

ಬೆಂಗಳೂರು: ರಾಜ್ಯದಲ್ಲಿನ ಸರ್ಕಾರಿ ಆಸ್ಪತ್ರೆಗಳಲ್ಲಿ ಔಷಧಿ ಖಾಲಿಯಾಗಿದ್ದು, ಇದು ಪಾಪರ್ ಸರ್ಕಾರದ ಸಂಕೇತವಾಗಿದೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಗುರುವಾರ ಕಿಡಿಕಾರಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಔಷಧಿ ಖರೀದಿಸಲು ಹಣವಿಲ್ಲ. ಪ್ಯಾರಾಸಿಟಾಮಾಲ್ನಿಂದ ಆರಂಭವಾಗಿ ಅಗತ್ಯವಾದ 800 ಕ್ಕೂ ಅಧಿಕ ಔಷಧಿಗಳು ಲಭ್ಯವಿಲ್ಲವೆಂದು ನಾನು 2024 ರ ಡಿಸೆಂಬರ್ನ ಅಧಿವೇಶನದಲ್ಲಿ ಹೇಳಿದ್ದೆ. ಆಗ ಸಚಿವ ದಿನೇಶ್ ಗುಂಡೂರಾವ್, ಕೂಡಲೇ ಔಷಧಿ ಖರೀದಿಸಲಾಗುವುದು ಎಂದು ಹೇಳಿದ್ದರು. ಇನ್ನೂ ಯಾವುದೇ ಔಷಧಿ ದಾಸ್ತಾನಿಲ್ಲ. ಈ ಮೂಲಕ ಆರೋಗ್ಯ ಇಲಾಖೆ ಅನಾರೋಗ್ಯ ಪೀಡಿತವಾಗಿದೆ. ಆಸ್ಪತ್ರೆಗಳ ನಿರ್ವಹಣೆಯ ಹಣದಿಂದ ಔಷಧಿ ಖರೀದಿಸುವ ದುಸ್ಥಿತಿಗೆ ಸರ್ಕಾರ ಬಂದಿದೆ. ಸಾಲ ಮಾಡಿ ಔಷಧಿ ಖರೀದಿಸುವ ಸ್ಥಿತಿ ಬಂದಿದೆ ಎಂದರು.
ಮಾರ್ಚ್ಗೆ ಟೆಂಡರ್ಗೆ ಅಂತಿಮಗೊಳಿಸಲು ಆರೋಗ್ಯ ಇಲಾಖೆಯಿಂದ ಆದೇಶ ಹೊರಡಿಸಲಾಗಿದೆ. ಅಂದರೆ ಮೇ, ಜೂನ್ವರೆಗೆ ಸರ್ಕಾರಿ ಆಸ್ಪತ್ರೆಗಳಿಗೆ ಔಷಧಿ ಬಾರದೇ ಇದ್ದರೆ ರೋಗಿಗಳು ಸಾಯಬೇಕಾಗುತ್ತದೆ. ಅಪಘಾತವಾದರೆ ಬ್ಯಾಂಡೇಜ್ ಕೂಡ ಸಿಗುವುದಿಲ್ಲ. ಕೆಲವು ಆಸ್ಪತ್ರೆಗಳಲ್ಲಿ ವೈದ್ಯರು ಅನಿವಾರ್ಯವಾಗಿ ಹೊರಗೆ ಔಷಧಿ ಖರೀದಿಗೆ ಚೀಟಿ ಬರೆದುಕೊಡುತ್ತಿದ್ದಾರೆ. ನಮ್ಮ ಸರ್ಕಾರ ಇದ್ದಾಗ ಹೊರಗೆ ಔಷಧಿ ಖರೀದಿಗೆ ಚೀಟಿ ಬರೆಯಬಾರದೆಂದು ಸೂಚನೆ ನೀಡಲಾಗಿತ್ತು. ಕೇಂದ್ರ ಸರ್ಕಾರದ ಜನೌಷಧಿ ಕೇಂದ್ರಗಳನ್ನು ಸ್ಥಗಿತಗೊಳಿಸಲು ಸರ್ಕಾರ ಪ್ರಯತ್ನ ಮಾಡಿದೆ. ಈಗ ಜನರು ಜನೌಷಧಿ ಕೇಂದ್ರಗಳಲ್ಲೇ ಔಷಧಿ ಖರೀದಿಸುತ್ತಿದ್ದಾರೆ ಎಂದು ತಿಳಿಸಿದರು.
