

ಬೆಂಗಳೂರು: ಮಂಗಳವಾರ ಬೆಂಗಳೂರಿಗೆ ಭೇಟಿ ನೀಡಿದ ಜರ್ಮನಿ ಚಾನ್ಸೆಲರ್ ಫ್ರೆಡ್ರಿಕ್ ಮೆರ್ಜ್ ಅವರನ್ನು ಸ್ವಾಗತಿಸದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ವಿರುದ್ಧ ಪ್ರತಿಪಕ್ಷ ಬಿಜೆಪಿ ತೀವ್ರ ವಾಗ್ದಾಳಿ ನಡೆಸಿದೆ.
ತಮಿಳುನಾಡಿನ ಊಟಿಗೆ ಹೋಗುತ್ತಿದ್ದ ರಾಹುಲ್ ಗಾಂಧಿ ಅವರನ್ನು ಸ್ವಾಗತಿಸಲು ಕಾಂಗ್ರೆಸ್ ನಾಯಕರು ಮೈಸೂರಿನಲ್ಲಿ ಸಾಲುಗಟ್ಟಿ ನಿಂತಿದ್ದರು ಎಂದು ಆರೋಪಿಸಿದೆ. ಬೆಂಗಳೂರಿನ ಬಾಷ್ ಕ್ಯಾಂಪಸ್ (Bosch campus) ಮತ್ತು ಐಐಎಸ್ಸಿ ನ್ಯಾನೊಸೈನ್ಸ್ ಕೇಂದ್ರಕ್ಕೆ (IISc Nanoscience Center) ಕೇಂದ್ರಕ್ಕೆ ಫ್ರೆಡ್ರಿಕ್ ಮೆರ್ಜ್ ಭೇಟಿ ನೀಡಿದ್ದರು.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್, ಕರ್ನಾಟಕದ ಹಿತಕ್ಕಿಂತ... ಹೈಕಮಾಂಡ್ ಹಂಗೇ ಹೆಚ್ಚಾಯಿತೇ? ಎಂದು ಪ್ರಶ್ನಿಸಿದ್ದಾರೆ.
ಇಂದು ವಿಶ್ವದ ಬಲಿಷ್ಠ ಆರ್ಥಿಕ ಶಕ್ತಿಗಳಲ್ಲಿ ಒಂದಾದ ಜರ್ಮನಿ ದೇಶದ ಚಾನ್ಸಲರ್ ನಮ್ಮ ಕರ್ನಾಟಕಕ್ಕೆ ಆಗಮಿಸಿದರು. ಯಾವುದೇ ಒಬ್ಬ ಜವಾಬ್ದಾರಿಯುತ ಮುಖ್ಯಮಂತ್ರಿ, ಇಂತಹ ಜಾಗತಿಕ ನಾಯಕರನ್ನು ಬರಮಾಡಿಕೊಂಡು, ಈ ಭೇಟಿಯನ್ನ ರಾಜ್ಯದ ಏಳಿಗೆಗಾಗಿ ಬಳಸಿಕೊಳ್ಳುತ್ತಿದ್ದರು. ನಮ್ಮ ರಾಜ್ಯದ ಹೂಡಿಕೆ, ಉದ್ಯೋಗ ಸೃಷ್ಟಿ ಮತ್ತು ಕೈಗಾರಿಕಾ ಅಭಿವೃದ್ಧಿಯನ್ನು ವೃದ್ಧಿಸಿಕೊಳ್ಳಲು ಸಿಕ್ಕಿರುವ ಒಂದು ಸುವರ್ಣ ಅವಕಾಶ ಎಂದು ಈ ಜಾಗತಿಕ ನಾಯಕರ ಭೇಟಿಯನ್ನು ಗಂಭೀರವಾಗಿ ಪರಿಗಣಿಸುತ್ತಿದ್ದರು. ಆದರೆ ನಮ್ಮ ರಾಜ್ಯದ ದುರಂತ ನೋಡಿ. ಒಂದೆಡೆ ಜರ್ಮನಿಯ ಚಾನ್ಸಲರ್ ಬೆಂಗಳೂರಿಗೆ ಆಗಮಿಸುತ್ತಿದ್ದರೆ, ಮತ್ತೊಂದೆಡೆ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ಊಟಿಗೆ ಹೋಗುವ ದಾರಿಯಲ್ಲಿ ಸುಮ್ಮನೆ ಹಾದುಹೋಗುತ್ತಿದ್ದ ರಾಹುಲ್ ಗಾಂಧಿ ಅವರನ್ನು ಸ್ವಾಗತಿಸಲು ಮೈಸೂರಿನಲ್ಲಿ ಸಾಲುಗಟ್ಟಿ ನಿಂತಿದ್ದರು ಎಂದು ಟೀಕಾ ಪ್ರಹಾರ ನಡೆಸಿದ್ದಾರೆ.
ಇದು ಕೇವಲ ಶಿಷ್ಟಾಚಾರದ ಲೋಪವಲ್ಲ, ಕರ್ನಾಟಕದ ಹಿತಾಸಕ್ತಿಗೆ ಮಾಡಿದ ದ್ರೋಹ. ರಾಜ್ಯದ ಅಭಿವೃದ್ಧಿಗಿಂತ ರಾಜಕೀಯ ನಿಷ್ಠೆಯೇ ದೊಡ್ಡದಾದಾಗ, ಕನ್ನಡಿಗರ ಭವಿಷ್ಯಕ್ಕೆ ಕುತ್ತು ಬರುವುದು ಖಚಿತ. ಅಧಿಕಾರದ ದಾಹಕ್ಕಾಗಿ ರಾಜ್ಯಕ್ಕೆ ಒಲಿಯಬಹುದಾದ ಅವಕಾಶಗಳನ್ನೇ ಬಲಿಕೊಟ್ಟ ಈ ಸರ್ಕಾರಕ್ಕೆ ಕರ್ನಾಟಕದ ಬಗ್ಗೆ, ಕನ್ನಡಿಗರ ಎಳ್ಳಷ್ಟೂ ಕಾಳಜಿ ಇಲ್ಲ ಎಂಬುದು ಸಾಬೀತಾಗಿದೆ ಎಂದು ಕಿಡಿಕಾರಿದ್ದಾರೆ.
ಕನ್ನಡಿಗರಿಗೆ ಬೇಕಾಗಿರುವುದು ಕರ್ನಾಟಕದ ಬಗ್ಗೆ ಬದ್ಧತೆ, ಇಚ್ಛಾಶಕ್ತಿ ಇರುವ ನಾಯಕರೇ ಹೊರತು, ಕುರ್ಚಿ ಉಳಿಸಿಕೊಳ್ಳಲು ಅಥವಾ ಗಿಟ್ಟಿಸಿಕೊಳ್ಳಲು ತಮ್ಮ ಜವಾಬ್ದಾರಿಯನ್ನೇ, ಕರ್ತವ್ಯವನ್ನೇ ಮರೆತು ಹೈಕಮಾಂಡ್ ಮುಂದೆ ಕೈಕಟ್ಟಿ ನಿಲ್ಲುವ ಗುಲಾಮರಲ್ಲ! ಎಂದು ವಾಗ್ದಾಳಿ ನಡೆಸಿದ್ದಾರೆ.
Advertisement