

ಬೆಂಗಳೂರು: ಸಾರ್ವಜನಿಕ ಉಪಯೋಗಕ್ಕಾಗಿ ಸರ್ಕಾರಿ ಉದ್ಯಾನಗಳ ಭೂಮಿಯ 5 ಪ್ರತಿಶತ ಭೂಮಿ ಮಾರಾಟಕ್ಕೆ ಅನುವು ಮಾಡಿಕೊಡುವ ಮಸೂದೆಗೆ ಸಂಸದ ತೇಜಸ್ವಿ ಸೂರ್ಯ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
ಸರ್ಕಾರಿ ಉದ್ಯಾನವನಗಳು (ಸಂರಕ್ಷಣೆ) ಕಾಯ್ದೆ, 1975 ಕ್ಕೆ ತಿದ್ದುಪಡಿ ತರುವ ಮಸೂದೆಯನ್ನು ಕರ್ನಾಟಕ ಸಚಿವ ಸಂಪುಟ ಅನುಮೋದಿಸಿದೆ. ಸರ್ಕಾರದ ಈ ನಡೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಸಂಸದ ತೇಜಸ್ವಿ ಸೂರ್ಯ, ಸರ್ಕಾರದ ತೀರ್ಮಾನ ಕಳವಳಕಾರಿಯಾಗಿದೆ. ಇದನ್ನು ಮರು ಪರಿಶೀಲಿಸುವಂತೆ ಸಿಎಂ ಡಿಕೆ ಶಿವಕುಮಾರ್ ಅವರಿಗೆ ಪತ್ರ ಬರೆದು ಆಗ್ರಹಿಸಿದ್ದಾರೆ.
ಇಂತಹ ನಿರ್ಧಾರ ಕೈಗೊಳ್ಳಲ್ಪು ನಿಮ್ಮ ಆತ್ಮಸಾಕ್ಷಿಯಾದರೂ ಹೇಗೆ ಒಪ್ಪುತ್ತದೆ ಎಂಬುದನ್ನು ರಾಜ್ಯದ ಜನತೆಗೆ ತಿಳಿಸಿ ಎಂದು ತೇಜಸ್ವಿ ಸೂರ್ಯ ಒತ್ತಾಯಿಸಿದ್ದಾರೆ.
ಸಾರ್ವಜನಿಕ ಉದ್ಯಾನವನಗಳ ಶೇ.5 ರಷ್ಟು ಜಾಗವನ್ನು ಇತರ ಉದ್ದೇಶಗಳಿಗೆ ಬಳಸಲು ಅವಕಾಶ ಮಾಡಿಕೊಡುವ ಮೂಲಕ ಬೆಂಗಳೂರಿನ ಭವಿಷ್ಯವನ್ನೇ ಹಾಳುಗೆಡವಲು ಹೊರಟಿದ್ದೀರಿ. ಪಾರ್ಕ್ ಗಳು ರಿಯಲ್ ಎಸ್ಟೇಟ್ ಗಾಗಿ ಮೀಸಲಿಟ್ಟ ಖಾಲಿ ಜಾಗವಲ್ಲ. ಬೆಂಗಳೂರಿನ ಶ್ವಾಸಕೋಶ ಎಂದು ಸಂಸದರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ವಿಷಯವಾಗಿ ಟ್ವೀಟ್ ಮಾಡಿರುವ ಸಂಸದರು ಬೆಂಗಳೂರು ಗಾರ್ಡನ್ ಸಿಟಿ ಎಂಬ ಹೆಗ್ಗಳಿಕೆಯನ್ನು ಗಳಿಸಿದ್ದು ನಿಮ್ಮ ಸರ್ಕಾರದ ಭಿಕ್ಷೆಯಿಂದಲ್ಲ. ತಲೆಮಾರುಗಳ ಜನರ ಪರಿಶ್ರಮದಿಂದ, ಉಳಿದಿರುವ ಹಸಿರಿನಿಂದ ಎಂದು ಹೇಳಿದ್ದಾರೆ.
ಬೆಂಗಳೂರು ಈಗಾಗಲೇ ವಾಯುಮಾಲಿನ್ಯ, ಹೆಚ್ಚುತ್ತಿರುವ ನಗರದ ಉಷ್ಣತೆ ಹಾಗೂ ಮಳೆನೀರು ಸಮಸ್ಯೆಯಿಂದ ನಲುಗುತ್ತಿದೆ. ಇಂತಹ ಸಂದರ್ಭದಲ್ಲಿ ಉಳಿದಿರುವ ಹಸಿರು ಪ್ರದೇಶಗಳ ಮೇಲೂ ಕಣ್ಣು ಹಾಕುವುದು ಯಾವ ರೀತಿಯ ಅಭಿವೃದ್ಧಿ, ಇಂದು ಶೇ.5 ರಷ್ಟು ಜಾಗಕ್ಕೆ ಅನುಮತಿ ನೀಡಿದರೆ ಮುಂದಿನ ದಿನಗಳಲ್ಲಿ ಮತ್ತಷ್ಟು ಹಸಿರು ಪ್ರದೇಶಗಳ ಮೇಲೆ ಇದೇ ಒತ್ತಡ ಬರಲಿದೆ. ಒಮ್ಮೆ ಪಾರ್ಕ್ ಕಳೆದುಕೊಂಡರೆ, ಅದನ್ನು ಮತ್ತೆ ಸೃಷ್ಟಿಸಲು ಸಾಧ್ಯವಿಲ್ಲ ಎಂದಿರುವ ಸಂಸದರು, ಬೆಂಗಳೂರು ನಿಮ್ಮ ರಾಜಕೀಯ ಪ್ರಯೋಗಗಳಿಗೆ, ನಿಮ್ಮ ಸರ್ಕಾರದ ಅಸಮರ್ಥ ಯೋಜನೆಗಳಿಗೆ ಅಥವಾ ರಿಯಲ್ ಎಸ್ಟೇಟ್ ಲಾಬಿಯ ಹಿತಾಸಕ್ತಿಗಳಿಗೆ ಬಲಿಯಾಗಲು ನಾವು ಬಿಡುವುದಿಲ್ಲ ಎಂದು ಸಂಸದರು ಎಚ್ಚರಿಕೆ ನೀದಿದ್ದಾರೆ.