ಎಚ್.ಡಿ. ಕುಮಾರಸ್ವಾಮಿ ಅವರನ್ನು ಅವರು ಹೊಣೆಗಾರರನ್ನಾಗಿ ಮಾಡಿದರು.

ನೈಸ್ ರಸ್ತೆ ಎಲ್ಲಿಂದ ಬಂತು ಅದು ಯಾರ ಕಾಲದಲ್ಲಿ ಆರಂಭವಾಯಿತು? ದೇವೇಗೌಡರ ಕಾಲದಲ್ಲಿ ಅದು ಆರಂಭವಾಯಿತು. ದೇವೇಗೌಡರು ನೈಸ್ ರಸ್ತೆ ಮಾಡಿರದಿದ್ದರೆ, ಇಂದು ಈ ಚರ್ಚೆಗಳೇ ನಡೆಯುತ್ತಿರಲಿಲ್ಲ ಎಂದು ಬಾಲಕೃಷ್ಣ ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com