ಕಳೆದ ಬಜೆಟ್ನಲ್ಲಿ ಆರೋಗ್ಯ ಇಲಾಖೆಗೆ ಶೇ.30 ರಷ್ಟು ಅನುದಾನ ಕಡಿತವಾಗಿದೆ. ಐದು ಗ್ಯಾರಂಟಿಗಳಿಗಾಗಿ ಜನರಿಗೆ ನೀಡುವ ಔಷಧಿಯನ್ನು ಕೊರತೆ ಮಾಡಲಾಗಿದೆ. ಕೆಲವು ಸರ್ಕಾರಿ ಆಸ್ಪತ್ರೆಗಳಲ್ಲಿ ಐವಿ ದ್ರಾವಣ, ನೋವು ನಿವಾರಕ ಔಷಧಿ ಇಲ್ಲದೆ ಆಪರೇಶನ್ ಮಾಡುವುದಿಲ್ಲ ಎಂದು ಹೇಳಲಾಗಿದೆ. ಕಮಿಶನ್ ತರುವ ಇಲಾಖೆಗಳಿಗೆ ಗಮನ ನೀಡಿ, ಜನರ ಸಮಸ್ಯೆ ಬಗೆಹರಿಸುವ ಇಲಾಖೆಗಳನ್ನು ಕಡೆಗಣಿಸಲಾಗಿದೆ. ಇದು ಸರ್ಕಾರ ಪಾಪರ್ ಆಗಿರುವುದಕ್ಕೆ ಕನ್ನಡಿ ಎಂದರು.
ವಿದೇಶ ಪ್ರವಾಸ: ಪಶುಸಂಗೋಪನಾ ಸಚಿವರು ಶಾಸಕರನ್ನು ಫಾರಿನ್ ಟೂರ್ಗೆ ಕರೆದೊಯ್ಯುತ್ತಿದ್ದಾರೆ. ಸರ್ಕಾರದ ಹಣದಲ್ಲಿ ವಿದೇಶ ಪ್ರವಾಸ ಹೋಗುವುದನ್ನು ಹಿಂದೆಯೇ ತಡೆಯಲಾಗಿದೆ. ಪ್ರವಾಸ ಹೋಗಬೇಕೆಂದರೆ ಆ ನಿಯೋಗದಲ್ಲಿ ಎಲ್ಲ ಪಕ್ಷಗಳ ಸದಸ್ಯರು ಇರುತ್ತಾರೆ. ಸಚಿವರು ಕರೆದುಕೊಂಡು ಹೋಗುತ್ತಿದ್ದಾರೆ ಎಂದರೆ ಇದಕ್ಕೆ ಸರ್ಕಾರ ಅನುಮತಿ ಹೇಗೆ ನೀಡಿದೆ? ಇದಕ್ಕೆ ಯಾರು ಹಣ ಖರ್ಚು ಮಾಡುತ್ತಿದ್ದಾರೆ ಎಂದು ತಿಳಿಸಬೇಕಿದೆ. ಸ್ಪೀಕರ್ ಯು.ಟಿ.ಖಾದರ್ ಇದನ್ನು ತಡೆಯಬೇಕಿದೆ ಎಂದರು.
ಕಾಂಗ್ರೆಸ್ ಶಾಸಕರು ಯಾವ ಅಧ್ಯಯನ ಮಾಡಲು ಹೋಗುತ್ತಿದ್ದಾರೆ ಎಂದು ಗೊತ್ತಿಲ್ಲ. ಈಗ ಬಜೆಟ್ ತಯಾರಿ ನಡೆಯುತ್ತಿದ್ದು, ಶಾಸಕರು ಮುಖ್ಯಮಂತ್ರಿ ಜೊತೆ ಚರ್ಚೆ ಮಾಡಬೇಕಿದೆ. ಇಂತಹ ಸಮಯದಲ್ಲಿ ಸ್ವಂತ ಹಣದಲ್ಲಿ ಹೋಗುತ್ತಿದ್ದೇವೆ ಎಂದು ಶಾಸಕ ಪುಟ್ಟರಂಗಶೆಟ್ಟಿ ಹೇಳಿದ್ದಾರೆ. ಸ್ವಂತ ಹಣದಲ್ಲಿ ಅಧ್ಯಯನ ಪ್ರವಾಸ ಮಾಡಲು ಸಾಧ್ಯವಿಲ್ಲ. ಅಧ್ಯಯನ ಮಾಡಿದರೂ ನಂತರ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಬೇಕು. ಆದರೆ ಇಲ್ಲಿ ಮುಖ್ಯಮಂತ್ರಿ ಬದಲಾವಣೆ ಚರ್ಚೆ ನಡೆಯುತ್ತಿದ್ದು, ಈ ಬಗ್ಗೆ ನಿರ್ಧಾರ ಕೈಗೊಳ್ಳಲು ವಿದೇಶಕ್ಕೆ ಹೋಗುತ್ತಿದ್ದಾರೆ ಎಂಬ ಅನುಮಾನವಿದೆ. ಇದು ಒಳ್ಳೆಯ ಸಂಸ್ಕೃತಿಯಲ್ಲ. ಸರ್ಕಾರಿ ಶಾಲೆಯ ಮಕ್ಕಳು ಬಸ್ ಇಲ್ಲದೆ ಜೆಸಿಬಿ, ಟಿಪ್ಪರ್ನಲ್ಲಿ ಪ್ರಯಾಣ ಮಾಡುತ್ತಿದ್ದರೆ, ಶಾಸಕರು ಎಮಿರೇಟ್ಸ್ ವಿಮಾನದಲ್ಲಿ ಪ್ರಯಾಣ ಮಾಡುತ್ತಿದ್ದಾರೆ ಎಂದರು.
