

ಕಾಸರಗೋಡು: ಮದುವೆ ನಿಶ್ಚಿತಾರ್ಥ ಮಾಡಿಕೊಂಡಿದ್ದ ಮತ್ತು ಡಿಸೆಂಬರ್ 26 ರಂದು ದಾಂಪತ್ಯ ಜೀವನಕ್ಕೆ ಕಾಲಿಡಬೇಕಿದ್ದ ಇಬ್ಬರೂ ಬ್ಯಾಂಕ್ ಉದ್ಯೋಗಿಗಳಾದ್ದ ಯುವ ಜೋಡಿಯೊಂದು ಪ್ರತ್ಯೇಕ ಸ್ಥಳಗಳಲ್ಲಿ ಶವವಾಗಿ ಪತ್ತೆಯಾಗಿದ್ದು, ಇದು ಕೊಲೆಯೋ ಅಥವಾ ಆತ್ಮಹತ್ಯೆಯೋ? ಎಂಬುದು ಇನ್ನೂ ಸ್ಪಷ್ಟವಾಗಿ ತಿಳಿದು ಬಂದಿಲ್ಲ.
ಮೃತರನ್ನು ಕಾಸರಗೋಡಿನ ಪಳ್ಳಿಕ್ಕರ ಮೂಲದ ಪಿ. ಅನುಶ್ರೀ(25) ಹಾಗೂ ಕಣ್ಣೂರು ಮೂಲದ ವಿ. ಅಮಲ್ (26) ಎಂದು ಗುರುತಿಸಲಾಗಿದೆ. ಅನುಶ್ರೀ ಅವರು ಮೈಸೂರು ಜಿಲ್ಲೆಯ ಹುಣಸೂರಿನ ತಮ್ಮ ಬಾಡಿಗೆ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದು, ಅವರು ಹುಣಸೂರಿನ ಎಸ್ಬಿಐ ಶಾಖೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು.
ಅನುಶ್ರೀ ಶವವಾಗಿ ಪತ್ತೆಯಾದ ಕೆಲವೇ ಗಂಟೆಗಳಲ್ಲಿ, ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದ ಯುವಕ ಕಣ್ಣೂರು ಮೂಲದ ವಿ. ಅಮಲ್(26) ಕೊಚ್ಚಿಯ ಎರ್ನಾಕುಲಂ ನಾರ್ತ್ ರೈಲ್ವೆ ನಿಲ್ದಾಣದ ಬಳಿಯ ಹೋಟೆಲ್ ಕೊಠಡಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.
ಇಬ್ಬರೂ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಉದ್ಯೋಗಿಗಳಾಗಿದ್ದು, ಅನುಶ್ರೀ ಹುಣಸೂರಿನಲ್ಲಿ ಕೆಲಸ ಮಾಡುತ್ತಿದ್ದರೆ, ಅಮಲ್ ಎರ್ನಾಕುಲಂನಲ್ಲಿ ಉದ್ಯೋಗದಲ್ಲಿದ್ದರು. ಡಿಸೆಂಬರ್ 26 ರಂದು ಅವರ ವಿವಾಹ ನಿಗದಿಯಾಗಿತ್ತು.
ಮಂಗಳವಾರ ರಾತ್ರಿಯವರೆಗೆ ಅನುಶ್ರೀ ಬ್ಯಾಂಕಿನಲ್ಲಿ ಕೆಲಸ ಮಾಡುತ್ತಿದ್ದರು. ಆ ರಾತ್ರಿ ಆಕೆಯ ಸಹೋದರಿ ಕರೆ ಮಾಡಿದಾಗ, ಅನುಶ್ರೀ ಅವರು ಅಮಲ್ ಜೊತೆ ಫೋನ್ನಲ್ಲಿ ಮಾತನಾಡುತ್ತಿರುವುದಾಗಿ ಹೇಳಿದ್ದರು ಎಂದು ವರದಿಯಾಗಿದೆ. ಇಬ್ಬರ ಮೊಬೈಲ್ ಫೋನ್ಗಳನ್ನು ವಿವರವಾಗಿ ಪರಿಶೀಲಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಬುಧವಾರ ಬೆಳಗ್ಗೆ ಅನುಶ್ರೀ ಅವರ ಕುಟುಂಬ ಪದೇ ಪದೇ ಫೋನ್ ಮಾಡಿದರೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಹೀಗಾಗಿ ಅವರು ನೆರೆಹೊರೆಯವರಿಗೆ ಮಾಹಿತಿ ನೀಡಿದ್ದಾರೆ. ನೆರೆಹೊರೆಯವರು ಅವರ ನಿವಾಸಕ್ಕೆ ಹೋಗಿ ನೋಡಿದಾಗ, ಮೃತಪಟ್ಟಿರುವುದು ಕಂಡು ಬಂದಿದೆ.
ಹುಣಸೂರು ಪೊಲೀಸರು ವಿಚಾರಣೆ ನಡೆಸಿ, ಮರಣೋತ್ತರ ಪರೀಕ್ಷೆಯ ನಂತರ ಬುಧವಾರ ಸಂಜೆ ಆಕೆಯ ಶವವನ್ನು ಕುಟುಂಬಸ್ಥರಿಗೆ ಒಪ್ಪಿಸಿದ್ದಾರೆ.
ಮೃತ ಅನುಶ್ರೀ ಅವರು ಪಳ್ಳಿಕ್ಕರದ ಕೆ. ಚಂದ್ರನ್ ಹಾಗೂ ರೀನಾ ದಂಪತಿಯ ಪುತ್ರಿಯಾಗಿದ್ದು, ಅಮಲ್ ಅವರು ಕಣ್ಣೂರಿನ ಅಂಬಲತಟ್ಟುವಿನ ಸುಧಾಕರನ್ ಮತ್ತು ಅನಿತಾ ದಂಪತಿಯ ಪುತ್ರನಾಗಿದ್ದಾರೆ. ಇತ್ತೀಚೆಗಷ್ಟೇ ಇಬ್ಬರ ನಿಶ್ಚಿತಾರ್ಥ ನೆರವೇರಿತ್ತು. ಕಳೆದ ಶನಿವಾರವಷ್ಟೇ ಇಬ್ಬರೂ ಕಾಸರಗೋಡಿನ ಮನೆಗೆ ಬಂದು ಭಾನುವಾರ ಸಂಜೆ ವಾಪಸ್ ತೆರಳಿದ್ದರು ಎಂದು ಸ್ಥಳೀಯರು ತಿಳಿಸಿದ್ದಾರೆ.
ಹುಣಸೂರು ಪೊಲೀಸರು ಅನುಶ್ರೀ ಅವರ ಸಾವಿನ ಹಿಂದಿರುವ ಕಾರಣಗಳ ಕುರಿತು ತನಿಖೆ ಕೈಗೊಂಡಿದ್ದಾರೆ. ವಿವಾಹಕ್ಕೆ ಕೆಲವೇ ದಿನಗಳು ಬಾಕಿ ಇರುವಾಗ ಈ ದುರಂತ ಸಂಭವಿಸಿರುವುದು ಎರಡೂ ಕುಟುಂಬಗಳಲ್ಲಿ ಆಘಾತ ಮೂಡಿಸಿದೆ.