ಇಸ್ಲಾಂ ಧರ್ಮವೇ ಶ್ರೇಷ್ಠ: ಸಿಎಂ ಡಿಕೆಶಿಯ 6ನೇ ಗ್ಯಾರಂಟಿ- ಹಿಂದೂಗಳಿಗೆ ‘ಸುನ್ನತ್ ಗ್ಯಾರಂಟಿ' ರಾಯರೆಡ್ಡಿ ಕ್ಷಮೆಯಾಚನೆಗೆ ಬಿಜೆಪಿ ಒತ್ತಾಯ!

ಕೊಪ್ಪಳದ ಕುಕನೂರಿನಲ್ಲಿ ನಡೆದ ಮುಸ್ಲಿಂ ಸಮಾಜದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ರಾಯರೆಡ್ಡಿ, ನಾನು ಹೆಚ್ಚಾಗಿ ಮಠ-ಮಂದಿರಕ್ಕೆ ಹೋಗಲ್ಲ. ಆದರೆ ಒಂದು ಬಾರಿಯಾದರೂ ಹಜ್ ಯಾತ್ರೆ ಕೈಗೊಳ್ಳಬೇಕು ಎಂಬ ಇಂಗಿತ ವ್ಯಕ್ತಪಡಿಸಿದ್ದಾರೆ.
Basavaraj Rayareddy and R ashok casual Images
ಸಚಿವ ಬಸವರಾಜ ರಾಯರೆಡ್ಡಿ, ಆರ್ ಅಶೋಕ್
Updated on

ಬೆಂಗಳೂರು: ಜಗತ್ತಿನಲ್ಲಿ ಇತರ ಧರ್ಮಗಳಿಗಿಂತ ಇಸ್ಲಾಂ ಶ್ರೇಷ್ಠವಾದದ್ದು ಎಂದು ಹೇಳುವ ಮೂಲಕ ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ ವಿವಾದವನ್ನು ಮೈ ಮೇಲೆ ಎಳೆದುಕೊಂಡಿದ್ದಾರೆ.

ಕೊಪ್ಪಳದ ಕುಕನೂರಿನಲ್ಲಿ ನಡೆದ ಮುಸ್ಲಿಂ ಸಮಾಜದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ರಾಯರೆಡ್ಡಿ, ನಾನು ಹೆಚ್ಚಾಗಿ ಮಠ-ಮಂದಿರಕ್ಕೆ ಹೋಗಲ್ಲ. ಆದರೆ ಒಂದು ಬಾರಿಯಾದರೂ ಹಜ್ ಯಾತ್ರೆ ಕೈಗೊಳ್ಳಬೇಕು ಎಂಬ ಇಂಗಿತ ವ್ಯಕ್ತಪಡಿಸಿದ್ದಾರೆ.

ಸಚಿವರ ಈ ಹೇಳಿಕೆಯನ್ನು ವಿಪಕ್ಷ ಬಿಜೆಪಿ ತೀವ್ರವಾಗಿ ಟೀಕಿಸಿದ್ದು, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಂದ ಕ್ರಮಕ್ಕೆ ಆಗ್ರಹಿಸಿದೆ. ರಾಯರೆಡ್ಡಿ ಹಿಂದೂ ಸಮುದಾಯದಿಂದ ಕ್ಷಮೆಯಾಚಿಸುವಂತೆ ಮಾಡಬೇಕು ಅಥವಾ ಅವರನ್ನು ಸಚಿವ ಸಂಪುಟದಿಂದ ಕೈಬಿಡಬೇಕು ಎಂದು ವಿಪಕ್ಷ ನಾಯಕ ಆರ್. ಅಶೋಕ್ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರನ್ನು ಒತ್ತಾಯಿಸಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಅವರು ಪೋಸ್ಟ್ ಮಾಡಿದ್ದು, ಸಿಎಂ ಡಿಕೆಶಿ ಅವರ 6ನೇ ಗ್ಯಾರಂಟಿ - ಹಿಂದೂಗಳಿಗೆ ‘ಸುನ್ನತ್ ಗ್ಯಾರಂಟಿ ಎಂದಿದ್ದಾರೆ. ಸಿಎಂ ಡಿಕೆ ಶಿವಕುಮಾರ್ ಅವರೇ, ಹಿಂದೂಗಳ ಮತ ಬೇಕಾದಾಗ ದೇವಸ್ಥಾನ ಸುತ್ತುವ ನಾಟಕ ಆಡುವ ನಿಮಗೆ, ಅಧಿಕಾರ ಸಿಕ್ಕ ಮೇಲೆ ನಿಮ್ಮದೇ ಸಂಪುಟದ ಸಚಿವರು ಅದೇ ಹಿಂದೂ ಧರ್ಮವನ್ನು ಅವರಹೇಳನ ಮಾಡಿದಾಗ ಮೌನ ವಹಿಸುವುದೇಕೆ? ನಿಮ್ಮ ಸಂಪುಟದ ಸಚಿವ ಬಸವರಾಜ ರಾಯರೆಡ್ಡಿ ಅವರು "ಇಸ್ಲಾಂ ಧರ್ಮವೇ ಶ್ರೇಷ್ಠ, ನಾನು ಮಠಕ್ಕೆ ಹೋಗುವುದಿಲ್ಲ" ಎಂದು ಬಹಿರಂಗವಾಗಿ ನೀಡಿರುವ ಪ್ರಚೋದನಾಕಾರಿ ಹೇಳಿಕೆ ಇಡೀ ರಾಜ್ಯಾದ್ಯಂತ ಕೋಟ್ಯಂತರ ಹಿಂದೂಗಳ ಭಾವನೆಗೆ ಧಕ್ಕೆ ತಂದಿದೆ ಎಂದು ಆರೋಪಿಸಿದ್ದಾರೆ.