ಅಬಕಾರಿ ಇಲಾಖೆಯ ಭ್ರಷ್ಟಾಚಾರವನ್ನು ಮುಚ್ಚಿಹಾಕುವ ಪ್ರಯತ್ನ ನಡೆದಿದ್ದು, ಬಿಜೆಪಿ ಇದರ ವಿರುದ್ಧ ಹೋರಾಟ ಮಾಡುತ್ತಿದೆ. ಇದನ್ನು ತನಿಖೆ ಮಾಡದಿದ್ದರೂ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಏನೂ ಕೇಳಿಲ್ಲ. ಏಕೆಂದರೆ ಇದರಲ್ಲಿ ಸಿಎಂ ಸಿದ್ದರಾಮಯ್ಯ ಜೊತೆಗೆ ರಾಹುಲ್ ಗಾಂಧಿಗೂ ಹಣ ದೊರೆಯುತ್ತಿದೆ. ಬಿಜೆಪಿ ಸರ್ಕಾರವಿದ್ದಾಗ ಆರೋಪ ಬಂದಾಗ ಸಚಿವರ ರಾಜೀನಾಮೆ ಪಡೆದು ತನಿಖೆ ಮಾಡಿಸಲಾಗಿತ್ತು. ಕಾಂಗ್ರೆಸ್ ಪಕ್ಷ ಹಾಗೂ ಮಾಜಿ ಪ್ರಧಾನಿ ಪಂಡಿತ್ ಜವಹರಲಾಲ್ ನೆಹರು ವಂದೇಮಾತರಂ ಗೀತೆಯ ಸಾಲುಗಳನ್ನು ಕಡಿತ ಮಾಡಿ ಹಾಡಲು ಮಾತ್ರ ಅವಕಾಶ ಮಾಡಿತ್ತು. ವಂದೇಮಾತರಂ ಗೀತೆಯನ್ನು ಸಂಪೂರ್ಣವಾಗಿ ಹಾಡುವ ಕುರಿತು ಕೇಂದ್ರ ಸರ್ಕಾರ ಕ್ರಮ ಕೈಗೊಂಡಿದೆ. ಇದಕ್ಕಾಗಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಅಭಿನಂದನೆ ತಿಳಿಸುತ್ತೇನೆ. ಹಾಡಿನಲ್ಲಿ ದುರ್ಗೆಯ ಹೆಸರು ಇದೆ ಎಂಬ ಕಾರಣಕ್ಕೆ ಗೀತೆಯನ್ನು ಕಡೆಗಣಿಸಲಾಗಿತ್ತು ಎಂದು ತಿಳಿಸಿದರು.
ಬೇರೆ ಪಕ್ಷದಿಂದ ಬಂದವರಿಗೆ ಅಧಿಕಾರ ನೀಡಲಾಗಿದೆ ಎಂದು ಡಿ.ಕೆ.ಸುರೇಶ್ ಬಹಳ ತಡವಾಗಿ ಹೇಳಿ ಬಂಡಾಯದ ಬಾವುಟ ಹಾರಿಸಿದ್ದಾರೆ. ಇನ್ನು ಡಿ.ಕೆ.ಶಿವಕುಮಾರ್ ಕಾದುಕೊಂಡಿದ್ದರೆ ಯಾವುದೇ ಪ್ರಯೋಜನವಿಲ್ಲ. ಮೂಲ ಕಾಂಗ್ರೆಸ್ಸಿಗರು ದಿಕ್ಕಿಲ್ಲದಂತಾಗಿದ್ದಾರೆ. ಆರ್ಸಿಬಿ ಸಂಭ್ರಮಾಚರಣೆಯನ್ನು ತಪ್ಪಾಗಿ ಆಯೋಜಿಸಿದ್ದು ಕಾಂಗ್ರೆಸ್ ಸರ್ಕಾರದ ತಪ್ಪು. ಆದರೆ ಆರ್ಸಿಬಿ ಹಾಗೂ ಕ್ರಿಕೆಟ್ ಅಸೋಸಿಯೇಶನ್ ಮೇಲೆ ತಪ್ಪು ಹೊರಿಸಲಾಗಿದೆ. ಸರ್ಕಾರಕ್ಕೆ ಯೋಗ್ಯತೆ ಇದ್ದರೆ ಭದ್ರತೆ ನೀಡಲಿ ಎಂದರು.
Advertisement