ಧರ್ಮದ ಬಗ್ಗೆ ಯಾರಿಗಾದರೂ ಅವರವರ ವೈಯಕ್ತಿಕ ನಂಬಿಕೆ ಇರಬಹುದು. ಆದರೆ ಜವಾಬ್ದಾರಿಯುತ ಸಚಿವ ಸ್ಥಾನದಲ್ಲಿದ್ದುಕೊಂಡು ಕೋಟ್ಯಂತರ ಹಿಂದೂಗಳ ಆರಾಧನೆ, ಪವಿತ್ರ ಮಠ-ಮಾನ್ಯಗಳು ಮತ್ತು ಸನಾತನ ಪರಂಪರೆಯ ಬಗ್ಗೆ ಹಗುರವಾಗಿ ಮಾತನಾಡುವುದು ಅಹಂಕಾರ ಮತ್ತು ಹಿಂದೂ ಧರ್ಮದ ಮೇಲಿನ ಬಹಿರಂಗ ದಾಳಿ, ಹಿಂದೂಗಳ ಶ್ರದ್ಧೆ, ನಂಬಿಕೆಗಳಿಗೆ ಮಾಡಿರುವ ಘೋರ ಅಪಮಾನ ಎಂದು ವಾಗ್ದಾಳಿ ನಡೆಸಿದ್ದಾರೆ.

ಕರ್ನಾಟಕದ ಕೋಟ್ಯಾಂತರ ಹಿಂದೂಗಳಿಗೆ ರಾಯರೆಡ್ಡಿ ಅವರ ಅವಹೇನಕಾರಿ ಹೇಳಿಕೆಗಿಂತಲೂ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಜಾಣ ಮೌನವೇ ಹೆಚ್ಚಿನ ಆಕ್ರೋಶ ತರಿಸುತ್ತಿದೆ. ಹಿಂದೂಗಳ ಭಾವನೆ ನಜ್ಜುಗುಜ್ಜಾದರೂ ಚಿಂತೆಯಿಲ್ಲ, ಓಲೈಕೆ ರಾಜಕಾರಣಕ್ಕಾಗಿ ಸಚಿವರನ್ನು ಮಾತ್ರ ರಕ್ಷಿಸಬೇಕು!” ಇದೇ ಕಾಂಗ್ರೆಸ್‌ ಪಕ್ಷದ ಹಿಂದೂ ವಿರೋಧಿ ಮನಸ್ಥಿತಿಯ ಅಸಲಿ ಮುಖವಲ್ಲವೇ? ಎಂದು ಪ್ರಶ್ನಿಸಿದ್ದಾರೆ.

ರಾಯರೆಡ್ಡಿ ಅವರ ಈ ಹಿಂದೂ ವಿರೋಧಿ ಅವಹೇಳನಕಾರಿ ಹೇಳಿಕೆಯನ್ನು ಬಹಿರಂಗವಾಗಿ ಖಂಡಿಸಿ. ಕೋಟ್ಯಂತರ ಹಿಂದೂಗಳ ಧಾರ್ಮಿಕ ಭಾವನೆಗೆ ಮಾಡಿರುವ ಅವರಿಂದ ತಕ್ಷಣವೇ ಸಾರ್ವಜನಿಕ ಕ್ಷಮೆಯಾಚನೆ ಮಾಡಿಸಿ. ಅವರು ಅದಕ್ಕೆ ಸಿದ್ಧರಿಲ್ಲದಿದ್ದರೆ, ಅವರನ್ನು ತಕ್ಷಣವೇ ಸಚಿವ ಸಂಪುಟದಿಂದ ವಜಾಗೊಳಿಸಿ. ಇವೆರಡನ್ನೂ ಮಾಡದಿದ್ದರೆ ರಾಜ್ಯದ ಕೋಟ್ಯಾಂತರ ಹಿಂದೂಗಳ ಈ ಪ್ರಶ್ನೆಗಳಿಗೆ ನಿಮ್ಮ ಮೌನವೇ ಉತ್ತರವಾಗಲಿದೆ ಎಂದು ಮುಖ್ಯಮಂತ್ರಿ ಡಿಕೆ ಶಿವಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

Basavaraj Rayareddy and R ashok casual Images
'ಇಸ್ಲಾಂ ಶ್ರೇಷ್ಠ ಧರ್ಮ, ಮಠ-ಮಂದಿರ ಬದಲಿಗೆ ಹಜ್ ಯಾತ್ರೆಗೆ ಹೋಗೋ ಆಸೆಯಿದೆ': ಸಚಿವ ಬಸವರಾಜ ರಾಯರೆಡ್ಡಿ

ಸನಾತನ ಧರ್ಮವನ್ನು ನಿಂದಿಸಿದ್ದು ರಾಯರೆಡ್ಡಿ ಅವರ ವೈಯಕ್ತಿಕ ಅಭಿಪ್ರಾಯವೋ? ಅಥವಾ ಇದು ಡಿ.ಕೆ. ಶಿವಕುಮಾರ್ ಅವರ ನೇತೃತ್ವದ ಕಾಂಗ್ರೆಸ್ ಸರ್ಕಾರದ ಸಮ್ಮತಿ ಪಡೆದ hidden ಅಜೆಂಡಾನೋ? ಎಂದು ಪ್ರಶ್ನಿಸಿದ್ದಾರೆ.

ಹಿಂದೂಗಳ ಮತಗಳನ್ನು ಪಡೆದು ಅಧಿಕಾರಕ್ಕೇರಿ, ಅದೇ ಹಿಂದೂಗಳ ಧಾರ್ಮಿಕ ಭಾವನೆಗಳನ್ನು ದಿನನಿತ್ಯ ತುಚ್ಛವಾಗಿ ನಿಂದಿಸುವ ಈ ನೀಚ ರಾಜಕಾರಣವನ್ನು ಕರ್ನಾಟಕ ಎಂದಿಗೂ ಸಹಿಸುವುದಿಲ್ಲ. ಹಿಂದೂ ಧರ್ಮ ಮತ್ತು ಮಠ-ಮಾನ್ಯಗಳ ಮೇಲೆ ದಾಳಿಯಾದಾಗ ಕಣ್ಣು, ಕಿವಿ, ಬಾಯಿ ಮುಚ್ಚಿ ಕುಳಿತುಕೊಳ್ಳುವ ಮುಖ್ಯಮಂತ್ರಿ ಡಿಕೆಶಿ ಅವರು ಈ ಧಾರ್ಮಿಕ ನಿಂದನೆಯ ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ. ರಾಯರೆಡ್ಡಿ ಅವರು ತಕ್ಷಣ ಬಹಿರಂಗ ಕ್ಷಮೆ ಕೇಳಬೇಕು, ಇಲ್ಲವೇ ಸಂಪುಟದಿಂದ ಹೊರನಡೆಯಬೇಕು! ಎಂದು ಆಗ್ರಹಿಸಿದ್ದಾರೆ.

ಡಿ.ಕೆ. ಶಿವಕುಮಾರ್ ಅವರೇ - ಕೋಟ್ಯಂತರ ಹಿಂದೂಗಳ ಧಾರ್ಮಿಕ ಭಾವನೆ ದೊಡ್ಡದೋ ಅಥವಾ ನಿಮ್ಮ ಸಚಿವರ ಕುರ್ಚಿ ಮತ್ತು ಮತಬ್ಯಾಂಕ್ ದೊಡ್ಡದೋ? ಕರ್ನಾಟಕ ನೋಡುತ್ತಿದೆ. ರಾಜ್ಯದ ಜನತೆ ಎಲ್ಲವನ್ನೂ ಗಮನಿಸುತ್ತಿದ್ದಾರೆ ಎಂದು ಎಚ್ಚರಿಕೆ ನೀಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com